ಮೈಸೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಹೆಚ್ಚಿನ ಸೈಬರ್ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಇಂದು ನಾವು ಆಧುನಿಕ ತಂತ್ರಜ್ಞಾನ, ಅಂತರ್ಜಾಲ ಸೇವೆ, ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿದ್ದು, ಅಲ್ಲಿಯೂ ಅಪರಾಧಗಳು ಹುಟ್ಟಿಕೊಂಡಿವೆ.
ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿಯೂ ಸೈಬರ್ ಪೊಲೀಸ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಇನ್ನೂ ಹೆಚ್ಚಿನ ಸೈಬರ್ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುವುದು. ನಮ್ಮಲ್ಲಿನ ಆನ್ಸಿನ್ ಪೊಲೀಸಿಂಗ್ ಕಡಿಮೆ ಇದೆ. ಆನ್ಸಿನ್ ಕ್ರೈಂನ್ನು ಯಾವ ರೀತಿ ಡಿಟೆಕ್ಟ್ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಕೊಡಿ ಸಲು ಚಿಂತಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗುವುದು.
ಜೊತೆಗೆ, ಪ್ರತಿ ಠಾಣೆ ಗಳಲ್ಲೂ ಪ್ರಾಥಮಿಕ ವಿಧಿವಿಜ್ಞಾನ ಪ್ರಯೋಗಾಲಯ ಮಾಡುವ ಚಿಂತನೆಯಿದೆ. ಸೈಬರ್ ಕ್ರೈಂ ಡಿಟೆಕ್ಷನ್ ಮಾಡುವ ಹಾಗೂ ಎಫ್ಎಸ್ಎಲ್ ಲ್ಯಾಬ್ ನಡೆಸುವುದರ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮ ಗಳನ್ನು ಹೊಸದಾಗಿ ಮುಂದಿನ ವರ್ಷದ ಅಕಾಡೆಮಿಗಳಲ್ಲಿ ಅಳವಡಿಸಲಾಗುವುದು ಎಂದರು.
ಮುಂದಿನ ಎರಡು ವರ್ಷಗಳಲ್ಲಿ 16 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ಭರ್ತಿ ಮಾಡಲಾಗುವುದು. ಮೊದಲ ಹಂತವಾಗಿ 6 ಸಾವಿರ ಕಾನ್ಸ್ಟೇಬಲ್ ಮತ್ತು ಪಿಎಸ್ಐಗಳನ್ನು ಭರ್ತಿ ಮಾಡುತ್ತಿದ್ದೇವೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ