Advertisement

ತಂದೆ-ತಾಯಿ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ

03:17 PM Feb 05, 2018 | |

ಸಿಂದಗಿ: ಜಗತ್ತಿನಲ್ಲಿ ಮಾನವನಿಗಿರುವ ಎಲ್ಲ ಋಣಗಳ ಪೈಕಿ ತಂದೆ-ತಾಯಿ ಋಣವು ಅತ್ಯಂತ ಮಹತ್ವದ್ದಾಗಿದೆ ಎಂದು ಸಿಂದಗಿ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ, ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಹೇಳಿದರು.

Advertisement

ತಾಲೂಕಿನ ಬೋರಗಿ-ಪುರದಾಳ ಗ್ರಾಮದ ವಿಶ್ವರಾಧ್ಯಮಠದಲ್ಲಿ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳ 50ನೇ ಜನ್ಮದಿನ ಸವಿ ನೆನಪಿಗಾಗಿ ಹಮ್ಮಿಕೊಂಡಿದ್ದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ತಾಯಿಯ ಋಣ ವಿಷಯ ಕುರಿತು ಉಪನ್ಯಾಸ ನೀಡಿದರು. 

ತಾಯಿಯನ್ನು ದೇವರೆಂದು ತಿಳಿದವರಿಗೆ ಸಕಲ ಕಾರ್ಯಗಳು ಸಿದ್ಧಿಸುತ್ತವೆ. ಆದ್ದರಿಂದ ತಾಯಿಯ ಪ್ರೇಮವನ್ನು ಸಂಪಾದಿಸಿ ಜೀವನದಲ್ಲಿ ಸುಖ ಕಂಡುಕೊಳ್ಳಬೇಕು. ಜಗತ್ತಿನ ಮೊದಲನೇ ದೇವತೆ ತಾಯಿ. ಮಗುವನ್ನು ಹೆತ್ತು-ಹೊತ್ತು, ಲಾಲಿಸಿ-ಪಾಲಿಸಿ, ನಡೆ-ನುಡಿ  ಕಲಿಸಿ ನಮ್ಮೇಲ್ಲರಿಗೆ ವ್ಯವಾಹರಿಕ ಸಂಸ್ಕಾರ ನೀಡಿ ಬೆಳೆಸಿದ ಜನನಿ ಎಂದರು.

ಪ್ರಸ್ತುತ ದಿನದಲ್ಲಿ ತಾಯಿ- ಮಗುವಿನ ಮಾನಸಿಕ ಸಂಬಂಧ ಶಿಥಿಲಗೊಳ್ಳುತ್ತಿರುವುದು ವಿಷಾದಕರ ಸಂಗತಿ. ಹೆತ್ತವರ ಮತ್ತು ಮಕ್ಕಳ ನಡುವಿನ ಸಂಬಂಧ ಇಲ್ಲದಿದ್ದಲ್ಲಿ ನಮ್ಮ ಜೀವನ ಯಾಂತ್ರಿಕವಾಗುತ್ತಿದೆ. ಇಂದು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾವಂತ ಕುಂಟುಂಬಗಳಲ್ಲಿ ವೃದ್ಧ ತಂದೆ-ತಾಯಿ ಏಕಾಂತ ಜೀವನ ನಡೆಸುತ್ತಿದ್ದಾರೆ. ಇಂದು ಹೆತ್ತವರ ಮತ್ತು ಮಕ್ಕಳ ಮಾನಸಿಕ ಸಂಬಂಧ ಹೆಚ್ಚಾಗಬೇಕು. ಆಗ ಜೀವನ ಸ್ವರ್ಗ ಸುಖವಾಗುವುದು ಎಂದರು.

ಸಮ್ಮುಖ ವಹಿಸಿದ್ದ ಕಲಬುರಗಿ ಜಿಲ್ಲೆಯ, ಅಫಜಲಪುರ ತಾಲೂಕಿನ ಬ್ಯಾಡಗಿಹಾಳ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಮಹಿಳೆಯರು ತಾವು ಮಾಡುವ ಕಾಯಕ ಸತ್ಯ ಶುದ್ಧತೆಯಿಂದ ಕೋಡಿರಬೇಕು. ದುಡ್ಡಿನ ಆಸೆಗಾಗಿ ಎಂತೆಂತಹುದೋ ಕೆಲಸ ಮಾಡದರೇ ಪ್ರಯೋಜನವಿಲ್ಲ. ಕಾಯಕದಿಂದ ನಮಗೆ ಒಳಿತಾಗುವುದರ ಜೊತೆಗೆ ಸಮಾಜಕ್ಕೂ ಒಳಿತಾಗಬೇಕು. ಆದ್ದರಿಂದ ಸಾಮಾನ್ಯ ಮಹಿಳೆಯರು ಕೂಡಾ ಶರಣರ ಮಾರ್ಗಕ್ಕೆ ಬರಬೇಕು ಎಂದರು. 

Advertisement

ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳ 50ನೇ ಜನ್ಮದಿನ ಸವಿನೆನಪಿಗಾಗಿ 50 ದಿನ ವಿವಿಧ ಕಾರ್ಯಕ್ರಮ
ಜರಗುತ್ತವೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು ಆಶೀರ್ವಚನ ನೀಡುವರು. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವರಾಧ್ಯರ ಹಾಗೂ ಭೀಮಾಶಂಕರ ಮಹಾರಾಜರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮನುಷ್ಯ ತನ್ನ ಮರಣಕ್ಕಿಂತ ಮುಂಚೆ ಈ ಲೋಕದಲ್ಲಿ ಏನನ್ನು ಬಿತ್ತುತ್ತಾನೋ ಅವನ ಮರಣದ ನಂತರ ಪರಲೋಕ ಜೀವನದಲ್ಲಿ ಅದರ ಬೆಳೆ ಕೊಯ್ಯುವನು. ಮನುಷ್ಯರ ಬಗ್ಗೆ ಕರಣುವಿಲ್ಲದವನ ಮೇಲೆ ದೇವರು ಕೂಡಾ ಕರುಣೆ ತೋರುವುದಿಲ್ಲ. ಈ
ಜಗತ್ತಿನಲ್ಲಿ ಮಾನವನಿಗಿರುವ ಎಲ್ಲ ಋಣಗಳ ಪೈಕಿ ತಂದೆ-ತಾಯಿ ಋಣವು ಅತ್ಯಂತ ಮಹತ್ವದ್ದಾಗಿದೆ. ವೃದ್ಧ ತಂದೆ-ತಾಯಿಗಳನ್ನು ನಾವು ನಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು. 

ಮಕ್ಕಳ ಸಾಹಿತಿ ಶಿವಕುಮಾರ ಶಿವಸಿಂಪಿಗೇರ ಮಾತನಾಡಿದರು. ಸಂಗೀತಗಾರರಾದ ತಿಪ್ಪಣ್ಣ ಹೂಗಾರ, ಈರಣ್ಣ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಕೆಂಚಪ್ಪ ಸಾಹುಕಾರ, ಡಾ| ನಾನಾಗೌಡ ಪುರದಾಳ, ಡಾ|ಶಿವು ಚಾವರ, ಮುದಕಪ್ಪ ಕೊಟಾರಗಸ್ತಿ, ಸಿದ್ದಯ್ಯಸ್ವಾಮಿ ಪುರದಾಳ, ಚಿದಾನಂದ ಡಂಬಳ, ಹನುಮಂತ ಬಿದರಕುಂದಿ, ಈರನಗೌಡ ಪಾಟೀಲ, ಶಿವಲಿಂಗ ಡಂಬಳ, ವಿಶ್ವದಳದ ಕಾರ್ಯಕರ್ತರು ಹಾಗೂ ಭಕ್ತರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next