ಮಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇತ್ತ ಮಂಗಳೂರು ನಗರದಲ್ಲಿ ಸೋಮವಾರವೂ ಮಳೆಯ ಅಬ್ಬರ ಮುಂದುವರೆದಿತ್ತು. ಇದರ ಪರಿಣಾಮವಾಗಿ ಇಂದು ಸಂಜೆಯ ವೇಳೆಗೆ ಕಂಕನಾಡಿ ಪರಿಸರದ ಸುವರ್ಣ ಲೇನ್ ಎಂಬಲ್ಲಿ ಟ್ರಾನ್ಸ್ ಪಾರ್ಮರ್ ಸಹಿತ ಎಂಟು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ ಘಟನೆ ವರದಿಯಾಗಿದೆ.
ಘಟನಾ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ಟ್ರಾನ್ಸ್ ಫಾರ್ಮರ್ ಉರುಳಿಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಂಬಗಳ ಜೊತೆ ಎರಡು ಮರಗಳೂ ಧರೆಗೆ ಉರುಳಿದ್ದು ಸ್ಥಳೀಯ ಸಂಪರ್ಕ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ.
ಇದೀಗ ಸ್ಥಳೀಯರು ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಉರುಳಿರುವ ವಿದ್ಯುತ್ ಕಂಬಗಳ ತೆರವಿಗೆ ಅವರ ಬರುವಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.