Advertisement

ಬರದಲ್ಲೂ ಜನಪ್ರತಿನಿಧಿಗಳು ನಾಪತ್ತೆ

11:33 AM Jan 21, 2019 | |

ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಎರಡೂ ಅವಧಿಯ ಮಳೆ ಬಾರದೇ ಭೀಕರ ಬರ ಆವರಿಸಿದ್ದು, ಸರ್ಕಾರ ಕೂಡ ಜಿಲ್ಲೆಯ ಎಲ್ಲ ತಾಲೂಕಗಳನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಿದೆ. ಅದರೆ ಬರ ನಿರ್ವಹಣೆ ವಿಷಯದಲ್ಲಿ ಮಾತ್ರ ಆಡಳಿತ ಯಂತ್ರ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ. ಸಂಕಷ್ಟದಲ್ಲಿರುವ ಜನರ ಗೋಳು ಕೇಳಿಸಿಕೊಳ್ಳಲು ಜಿಲ್ಲೆಯಲ್ಲಿ ಕೇಂದ್ರದ ಓರ್ವ ಮಂತ್ರಿ, ರಾಜ್ಯದ ಮೂವರು ಸಚಿವರು, ಐವರು ಶಾಸಕರು, ಐವರು ಮೆಲ್ಮನೆ ಸದಸ್ಯರು ಸೇರಿದಂತೆ ಯಾರೊಬ್ಬರು ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುತ್ತಿಲ್ಲ. ಎಲ್ಲರೂ ರಾಜಕೀಯ ಮೇಲಾಟಕ್ಕಾಗಿ ಬೆಂಗಳೂರು-ದೆಹಲಿ ಸೆರಾರ್ಟ್‌ ಸೇರಿಕೊಂಡಿದ್ದು, ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

Advertisement

ವರ್ಷ ಪೂರ್ತಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರ ಜಿಲ್ಲೆಯ ಎಲ್ಲ ತಾಲೂಕಗಳನ್ನು ಬರ ಎಂದು ಘೋಷಿಸಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬರ ಪರಿಹಾರ ಕೆಲಸಗಳು ನಡೆಯುತ್ತಿಲ್ಲ. ಸಂಕಷ್ಟದಲ್ಲಿರುವ ಇಂಥ ಸಂದರ್ಭದಲ್ಲಿ ಜನರ ನೋವುಗಳಿಗೆ ಸ್ಪಂದಿಸಬೇಕಾದ ಜಿಲ್ಲೆಯ ಎಲ್ಲ ಶಾಸಕರು ರಾಜಕೀಯ ಮೇಲಾಟಕ್ಕಾಗಿ ಸೆರಾರ್ಟ್‌ ಸೇರಿಕೊಂಡಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೊರ ಹೊಮ್ಮಿದೆ.

ಜಿಲ್ಲೆಯಲ್ಲಿ ಈಗಾಗಲೇ 63 ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದರೂ ಜಿಲ್ಲೆಯಲ್ಲಿ ಇಂಡಿ, ಚಡಚಣ, ತಿಕೋಟಾ, ಬಬಲೇಶ್ವರ, ಸಿಂದಗಿ ತೋಟದ ವಸ್ತಿ ಪ್ರದೇಶಗಳಿಗೆ ಅಗತ್ಯ ಪ್ರಮಾಣದ ನೀರು ದೊರೆಯುತ್ತಿಲ್ಲ ಎಂದು ಜನ ಕಣ್ಣೀರು ಹಾಕುವಂತಾಗಿದೆ. ಜನರಿಗೆ ಮಾತ್ರವಲ್ಲದೇ ಜಾನುವಾರುಗಳು ಕೂಡ ನೀರಿಲ್ಲದೇ ಮೂಕರೋಧನೆ ಮಾಡುತ್ತಿವೆ.

ಇದರ ಮಧ್ಯೆಯೇ ಜಿಪಂ ನೂತನ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ನಾಲ್ಕು ದಿನಗಳ ಹಿಂದೆ ನಡೆಸಿದ ಬರ ಪರಿಶೀಲನೆ ವೇಳೆ ಅಧಿಕಾರಿಗಳು ಮಾತ್ರೆ ಕಥೆ ಹೇಳುತ್ತಿರುವುದು ಸ್ಪಷ್ಟವಾಗುತ್ತಿದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಹಳ್ಳದಿಂದ ಮೇಲೆದ್ದು ಬಂದಿಲ್ಲ. ಜಿಲ್ಲೆಯ ಹಲವೆಡೆ ಬರ ಪರಿಸ್ಥಿತಿ ಎದುರಿಸಲು ಕೊರೆಸಿರುವ ಬೋರ್‌ ವೆಲ್‌ಗ‌ಳಲ್ಲಿ ಸೌಭಾಗ್ಯಕ್ಕೆ ಉತ್ತಮ ಜಲಮೂಲ ಪತ್ತೆಯಾದರೂ ಅಧಿಕಾರಿಗಳು 4-5 ತಿಂಗಳಾದರೂ ಮೋಟಾರ್‌ ಅಳವಡಿಸಲು ನೆಪ ಹೇಳುತ್ತಿದ್ದಾರೆ. ಪರಿಣಾಮ ನೀರಿದ್ದರೂ ಕುಡಿಯಲು ದಕ್ಕದ ದುಸ್ಥಿತಿ ಜನರದ್ದು. ಹಲವು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳಿದ್ದರೂ ದುರಸ್ತಿ ನೆಪದಲ್ಲಿ ಬಾಗಿಲು ಹಾಕಿದ್ದು ಜನರಿಗೆ ಮಾತ್ರ ನೀರಿನ ಬರವೂ ನೀಗಿಲ್ಲ.

ಇತ್ತ ಜಾನುವಾರುಗಳಿಗೆ ಆಗತ್ಯ ಪ್ರಮಾಣದ ಮೇವು ಒದಗಿಸಲು 12 ಕಡೆ ಮೇವು ಸಂಗ್ರಹ ಮಾಡಿದ್ದಾಗಿ 2 ರೂ.ಗೆ 1 ಕೆಜಿ ಜೋಳದ ಮೇವನ್ನು ಮಾರಾಟ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ ಎಂಬ ವಿಷಯ ಸ್ವಯಂ ಜಿಪಂ ಸದಸ್ಯರಿಗೆ ತಿಳಿದಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರೇ ಸಭೆಗಳಲ್ಲಿ ಬಹಿರಂಗಪಡಿಸಿದ್ದಾರೆ. ಇಂಥ ಸ್ಥಿತಿಯಲ್ಲಿ ಪಶುಪಾಲಕರು ತಮ್ಮ ನೆಚ್ಚಿನ ಸಾಕು ಜೀವಗಳಿಗೆ ಮೇವು ಹೊಂದಿಸಲಾಗದೇ ಪರದಾಡುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಹೋದರೂ ಜಾನುವಾರುಗಳನ್ನು ಕೊಳ್ಳುವವರಿಲ್ಲದೇ ಆನಿವಾರ್ಯವಾಗಿ ಕಟುಕರ ಕೈಗೆ ಕೊಡುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ ಹಂತದಲ್ಲಿ ಎರಡೆರಡು ಬಾರಿ ಕೇಂದ್ರ ತಂಡ ಹಾಗೂ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಅನ್ನದಾತರು ಕೈ ಮುಗಿದು ಅಂಗಲಾಚಿದ್ದಾರೆ. ಅಧ್ಯಯನ ತಂಡಗಳಿಗೆ ಕುಡಿಯುವ ನೀರಿಗಾಗಿ ಜನರಿಂದ ಖಾಲಿ ಕೊಡಗಳ ಪ್ರದರ್ಶನವೂ ನಡೆದಿವೆ. ಮೂಕ ಪ್ರಾಣಿಗಳು ಅರ್ತನಾದ ಮಾಡಿವೆ. ಇಷ್ಟಾದರೂ ಜಿಲ್ಲೆಯ ಬರದ ಸಂಕಷ್ಟ ನೀಗಲು ಸಾಧ್ಯವಾಗಿಲ್ಲ. ಇಂಥ ಸಂದರ್ಭದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತ್ರ ಹಲವು ಸಭೆಗಳಲ್ಲಿ ಧ್ವನಿ ಎತ್ತಿ ಅಕ್ರೋಶ ವ್ಯಕ್ತಪಡಿಸಿದ್ದು ಬಿಟ್ಟರೆ ಇದರಿಂದಲಗೂ ಜನರ ಸಂಕಷ್ಟಗಳ ಪರಿಹಾರ ಸಾಧ್ಯವಾಗಿಲ್ಲ.

ಜಿಲ್ಲೆಗೆ ಬರ ಅಧ್ಯಯನಕ್ಕೆ ಬಂದಿದ್ದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಬರ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ಕಚೇರಿ ಬಟ್ಟು ಹಳ್ಳಿಗಳಿಗೆ ಹೋಗಿ ಎಂದು ಕುಟುಕಿರುವುದು ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ, ಅಧಿಕಾರಿಗಳು ಕಥೆ ಹೇಳುತ್ತಿದ್ದಾರೆ ಎಂಬುದು ಸೂಚ್ಯವಾಗಿಯೇ ಮನದಟ್ಟು ಮಾಡಿಸಿದೆ.

ಇಂಥ ಸ್ಥಿತಿಯಲ್ಲಿ ಜನರಿಂದ ನೇರವಾಗಿ ಅಯ್ಕೆಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ರಾಜ್ಯ ಸಂಪುಟದ ಪ್ರಭಾವಿ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎಂ.ಸಿ. ಮನಗೂಳಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್‌. ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರು, ದೇವಾನಂದ ಪಾಟೀಲ, ಜನರಿಂದ ಪರೋಕ್ಷವಾಗಿ ಆಗಿರುವ ಎಸ್‌.ಆರ್‌. ಪಾಟೀಲ, ಹನುಮಂತ ನಿರಾಣಿ, ಆರುಣ ಶಹಾಪುರ, ಸುನೀಲಗೌಡ ಪಾಟೀಲ, ಪ್ರಕಾಶ ರಾಠೊಡ ಹೀಗೆ ಜಿಲ್ಲೆಯಲ್ಲಿ ರಾಜಕೀಯ ಪ್ರಬಲ ಶಕ್ತಿ ಇದ್ದರೂ ಬಹುತೇಕರು ಜನರ ಬಳಿಗೆ ಹೋಗಿಲ್ಲ. ಸಮಸ್ಯೆ ಆಲಿಸಿಲ್ಲ ಎಂದು ಜನರು ದೂರುತ್ತಿದ್ದಾರೆ. ಹಲವು ಶಾಸಕರಂತೂ ಸಾಮಾನ್ಯ ದಿನಗಳಲ್ಲೇ ಜಿಲ್ಲೆಯ ಅಭಿವೃದ್ಧಿ ಪರಿಶೀಲನೆ ಸಭೆಗಳಿಗೆ ಹಾಜರಾಗುವುದಿಲ್ಲ. ಇನ್ನು ಬರ ಸಮಸ್ಯೆ ಅವರ ಅರಿವಿಗೆ ಬರುವುದಾದರೂ ಹೇಗೆ ಎಂಬ ಟೀಕೆಗಳು ಜನರಿಂದ ಕೇಳಿ ಬರುತ್ತಿವೆ.

ಇನ್ನಾದರೂ ಜಿಲ್ಲೆಯ ಸಚಿವ-ಶಾಸಕರು ಭೀಕರ ಬರದಿಂದ ತತ್ತರಿಸಿರುವ ಜನರ ಸಮಸ್ಯೆ ಆಲಿಸಲು ಅಧಿಕಾರಿಗಳೊಂದಿಗೆ ಎಲ್ಲರೂ ಹಳ್ಳಿಗಳತ್ತ ಹೆಜ್ಜೆ ಹಾಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next