Advertisement

ಜಿಎಸ್‌ಟಿ ಗೊಂದಲ ನಿವಾರಣೆಗೆ ಪ್ರಾಧಿಕಾರ ರಚನೆ

06:20 AM Oct 12, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಬಗೆಗಿನ ಗೊಂದಲ ನಿವಾರಣೆ, ಸರಕು- ಸೇವೆಗಳ ತೆರಿಗೆ ವರ್ಗೀಕರಣ ಸೇರಿದಂತೆ ಒಟ್ಟಾರೆ ಜಿಎಸ್‌ಟಿಯಡಿ ವ್ಯವಹರಿಸಲು ಅನುಕೂಲವಾಗುವಂತೆ ಸ್ಪಷ್ಟತೆ ಮೂಡಿಸಲು “ಮುಂಗಡ ಸ್ಪಷ್ಟತಾ ಪ್ರಾಧಿಕಾರ’ (ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌) ರಚನೆಯಾಗಿದ್ದು, ಸದ್ಯದಲ್ಲೇ ಕಾರ್ಯಾರಂಭವಾಗಲಿದೆ.

Advertisement

ನೂತನ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯಾಗಿ 100 ದಿನ ಕಳೆದರೂ ಗೊಂದಲಗಳ ಪ್ರಮಾಣ ತಗ್ಗಿಲ್ಲ. ಇದರಿಂದ ಉತ್ಪಾದಕರು, ವಿತರಕರು, ವ್ಯಾಪಾರಿಗಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ರಚನೆಯಾಗಿದೆ. ಆದರೆ ಸ್ಪಷ್ಟತೆ ಪಡೆಯಲು 5000 ರೂ. ಶುಲ್ಕ ನಿಗದಿಪಡಿಸಿರುವುದು ದುಬಾರಿಯಾಗಿದ್ದು, ಇದನ್ನು ಕಡಿತಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ದೇಶಾದ್ಯಂತ ನಾಲ್ಕು ಹಂತದ ಏಕರೂಪದ ತೆರಿಗೆ ವಿಧಿಸುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜು. 1ರಿಂದ ಜಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ತೆರಿಗೆಳನ್ನು ಒಟ್ಟುಗೂಡಿಸಿ ಮುಖ್ಯವಾಗಿ ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ಎಂಬುದಾಗಿ (ಐಜಿಎಸ್‌ಟಿ, ಸೆಸ್‌ ಕೂಡ ಇದೆ) ಎರಡು ಶೀರ್ಷಿಕೆಯಡಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆಗೆ ಚಾಲನೆ ದೊರಕಿದೆ. ಆರಂಭದಲ್ಲಿ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುವಲ್ಲಿ ಕೆಲ ಸವಾಲುಗಳಿದ್ದವು. ಆದರೆ ಕ್ರಮೇಣ ಗೊಂದಲಗಳು ನಿವಾರಣೆಯಾದಂತಿಲ್ಲ.

ದಿನ ಕಳೆದಂತೆ ಗೊಂದಲಗಳು ಹೆಚ್ಚುತ್ತಿದ್ದು, ಸ್ಪಷ್ಟತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಿಎಸ್‌ಟಿ ಕೌನ್ಸಿಲ್‌ ಸಭೆಗಳಲ್ಲಿ ಕೆಲ ಮಾರ್ಪಾಡು, ತೆರಿಗೆ ಪ್ರಮಾಣ ಇಳಿಕೆ, ವಿನಾಯ್ತಿ ನೀಡಿಕೆಯೂ ಗೊಂದಲ ಹೆಚ್ಚಳಕ್ಕೆ ಕಾರಣವಾಗಿದೆ. ತೆರಿಗೆ ವ್ಯಾಪ್ತಿಗೆ ಸೇರಿದ ಹಾಗೂ ಸೇರದ ಸರಕು, ಸೇವೆಯ ಬಗ್ಗೆಯೇ ಸ್ಪಷ್ಟತೆಯಿಲ್ಲವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ರಾಜ್ಯ ಸರ್ಕಾರವು ಪ್ರಾಧಿಕಾರ ರಚನೆಗೆ ಆದೇಶಿಸಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.

ಅದರಂತೆ ಕೇಂದ್ರ ಹಾಗೂ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ತಲಾ ಒಬ್ಬ ಅಧಿಕಾರಿಯನ್ನು ಒಳಗೊಂಡ ಪ್ರಾಧಿಕಾರ ರಚನೆಯಾಗಿದೆ. ಕೇಂದ್ರ ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ವಲಯದ ಜಂಟಿ ಆಯುಕ್ತ ಹರೀಶ್‌ ಧಾರ್ನಿಯಾ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ (ವಿಚಕ್ಷಣ) ಡಾ.ಎಂ.ಪಿ.ರವಿಪ್ರಸಾದ್‌ ಅವರನ್ನು ಪ್ರಾಧಿಕಾರಕ್ಕೆ ನಿಯೋಜಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Advertisement

ಸಮಿತಿಯ ಪ್ರಯೋಜನ
ಯಾವ ಸರಕು, ಸೇವೆ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ, ಜಿಎಸ್‌ಟಿ ತೆರಿಗೆ ವಿವರ, ಆಯ್ದ ಸರಕು- ಸೇವೆಗೆ ಸಂಬಂಧಪಟ್ಟಂತೆ ಬಳಸಿರುವ ಪದಗಳ ಅಥೆìçಸುವಿಕೆ, ಹುಟ್ಟುವಳಿ ತೆರಿಗೆ ವ್ಯಾಪ್ತಿಗೆ ಬರುವ ಸರಕು, ಸೇವೆ (ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌), ಪೂರೈಕೆ ಸಮಯ, ಪೂರೈಕೆ ಸ್ಥಳ, ಎಚ್‌ಎಸ್‌ಎನ್‌ ಕೋಡ್‌, ತೆರಿಗೆ ವ್ಯಾಪ್ತಿಗೆ ಬರುವ ವಹಿವಾಟಿನ ಮೊತ್ತ, ನೋಂದಣಿ ಅಗತ್ಯವೇ, ಇಲ್ಲವೇ ಎಂಬುದು ಸೇರಿದಂತೆ ಎಲ್ಲ ರೀತಿಯ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಮೇಲ್ಮನವಿಗೂ ಅವಕಾಶ
ಸರಕು- ಸೇವೆ ಸಾಗಣೆ ವೇಳೆ ಜಾಗೃತ ದಳದ ತಪಾಸಣೆಗೆ ಒಳಗಾದರೆ ಗೊಂದಲವಿಲ್ಲದೆ ವ್ಯವಹರಿಸಲು ಅನುಕೂಲವಾಗಲಿದೆ. ಜತೆಗೆ ಯಾವುದೇ ಗೊಂದಲದ ಬಗ್ಗೆ ಅಧಿಕಾರಿಗಳಿಂದ ಪಡೆಯುವ ಮಾಹಿತಿ ಕೇವಲ ಅಭಿಪ್ರಾಯವಾಗಿರಲಿದೆ. ಆದರೆ ಸಮಿತಿಯಿಂದ ಪಡೆಯುವ ಆದೇಶವೂ ಕಾನೂನಾತ್ಮಕವಾಗಿರಲಿದ್ದು, ದೃಢೀಕೃತವಾಗಿರುವುದರಿಂದ ಹೆಚ್ಚು ಮಹತ್ವವಿರಲಿದೆ. ಅರ್ಜಿಗೆ ಸಂಬಂಧಪಟ್ಟಂತೆ ಸಮಿತಿ ನೀಡುವ ಸ್ಪಷ್ಟತೆ ಪ್ರಶ್ನಾತೀತವೇನಲ್ಲ. ಈ ಬಗ್ಗೆ ಅರ್ಜಿದಾರರಿಗೆ ಅನುಮಾನಗಳಿದ್ದರೆ ಸರಕು- ಸೇವಾ ತೆರಿಗೆ ಇಲಾಖೆಗೆ ಮೇಲ್ಮನವಿ ಸಲ್ಲಿಸಬಹುದು. ಬಳಿಕ ಅಲ್ಲಿಂದಲೂ ಸೂಕ್ತ ಸ್ಪಷ್ಟನೆ ಪಡೆಯಲು ಅವಕಾಶವಿರಲಿದೆ.

ಸ್ಪಷ್ಟತೆ ಪಡೆಯಲು 5000 ರೂ. ಶುಲ್ಕ
ಆನ್‌ಲೈನ್‌ ಮೂಲಕವೇ ಸಮಿತಿಗೆ “ಎಆರ್‌ಎ-1′ ಅರ್ಜಿ ಸಲ್ಲಿಸಬೇಕು. ಬಳಿಕ ಸಮಿತಿಯು ನಿರ್ದಿಷ್ಟ ದಿನದಂದು ಅರ್ಜಿದಾರರಿಗೆ ಸ್ಪಷ್ಟನೆ ನೀಡಲು ಆಹ್ವಾನಿಸಲಿದೆ. ನಂತರ ನಿರ್ದಿಷ್ಟ ದಿನದಂದು ಸ್ಪಷ್ಟತೆ ನೀಡಿ ಆದೇಶ ನೀಡಲಿದೆ. ಆಗ ಅದು ಕಾನೂನಾತ್ಮಕ ಸ್ಪಷ್ಟನೆಯಾಗಲಿರಲಿದೆ. ಸ್ಪಷ್ಟತೆ ಕೋರಿ ಅರ್ಜಿ ಸಲ್ಲಿಸುವವರು 5000 ರೂ. ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಶುಲ್ಕ ಇಳಿಕೆಗೆ ಆಗ್ರಹ
ಜಿಎಸ್‌ಟಿ ಬಗೆಗಿನ ಗೊಂದಲ ನಿವಾರಣೆಗೆ ಸಮಿತಿ ರಚನೆ ಸ್ವಾಗತಾರ್ಹವಾಗಿದ್ದರೂ ಸ್ಪಷ್ಟತೆ ಪಡೆಯಲು 5000 ರೂ. ಶುಲ್ಕ ವಿಧಿಸಿರುವುದು ದುಬಾರಿ ಎಂಬ ಅಭಿಪ್ರಾಯ ವ್ಯಾಪಾರಿ, ವ್ಯವಹಾರಸ್ಥರಿಂದ ಕೇಳಿಬಂದಿದೆ. ಹೊಸ ಕಾಯ್ದೆ ಜಾರಿಗೊಳಿಸಿ ಅದರಡಿ ವ್ಯವಹಾರ ನಡೆಸುವಲ್ಲಿನ ಗೊಂದಲ ನಿವಾರಣೆಗೆ ದುಬಾರಿ ಶುಲ್ಕ ವಿಧಿಸಿರುವುದು ಸರಿಯಲ್ಲ. ಶುಲ್ಕ ಇಳಿಕೆ ಮಾಡಿದರೆ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಸಮಿತಿ ಆರಂಭ
ಅಡ್ವಾನ್‌ಸ್ಡ್ ರೂಲಿಂಗ್‌ ಆ್ಯಂಡ್‌ ಕ್ಲಾರಿಫಿಕೇಷನ್‌ ಕಮಿಟಿ ರಚನೆ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಕೆ.ಜಿ.ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಕಚೇರಿ ಕಟ್ಟಡದಲ್ಲೇ ಸಮಿತಿ ಕಚೇರಿ ಆರಂಭವಾಗುವ ಸಾಧ್ಯತೆ ಇದೆ. ಕಚೇರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಂಡು ಕೆಲ ದಿನಗಳಲ್ಲೇ ಕಾರ್ಯಾರಂಭವಾಗಲಿದೆ. 5000 ರೂ. ಶುಲ್ಕ ದೇಶಾದ್ಯಂತ ಸಮಾನವಾಗಿದ್ದು, ಹೊರೆ ಎನಿಸದು ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

“ಈ ಸಮಿತಿಯ ಅಗತ್ಯವಿತ್ತು. ಜಿಎಸ್‌ಟಿಯಡಿ ವ್ಯವಹಾರಕ್ಕೆ ಮುಂದಿನ ದಿನಗಳಲ್ಲಿ ತಲೆದೋರುವ ಸಮಸ್ಯೆಗಳನ್ನು ಮುಂಚಿತವಾಗಿ ಬಗೆಹರಿಸಿಕೊಳ್ಳಲು ಸಮಿತಿ ಉಪಯುಕ್ತವಾಗಿದ್ದು, ಇದರಿಂದ ಯಶಸ್ವಿಯಾಗಿ ವ್ಯವಹಾರ ನಡೆಸಬಹುದಾಗಿದೆ. ಸಮಿತಿಯು ನಿರಂತರವಾಗಿ ಸಭೆ ಸೇರಬೇಕು. ಕೂಲಂಕಷವಾಗಿ ಪರಿಶೀಲನೆ ನಡೆಸಿ ಕಾಲಮಿತಿಯೊಳಗೆ ನಿಖರವಾದ ಸ್ಪಷ್ಟತೆ ನೀಡಬೇಕು. ಈ ಹಿಂದೆ ಮಾರಾಟ ತೆರಿಗೆ ಹಾಗೂ ವ್ಯಾಟ್‌ ವ್ಯವಸ್ಥೆಯಿದ್ದಾಗಲೂ ಸ್ಪಷ್ಟತಾ ಪ್ರಾಧಿಕಾರವಿತ್ತು. ಆಗ ಕ್ರಮವಾಗಿ 500 ರೂ., 1000 ರೂ. ಶುಲ್ಕ ವಿಧಿಸಲಾಗಿತ್ತು. ಆದರೆ ಈ ಸಮಿತಿಯಿಂದ ಸ್ಪಷ್ಟನೆ ಪಡೆಯಲು 5000 ರೂ. ವಿಧಿಸಿರುವುದು ದುಬಾರಿ ಎನಿಸಿದ್ದು, 1000 ರೂ. ನಿಗದಿಪಡಿಸಿದರೆ ಹೆಚ್ಚು ಮಂದಿ ಬಳಸಿಕೊಳ್ಳಬಹುದು.
– ಬಿ.ಟಿ.ಮನೋಹರ್‌, ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next