ಹುಣಸಗಿ: ಕೃಷ್ಣಾನದಿ ಪ್ರವಾಹ ಪ್ರದೇಶ ನೀಲಕಂಠರಾಯನ ಗಡ್ಡಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಕಕ್ಕೇರಾ ಸಮೀಪದ ಕೃಷ್ಣಾನದಿ ಪ್ರವಾಹ ಪ್ರದೇಶ ನೀಲಕಂಠರಾಯನ ಗಡ್ಡಿಗೆ ಭೇಟಿ ನೀಡಿ ಪ್ರವಾಹ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿನ ಸರಕಾರ ರೈತರಿಗೆ ಪರಿಹಾರ ನೀಡುವಲ್ಲಿ ತುಪ್ಪ ಸವರುವ ಕೆಲಸ ಮಾಡುತ್ತಿದೆ.
ಪ್ರವಾಹದಿಂದಾಗಿ ತತ್ತರಿಸಿದ ರೈತಾಪಿ ಜನರ ಬಗ್ಗೆ ಕಾಳಿಜಿಯೇ ಇಲ್ಲ. ಈ ಹಿಂದೆಯೇ ನೆರೆಹಾವಳಿಗೆ ನಷ್ಟ ಹೊಂದಿದ ರೈತರಿಗೆ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಆಗ್ರಹಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶ ನೆರೆಹಾವಳಿಯಿಂದ ಹಾನಿಯಾಗಿದೆ. ನೂರಾರು ಕೋಟಿ ನಷ್ಟವಾಗಿದೆ. ಹೆಕ್ಟರಿಗೆ 4 ರಿಂದ 6 ಸಾವಿರ ರೂ. ಮಾತ್ರ ಸರ್ಕಾರ ನೀಡುತ್ತದೆ. ಇದರಿಂದ ರೈತಾಪಿ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಪ್ರವಾಹ ಪ್ರದೇಶದಲ್ಲಿನ ಜನ, ಪರಿಸ್ಥಿತಿ ಹದಗೆಟ್ಟ ಬಗ್ಗೆ ಸರಕಾರ ಯೋಚಿಸದೆ. ಬರೀ ಸಂಪುಟ ರಚನೆ. ಅಧಿಕಾರದ ಆಸೆಗಾಗಿ ಬಡಿದಾಡುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ :ಕೋವಿಡ್ ಮೂರನೇ ಅಲೆ ಭೀತಿ ಶುರು; ತಗ್ಗಿದ ಸೋಂಕಿನ ಸಂಖ್ಯೆ-ನಿಲ್ಲದ ಸಾವಿನ ಪ್ರಮಾಣ
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಮರಿಗೌಡ ಹುಲಕಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾಕುಮಾರ ನಾಯಕ, ರಾಜಾ ವೇಣುಗೋಪಾಲ್ ನಾಯಕ, ಗುಂಡಪ್ಪ ಸೊಲ್ಲಾಪುರ ಸೇರಿದಂತೆ ಇತರರಿದ್ದರು.