Advertisement

ಸುಂಟರಗಾಳಿ ರಕ್ಷಾ ಕೇಂದ್ರ ಸ್ಥಾಪನೆ

04:27 PM Oct 31, 2018 | |

ಕಾಸರಗೋಡು: ಪದೇ ಪದೇ ಸಂಭವಿಸುವ ಸುಂಟರಗಾಳಿಯಿಂದ ರಕ್ಷಣೆ ಪಡೆಯಲು ಕಾಸರಗೋಡು ಜಿಲ್ಲೆಯ ಮೂರು ಕೇಂದ್ರಗಳು ಸಹಿತ ರಾಜ್ಯದ ಐದು ಕೇಂದ್ರಗಳಲ್ಲಿ ಸುಂಟರಗಾಳಿ ರಕ್ಷಾ ಕೇಂದ್ರವನ್ನು ಸ್ಥಾಪಿಸಲಾಗುವುದು.

Advertisement

ನ್ಯಾಶನಲ್‌ ಸೈಕ್ಲೋನ್‌ ರಿಸ್ಕ್ ಮಿಟಿಗೇಶನ್‌ ಪ್ರೊಜೆಕ್ಟ್‌ನ ಅಂಗವಾಗಿ ಸುಂಟರಗಾಳಿ ರಕ್ಷಾ ಕೇಂದ್ರವನ್ನು ತೆರೆಯಲಾಗುವುದು. ಕೇಂದ್ರ ಸರಕಾರದ ಸ್ವಾಧೀನದಲ್ಲಿ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಸ್ಥಾಪಿಸಿರುವ ಸುಂಟರಗಾಳಿ ಮುನ್ನೆಚ್ಚರಿಕೆ ಕೇಂದ್ರದ ಬೆನ್ನಲ್ಲೇ ವಿಶ್ವ ಬ್ಯಾಂಕ್‌ನ ನೆರವಿನೊಂದಿಗೆ ರಾಜ್ಯ ಸರಕಾರ ಸುಂಟರಗಾಳಿ ರಕ್ಷಾ ಕೇಂದ್ರವನ್ನು ಸ್ಥಾಪಿಸುತ್ತಿದೆ. ಈ ಮಹತ್ವದ ಯೋಜನೆಗೆ 16.93 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಯೋಜನೆಗೆ ಆಡಳಿತಾನುಮತಿ ಲಭಿಸಿದೆ. ಈ ಬಗ್ಗೆ ಅ. 26ರಂದು ಅಡಿಶನಲ್‌ ಚೀಫ್‌ ಸೆಕ್ರೆಟರಿ ಪಿ.ಎಚ್‌. ಕುರ್ಯನ್‌ ಆದೇಶ ಹೊರಡಿಸಿದ್ದಾರೆ. ಆರಂಭದಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಐದು ಕೇಂದ್ರಗಳಲ್ಲಿ ಮಲ್ಟಿ ಪರ್ಪಸ್‌ ಸೈಕ್ಲೋನ್‌ ಶೆಲ್ಟರ್‌ (ವಿವಿಧೋದ್ದೇಶ ಸುಂಟರಗಾಳಿ ರಕ್ಷಾ ಕೇಂದ್ರಗಳು) ಸ್ಥಾಪಿಸಲಾಗುವುದು. ನ್ಯಾಶನಲ್‌ ಸೈಕ್ಲೋನ್‌ ರಿಸ್ಕ್ ಮಿಟಿಗೇಶನ್‌ ಪ್ರೊಜೆಕ್ಟ್‌ನ (ರಾಷ್ಟ್ರೀಯ ಸುಂಟರಗಾಳಿ ಶಮನ ಯೋಜನೆ) ದ್ವಿತೀಯ ಹಂತವಾಗಿ ರಾಜ್ಯ ಡಿಸಾಸ್ಟರ್‌ ಮೆನೇಜ್‌ಮೆಐಟ್‌ ಇಲಾಖೆ ಯೋಜನೆಯನ್ನು ಜಾರಿಗೊಳಿಸಲಿದೆ.

ಒಟ್ಟು ವೆಚ್ಚದ ಶೇ.75 ರಷ್ಟು ಮೊತ್ತವನ್ನು ವಿಶ್ವ ಬ್ಯಾಂಕ್‌ ವಹಿಸಿಕೊಳ್ಳಲಿದೆ. ಉಳಿದ ಶೇ.25ರಷ್ಟು ಮೊತ್ತವನ್ನು ಕೇರಳ ಸರಕಾರ ವಹಿಸಿಕೊಳ್ಳಲಿದೆ. ಸುಂಟರಗಾಳಿಯ ಬಗ್ಗೆ ಮುನ್ನೆಚ್ಚರಿಕೆ ವ್ಯವಸ್ಥೆ ಸ್ಥಾಪಿಸುವುದು, ನೌಕರರಿಗೆ, ತಜ್ಞರಿಗೆ ದುರಿತ ನಿವಾರಣೆ, ರಕ್ಷಣಾ ಕಾರ್ಯ, ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ತರಬೇತಿ ನೀಡಲಾಗುವುದು. ಸುಂಟರ ಗಾಳಿಯಲ್ಲದೆ ನೆರೆ ಸಂದರ್ಭ, ಗುಡ್ಡ ಕುಸಿತ ಮೊದಲಾದ ಪ್ರಾಕೃತಿಕ ವಿಕೋಪಗಳಿಂದಲೂ ರಕ್ಷಣೆ ಪಡೆಯಲು ಈ ಯೋಜನೆಯಿಂದ ನೆರವಾಗಲಿದೆ. ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಾಗಿ ಎಂಟು ಕೇಂದ್ರಗಳಲ್ಲಿ 11 ಸುಂಟರಗಾಳಿ ರಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕಾಸರಗೋಡು ಜಿಲ್ಲೆಯಲ್ಲಿ ಕೂಡ್ಲು (ಮೂರು ಕೋಟಿ ರೂ.), ಕುಂಬಳೆ (2.72 ಕೋಟಿ ರೂ.) ಮತ್ತು ಹೊಸದುರ್ಗ ತಾಲೂಕಿನ ಪುಲ್ಲೂರು (3.66 ಕೋಟಿ ರೂ.), ಕಣ್ಣೂರು ಜಿಲ್ಲೆಯ ಚಾಲಾಡ್‌ (3.80 ಕೋಟಿ ರೂ.) ಮತ್ತು ತಲಶ್ಯೇರಿಯ ಕದಿರೂರು (3.75 ಕೋಟಿ ರೂ.) ನಲ್ಲಿ ಸುಂಟರಗಾಳಿ ರಕ್ಷಾ ಕೇಂದ್ರವನ್ನು ಸ್ಥಾಪಿಸಲು ನಿಧಿ ಮಂಜೂರು ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next