Advertisement

ಎರಡು ಸಂಸ್ಥೆಗಳಿಗೆ ಲಲಿತ ಕಲಾಸುಮ ಪ್ರಶಸ್ತಿ 

12:30 AM Mar 22, 2019 | Team Udayavani |

ಸಂಗೀತ ಕಲೆಯ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಉಡುಪಿಯ ರಾಗಧನ ಹಾಗೂ ಪರ್ಕಳದ ಸರಿಗಮ ಭಾರತಿ ಸಂಸ್ಥೆಗಳನ್ನು ಶ್ರೀ ರಾಮ ಲಲಿತ ಕಲಾ ಮಂಡಳಿ-ಬೆಂಗಳೂರು ಕೊಡಮಾಡುವ ಈ ಬಾರಿಯ “ಲಲಿತ ಕಲಾ ಸುಮ’ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಮಾ. 3ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು.ಪ್ರೊ|ಆರ್‌.ಎಲ್‌ ಭಟ್‌ ರಾಗಧನದ ಪರವಾಗಿಯೂ ಉಮಾಶಂಕರಿ ಯವರು ಸರಿಗಮಭಾರತಿಯ ಪರವಾಗಿಯೂ ಪ್ರಶಸ್ತಿಯನ್ನು ಸ್ವೀಕರಿಸಿದರು. 

Advertisement

ರಾಗಧನ: ಸುಮಾರು ಮೂರು ದಶಕಗಳ ಇತಿಹಾಸವಿರುವ ರಾಗಧನ ನಮ್ಮೂರಲ್ಲಿಯೂ ಕರ್ನಾಟಕ ಸಂಗೀತಕ್ಕೆ ಒಂದು ಮಾನ್ಯತೆ ದೊರಕಬೇಕು, ಒಳ್ಳೆಯ ಕಲಾವಿದರು ಹುಟ್ಟಿಕೊಳ್ಳಬೇಕು,ಆಸ್ವಾದಿಸುವ ಶ್ರೋತೃವರ್ಗ ಸೃಷ್ಟಿಯಾಗಬೇಕು ಎಂಬ ಸದುದ್ದೇಶಗಳನ್ನು ಗಮನದಲ್ಲಿಕೊಂಡು ಹುಟ್ಟಿಕೊಂಡ ಸಂಸ್ಥೆ. ಜನರು ಕರ್ನಾಟಕ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಹಿಂಜರಿಕೆ ಹಾಕುತ್ತಿದ್ದ ಕಾಲದಲ್ಲಿ ರಾಗಧನ ಸ್ಥಾಪನೆಯಾದಾಗ ಸಂಗೀತದ ಒಲವನ್ನು ಜನರಲ್ಲಿ ಹಬ್ಬಿಸಲು ತುಂಬಾ ಕಷ್ಟ ಪಡಬೇಕಾಯಿತು. ಇದರ ಫ‌ಲಶ್ರುತಿಯೇ ಗೃಹಸಂಗೀತ. 

ಮನೆ ಮಂದಿಯ ಸಹಕಾರದೊಂದಿಗೆ ಆತ್ಮೀಯ ವಾತಾವರಣದಲ್ಲಿ ಸಾಕಾರಗೊಳ್ಳುವ ಈ ಸಂಗೀತ ಕಾರ್ಯಕ್ರಮಗಳು ಸುಲಭವಾಗಿ ಜನಮನ ತಲುಪುವಲ್ಲಿ ಹೆಚ್ಚು ಯಶಸ್ವಿಯಾಗಿವೆ ಹಾಗೂ ಇಂದಿಗೂ ಇದು ಮುಂದುವರಿಯುತ್ತಲಿದೆ. ಸಂಗೀತದ ಕುರಿತು ಮಾಹಿತಿಗಳನ್ನು ಜನರಿಗೆ ಮುಟ್ಟಿಸುವ ಹೆಜ್ಜೆಯಾಗಿ “ರಾಗಧನಶ್ರೀ’ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಸಣ್ಣದಾಗಿ ಆರಂಭಗೊಂಡ ಈ ಪತ್ರಿಕೆಗೆ ಇಂದು ದೂರದೂರದ ಊರುಗಳಲ್ಲಿ ಕೂಡಾ ಚಂದಾದಾರ‌ರು ಇದ್ದಾರೆ. ಇಂತಹ ಅನೇಕ ಪ್ರಯತ್ನಗಳಿಂದ ಉಡುಪಿಯಲ್ಲಿ ಶಾಸ್ತ್ರೀಯ ಸಂಗೀತಗಳನ್ನು ಇಷ್ಟಪಟ್ಟು ಕೇಳುವ ಶ್ರೋತೃ ವರ್ಗ ಸಾಕಷ್ಟು ಸಂಖೈಯಲ್ಲಿ ಬೆಳೆದು ಬಂತು. ರಾಗಧನವು 1998ರಲ್ಲಿ ದಶಮಾನೋತ್ಸವ, 2002ರಲ್ಲಿ ಪೇಜಾವರ ಮಠದ ಸಹಯೋಗದೊಂದಿಗೆ, ರಾಗ ವಸಂತ ಎಂಬ ಮಾಲಿಕೆಯಲ್ಲಿ ಸುಮಾರು 65 ಸಂಗೀತ ಕಛೇರಿಗಳು, 2008ರಲ್ಲಿ ಇಪ್ಪತ್ತನೇ ವರ್ಷದ ಆಚರಣೆ, 2014ರಲ್ಲಿ ರಜತ ಮಹೋತ್ಸವಗ‌ಳನ್ನು ಆಚರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಬೋಧನೆಗೆ ಯೋಗ್ಯವಾದ ಕಮ್ಮಟಗಳು, ಸೋದಾಹರಣ ಉಪನ್ಯಾಸಗಳು, ಸಂಗೀತ ರಸಗ್ರಹಣ ಶಿಬಿರಗಳು, ರಾಜ್ಯ ಹಾಗೂ ರಾಷÅ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳು, ವಾಗ್ಗೇಯಕಾರರ ಸಂಗೀತೋತ್ಸವಗಳು, ಹಾಗೂ ಈಚೆಗೆ “ಕಥನ ಕುತೂಹಲ’ ಎಂಬ ಜೀವನ ಕಥನವನ್ನು ಕೇಳುಗರೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮ ಸುಮಾರು 11 ಮಾಲಿಕೆಗಳು, ಇವೇ ಮುಂತಾದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.
 
ಸರಿಗಮ ಭಾರತಿ: ಪರ್ಕಳದ ಸರಿಗಮ ಭಾರತಿ, ಡಾ| ಎಚ್‌.ಎನ್‌. ಉದಯಶಂಕರ್‌ ಮತ್ತು ಉಮಾಶಂಕರಿ ದಂಪತಿಯ ಕನಸಿನ ಕೂಸು. 1999ರಲ್ಲಿ ಸ್ಥಾಪನೆಗೊಂಡ ಕಲಾ ಸಂಸ್ಥೆಯಲ್ಲಿ ಸಂಗೀತ ತರಗತಿಗಳು, ವೇದ ಪಾಠ ಪಾರಾಯಣದ ಕಲಿಸುವಿಕೆ, ಸಂಸ್ಕೃತ ಸಂಭಾಷಣಾ ಶಿಬಿರಗಳು, ಯೋಗ ಶಿಬಿರಗಳು, ಯಕ್ಷಗಾನ ತಾಳಮದ್ದಳೆ , ಸಂಸ್ಮರಣಾ ಕಾರ್ಯಕ್ರಮಗಳು, ಆರ್‌ಎಸ್‌ಎಸ್‌ ಬೈಠಕ್‌ಗಳು, ನೃತ್ಯ ಪ್ರದರ್ಶನಗಳು, ಸಂಗೀತ ಶಿಬಿರಗಳು ಮುಂತಾದ ಕಲೆಗೆ ಸಂಬಂಧಿಸಿದ ವಿಭಿನ್ನ ಚಟುವಟಿಕೆಗಳನ್ನು ನಡೆಸಿಕೊಡು ಬಂದಿದ್ದಾರೆ. ಇವಲ್ಲದೆ ಪ್ರತೀ ವರ್ಷ ಅತಿಥೇಯರ ಜನ್ಮ ದಿನಾಚರಣೆಗೆ ಸಂಗೀತ ಕಛೇರಿಗಳನ್ನು ಹಮ್ಮಿಕೊಳ್ಳುತ್ತಾರೆ. 

ಪ್ರತೀ ವಿಜಯದಶಮಿಯಂದು ವಿಜಯದಶಮಿ ಸಂಗೀತೋತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿಂದ ಹೊರ ಬಂದ ಅನೇಕ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. ಕನಕ ಅಧ್ಯಯನ ಪೀಠ ಮತ್ತು ಎಮ್‌ಜಿಎಮ್‌ ಕಾಲೇಜಿನ ಸಹಯೋಗದೊಂದಿಗೆ, ಪ್ರತೀ ಎಪ್ರಿಲ್‌ ತಿಂಗಳಲ್ಲಿ ದಾಸ ಸಾಹಿತ್ಯ ಗಾಯನದ ಶಿಬಿರದೊಂದಿಗೆ ಸಂಗೀತೋತ್ಸವ, ಡಿಸೆಂಬರ್‌ ತಿಂಗಳಲ್ಲಿ ನಡೆಯುವ ವಾದಿರಾಜ ಕನಕದಾಸ ಸಂಗೀತೋತ್ಸವ ಮುಂತಾದವುಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸರಿಗಮ ಭಾರತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸಿಕೊಂಡು ಹೋಗುವ ಆಶಯ ಡಾ|ಎಚ್‌. ಎನ್‌. ಉದಯಶಂಕರ್‌ ಮತ್ತು ಉಮಾಶಂಕರಿ ದಂಪತಿಯದ್ದು. 

– ವಿದ್ಯಾಲಕ್ಷ್ಮೀ ಕಡಿಯಾಳಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next