Advertisement

ಇಪಿಎಫ್‌, ಇಎಸ್‌ಐ: ಉದ್ಯೋಗದಾತರು, ಉದ್ಯೋಗಿಗಳಿಗೆ ಪರಿಹಾರ

01:54 AM May 22, 2020 | Sriram |

ಉಡುಪಿ: ಕೋವಿಡ್‌-19 ಹರಡುವುದನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಇತರ ಅಡೆತಡೆಗಳನ್ನು ತಡೆಗಟ್ಟಲು ಲಾಕ್‌ಡೌನ್‌ನಿಂದ ತೊಂದರೆ ಗೀಡಾದ ಇಪಿಎಫ್‌ ಮತ್ತು ಎಂಪಿ ಕಾಯ್ದೆ 1952ರ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪರಿಹಾರ ನೀಡಲು ಕಾಲ ಕಾಲಕ್ಕೆ ವಿವಿಧ ಕ್ರಮಗಳನ್ನು ಘೋಷಿಸಲಾಗಿದೆ.

Advertisement

ಕೇಂದ್ರ ಸರಕಾರ ಮೇ 13ರಂದು ಇಪಿಎಫ್‌, ಎಂಪಿ ಕಾಯ್ದೆ 1952ರ ವ್ಯಾಪ್ತಿಯ ಎಲ್ಲ ವರ್ಗದ ಸಂಸ್ಥೆಗಳಿಗೆ ಮೇ, ಜೂನ್‌, ಜುಲೈ ತಿಂಗಳ ಶಾಸನ ಬದ್ಧ ದರಗಳನ್ನು ಶೇ. 12ರಿಂದ 10ಕ್ಕೆ ಇಳಿಸಿದೆ. ಅಧಿಸೂಚನೆ ಇಪಿಎಫ್‌ಒ ವೆಬ್‌ಸೈಟ್‌ನ ಮುಖಪುಟದಲ್ಲಿ ಖಅಆ  ಕೋವಿಡ್‌-19 ಅಡಿಯಲ್ಲಿ ಲಭ್ಯವಿದೆ. ಮೇಲಿನ ದರ ಕಡಿತವು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮ ಗಳಿಗೆ ಅಥವಾ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಅಥವಾ ನಿಯಂತ್ರಿಸಲ್ಪಡುವ ಯಾವುದೇ ಸಂಸ್ಥೆ ಗಳಿಗೆ ಅನ್ವಯಿಸುವುದಿಲ್ಲ.

ಕಡಿಮೆಗೊಳಿಸಿದ ದರವು ಪಿಎಂಜಿಕೆವೈ ಫಲಾನುಭವಿಗಳಿಗೆ ಸಹ ಅನ್ವಯಿಸುವುದಿಲ್ಲ. ಸರಕಾರ ಇಪಿಎಫ್‌ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿರುವುದರಿಂದ 4.3 ಕೋಟಿ ಉದ್ಯೋಗಿಗಳು / ಸದಸ್ಯರು ಮತ್ತು 6.5 ಲಕ್ಷ ಉದ್ಯೋಗದಾತರಿಗೆ ತತ್‌ಕ್ಷಣದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯವಾಗುತ್ತದೆ. ಶಾಸನ ಬದ್ಧ ದರವನ್ನು ಶೇ. 12ರಿಂದ 10ಕ್ಕೆ ಇಳಿಸಿದ ಪರಿಣಾಮ, ಉದ್ಯೋಗಿಯು ಹೆಚ್ಚಿನ ಟೇಕ್‌ ಹೋಂ ವೇತನವನ್ನು ಪಡೆಯುತ್ತಾನೆ. ಉದ್ಯೋಗದಾತನ ಹೊಣೆಗಾರಿಕೆ ಕೂಡ ಶೇ. 2ರಷ್ಟು ಕಡಿಮೆಯಾಗುತ್ತದೆ. ನೌಕರರ ಮಾಸಿಕ ಇಪಿಎಫ್‌ ವೇತನ 10,000 ರೂ. ಇದ್ದರೆ 1,200 ರೂ.ಗಳ ಬದಲಿಗೆ 1,000 ರೂ. ಮಾತ್ರ ವೇತನದಿಂದ ಕಡಿತವಾಗುತ್ತದೆ. ಉದ್ಯೋಗದಾತರು ಅಷ್ಟೇ ಪಾವತಿಸುತ್ತಾರೆ.

ಇಪಿಎಫ್‌ ಯೋಜನೆಯಡಿ 1952ರಲ್ಲಿ ಯಾವುದೇ ಸದಸ್ಯರಿಗೆ ಶಾಸನಬದ್ಧ ದರಕ್ಕಿಂತ (ಶೇ. 10) ಹೆಚ್ಚಿನ ದರದಲ್ಲಿ ಕೊಡುಗೆ ನೀಡುವ ಅವಕಾಶವಿದೆ ಮತ್ತು ಉದ್ಯೋಗದಾತನು ಅಂತಹ ಉದ್ಯೋಗಿಗೆ ಸಂಬಂಧಿಸಿದಂತೆ ತನ್ನ ಕೊಡುಗೆಯನ್ನು ಶೇ. 10 (ಶಾಸನಬದ್ಧ ದರ) ನಿರ್ಬಂಧಿಸಬಹುದು.

ಮಂಗಳೂರು: ಇಎಸ್‌ಐ ಯೋಜನೆ ವ್ಯಾಪ್ತಿಗೆ ಒಳಪಟ್ಟ ನೌಕರರು ಉದ್ಯೋಗಿಗಳಾಗಿದ್ದು, ಅನಂತರ ನಿರುದ್ಯೋಗಿಗಳಾದರೆ ಅವರಿಗೆ ಇಎಸ್‌ಐಸಿಯ ಆರ್‌ಜಿಎಸ್‌ಕೆವೈ ಮತ್ತು ಎಬಿವಿಕೆವೈ ಯೋಜನೆಯಡಿ ಆರ್ಥಿಕ ಸಹಾಯ ದೊರೆಯುತ್ತದೆ ಎಂದು ಇಎಸ್‌ಐಸಿ ಸಂಸ್ಥೆ ತಿಳಿಸಿದೆ.

Advertisement

ಕೈಗಾರಿಕಾ ವಿವಾದ ಅಧಿನಿಯಮ 1947ರ ಕಾಯಿದೆಯನ್ವಯ ಉದ್ಯೋಗಿ ಗಳಾಗಿದ್ದು ನಿರುದ್ಯೋಗಿಗಳಾದರೆ ಮೊದಲ 12 ತಿಂಗಳು ಅವರ ವೇತನದ ಶೇ. 50, ಒಂದು ವೇಳೆ 12 ತಿಂಗಳ ಅನಂತರವೂ ಮತ್ತೆ ಉದ್ಯೋಗ ಪಡೆಯದಿದ್ದರೆ ಅನಂತರದ 12 ತಿಂಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ದೊರೆಯುತ್ತದೆ. ಒಂದು ವೇಳೆ ಸಂಸ್ಥೆ/ಕಾರ್ಖಾನೆಯ ಮುಚ್ಚುವಿಕೆ ಅಥವಾ ಕೆಲಸದಿಂದ ತೆಗೆದು ಹಾಕಿರುವುದನ್ನು ಹೊರತುಪಡಿಸಿ ನಿರುದ್ಯೋಗಿಗಳಾದರೆ 90 ದಿನಗಳ ಅವಧಿಗೆ ವೇತನದ ಶೇ. 25ರಷ್ಟು ನಿರುದ್ಯೋಗ ಭತ್ತೆ ಪಡೆಯಲು ಅರ್ಹರಾಗಿರುತ್ತಾರೆ. ನೌಕರರು ಅಗತ್ಯ ದಾಖಲೆಗಳೊಂದಿಗೆ ಇಎಸ್‌ಐಸಿಯ ಕಚೇರಿಗಳನ್ನು ಸಂಪರ್ಕಿಸಬಹುದು.

ಉದ್ಯೋಗದಾತರಿಗೂ ವಿನಾಯಿತಿ
ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯೋಗದಾತರು ಇಎಸ್‌ಐಸಿಗೆ ಸಲ್ಲಿಸುವ ವಂತಿಗೆಯ ಅವಧಿಯನ್ನು ವಿಸ್ತರಿಸಿ ವಿನಾಯಿತಿ ನೀಡಲಾಗಿದೆ. 2019ರ ಅಕ್ಟೋಬರ್‌ನಿಂದ 2020ರ ಮಾರ್ಚ್‌ವರೆಗಿನ ವಂತಿಗೆ ಸಲ್ಲಿಸಲು ಮೇ 11 ಕೊನೆಯ ದಿನಾಂಕವಾಗಿತ್ತು. ಇದೀಗ ಅದನ್ನು ಜೂ. 11ರ ವರೆಗೆ ವಿಸ್ತರಿಸಲಾಗಿದೆ. ಅಂದರೆ ವಂತಿಗೆ ಸಲ್ಲಿಸಲು ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಯನ್ನು ನೀಡಲಾಗಿದೆ ಎಂದು ಇಎಸ್‌ಐಸಿ ಮಂಗಳೂರು ಉಪ ಪ್ರಾದೇಶಿಕ ಕಚೇರಿಯ ಪ್ರಭಾರ ನಿರ್ದೇಶಕ ಎಸ್‌. ಶಿವರಾಮಕೃಷ್ಣನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಇಪಿಎಫ್‌ ಉಡುಪಿ ಕಾರ್ಯಾಲಯ:
0824   2531172 / 2531174 ಇ-ಮೇಲ್‌ sro.udupi@epfndia.gov.in

Advertisement

Udayavani is now on Telegram. Click here to join our channel and stay updated with the latest news.

Next