Advertisement

ಪದೇ ಪದೆ ವಿದ್ಯುತ್‌ ಕಡಿತದಿಂದ ರೋಸಿ ಹೋದ ಜನತೆ : ಬಗೆಹರಿಯದ ವಿದ್ಯುತ್‌ ಸಮಸ್ಯೆ

12:20 PM Mar 08, 2022 | Team Udayavani |

ಶಿರ್ವ : ಮೆಸ್ಕಾಂನ ಪಡುಬೆಳ್ಳೆ ಪಾಂಬೂರು ಸಬ್‌ಸ್ಟೇಷನ್‌ನ ಪವರ್‌ ಟ್ರಾನ್ಸ್‌ಫಾರ್ಮರ್‌ ಕೆಟ್ಟು ಹೋಗಿದ್ದ ರಿಂದಾಗಿ ಶಿರ್ವ, ಬಂಟಕಲ್ಲು,ಪಡುಬೆಳ್ಳೆ, ಶಂಕರಪುರ ಮತ್ತು ಕುರ್ಕಾಲು ಪರಿಸರದಲ್ಲಿ ಹಲವು ಸಮಯದಿಂದ ವಿದ್ಯುತ್‌ ಕಣ್ಣುಮುಚ್ಚಾಲೆ ನಡೆಯುತ್ತಲೇ ಇದೆ.

Advertisement

ಕೆಟ್ಟುಹೋದ ಪವರ್‌ ಟ್ರಾನ್ಸ್‌ಫಾರ್ಮರ್‌
ಪಾಂಬೂರು ಸಬ್‌ಸ್ಟೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 5ಎಂವಿಎಯ 2 ಪವರ್‌ ಟ್ರಾನ್ಸ್‌ಫಾರ್ಮರ್‌ಗಳ ಪೈಕಿ ಒಂದು ಟ್ರಾನ್ಸ್‌ಫಾರ್ಮರ್‌ ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಕೆಟ್ಟು ಹೋಗಿದೆ. ಈಗ 2 ಟ್ರಾನ್ಸ್‌ಫಾರ್ಮರ್‌ಗಳ ಕೆಲಸವನ್ನು ಒಂದು ಟ್ರಾನ್ಸ್‌ಫಾರ್ಮರ್‌ ನಿರ್ವಹಿಸುತ್ತಿದ್ದು ಓವರ್‌ಲೋಡ್‌ ಆದಾಗ ವಿದ್ಯುತ್‌ ಕಡಿತಗೊಂಡು ಸಮಸ್ಯೆ ಉಂಟಾಗುತ್ತದೆ. ಇಂಧನ ಸಚಿವರ ತವರು ಜಿಲ್ಲೆಯಲ್ಲಿಯೇ ಕಳೆದ 5 ತಿಂಗಳಿನಿಂದ ಪದೇ ಪದೆ ವಿದ್ಯುತ್‌ ಸ್ಥಗಿತಗೊಂಡು ಜನತೆ ತೊಂದರೆ ಅನುಭವಿಸುತ್ತಿದ್ದಾರೆ.

ವಿದ್ಯುತ್‌ ಕಡಿತದಿಂದ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ವ್ಯಾಪಾರ‌ಸ್ಥರಿಗೆ, ಉದ್ದಿಮೆದಾರರಿಗೆ, ಮನೆಯಲ್ಲಿ ವರ್ಕ್‌ ಫ್ರಂ ಹೋಂ ಮಾಡುತ್ತಿರುವ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ಮೊದಲಾದ ಕೆಲಸಗಳಿಗೆ ವಿದ್ಯುತ್‌ ಅನಿವಾರ್ಯವಾಗಿದ್ದು ತೊಂದರೆಯಾಗುತ್ತಿದೆ.

ಕಳೆದ 6 ತಿಂಗಳಿನಿಂದ ಶಿರ್ವ ಪರಿಸರಕ್ಕೆ ನಂದಳಿಕೆಯ ಸಬ್‌ಸ್ಟೇಷನ್‌ನಲ್ಲಿರುವ ಮುಂಡ್ಕೂರು ಫೀಡರ್‌ನಿಂದ ವಿದ್ಯುತ್‌ಸರಬರಾಜು ಮಾಡಲಾಗುತ್ತಿದೆ. ಈ ಮಾರ್ಗದಲ್ಲಿರುವ ಹಳೆಯ ತಂತಿ ಇರುವ ಪ್ರದೇಶಗಳಲ್ಲಿ ಓವರ್‌ಲೋಡ್‌ ಆದಾಗ ತಂತಿ ತುಂಡಾಗಿ ವಿದ್ಯುತ್‌ ವ್ಯತ್ಯಯವಾಗುತ್ತ ದೆ. ಶೀಘ್ರ ದುರಸ್ತಿ ಸಿಬಂದಿ ಕೊರತೆಯಿಂದ ಕಷ್ಟಸಾಧ್ಯವಾಗಿದೆ.

ಇದನ್ನೂ ಓದಿ : ಗೋವಾದಲ್ಲಿ ಮತ್ತೆ ಕುದುರೆ ವ್ಯಾಪಾರ? ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ

Advertisement

ಕತ್ತಲಲ್ಲಿ ಕುರ್ಕಾಲು, ಶಂಕರಪುರ
ಶಿರ್ವ ಲೈನ್‌ ಆಫ್‌ ಆದಾಗ ಶಂಕರಪುರ ,ಕುರ್ಕಾಲು ಸುತ್ತಮುತ್ತಲ ಪರಿಸರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗುತ್ತದೆ. ಬೇರೆ ಕಡೆಯಿಂದ ಸರಬರಾಜು ಮಾಡಲು ವ್ಯವಸ್ಥೆಯಿದ್ದರೂ ಉದ್ಯಾವರ ಫೀಡರ್‌ ನಲ್ಲಿ ಓವರ್‌ಲೋಡ್‌ ಇದ್ದ ಕಾರಣ ಸರಬರಾಜು ಮಾಡಲಾಗದೆ ಶಂಕರಪುರ, ಕುರ್ಕಾಲು ಪರಿಸರ ಕತ್ತಲೆಯಲ್ಲಿಯೇ ಉಳಿಯುವಂತಾಗುತ್ತದೆ.

ಪಾಂಬೂರು ಸಬ್‌ಸ್ಟೇಷನ್‌ನಲ್ಲಿ ಶನಿವಾರ ಸಿ.ಟಿ. ಹಾಕಲಾಗಿದ್ದು ಸಮಸ್ಯೆ ತಕ್ಕಮಟ್ಟಿಗೆ ಸರಿಪಡಿಸಲಾಗಿದೆ. ಉದ್ಯಾವರ ಸ್ಟೇಷನ್‌ನಿಂದ ಶಂಕರಪುರ ಕಡೆಗೆ ಲೈನ್‌ ವರ್ಕ್‌ ನಡೆಯುತ್ತಿದ್ದು ಕುರ್ಕಾಲು ಪ್ರದೇಶದ ಕಡೆಗೂ ನೀಡಲು ಪ್ರಯತ್ನಿಸಲಾಗುವುದು ಎಂದು ಕಾಪು ಮೆಸ್ಕಾಂನ ಸಹಾಯಕ ಅಭಿಯಂತ ಹರೀಶ್‌ಕುಮಾರ್‌ ತಿಳಿಸಿದ್ದಾರೆ.

ಸಿಬಂದಿ ಸಮಸ್ಯೆ
ಶಿರ್ವ ಮೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಶಿರ್ವ,ಬಂಟಕಲ್ಲು ಪಡುಬೆಳ್ಳೆ,ಶಂಕರಪುರ,ಕುರ್ಕಾಲು ಮತ್ತಿತರ ಪ್ರದೇಶಗಳಿದ್ದು ಸಿಬಂದಿ ಕೊರತೆಯಿಂದ ಸಕಾಲದಲ್ಲಿ ವಿದ್ಯುತ್‌ ಲೈನ್‌ ಸರಿಪಡಿಸಲು ಸಮಸ್ಯೆ ಯಾಗುತ್ತಿದೆ. ಶಿರ್ವ ಕಚೇರಿಗೆ 35ಹುದ್ದೆ ಮಂಜೂರಾಗಿದ್ದರೂಇರುವುದು 15 ಸಿಬಂದಿ ಮಾತ್ರ. ವರ್ಗಾವಣೆಗೊಂಡ ಮತ್ತು ನಿಧನ ಹೊಂದಿದ ಸಿಬಂದಿಗಳ ಜಾಗಕ್ಕೆ ಬೇರೆ ಸಿಬಂದಿ ನೇಮಕವಾಗಿಲ್ಲ. ವಿದ್ಯುತ್‌ ವ್ಯತ್ಯಯ ಉಂಟಾದಾಗ ಫೀಡಿಂಗ್‌ ವ್ಯವಸ್ಥೆ ಇದ್ದರೂ ಸಿಬಂದಿ ಕೊರತೆಯಿಂದ ಸಕಾಲದಲ್ಲಿ ವಿದ್ಯುತ್‌ ಅಡಚಣೆ ಸರಿಪಡಿಸಲು ವಿಳಂಬವಾಗುತ್ತಿದೆ. ಲಭ್ಯವಿದ್ದ ಸಿಬಂದಿ ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು , ಅವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ.

ಕಾಮಗಾರಿ ಪ್ರಗತಿಯಲ್ಲಿ

5ಎಂವಿಎಯ ಪವರ್‌ ಟ್ರಾನ್ಸ್‌ ಫಾರ್ಮರ್‌ 12.5 ಎಂವಿಎಗೆ ಉನ್ನತೀಕರಣಗೊಳ್ಳುತ್ತಿದ್ದು,ಸಂಬಂ ಧಪಟ್ಟ ಪರಿಕರಗಳು ಬದಲಾವಣೆ ಯಾಗಬೇಕಿದೆ. ವಿದ್ಯುತ್‌ ಪರಿಕರ ಗಳನ್ನಿಡಲು ಕಟ್ಟಡ ನವೀಕರಣ, ಅರ್ತ್‌ಮ್ಯಾಟ್‌ (ಭೂ ಚಾಪೆ) ಕಾಮಗಾರಿ ಪ್ರಗತಿಯಲ್ಲಿದೆ. 33 ಕೆವಿಎ ಮಣಿಪಾಲದಿಂದ ಪಾಂಬೂರಿಗೆ ಬರುವ ಮಾರ್ಗದ ಹಳೆಯ ತಂತಿಗಳ ಬದಲಾವಣೆ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್‌ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸಲಾಗುವುದು.
– ನರಸಿಂಹ ಪಂಡಿತ್‌, ಅಧೀಕ್ಷಕ ಅಭಿಯಂತ, ಮೆಸ್ಕಾಂ, ಉಡುಪಿ

ತುರ್ತು ಕೆಲಸವಾದರೆ ಸಿಬಂದಿ ಕೊರತೆಯ ನಡುವೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕರೆ ಬಂದ ಕಡೆ ರಾತ್ರಿಯಾದರೂ ತೆರಳಿ ವಿದ್ಯುತ್‌ ಸರಬರಾಜು ನೀಡಲು ಮೆಸ್ಕಾಂ ಸಿಬಂದಿ ಶ್ರಮಿಸುತ್ತಿದ್ದಾರೆ.
-ಕೃಷ್ಣ, ಶಿರ್ವ ಮೆಸ್ಕಾಂ ಶಾಖಾಧಿಕಾರಿ

ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದು ಕಾರ್ಯಗತಗೊಂಡಿಲ್ಲ. ಜನತೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸಮಸ್ಯೆ ಪರಿಹರಿಸಲು ಮೆಸ್ಕಾಂ ಮುಖ್ಯ ಅಭಿಯಂತರು 20 ದಿನಗಳ ಕಾಲಾವಕಾಶ ಕೇಳಿದ್ದಾರೆ.
– ಕೆ.ಆರ್‌. ಪಾಟ್ಕರ್‌, ಶಿರ್ವ ಗ್ರಾ.ಪಂ. ಅಧ್ಯಕ್ಷರು.

– ಸತೀಶ್ಚಂದ್ರ ಶೆಟ್ಟಿ ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next