Advertisement

ಇಂಗ್ಲಿಷ್‌ ಮಾಧ್ಯಮ ಅನವಶ್ಯಕ ವಿವಾದ

06:00 AM Dec 21, 2018 | Team Udayavani |

ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಈಗ ಶಿಕ್ಷಣ ತಜ್ಞರು ಮತ್ತು ಸಾಹಿತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರು ಬುಧವಾರ ರಾಜಧಾನಿಯಲ್ಲಿ ಮೊದಲ ಸುತ್ತಿನ ಸಭೆ ನಡೆಸಿ ಪ್ರಾಥಮಿಕ ಹಂತದಲ್ಲಿಯೇ ಸರಕಾರದ ನಿರ್ಧಾರದ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಈ ಬಾರಿ ಸಾಹಿತಿಗಳು ಒಂದಿಷ್ಟು ಗಟ್ಟಿಯಾಗಿಯೇ ಧ್ವನಿ ಎತ್ತಿದ್ದು ಸರಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯದೇ ಹೋದಲ್ಲಿ ಗೋಕಾಕ್‌ ಮಾದರಿಯ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡುವ ಮೂಲಕ ತಮ್ಮ ನಿಲುವೇನು ಎಂಬುದನ್ನು ಘಂಟಾಘೋಷವಾಗಿ ಸಾರಿದ್ದಾರೆ.  

Advertisement

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಕೆಯ ಕುರಿತಾಗಿನ ಪ್ರಸ್ತಾವ ಕೇಳಿಬರುತ್ತಿರುವುದು ಹೊಸದೇನಲ್ಲ. ಸರಕಾರಿ ಶಾಲೆಗಳಲ್ಲಿನ ಫ‌ಲಿತಾಂಶ, ಇಲ್ಲಿ ಕಲಿತ ವಿದ್ಯಾರ್ಥಿಗಳ ಕೌಶಲದ ಬಗೆಗೆ ಪದೇಪದೇ ಪ್ರಶ್ನೆಗಳು ಮೂಡಿಬರುತ್ತಲೇ ಇವೆ. ಈ ಎಲ್ಲ ಸಂದರ್ಭಗಳಲ್ಲೂ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಆಧುನಿಕ ಶಿಕ್ಷಣ ಲಭಿಸುತ್ತಿಲ್ಲವಾಗಿದ್ದು ಇದಕ್ಕೆ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವುದೊಂದೇ ಪರಿಹಾರ ಎಂದು ಹೇಳಿಕೊಳ್ಳುತ್ತಲೇ ಬರಲಾಗಿದೆ. ಈ ಬಾರಿಯೂ ಇಂಥದ್ದೇ ಮಾತುಗಳು ಕೇಳಿ ಬಂದಾಗ ಸರಕಾರ ಏಕಾಏಕಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಾಗಿ ಘೋಷಿಸಿತು. ಈ ನಿರ್ಧಾರದ ಬಗೆಗೆ ಸರಕಾರದಲ್ಲೇ ಒಂದಿಷ್ಟು ಅಪಸ್ವರ ಕೇಳಿಬಂದುದರಿಂದ ಇದರ ಜಾರಿಯನ್ನು ಮುಂದೂಡುತ್ತಲೇ ಬಂದಿದೆ. ಆದರೆ ಇದೀಗ 1,000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ನಿರ್ಧಾರ ಕೈಗೊಂಡಿರುವುದು ಕನ್ನಡಾಭಿಮಾನಿಗಳನ್ನು ಆಕ್ರೋಶಕ್ಕೀಡು ಮಾಡಿದೆ. 

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ಭಾಷೆಯಾಗಿ ಕಲಿಸಲು ತಮ್ಮ ವಿರೋಧ ಇಲ್ಲ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಬೇಕು ಎಂಬುದು ಸಾಹಿತಿಗಳು, ಕನ್ನಡ ಪರ ಹೋರಾಟಗಾರರ ಬೇಡಿಕೆ.  ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭಿಸಿದಾಕ್ಷಣ ಮಕ್ಕಳು ಇಂದಿನ ಆಧುನಿಕ ಶಿಕ್ಷಣವನ್ನು ಪಡೆದು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳ ಪೈಪೋಟಿಯನ್ನೆದುರಿಸಲು ಸಮರ್ಥರಾಗುತ್ತಾರೆ ಎಂಬ ವಾದ ಅರ್ಥಹೀನ ಎಂಬುದು ಸಾಹಿತಿಗಳ ತರ್ಕ. ಮಕ್ಕಳಿಗೆ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಲಭಿಸಿದಾಗಲಷ್ಟೇ ಮಕ್ಕಳು ಮಾನಸಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯ ಎಂಬುದನ್ನು ಈ ಹಿಂದಿನ ಹಲವಾರು ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಮಾತೃಭಾಷೆಯ ಶಿಕ್ಷಣದ ಜತೆಯಲ್ಲಿ ಇತರ ಭಾಷೆಗಳನ್ನೂ ಹಂತಹಂತವಾಗಿ ಕಲಿಸಿದಲ್ಲಿ ಮಕ್ಕಳು ಭಾಷಾ ಪ್ರೌಢಿಮೆಯ ಜತೆಗೆ ಬೌದ್ಧಿಕವಾಗಿಯೂ ಸಶಕ್ತರಾಗಬಲ್ಲರು. 

ಈಗಾಗಲೇ ಅನೇಕ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ತಲೆ ಎತ್ತಿದ್ದು ಮಕ್ಕಳನ್ನು ಸಂಪೂರ್ಣ ಯಾಂತ್ರಿಕವನ್ನಾಗಿಸುತ್ತಿವೆ. ಈ ಶಾಲೆಗಳ ಕಟ್ಟುನಿಟ್ಟಿನ ಶಿಸ್ತಿನಿಂದಾಗಿ ಮಕ್ಕಳು ತಮ್ಮ ಸಹಜ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗೆಂದು ಖಾಸಗಿ ಶಾಲೆಗಳು ಪರಿಪೂರ್ಣ ಎನ್ನುವ ಹಾಗಿಲ್ಲ. ಎಷ್ಟೋ ಖಾಸಗಿ ಇಂಗ್ಲೀಷ್‌ ಮಾಧ್ಯಮ ಶಾಲೆಗಳು ದೊಡ್ಡಿಗಳಿಗಿಂತ ಕಡೆಯಾಗಿವೆ. ಆದರೆ ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ದೊರಕುತ್ತದೆ ಎಂಬ ನಂಬಿಕೆ ಪೋಷಕರನ್ನು ಆ ಶಾಲೆಗಳತ್ತ ಹೋಗುವಂತೆ ಮಾಡಿದೆ.   

ಇದರ ಬದಲಾಗಿ ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ, ಶಿಕ್ಷಕರು ಮತ್ತು ಸಿಬಂದಿಗಳನ್ನು ಒದಗಿಸಿ ಈ ಶಾಲೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷ ಕಳೆದಂತೆ ಕಡಿಮೆಯಾಗಲು ಈ ಕೊರತೆಗಳೇ ಕಾರಣವೇ ಹೊರತು ಈ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವಿಲ್ಲದಿರುವುದು ಕಾರಣವಲ್ಲ. 

Advertisement

ಯಾವುದೇ ಅಭಿಯಾನ, ಸರಕಾರಿ ಯೋಜನೆಗಳ ಅನುಷ್ಠಾನ, ಗಣತಿ ಕಾರ್ಯಗಳು ಬಂದಾಗಲೆಲ್ಲ ಇಲಾಖೆಗಳಿಗೆ ಮೊದಲು ನೆನಪಾಗುವುದು ಸರಕಾರಿ ಶಾಲೆಗಳ ಶಿಕ್ಷಕರು. ಆದರೆ ಫ‌ಲಿತಾಂಶದಲ್ಲಿ ಕುಸಿತ ಕಂಡು ಬಂದಾಗ ಶಿಕ್ಷಕರತ್ತ ಬೆಟ್ಟು ಮಾಡುವ ಇಲಾಖೆಗೆ ಶಾಲೆಗಳಲ್ಲಿನ ಕೊರತೆಗಳು ನೆನಪಾಗದಿರುವುದು ವಿಪರ್ಯಾಸವೇ ಸರಿ. ಸರಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡಿ ಇಂದಿನ ಪರಿಸ್ಥಿತಿಗನುಗುಣವಾಗಿ ಮಕ್ಕಳಿಗೆ ಬೋಧನೆ ಮಾಡಲು ಅವರನ್ನು ಸಜ್ಜುಗೊಳಿಸಬೇಕಿದೆ. ಈ ಮೂಲಕ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ಲಭಿಸುವಂತೆ ಮಾಡುವುದು ಸರಕಾರದ ಮೇಲಿನ ಹೊಣೆಗಾರಿಕೆಯಾಗಿದೆ. ಇವೆಲ್ಲವನ್ನು ಬಿಟ್ಟು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ದುಡುಕಿನ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸರಕಾರ ಅನವಶ್ಯಕ ವಿವಾದವೊಂದನ್ನು ತನ್ನ ಮೈಮೇಲೆ ಎಳೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next