Advertisement

ಎಲ್ಲಾರೂ ಮಾಡುವುದು ಮೋಜಿಗಾಗಿ…

09:55 AM Oct 25, 2019 | mahesh |

“ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ|’ ಕನಕದಾಸರ ವ್ಯಂಗ್ಯಭರಿತ ಲೋಕಪ್ರಸಿದ್ಧ ಹಾಡು. “ಅಯ್ನಾ ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ’ ಎಂದು ಶರಣ ಹಡಪದ ಅಪ್ಪಣ್ಣ ವಚನದಲ್ಲಿ ಹೇಳಿದ್ದಾರೆ. ಈ ಹಾಡುಗಳಲ್ಲಿ ವಿವಿಧ ವೃತ್ತಿಪರ ಜನವರ್ಗದವರನ್ನು ಬೆಟ್ಟು ಮಾಡಿ ಎಲ್ಲರೂ ಹೊಟ್ಟೆ, ಬಟ್ಟೆ ಹೆಸರಿನಲ್ಲಿ ನಡೆಸುವ ಜೀವನ ನಾಟಕದ ಗುಟ್ಟನ್ನು ರಟ್ಟು ಮಾಡುತ್ತಾರೆ.

Advertisement

ಇಲ್ಲಿ ಹೊಟ್ಟೆಗಾಗಿ ಎಂಬ ಅರ್ಥ ಎಲ್ಲರಿಗೂ ಅರ್ಥವಾಗುತ್ತದೆ. ಗೇಣು ಬಟ್ಟೆಗಾಗಿ ಎಂದರೆ ಈಗಿನ ಬಹುತೇಕರಿಗೆ ತಿಳಿದಿರಲಾರದು. ಗೇಣು ಬಟ್ಟೆಯಲ್ಲಿ ಏನು ಮಾಡಲು ಸಾಧ್ಯ ಎಂಬ ಸಂಶಯ ಬಂದೇ ಬರುತ್ತದೆ. ಈಗ ಬಹುತೇಕ ನಶಿಸಿ ಹೋದಂತಿರುವ ಕೌಪೀನಕ್ಕೆ ಪರ್ಯಾಯವಾಗಿ ಈ ಶಬ್ದವನ್ನು ಬಳಸಿದ್ದಾರೆ.

ಆಹಾರದ ಖರ್ಚೆಷ್ಟು?
ದಾಸರ, ಶರಣರ ಕಾಲದ ಮಾರುಕಟ್ಟೆಯ ದರ ಈಗ ಹೇಳುವುದು ಕಷ್ಟ. ಈಗ ಒಬ್ಬ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಲು ಎಷ್ಟು ಆಹಾರ ಧಾನ್ಯವನ್ನು ಬಳಸಬಹುದು ಎಂಬ ಕುತೂಹಲ ಮೂಡುತ್ತದೆ. ಒಬ್ಬ ವ್ಯಕ್ತಿ ಒಂದು ಕೆ.ಜಿ. ಧಾನ್ಯವನ್ನು ಕನಿಷ್ಠ ಮೂರ್‍ನಾಲ್ಕು ದಿನ ಬಳಸಬಹುದು. ಸರಿಸುಮಾರಾಗಿ ಕೇವಲ ಹತ್ತು ರೂ.ಗಳಲ್ಲಿ ಇಡೀ ಒಂದು ದಿನಕ್ಕೆ ಒಬ್ಬನಿಗೆ ಬೇಕಾಗುವಷ್ಟು ಆಹಾರವನ್ನು ತಯಾರಿಸಿಕೊಳ್ಳಬಹುದು. ಇದಕ್ಕೆ ವ್ಯಂಜನಗಳನ್ನು ಸೇರಿಸಿದರೂ ಇನ್ನೈದು ರೂ. ಇಟ್ಟುಕೊಳ್ಳಿ. ಹತ್ತರ ಬದಲು ಇಪ್ಪತ್ತು, ಮೂವತ್ತೆಂದೇ ಇಟ್ಟುಕೊಳ್ಳಿ. ಇದು ಗೋದಿ, ರಾಗಿ, ರವೆ ಯಾವುದಕ್ಕಾದರೂ ಅನ್ವಯ. ಇದು ಕನಿಷ್ಠ ಮಟ್ಟದ ಅಗತ್ಯ, ಇಂದಿನ ಮಾರುಕಟ್ಟೆ ಧಾರಣೆಯಲ್ಲಿ, ಒಬ್ಬನಿಗೆ/ಳಿಗೆ.

ಬಟ್ಟೆ ಧಾರಣೆಯಲ್ಲಿ ಗರಿಷ್ಠ ಜಾಗರೂಕತೆ ವಹಿಸಬೇಕೆಂದು ಗಾಂಧೀಜಿ ತೋರಿಸಿದ್ದರು. ಅದಕ್ಕಾಗಿಯೇ ಅವರು ಅರೆಬಟ್ಟೆ ಧರಿಸುತ್ತಿದ್ದರು. ಪ್ಯಾಂಟೋ, ಶರ್ಟೊà, ಪಂಚೆಯೋ, ಸೀರೆಯೋ, ಗೌನೋ, ಕುರ್ತವೋ, ಚೂಡಿದಾರವೋ ಏನೇ ಇಟ್ಟುಕೊಂಡರೂ ದಿನಕ್ಕೊಂದು ಅಥವಾ ಎರಡು ಬಟ್ಟೆಯಂತೆ ಲೆಕ್ಕ ಹಾಕಿದರೂ ಒಟ್ಟು ಎಷ್ಟು ಸೆಟ್‌ ಉಡುಗೆಗಳು ಸಾಕಾಗಬಹುದು?

ರೋಗಿಗಳಲ್ಲೂ ಪ್ರತಿಷ್ಠೆ
ಆಸ್ಪತ್ರೆಗಳಲ್ಲಿ ಜನರಲ್‌ ಬೆಡ್‌, ಸೆಮಿ ಸ್ಪೆಶಲ್‌ ಬೆಡ್‌, ಸ್ಪೆಶಲ್‌ ಬೆಡ್‌ಗಳಲ್ಲಿ ಸಿಗುವ ವೈದ್ಯಕೀಯ ಸೇವೆ ಒಂದೇ ಆದರೂ ಶುಲ್ಕ 1:3:6 ಅನುಪಾತದಲ್ಲಿ ಹೆಚ್ಚಿಗೆಯಾಗುತ್ತದೆ. ಆದರೂ ಕೇವಲ ಪ್ರತಿಷ್ಠೆಗಾಗಿ ಸ್ಪೆಶಲ್‌ ಬೆಡ್‌ನ‌ಲ್ಲಿ ಮಲಗಿ ಒಂದೋ ದುಂದು ವೆಚ್ಚ ಮಾಡುತ್ತಿದ್ದೇವೆ ಇಲ್ಲವೆ ಸಾಲಗಾರರಾಗುತ್ತೇವೆ/ ಅಧಿಕಾರಸ್ಥರು- ಹಣವಂತರಿಗೆ ಶರಣಾಗುತ್ತೇವೆ ಅಥವಾ ಪರಿಹಾರಧನ/ ವಿವಿಧ ಸ್ಕೀಮ್‌ಗಳ ಆಶ್ರಿತರಾಗುತ್ತೇವೆ.

Advertisement

ಹಣದ ಬೆಳೆಗೆ ಪಿಎಚ್‌ಡಿ!
ಪ್ರತಿಷ್ಠಿತ ಹೊಟೇಲುಗಳ ಊಟದ ದರ ನಾಲ್ಕಂಕಿ ದಾಟುವುದೂ ಇದೆ. ಹಣ್ಣಿನ ಪಾನೀಯದ ದರ ಮೂರಂಕಿ ದಾಟುವುದೂ ಇದೆ. ಇದೇ ಹಣ್ಣುಗಳನ್ನು ಮನೆ ಬಳಿ ಬೆಳೆಸಲು ಆಸಕ್ತಿ ಇಲ್ಲದೆ ಅಥವಾ ಹಣ್ಣು ಕೊಡುತ್ತಿದ್ದ ಮರಗಳನ್ನು ಧರೆಗೆ ಉರುಳಿಸಿ ಪೇಟೆಗೆ ಬಂದು “ಪ್ರತಿಷ್ಠಿತ’ ಜೂಸ್‌ ಕುಡಿಯುತ್ತೇವೆ. ಇದಕ್ಕೆ ಕಾರಣ ಹಣ್ಣೋ, ಧಾನ್ಯವನ್ನೋ ಯಾವುದನ್ನೇ ಆಗಲಿ ಉತ್ಪಾದಿಸುವುದಕ್ಕಿಂತ ಸುಲಭದಲ್ಲಿ ನೋಟುಗಳನ್ನು ಉತ್ಪಾದಿಸುವ ತಂತ್ರದಲ್ಲಿ ನಾವು ಪಿಎಚ್‌ಡಿ ಪದವಿ ಪಡೆದಿದ್ದೇವೆ ಅಥವಾ ಪಡೆಯುವ ಅಧ್ಯಯನದಲ್ಲಿದ್ದೇವೆ. ಯಾರೋ ಒಬ್ಬ ವ್ಯಕ್ತಿಯ ಸಹಿಯಿಂದ ಇದೆಲ್ಲ ಸಾಧ್ಯವಾಗುವುದರಿಂದ ಆದಾಯ ತರಿಸಿಕೊಳ್ಳುವ ವಿಧಾನ ಸುಲಭ ಎಂದು ಎಲ್ಲರಿಗೂ ಅನಿಸುತ್ತಿದೆ. ಹೀಗಾಗಿ ಬಹುತೇಕ ಎಲ್ಲರೂ ಈ ಹಣ ಉತ್ಪಾದನೆಯ ಪಿಎಚ್‌ಡಿ ಪಡೆಯುವ ಧಾವಂತದಲ್ಲಿ ವಿವಿಧ ಹಂತಗಳಲ್ಲಿದ್ದಾರಷ್ಟೆ. ಇಲ್ಲಿ ಪಾಸಾದವರು, ಫೇಲಾದವರ ಪಾಡನ್ನು ತುಲನೆ ಮಾಡಿದರೆ ಬಸ್‌ ನಿಲ್ದಾಣದಲ್ಲಿ ಅರೆಬರೆ ಬಟ್ಟೆ ಉಟ್ಟ ಭಿಕ್ಷುಕ ಬಡವ, ದೊಡ್ಡ ಕಚೇರಿಗಳಲ್ಲಿ ಕೋಟು ಟೈ ಹಾಕಿಕೊಂಡ ಭಿಕ್ಷುಕ ಸಿರಿವಂತ ಎಂದು ತಿಳಿಯುತ್ತದೆ. ಆ ಭಿಕ್ಷುಕನಿಗೆ ನಾಳಿನ ಊಟದ ಚಿಂತೆಯಾದರೆ, ಈ ಭಿಕ್ಷುಕನಿಗೆ ನಾಳಿನ ಅಂತಸ್ತು ಕಾಪಾಡುವ ಚಿಂತೆ, ಚಿಂತೆಯ ಪ್ರಮಾಣ ಒಂದೇ…

ಇನ್ನೊಬ್ಬರ ಕಿಸಗೆ ಕತ್ತರಿ!
ಇನ್ನೊಂದು ಕುತೂಹಲದ ವಿಷಯವೆಂದರೆ ನಾವೇ ನಮ್ಮ ಕಿಸೆಯಿಂದ ಖರ್ಚು ಮಾಡುವುದಾದರೆ ದುಬಾರಿ ಖರ್ಚುಗಳನ್ನು ಮಾಡಲು ತಯಾರಿಲ್ಲದ ಆತ್ಮವಂಚಕ ಮುಖ ನಮ್ಮದು. ಅಪ್ಪ ಅಮ್ಮ , ಕಂಪೆನಿ, ಸಂಸ್ಥೆಯ ಹೆಸರಿನಲ್ಲಿ ಬರೆದು ಊಟ, ಪಾರ್ಟಿಗಳನ್ನು ಕಮಾಯಿಸಿ ಅವರು ಉಳಿಸಿದ ಹಣದಿಂದ ಅವರದೇ ಮಕ್ಕಳು ಮೋಜು ಮಸ್ತಿ ಮಾಡಿ ಇತಿಶ್ರೀ ಮಾಡುತ್ತಾರೆ.

ಇತರ ಖರ್ಚುಗಳ ರಾವಣ ಮುಖ
ಇಷ್ಟೆಲ್ಲ ದುಂದುವೆಚ್ಚ ಮಾಡಿಯೂ ನಮ್ಮ ಒಟ್ಟು ಆದಾಯದಲ್ಲಿ ಆಹಾರಕ್ಕಾಗಿ, ಬಟ್ಟೆಗಾಗಿ ಎಷ್ಟು ಖರ್ಚಾಗುತ್ತಿದೆ? ಟಿವಿ, ಹವಾನಿಯಂತ್ರಿತ ಕಾರು, ಹವಾನಿಯಂತ್ರಿತ ಕೋಣೆ- ಮನೆ, ಮಕ್ಕಳ ವಿದ್ಯೆಗಾಗಿ ಅಪಾರ ಖರ್ಚು ಮಾಡಿಸುವ ಶಾಲಾ ಕಾಲೇಜುಗಳು, ಇವೆಲ್ಲವನ್ನೂ ನಿಭಾಯಿಸಲು ಮಾಡಿದ ಬ್ಯಾಂಕ್‌ ಸಾಲಕ್ಕೆ ಕೊಡುವ ಅಸಲು+ಬಡ್ಡಿ ಹಣ, ಅದ್ದೂರಿ ಮದುವೆಯಷ್ಟೇ ತಲೆಕೊಡಬೇಕಾದ “ವಿಚ್ಛೇದನ’ ಇತ್ಯಾದಿಗೆ ಎಷ್ಟು ಹಣ ವಿನಿಯೋಗವಾಗುತ್ತಿದೆ? ಇವೆಲ್ಲ ಸಕ್ರಮ ಹಣವಾಗಿದ್ದರೆ… ಅಕ್ರಮ ಹಣವಾಗಿದ್ದರೆ ಈ ಪಟ್ಟಿಯ ಜತೆಗೆ ಲೆಕ್ಕಪರಿಶೋಧಕರು, ಕೋರ್ಟು ಕಚೇರಿ, ಲಂಚ, ಬಿಪಿ ಶುಗರ್‌ ಹೆಸರಿನಿಂದಾಗುವ ಆರೋಗ್ಯ ವೆಚ್ಚ ಹೀಗೆ ವಿವಿಧ ಅಂದಾದುಂಧಿ ಖರ್ಚಿಗೆ ಎಷ್ಟು ಬೇಕಾಗಬಹುದು? ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣವು ಜೀವನದ ಎಲ್ಲ ಸರಳತೆಯ ಸಾಧ್ಯತೆಗಳನ್ನು ತಲೆಕೆಳಗೆ ಮಾಡುವಷ್ಟು ಪ್ರಬಲವಾಗಿದೆ. ಇವುಗಳನ್ನು ಕಂಡಾಗ ಹೊಟ್ಟೆ, ಬಟ್ಟೆ ದೊಡ್ಡ ಸಂಗತಿಯೇ ಅಲ್ಲ ಎಂದೆನಿಸುವುದಿಲ್ಲವೆ? ಆದ್ದರಿಂದ ಕನಕದಾಸರು ಈಗ ಇದ್ದಿದ್ದರೆ “ಎಲ್ಲಾರೂ ಮಾಡುವುದು ಮೋಜಿಗಾಗಿ ಮೋಜು ಮಸ್ತಿಗಾಗಿ’ ಎಂದೋ, “ಎಲ್ಲಾರೂ ಮಾಡುವುದು ಮರ್ಜಿಗಾಗಿ ಮೋಜು ಮಸ್ತಿಗಾಗಿ’ ಎಂದೋ ಹಾಡುತ್ತಿದ್ದಿರಬಹುದು. ಹಡಪದ ಅಪ್ಪಣ್ಣರು “ಹೊಟ್ಟೆಯ ಹೆಸರಿನಲ್ಲಿ ಕಾರು, ಬಂಗ್ಲೆ, ಸೂಟು- ಸೆಲ್ಯೂಟುಗಳ ಧಿಮಾಕು… ವಾಸ್ತವನರಿಯದೆ ಮೂಗಿಗೆ ಬಡಿಯುತಿದೆ ಕಮಟು’ ಎಂದು ಬಣ್ಣಿಸುತ್ತಿದ್ದರೋ ಏನೋ!

ಎಸಿ ಹಾಲ್‌ನಲ್ಲಿ ಪರಿಸರ ಉಪನ್ಯಾಸ!
ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ದಲಿತರ ಉದ್ಧಾರ, ಖಾದಿ ಪ್ರಚಾರಕ್ಕೆ ದೇಶಾದ್ಯಂತ ಪ್ರವಾಸ ಮಾಡಿದಾಗ “ಭಾರತ ಬಡ ದೇಶ. ಇಲ್ಲಿ ಅನಗತ್ಯವಾಗಿ ಆಭರಣಗಳನ್ನು, ಲೆಕ್ಕಕ್ಕಿಂತ ಬಟ್ಟೆಗಳನ್ನು ಹಾಕಿಕೊಂಡು ಪ್ರದರ್ಶಿಸಬಾರದು. ಇದು ಇಲ್ಲದವರ ನೋವಿಗೆ ಕಾರಣವಾಗುತ್ತದೆ’ ಎಂದು ಕರೆ ಕೊಡುತ್ತಿದ್ದರು. ಇದನ್ನು ಶಿರಸಾವಹಿಸಿ ಜೀವನದ ಕೊನೆಯವರೆಗೆ ಪಾಲಿಸಿದವರಿದ್ದಾರೆ. ವಿಚಿತ್ರವೆಂದರೆ ಇವರ ಮನೆಯ ಮುಂದಿನ ತಲೆಮಾರು ಇದೆಲ್ಲವನ್ನೂ ಉಲ್ಟಾ ಮಾಡುತ್ತಿದ್ದಾರೆ. ಈಗ ಗಾಂಧಿ ಕುರಿತ ಪರಿಸರ ಕಾಳಜಿ ಉಪನ್ಯಾಸ ಮಾಡುವವರಿಗೂ ಪರಿಸರನಾಶಕವಾದ, ದುಬಾರಿಯ ಹವಾನಿಯಂತ್ರಿತ ಸಭಾಂಗಣಗಳೇ ಬೇಕು.

“ಕುರ್ಚಿಯ ವ್ಯಸನ’
ಯಂತ್ರ ನಾಗರಿಕತೆಯ ಅಪಾಯವನ್ನು ಉಲ್ಲೇಖೀಸುವಾಗ ಚಿಂತಕ ಪ್ರಸನ್ನ ಅವರು “ಕುರ್ಚಿಯ ವ್ಯಸನ’ ಎಂದು ಟೀಕಿಸುತ್ತಾರೆ. ಈ ವ್ಯಸನಿಗಳ ಕಾಳಜಿ ಇರುವುದು ದುಡಿಯುವ ವರ್ಗ, ಅನುಯಾಯಿ ವರ್ಗದ ಕಡೆಗೆ. ಕುರ್ಚಿಯಲ್ಲಿ ಕುಳಿತವರು ಆ ಕೆಲಸ ಮಾಡುವುದಿಲ್ಲ. ಕೆಲಸ ಮಾಡದೆ “ಕುರ್ಚಿ’ಯಲ್ಲಿ ಕುಳಿತವರನ್ನು ಕಾಣುವ ಜನರೂ ಇವರಂತೆಯೇ ಆಗಿ ಕೊನೆಗೆ ಕೈ ಕೆಲಸ ಬಿಟ್ಟು ವಿಚಾರಗಳನ್ನು ಹೇಳುತ್ತಾರೆ. ಪರಿಣಾಮ ಏನಾದೀತು? ಇವು ಯಂತ್ರ ನಾಗರಿಕತೆ, ಮಾರುಕಟ್ಟೆ ಯಾನೆ ಕೊಳ್ಳುಬಾಕತನದ ಪರಿಣಾಮ. ಇವುಗಳನ್ನು ಮಣಿಸಲು ಅನಗತ್ಯ ವಸ್ತುಗಳ ಅಂದರೆ ಐಷಾರಾಮಿ ಬದುಕಿನ ಸಾಮಗ್ರಿಗಳನ್ನು ಸ್ವಯಂ ತ್ಯಜಿಸಬೇಕಾಗಿದೆ. ಆಗಲೇ ಕೃತಕ ಬೇಡಿಕೆಗಳ ಮಾರುಕಟ್ಟೆ ಲಾಬಿಗಳನ್ನು ಮಣಿಸಲು ಸಾಧ್ಯ ಎಂಬ ಸಲಹೆಯನ್ನು ಪ್ರಸನ್ನ ಕೊಡುತ್ತಾರೆ.

ಬಡವರ 10 = ಸಿರಿವಂತರ 2 ಮಕ್ಕಳು!
ಮಾಧ್ಯಮಗಳೂ ಕೊಳ್ಳುಬಾಕತನವನ್ನೇ (ಇನ್ನೂ ಬೇಕು ಇನ್ನೂ ಬೇಕು ಎಂಬ ಹಪಾಹಪಿತನ) ಆದರ್ಶವೆಂಬಂತೆ ಪ್ರತಿಬಿಂಬಿಸುತ್ತಿದೆ. “ಎರಡು ಮಕ್ಕಳಿದ್ದ ಸಿರಿವಂತರಿಂದ ಮತ್ತು ಹತ್ತು ಮಕ್ಕಳಿದ್ದ ಬಡವರಿಂದ ಆಗುವ ಪರಿಸರ ಮಾಲಿನ್ಯ ಒಂದೇ ತೆರನಾದದ್ದು’ ಎಂದು ಅಮೆರಿಕದ ಮೇರಿಲ್ಯಾಂಡ್‌ ವಿ.ವಿ.ಯ ಹಿರಿಯ ಭೂವಿಜ್ಞಾನಿ ಡಾ|ರಘು ಮುರ್ತುಗುಡ್ಡೆ ಹೇಳುವುದು ಮನನೀಯ. ಏಕೆಂದರೆ ಹತ್ತು ಮಕ್ಕಳು ಪರಿಸರದಿಂದ ಪಡೆಯುವುದನ್ನು ಎರಡೇ ಮಕ್ಕಳು ಅನುಭವಿಸುವುದು ಕೊಳ್ಳುಬಾಕತನದ ದುಷ್ಪರಿಣಾಮ. ಒಂದೋ, ಎರಡೋ ಮಕ್ಕಳನ್ನು ಪಡೆದು ನಾವು ದೇಶ, ಸಮಾಜ, ಪರಿಸರಕ್ಕಾಗಿ ಕೊಡುವುದೇನೂ ಇಲ್ಲ.

ಭಾರವಾದ ಕಪಾಟು, ಫ್ರಿಡ್ಜ್
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಸಡಗರ ಬರುತ್ತಿದೆ. ದೀಪಾವಳಿ ಎಂದಾಕ್ಷಣ ಹೊಸ ಬಟ್ಟೆಗಳು, ಸಿಹಿತಿನಿಸುಗಳು ಬೇಕೆನಿಸುತ್ತವೆ, ಇದ್ದವರಿಗೂ, ಇಲ್ಲದವರಿಗೂ… ಇದ್ದವರು ವರ್ಷವಿಡೀ ಇದೇ ಕೆಲಸವನ್ನು ಮಾಡುತ್ತಾರೆ. ಇಲ್ಲದವರ ಪಾಡು ಹೇಗಿರಬಹುದು ಎಂದು ಕ್ಷಣ ಕಾಲ ಚಿಂತಿಸಿ ನಡೆದುಕೊಳ್ಳಬೇಕು. ನಮ್ಮ ಬಟ್ಟೆಗಳನ್ನು ಕಪಾಟು, ಆಹಾರ/ಸಿಹಿ ತಿಂಡಿಗಳನ್ನು ಫ್ರಿಡ್ಜ್ ತಾಜಾ ಆಗಿ ಉಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ದೀಪಾವಳಿ ಹಬ್ಬದಲ್ಲಿ ಇಲ್ಲದವರಿಗೆ ಹೊಸ ಬಟ್ಟೆ, ಸಿಹಿತಿನಿಸುಗಳನ್ನು ಕೊಡುವ ಆಂದೋಲನ ನಡೆಸುವ ಅಗತ್ಯವಿದೆ. ಅವರಲ್ಲಿ ಆಗ ಮೂಡುವ ಮಂದಹಾಸ ಇದ್ದವರ ಮುಖದಲ್ಲಿ ಎಂದೆಂದಿಗೂ ಬಾರದು. ನಾವು ಮಾಡುವ ದೀಪಾವಳಿ ಖರ್ಚಿನ ಬಜೆಟ್‌ನಲ್ಲಿಯೇ ಒಂದಿಷ್ಟು ಪ್ರಮಾಣವನ್ನು ಇಲ್ಲದವರಿಗಾಗಿ ತೆಗೆದಿರಿಸಿ ಧನ್ಯರಾಗಬೇಕು. ಹೀಗೆ ಸ್ವನಿಯಂತ್ರಣ, ಪರಹಿತಕ್ಕಾಗಿ ಬದುಕಿದರೆ ಮಾತ್ರ ಪ್ರಾಕೃತಿಕ ಸಂಪನ್ಮೂಲ ಇನ್ನಷ್ಟು ಹೆಚ್ಚು ಕಾಲ ಬದುಕಿ ಉಳಿದೀತು. ಇದನ್ನೇ ಗಾಂಧೀಜಿ “ಸ್ವ-ರಾಜ್ಯ’ (ಸ್ವ ಆಡಳಿತ) ಎಂದು ಕರೆದದ್ದು. ನಾವು ಅನುಭವಿಸುವ ಎಲ್ಲವೂ ಪ್ರಾಕೃತಿಕ ಸಂಪನ್ಮೂಲ ಎಂಬ ಎಚ್ಚರಿಕೆ ಬೇಕು. ಈಗ ಸಂಪನ್ಮೂಲವನ್ನು ಖಾಲಿ ಮಾಡುವುದರಲ್ಲಿ ಪೈಪೋಟಿ ಇದೆ. ಇದೆಲ್ಲವೂ ಗಾಂಧೀಜಿ ವಿಚಾರಧಾರೆಯಲ್ಲಿ ಅಡಕವಾಗಿದೆ. ವಿಮರ್ಶಕ ಬುದ್ಧಿಯಿಂದ ಓದಿದರೆ ದಾಸರ, ಶರಣರ ಹಾಡಿನಲ್ಲಿಯೂ ಅಡಕವಾಗಿದೆ…

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next