Advertisement

ಒಂದಲ್ಲ, ಎರಡಲ್ಲ…ಹನ್ನೊಂದು! ಫೆಬ್ರವರಿ ಕೊನೆ ವಾರ ಸಿನಿ ಟ್ರಾಫಿಕ್‌ ಜೋರು

08:54 AM Feb 24, 2023 | Team Udayavani |

ಫೆಬ್ರವರಿಯ ಕೊನೆಯ ಶುಕ್ರವಾರವಾದ ಇಂದು ಬರೋಬ್ಬರಿ 11 ಚಿತ್ರಗಳು ತೆರೆಕಾಣುತ್ತಿವೆ. ಈ ಮೂಲಕ ಸಿನಿಟ್ರಾಫಿಕ್‌ ಹೆಚ್ಚಾಗಿದೆ. ಪ್ರತಿ ವಾರದಂತೆ ಈ ವಾರವೂ ಬೇರೆ ಬೇರೆ ಜಾನರ್‌ಗೆ ಸೇರಿದ ಸಿನಿಮಾಗಳು ತೆರೆಕಾಣುತ್ತಿವೆ. ಅಂದಹಾಗೆ, ಈ ವಾರ ತೆರೆಕಾಣುತ್ತಿರುವ ಸಿನಿಮಾಗಳನ್ನು ನೋಡುವುದಾದರೆ, ಸೌತ್‌ ಇಂಡಿಯನ್‌ ಹೀರೋ, ಜೂಲಿಯೆಟ್‌ 2, ಗೌಳಿ, ಅಸ್ಥಿರ, ಕ್ಯಾಂಪಸ್‌ ಕ್ರಾಂತಿ, ಹೊಟ್ಟೆಪಾಡು, ಸಂಭ್ರಮ, ವಿಧಿ 370, 1975, ಅಂತರಂಗ, ಪಾಲಾರ್‌ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಬಿಡುಗಡೆಯಾಗುವ ಚಿತ್ರಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…

Advertisement

ಗೌಳಿ ಮೇಲೆ ಕಿಟ್ಟಿ ಕಣ್ಣು

“ಈ ಸಿನಿಮಾದ ಸಬ್ಜೆಕ್ಟ್ ಎಲ್ಲರಿಗೂ ಕನೆಕ್ಟ್ ಆಗುವಂಥದ್ದು. ಸಿನಿಮಾದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಈ ಸಿನಿಮಾ ಮಾಡುವಾಗ ತೆರೆಮೇಲೆ ನಾನು ಇಷ್ಟು ಚೆನ್ನಾಗಿ ಕಾಣಿಸಿಕೊಳ್ಳುತ್ತೇನೆ ಅಂಥ ನಾನೇ ನಿರೀಕ್ಷೆ ಮಾಡಿರಲಿಲ್ಲ. ಚಿತ್ರದ ಪಾತ್ರವನ್ನು ಅನುಭವಿಸಿ ಮಾಡಿದ್ದೇನೆ. ಇದು ಎಲ್ಲರಿಗೂ ಕಾಡುವ ಪಾತ್ರ’ ಎನ್ನುವುದು ಕಿಟ್ಟಿ ಮಾತು. ಅಂದಹಾಗೆ, ಶ್ರೀನಗರ ಕಿಟ್ಟಿ ಹೇಳಿದ್ದು ತಮ್ಮ “ಗೌಳಿ’ ಸಿನಿಮಾ ಬಗ್ಗೆ. ಈ ಚಿತ್ರ ಇಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರುವ ಮೂಲಕ ಚಿತ್ರತಂಡ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದೆ.

ಇನ್ನು, ಶ್ರೀನಗರ ಕಿಟ್ಟಿ ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ ಬಿಡುಗಡೆಯಾಗಿದ್ದು 2017ರಲ್ಲಿ. ಈಗ “ಗೌಳಿ’ ಮೂಲಕ ಮತ್ತೆ ಎಂಟ್ರಿಕೊಡುತ್ತಿದ್ದಾರೆ. ಕಿಟ್ಟಿ ಕೂಡಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲರೂ ಕಿಟ್ಟಿ ಲುಕ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಮೇಲೆ ಈ ನಿರೀಕ್ಷೆಗಳು ಸುಳ್ಳಾಗಲ್ಲ ಎನ್ನುವ ನಂಬಿಕೆ ಚಿತ್ರತಂಡಕ್ಕಿದೆ. ಇನ್ನು ನಾಯಕಿ ಪಾವನಾ ಗೌಡ ಅವರಿಗೂ “ಗೌಳಿ’ ಸಿನಿಮಾದ ಮೇಲೆ ಸಾಕಷ್ಟು ನಂಬಿಕೆಯಿದೆ. “ಬಹಳ ವರ್ಷಗಳಿಂದ ಇಂಥದ್ದೊಂದು ಪಾತ್ರ ಸಿಗಲಿ ಎಂಬ ನಿರೀಕ್ಷೆಯಲ್ಲಿದ್ದೆ. ನಾನು ಬಯಸಿದಂಥ ಪಾತ್ರ “ಗೌಳಿ’ ಸಿನಿಮಾದಲ್ಲಿದೆ. ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ, ಸಿನಿಮಾ ಕೂಡ ಅಷ್ಟೇ ದೊಡ್ಡ ಹಿಟ್‌ ಆಗಲಿದೆ’ ಎಂಬುದು ಪಾವನಾ ಗೌಡ ಅವರ ವಿಶ್ವಾಸದ ಮಾತು. ನಿರ್ಮಾಪಕ ರಘು ಸಿಂಗಂ, ನಿರ್ದೇಶಕ ಸೂರ ಅವರಿಗೂ “ಗೌಳಿ’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

ಜೂಲಿಯೆಟ್‌ ರಿವೆಂಜ್‌ ಸ್ಟೋರಿ

Advertisement

ಈಗಾಗಲೇ ಭರವಸೆ ಮೂಡಿಸಿರುವ ಸಿನಿಮಾ “ಜೂಲಿಯೆಟ್‌-2′ ಇಂದು ತೆರೆಕಾಣುತ್ತಿದೆ.ಇದು ಸಂಪೂರ್ಣ ಹೊಸಬರ ಚಿತ್ರ. ಕರಾವಳಿ ಮೂಲದ ವಿರಾಟ್‌ ಈ ಚಿತ್ರದ ನಿರ್ದೇಶಕರು. ಲಿಖೀತ್‌.ಆರ್‌. ಕೋಟ್ಯಾನ್‌ ನಿರ್ಮಾಣದ ಈ ಚಿತ್ರದಲ್ಲಿ “ಪ್ರೇಮಂ ಪೂಜ್ಯಂ’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್‌-2′ ಚಿತ್ರದಲ್ಲಿ ಜೂಲಿಯೆಟ್‌ ಆಗಿ ಕಾಣಿಸಿಕೊಂಡಿದ್ದಾರೆ. “ಇದು ನಾಯಕಿ ಪ್ರಧಾನ ಚಿತ್ರ. ಚಿಕ್ಕ ವಯಸ್ಸಿನಲ್ಲಿ ತನಗಾದ ಅನ್ಯಾಯಕ್ಕೆ ದೊಡ್ಡವಳಾದ ನಂತರ ಆಕೆ ಹೇಗೆ ಸೇಡುತೀರಿಸಿಕೊಳ್ಳುತ್ತಾಳೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಇಡೀ ಸಿನಿಮಾ ಕಾಡಿನ ನಡುವಿನ ಒಂಟಿ ಮನೆಯಲ್ಲಿ ಹಾಗೂ ರಾತ್ರಿ ಹೊತ್ತಲ್ಲೇ ನಡೆಯುತ್ತದೆ. ಬೆಳ್ತಂಗಡಿ ಬಳಿಯ ಕಾಜೂರು ಎಂಬ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ತಂದೆ-ಮಗಳ ಬಾಂಧವ್ಯ ಕೂಡಾ ಇದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಅಂದಹಾಗೆ, ಇದು ಕ್ರೈಮ್‌ ಥ್ರಿಲ್ಲರ್‌ ಜಾನರ್‌ನ ಚಿತ್ರ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ತೆರೆಮೇಲೆ ಕಾಶ್ಮೀರ ಚಿತ್ರಣ ವಿಧಿ 370 ಬಿಡುಗಡೆ

“ವಿಧಿ 370′ ಸಿನಿಮಾ ಇಂದು ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಜಮ್ಮು ಮತ್ತು ಕಾಶ್ಮೀರದ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾವನ್ನು ಮಾಡಿದ್ದೇವೆ. “ಆರ್ಟಿಕಲ್‌ 370′ ರದ್ದಾದ ಬಳಿಕ ಈಗ ಜಮ್ಮು ಮತ್ತು ಕಾಶ್ಮೀರ ಹೇಗಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಇದರಲ್ಲೊಂದು ಸಂದೇಶವಿದೆ. ಬಹುತೇಕರ ಅರಿವಿಗೆ ಬಾರದಿರುವ ಹಲವು ವಿಷಯಗಳನ್ನು ಸಿನಿಮಾದಲ್ಲಿ ಚರ್ಚಿಸಿದ್ದೇವೆ. ಇದೊಂದು ನೈಜ ಘಟನೆಗಳನ್ನು ಕುರಿತಾಗಿ ಮಾಡಿದ ಸಿನಿಮಾ. ಈ ಸಿನಿಮಾವನ್ನು ಮುಖ್ಯವಾಗಿ ಭಾರತೀಯ ಸೈನಿಕರು ಮತ್ತು ಕಾಶ್ಮೀರಿ ಪಂಡಿತರಿಗೆ ಸಮರ್ಪಿಸುತ್ತಿದ್ದೇವೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಮಾಡಿದ್ದೇವೆ. ಕನ್ನಡದ ಮಟ್ಟಿಗೆ ಇದೊಂದು ಹೊಸರೀತಿಯ ಸಿನಿಮಾ’ ಎಂದು ವಿವರಣೆ ಕೊಡುತ್ತದೆ. “ಲೈರಾ ಎಂಟರ್‌ಟೈನರ್‌’ ಬ್ಯಾನರ್‌ನಲ್ಲಿ ಭರತ್‌ ಗೌಡ ಮತ್ತು ಸಿ. ರಮೇಶ್‌ ನಿರ್ಮಿಸಿರುವ “ವಿಧಿ 370′ ಚಿತ್ರಕ್ಕೆ ಕೆ. ಶಂಕರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶಶಿಕುಮಾರ್‌, ಶೃತಿ, ಶಿವರಾಂ ಮೊದಲಾದ ಕಲಾವಿದರು “ವಿಧಿ 370′ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next