Advertisement

ಆನೆ ಕಾಟ: ಇನ್ನಾದರೂ ನೀಗಲಿ ರೈತನ ಸಂಕಷ್ಟ

02:28 PM Jan 01, 2018 | |

ಸುಳ್ಯ: ತಾಲೂಕಿನ ವಿವಿಧ ಭಾಗಗಳಲ್ಲಿ ಕೃಷಿ ತೋಟಗಳಿಗೆ ಆನೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡುತ್ತಿರುವ ಪ್ರಕರಣಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಸೌರಶಕ್ತಿ ಬೇಲಿ ಸಹಿತ ನಿಯಂತ್ರಣಕ್ಕೆ ಪೂರಕ ಕ್ರಮಗಳು ಅನುಷ್ಠಾನಕ್ಕೆ ಬಂದಿಲ್ಲ. ಆನೆ ಅಗರ್‌ ನಿರ್ಮಿಸಿದರೂ, ಅದರಿಂದ ಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ.

Advertisement

ಎಲ್ಲೆಲ್ಲಿ ಸಮಸ್ಯೆ?
ಸಂಪಾಜೆ, ಅರಂತೋಡು, ಆಲೆಟ್ಟಿ, ಮಂಡೆಕೋಲು, ಮರ್ಕಂಜ, ಮಡಪ್ಪಾಡಿ, ಕಲ್ಮಕಾರು, ಕೊಲ್ಲಮೊಗ್ರು ಪ್ರಮುಖ ಆನೆ ಬಾಧಿತ ಪ್ರದೇಶಗಳು. ಇಲ್ಲಿ ತೋಟಕ್ಕೆ ಆನೆ ನುಗ್ಗುವುದು ಸಾಮಾನ್ಯ ವಿದ್ಯಮಾನ. ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದಕ್ಕೊಂದು ತಾತ್ಕಾಲಿಕ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರೂ, ಹತೋಟಿಗೆ ಬಂದಿಲ್ಲ. ಸುಳ್ಯದಲ್ಲಿ ಹಳದಿರೋಗ, ಬೇರುಹುಳ ಸಮಸ್ಯೆ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಮುಕ್ತಿ ಸಿಕ್ಕಿಲ್ಲ. ಅದರ ಜತೆಗೆ ಆನೆ ದಾಳಿ. ಹಾಗಾಗಿ ಇಲ್ಲಿ ಕೃಷಿಕನಿಗೆ ವರ್ಷಪೂರ್ತಿ ಬೆಳೆ ನಷ್ಟ ಕಟ್ಟಿಟ್ಟ ಬುತ್ತಿ. ಫಸಲು ಭರಿತ ಅಡಿಕೆತೋಟ, ತೆಂಗಿನತೋಟ ಧರೆಗುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ.

ಸೌರ ವಿದ್ಯುತ್‌ ಬೇಲಿ
ಈ ಹಿಂದೆ ನಗರದ ಭಸ್ಮಡಕ್ಕೆ ಆನೆ ನುಗ್ಗಿ ಅವಾಂತರ ಸೃಷ್ಟಿ ಆಗಿತ್ತು. ಆ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಮಂಡೆಕೋಲು ಪರಿಸರದಲ್ಲಿ ಸೌರ ವಿದ್ಯುತ್‌ ಬೇಲಿ, ರೈಲ್ವೇ ಹಳಿಕಂಬ ಇತ್ಯಾದಿ ಸುರಕ್ಷಾ ಕ್ರಮದ ಬಗ್ಗೆ ಅರಣ್ಯ ಸಚಿವರು ನೀಡಿದ ಭರವಸೆ ಹುಸಿಯಾಗಿದೆ.

ಆನೆ ಬಾಧಿತ ಪ್ರದೇಶದ ಕೃಷಿಕರಿಗೆ ಸೋಲಾರ್‌ ಬೇಲಿ ಅಳವಡಿಸಲು ಸರಕಾರ ಶೇ. 50 ಸಬ್ಸಿಡಿ ನೀಡುತ್ತದೆ. ಉಳಿದ ಹಣವನ್ನು ಫಲಾನುಭವಿಗಳೇ ಭರಿಸಬೇಕು. 1 ಕಿ.ಮೀ. ದೂರಕ್ಕೆ ಸೌರಬೇಲಿ ಅಳವಡಿಸಲು 2.30 ಲಕ್ಷ ರೂ. ಬೇಕು.
ಅದರ ಅರ್ಧ ಹಣ ಅಂದರೂ ಲಕ್ಷ ರೂ. ದಾಟುತ್ತದೆ. ನಾಲ್ಕೈದು ಕಿ.ಮೀ. ದೂರ ಇದ್ದರೆ ಅಷ್ಟು ಮೊತ್ತ ಕೃಷಿಕರು ಭರಿಸುವುದು ಕಷ್ಟ. ಹಾಗಾಗಿ ಈ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.

ಆನೆ ಬಂತು ಎಂದಾಕ್ಷಣ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಬರುತ್ತಾರೆ. ಹಾಗಂತ ಅವರಿಗೂ ನೇರವಾಗಿ ನುಗ್ಗಲು
ಬೇಕಾದ ಸಲಕರಣೆಗಳು ಇಲ್ಲ. ಗರ್ನಲ್‌ ಸಿಡಿಸುವುದು, ಜನ ಸೇರಿಸಿ ಓಡಿಸುವುದು, ಬೆಂಕಿ ಹೊತ್ತಿಸುವುದು ಇತ್ಯಾದಿ ದಾರಿಗಳನ್ನು ಬಳಸಬೇಕಷ್ಟೆ. ಬೇಸಗೆ ಕಾಲದಲ್ಲಿ ಬೆಂಕಿ, ಗರ್ನಲ್‌ ಬಳಸುವುದರಿಂದ ಹಸಿರು ಸಂಪತ್ತಿಗೆ ತೊಂದರೆ ಆಗುವ ಅಪಾಯ ಇರುವುದರಿಂದ ತಮಟೆ ಶಬ್ದ ಬಳಸಿ ಆನೆಗಳನ್ನು ಕಾಡಿಗೆ ಅಟ್ಟಬೇಕಾದ ಸ್ಥಿತಿ ಇಲ್ಲಿನದು.

Advertisement

ಆನೆ ಅಗರ್‌
ತಾಲೂಕಿನ ಅರಣ್ಯ ಬಾಧಿತ ಪ್ರದೇಶದಲ್ಲಿ ಆನೆ ಅಗರ್‌ ಸ್ಥಾಪಿಸಿ ಆನೆ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಆನೆ ನಿರೋಧಕ ಕಂದಕ ಮೇಲ್ಭಾಗದಲ್ಲಿ 3 ಮೀ. ಅಗಲ, ತಳಭಾಗದಲ್ಲಿ 1.5 ಮೀಟರ್‌ ಅಗಲ ಇದೆ. ಮೇಲಾºಗದಿಂದ ಕೆಳಭಾಗದ ತನಕ 2 ಮೀ. ಆಳ ಇದೆ. ಆನೆ ಇದನ್ನು ದಾಟಲು ಪ್ರಯತ್ನಿಸಿದರೆ, ಕಂದಕದೊಳಗೆ ಬೀಳುತ್ತದೆ. ಕಂದಕ ಕಂಡಾಗ ಆನೆ ದಾಟಲು ಪ್ರಯತ್ನಿಸದೆ ಮರಳಿ ಹೋಗುವುದು ಹೆಚ್ಚು. ಇದರಿಂದ ಕಾಡಿನ ಭಾಗದಿಂದ ಆನೆ ಸರಾಗವಾಗಿ ಕೃಷಿ ತೋಟಕ್ಕೆ ಲಗ್ಗೆ ಹಾಕುವುದು ನಿಯಂತ್ರಣಕ್ಕೆ ಬರುತ್ತದೆ. ಆದರೆ ಇಲ್ಲಿ ಕೃಷಿಕರ ಮನೆಗೆ ತೆರಳುವ ರಸ್ತೆ, ಕಾಲು ದಾರಿ, ತೋಡು ಪ್ರದೇಶದಲ್ಲಿ ಅಗರ್‌ ನಿರ್ಮಿಸಲು ಸಾಧ್ಯವಿಲ್ಲ. ಇಂತಹ ಜಾಗದಲ್ಲಿ ಆನೆ ಕೃಷಿತೋಟಕ್ಕೆ ನುಸುಳುತ್ತಿದೆ.

ಹಿಂಡಾನೆ ಕಾಟ
ಹಿಂದೆ ಒಂಟಿ ಆನೆಗಳು ದಾಳಿ ನಡೆಸುತ್ತಿದ್ದವು. ಈಗ ಆನೆಗಳ ಹಿಂಡೇ ದಾಳಿಯಿಡುತ್ತಿದೆ. ನಗರದ ಅಂಚಿನಲ್ಲಿರುವ ಗುಡ್ಡೆಮನೆ ಪ್ರದೇಶಕ್ಕೆ ಎರಡು ದಿನಗಳ ಹಿಂದೆ ನುಗ್ಗಿದ ಹಿಂಡಾನೆ ಇನ್ನೂ ಅದೇ ಪರಿಸರದಲ್ಲಿ ಅಲೆದಾಡುತ್ತಿವೆ. ಅಲ್ಲಿ ಎಂಟು ಮನೆಗಳಿಗೆ ಆತಂಕವಿದ್ದು, ಅರಣ್ಯ ಇಲಾಖೆ ಇದನ್ನು ಮರಳಿ ಕಾಡಿಗೆ ಸೇರಿಸಲು ಕಾರ್ಯಾಚರಣೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲಿ ನಿಯಂತ್ರಣಕ್ಕೆ ಪೂರಕ ವ್ಯವಸ್ಥೆಗಳು ಅಡ್ಡಿ ಆಗಿವೆ.

ದಾಳಿಯಿಂದ ಫಸಲು ನಷ್ಟ
ಆನೆ ದಾಳಿ ನಾಲ್ಕು ವರ್ಷಗಳಿಂದ ನಿರಂತರವಾಗಿದೆ. ಮೊನ್ನೆ ಹಿಂಡಾನೆ ದಾಳಿಯಿಂದ 40ಕ್ಕೂ ಅಧಿಕ ಅಡಿಕೆ ಮರಗಳು ನಾಶವಾಗಿದೆ. ಅರಣ್ಯ ಇಲಾಖೆ ಆನೆ ಕಂದಕ ನಿರ್ಮಿಸಿದರೂ ಅದರಿಂದ ನಮಗೇನೂ ಪ್ರಯೋಜನ ಆಗಿಲ್ಲ. ತೋಡು ದಾಟಿ ಅವು ಕೃಷಿ ತೋಟಕ್ಕೆ ಲಗ್ಗೆ ಇಡುತ್ತಲೇ ಇವೆ.
– ಕೃಪಾಶಂಕರ ನಾರ್ಕೋಡು, ಕೃಷಿಕ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next