Advertisement

ಸಾಂಕ್ರಾಮಿಕಗಳ ತಡೆಗೆ ಸಂಶೋಧನಾ ಕೇಂದ್ರ “ದೀರ್ಘಾಯುಷ್ಯ” ಕ್ಕೆ ನಟ ಪುನೀತ್ ಹೆಸರು

01:13 PM May 12, 2022 | Team Udayavani |

ಬೆಂಗಳೂರು: ಅಕಾಲಿಕ ಮರಣವನ್ನು ತಡೆಯಲು ದೀರ್ಘಾಯುಷ್ಯ ಮತ್ತು ಸಾಂಕ್ರಾಮಿಕ ರೋಗಗಳಿಗೆ ಲಸಿಕೆ/ಔಷಧಿ ಕಂಡುಹಿಡಿಯುವ ಸದುದ್ದೇಶದಿಂದ ಸದ್ಯದಲ್ಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ದೀರ್ಘಾಯುಷ್ಯ’ (ಲಾಂಗಿವಿಟಿ ಸೆಂಟರ್) ಮತ್ತು ಸಾಂಕ್ರಾಮಿಕ ರೋಗ ಪರಿಹಾರ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು. ಈ ಪೈಕಿ ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಐಟಿ ಮತ್ತು ಬಿಟಿ ಇಲಾಖೆಯ ಪ್ರತಿಷ್ಠಿತ ಉಪಕ್ರಮವಾದ `ಬೆಂಗಳೂರು ಬಯೋ-ಇನ್ನೋವಶನ್ ಸೆಂಟರ್’ (ಬಿಬಿಸಿ)ನ ಬೆಂಬಲದ ಮೂಲಕ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 6 ಜೀವವಿಜ್ಞಾನ ಸಾಧನಗಳನ್ನು ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಹೆಲಿಕ್ಸ್ ಬಿಟಿ ಪಾರ್ಕ್ ನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಎಂಜಲು, ಮಲ, ಮೂತ್ರ, ಕಫ ಇತ್ಯಾದಿಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ, ಬಿಬಿಸಿ ಉಪಕ್ರಮದಡಿಯಲ್ಲಿ ದೇಶದ ಮೊಟ್ಟಮೊದಲ ಬಯೋ-ಬ್ಯಾಂಕಿಂಗ್ ಮತ್ತು ಸಂಗ್ರಹ ಮಾದರಿಗಳ ಕೋಶವನ್ನು ಕೂಡ ಸ್ಥಾಪಿಸಲಾಗುವುದು. ಇದರಿಂದ ಇಡೀ ರಾಜ್ಯದಲ್ಲಿ ರೋಗನಿದಾನ ಶಾಸ್ತ್ರವು ಮತ್ತಷ್ಟು ವೈಜ್ಞಾನಿಕವಾಗಿ ನಡೆಯಲಿದೆ.’ಈ ಮೂರು ಕೇಂದ್ರಗಳು ಎಲೆಕ್ಟ್ರಾನಿಕ್ ಸಿಟಿಯ ಬಿಬಿಸಿ ಯಲ್ಲೆ ಸ್ಥಾಪಿಸಲಾಗುವುದು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರದ ತುರ್ತಿದೆ. ಇಂದು ಬಿಡುಗಡೆಯಾಗಿರುವ ಸಾಧನಗಳಿಂದ ಡಿಎನ್ಎ/ಆರ್.ಎನ್.ಎ ಪರೀಕ್ಷೆಗಳು, ಕೋವಿಡ್ ಸ್ವಯಂ ಪರೀಕ್ಷೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ, ವರ್ಚುಯಲ್ ರಿಯಾಲಿಟಿ ವಿಧಾನದಲ್ಲಿ ಕಣ್ಣಿನ ಪರೀಕ್ಷೆ, ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪತ್ತೆ ಹಚ್ಚಬಹುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ದೆಹಲಿಯಲ್ಲಿ ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ : ಆರಗ ಜ್ಞಾನೇಂದ್ರ

Advertisement

ಬಿಬಿಸಿ ಉಪಕ್ರಮದ ಮೂಲಕ ಇದುವರೆಗೂ 150ಕ್ಕೂ ಹೆಚ್ಚು ನವೋದ್ಯಮಗಳು ಮತ್ತು ವೈಯಕ್ತಿಕ ಉದ್ಯಮಿಗಳಿಗೆ ಸರಕಾರದ ನಾನಾ ಯೋಜನೆಗಳ ಮೂಲಕ ರಚನಾತ್ಮಕ ಬೆಂಬಲ ನೀಡಲಾಗಿದೆ. ಸದ್ಯಕ್ಕೆ 50 ನವೋದ್ಯಮಗಳಿಗೆ ಇದರ ಮುಖಾಂತರ ಪರಿಪೋಷಣೆಯನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗೆ ನೆರವು ನೀಡುವಂತಹ 22 ಉತ್ಪನ್ನಗಳನ್ನು ಕೇವಲ ಎರಡು ವರ್ಷಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಗಿದೆ’ಎಂದರು.

ಬಿಬಿಸಿ ಪರಿಪೋಷಣೆ ಪಡೆದಿರುವ ಕಂಪನಿಗಳ ಮೌಲ್ಯವು 800 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಇದರ ಜೊತೆಗೆ, 1,000ಕ್ಕೂ ಹೆಚ್ಚು ಉದ್ಯೋಗಗಳು ಕೂಡ ಇಲ್ಲಿ ಸೃಷ್ಟಿಯಾಗಿವೆ. ಜೀವವಿಜ್ಞಾನಗಳ ಅಡಿ ಬರುವ ಆರೋಗ್ಯ ರಕ್ಷಣೆ, ಬಯೋಫಾರ್ಮಾ, ಕೃಷಿ, ಆಹಾರ ಮತ್ತು ಪೌಷ್ಟಿಕತೆ, ಔದ್ಯಮಿಕ ಮತ್ತು ಪರಿಸರ ಜೈವಿಕ ತಂತ್ರಜ್ಞಾನ ಮತ್ತು ಮೆಡ್-ಟೆಕ್ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳ ಅಗತ್ಯಗಳನ್ನು ಗಮನಿಸಿ, ಅವುಗಳನ್ನು ಸುಗಮವಾಗಿ ಪೂರೈಸಲು ಈ ಕೇಂದ್ರದ ಮೂಲಕ ಮಹತ್ತ್ವದ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್, ಬೆಂಗಳೂರು ಬಯೋ-ಇನ್ನೋವೇಶನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನವೋದ್ಯಮಗಳಾದ ಓಮಿಕ್ಸ್ ಲ್ಯಾಬ್ಸ್, ನಿಯೋಡಿಎಕ್ಸ್, ಡಿಪಾನ್ಇಡಿ ಬಯೋಇಂಟೆಲಿಜೆನ್ಸ್, ಆಲ್ಫಾಲಿಯಸ್ ಮತ್ತು ಟ್ಯಾಂಟ್ರೋಟೊಲನ್ ಅಭಿವೃದ್ಧಿ ಪಡಿಸಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳಲ್ಲಿ ಡಿಎನ್ಎ/ಆರೆ.ಎನ್.ಎ ಮಾದರಿ ಸಂಗ್ರಹಿಸುವ ಸ್ವಯಂಚಾಲಿತ ಸಾಧನ, ಲ್ಯಾಂಪ್ ಮಾಸ್ಟರ್ ಮಿಕ್ಸ್, ನಿಯೋಚೆಕ್ ರ್ಯಾಪಿರ್ ಆ್ಯಂಟಿಜೆನ್ ಸ್ವಯಂಪರೀಕ್ಷಾ ಕಿಟ್, ಪಿಸಿಆರ್ ಪತ್ತೆ ಕಿಟ್, ಸಿಟಿಸಿ ಸೆಪರೇಷನ್ ಟ್ಯೂಬ್ ಮತ್ತು ಇಂಟೆಲಿಜೆಂಟ್ ವಿಷನ್ ಅನಲೈಸರ್ (ಐವಿಎ) ಇವೆ. ಇವುಗಳ ಪೈಕಿ ಕೆಲವು ಸಾಧನಗಳಿವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾನ್ಯತೆ ಕೂಡ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next