Advertisement

ಪಶು ವೈದ್ಯ ಪ್ರಯೋಗಾಲಯ ಸ್ಥಾಪನೆ

07:34 AM Feb 17, 2019 | Team Udayavani |

ದೇವನಹಳ್ಳಿ: ದೇವನಹಳ್ಳಿಯ ಹಳೇ ಶಿಬಿರ ಕಚೇರಿಯಲ್ಲಿ ಪಶು ವೈದ್ಯಕೀಯ ಪ್ರಯೋಗಾಲಯ ಸ್ಥಾಪಿಸಿ ಇಲ್ಲಿನ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ತಿಳಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಬಳಿಯ ದೇವನಹಳ್ಳಿ ಶಿಬಿರ ಕಚೇರಿ ಆವರಣದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ನಡೆದ 2ನೇ ಹಂತದ ದೇವನಹಳ್ಳಿ ಶಿಬಿರ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  

ಹಾಲಿನ ಗುಣಮಟ್ಟದ ಮೇಲೆ ದರ: ಸಗಣಿ, ಗ‌ಂಜಳ ಹಾಗೂ ಇತರೆ ವಸ್ತುಗಳನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಕೊಳ್ಳಲು ರೈತರಿಗೆ ಅನುಕೂಲವಾಗುತ್ತದೆ. ಹಾಲು ಉತ್ಪಾದಕರ ರೈತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೈನುಗಾರಿಕೆಯನ್ನು ವ್ಯವಹಾರಿಕವಾಗಿ ಬಳಸಬೇಕು. ಮಾರ್ಚ್‌ನಲ್ಲಿ ಗುಣಮಟ್ಟದ ಆಧಾರದ ಮೇಲೆ 26.30 ರೂ. ಹಾಗೂ ಏರ್ಪಿಲ್‌ನಲ್ಲಿ 27.10 ರೂ. ಹಾಲಿಗೆ ನೀಡಲಾಗುವುದು. ಸರ್ಕಾರ 5 ರೂ. ಪ್ರೋತ್ಸಾಹ ಧನವನ್ನು 1 ರೂ. ಹೆಚ್ಚಿಸಿರುವುದರಿಂದ 33 ರೂ. ರೈತರ ಖಾತೆಗೆ ಹೋಗಲಿದೆ ಎಂದರು.  

ಮೆಗಾ ಡೇರಿ: ಬೆಂಗಳೂರು ಹಾಲು ಒಕ್ಕೂಟದ ಆಸ್ತಿ ಮೂರು ವರ್ಷಗಳ ಹಿಂದೆ 130 ಕೋಟಿ ರೂ.ಇದ್ದದ್ದನ್ನು ಇದೀಗ 750 ಕೋಟಿ ರೂ. ಆಸ್ತಿ ಮಾಡಲಾಗಿದೆ. 55 ವರ್ಷದಲ್ಲಿ ಇದೇ ರೀತಿ ಮಾಡಿದ್ದರೆ ಸಾಕಷ್ಟು ಆಸ್ತಿಯನ್ನು ಮಾಡಬಹುದಾಗಿತ್ತು. ಈಗ ನಿರೀಕ್ಷಿತ ಆದಾಯ ಹೆಚ್ಚಿಸಲಾಗುತ್ತಿದೆ. ಪ್ರತಿನಿತ್ಯ 16 ಲಕ್ಷ ಲೀ. ಹಾಲನ್ನು ಸಂಗ್ರಹಿಸಲಾಗುತ್ತಿದೆ. ಕನಕಪುರದ ಹತ್ತಿರ ಮೆಗಾ ಡೇರಿ ಮಾಡಿದ್ದು, ಹಾಲಿನ ಉತ್ಪನ್ನಗಳಾದ ಚೀಸ್‌, ಬೆಣ್ಣೆ ಮುಂತಾದವುಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.  

ಮೂಲ ಸೌಲಭ್ಯ: ಹೊಸ ಹೊಸ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು. ರಾಸುಗಳಿಗೆ ರೋಗಗಳ ಸಮಸ್ಯೆ, ನೀರಿನ ಸಮಸ್ಯೆ, ಮೇವಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಕೆಚ್ಚಲು ಬಾವು ಕಾಯಿಲೆಗೆ ಜೌಷಧಿ ನೀಡಲಾಗುವುದು. ರೈತರಿಗೆ 100 ಕೋಟಿ ರೂ.ನಷ್ಟು ಮೂಲಭೂತ ಸೌಲಭ್ಯಗಳನ್ನು ಕೊಡಲಾಗುವುದು. ರೈತರಿಗೆ ಹಾಲು ಕರೆಯುವ ಯಂತ್ರ, ಮ್ಯಾಟ್‌ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ದೇವನಹಳ್ಳಿ ತಾಲೂಕಿನ 182 ಸಹಕಾರ ಸಂಘಗಳ ಪೈಕಿ 6 ಸಂಘಗಳು ಸ್ವಂತ ಕಟ್ಟಡ ಹೊಂದಿದರೆ, ಜಿಲ್ಲೆಯಲ್ಲಿಯೇ 100ರಷ್ಟು ಸ್ವಂತ ಕಟ್ಟಡ ಹೊಂದಿರುವ ತಾಲೂಕು ಎಂದು ಘೋಷಣೆಯಾಗಲಿದೆ ಎಂದರು.  

Advertisement

ಹೈನುಗಾರಿಕೆ ರೈತರ ಜೀವನಾಡಿ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ನಿಸರ್ಗ ಎಲ್‌.ಎನ್‌.ನಾರಾಯಣಸ್ವಾಮಿ, ಹೈನುಗಾರಿಕೆ ರೈತಾಪಿ ವರ್ಗದ ಜೀವನಾಡಿಯಾಗಿದೆ. ತಾಲೂಕಿನಲ್ಲಿ ರೇಷ್ಮೆ ಮತ್ತು ಹೈನುಗಾರಿಕೆ ಎರಡು ಕಣ್ಣುಗಳಿದ್ದಂತೆ. ಬಮುಲ್‌ ಉಪಾಧ್ಯಕ್ಷ ಶ್ರೀನಿವಾಸ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ಸಹಕಾರ ಸಂಘಗಳು ಉತ್ತಮವಾಗಿ ಜನರಿಗೆ ಅನುಕೂಲ ಕಲ್ಪಿಸುತ್ತಿವೆ. ಪ್ರತಿ ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಿಂದ ಗ್ರಾಮೀಣ ಜನರಿಗೆ ಅನುಕೂಲ ಮಾಡುತ್ತಿದ್ದಾರೆ. ಸಹಕಾರ ಸಂಘದ ತತ್ವದಡಿ ಸಂಘ ಬೆಳವಣಿಗೆಯಾಗುತ್ತಿದೆ ಎಂದರು.  

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಜಿಪಂ ಉಪಾಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಬಮುಲ್‌ ರೈತರಿಗೆ ಹೆಚ್ಚಿನ ಅನುಕೂಲ ಮಾಡುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಶ್ರೀನಿವಾಸ್‌, ಶಿಬಿರ ಕ‌ಚೇರಿಯ 2ನೇ ಹಂತದ ಕಟ್ಟಡವನ್ನು 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪಶು ವೈದ್ಯಕೀಯ ಲ್ಯಾಬ್‌ಗ ಬೆಂಗಳೂರಿಗೆ ಹೋಗಬೇಕಾಗಿತ್ತು. ಇಲ್ಲಿಯೇ ಪ್ರಾರಂಭವಾಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.  

ಈ ವೇಳೆ ತಾಪಂ ಅಧ್ಯಕ್ಷೆ ಭಾರತಿ, ಜಿಪಂ ಸದಸ್ಯರಾದ ಕೆ.ಸಿ.ಮಂಜುನಾಥ್‌, ರಾಧಮ್ಮ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ತಿಮ್ಮರಾಜು, ಬಿಡಿ ನಾಗಪ್ಪ, ರಾಜ್‌ ಕುಮಾರ್‌, ಕೃಷ್ಣಯ್ಯ, ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಮುನೇಗೌಡ, ನಿರ್ದೇಶಕ ಶ್ರೀನಿವಾಸ್‌, ಎಪಿಎಂಸಿ ಅಧ್ಯಕ್ಷ ಮಂಜುನಾಥ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣಪ್ಪ, ಜಿಲ್ಲಾ ಸಹಕಾರ ಒಕ್ಕುಟದ ಅಧ್ಯಕ್ಷ ಎ.ಸಿ.ನಾಗರಾಜ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಆರ್‌.ಮುನೇಗೌಡ, ಮುನಿರಾಜು, ತಾಲೂಕು ಸೊಸೈಟಿ ಅಧ್ಯಕ್ಷ ಶ್ರೀರಾಮಯ್ಯ, ತಾಪಂ ಸದಸ್ಯ ರಾದ ಕಾರಹಳ್ಳಿ ಶ್ರೀನಿವಾಸ್‌, ಭೀಮ್‌ ರಾಜ್‌, ಮಹೇಶ್‌, ಚೈತ್ರಾ, ಶಶಿಕಲಾ, ಮಾಜಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಸೋಮಣ್ಣ, ಎನ್‌ ನಾರಾಯಣಸ್ವಾಮಿ , ದೇವನಹಳ್ಳಿ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಗಂಗಯ್ಯ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next