Advertisement

ಭ್ರಷ್ಟಾಚಾರದ ಸುಳಿಯಲ್ಲಿ ಚುನಾವಣೆ

01:54 PM May 13, 2019 | Team Udayavani |

ಕೋಲಾರ: ಜೋಡಿ ಜಿಲ್ಲೆಗಳ ಪ್ರತಿಷ್ಠಿತ ಕೋಚಿ ಮುಲ್ಗೆ ಸೋಮವಾರ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿ ನಡೆಯುತ್ತಿರುವ ಭಾರೀ ಭ್ರಷ್ಟಾಚಾರ ಹಾಗೂ ಮತದಾರರ ಸೆಳೆಯುವ ಆಮಿಷಗಳು ಸಹಕಾರ ರಂಗಕ್ಕೆ ಮಸಿ ಬಳಿಯುವಂತಾಗಿದೆ.

Advertisement

ಹೈನುಕ್ರಾಂತಿಯ ಪಿತಾಮಹರೆನಿಸಿರುವ ಗುಜ ರಾತ್‌ನ ಡಾ.ಕುರಿಯನ್‌ರ ಸಾಧನೆಯ ಪ್ರೇರಣೆ ಯಿಂದ ಎಂ.ವಿ.ಕೃಷ್ಣಪ್ಪನವರು ಜಿಲ್ಲೆಗೆ ಹೈನು ಗಾರಿಕೆಯನ್ನು ಪರಿಚಯಿಸಿದ್ದರು. ದಿವಂಗತ ಹಿರಿಯ ಐಎಎಸ್‌ ಅಧಿಕಾರಿ ಸಿ.ಮುನಿಸ್ವಾಮಿ ಕೋಲಾರದಲ್ಲಿ ಕೋಚಿಮುಲ್ ಡೇರಿ ಆರಂಭವಾಗಲು ಕಾರಣಕರ್ತರಾಗಿದ್ದರು.

ಇವರೆಲ್ಲರ ದೂರದೃಷ್ಟಿಯಿಂದಾಗಿ ಇಂದು ಕಡು ಬರಗಾಲದಲ್ಲೂ ಕೋಲಾರದ ರೈತರು ಕೊಂಚ ನೆಮ್ಮದಿಯಿಂದ ಜೀವನ ಮಾಡಲು ಹೈನೋದ್ಯಮ ಸಹಕಾರಿಯಾಗಿದೆ. ಈ ಹೈನೋದ್ಯಮದ ಕೇಂದ್ರ ಬಿಂದುವಾಗಿರುವ ಕೋಚಿಮುಲ್ಗೆ ಕಳೆದ ಮೂರು ಅವಧಿಗಳಿಂದ ನಡೆಯುತ್ತಿರುವ ಚುನಾ ವಣೆಯು ಸಹಕಾರ ಕ್ಷೇತ್ರದ ತತ್ವಗಳನ್ನೆಲ್ಲಾ ಕಸದ ಬುಟ್ಟಿಗೆ ಎಸೆಯುವಂತೆ ಭಾರೀ ಭ್ರಷ್ಟಾಚಾರದ ಮೂಲಕ ನಡೆಯುತ್ತಿರುವುದು ಸಾಮಾನ್ಯ ಸಹಕಾರಿಗಳಲ್ಲಿ ಅಸಹ್ಯ ಮೂಡಿಸುವಂತಾಗಿದೆ.

ಭಾರೀ ಪೈಪೋಟಿ: ಪ್ರತಿ ದಿನ ಕೋಟಿಗಟ್ಟಲೆ ವಹಿವಾಟು ನಡೆಯುವ ಕೋಚಿಮುಲ್ ಒಕ್ಕೂಟ ದಲ್ಲಿ ನಿರ್ದೇಶಕರಾಗಲು ಹಾಲಿ ನಿರ್ದೇಶಕರು ಹಾಗೂ ಹೊಸದಾಗಿ ಆಯ್ಕೆಯಾಗಲು ಹವಣಿಸು ತ್ತಿರುವವರ ನಡುವಿನ ಜಿದ್ದಾಜಿದ್ದಿ ಕಣಕ್ಕೆ ಕೋಚಿ ಮುಲ್ ಚುನಾವಣೆ ರಂಗ ಸಾಕ್ಷಿಯಾಗಿದೆ.

ಒಕ್ಕೂಟದ 13 ಸ್ಥಾನಗಳಲ್ಲಿ 4 ಸ್ಥಾನ ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ನಿರ್ದೇಶಕರ ಚುನಾ ವಣೆಗೆ ಮೇ 13ಕ್ಕೆ ಚುನಾವಣೆ ನಿಗದಿಯಾಗಿದ್ದು, ಪ್ರತಿ ಮತದಾರರಿಗೂ ಬುಲೆಟ್, ಸೀರೆ, ಮೊಬೈಲ್, ವಾಚ್, ಚಿನ್ನಾಭರಣ ಉಡುಗೊರೆ ಹಾಗೂ ಪ್ರವಾಸ ಕಳುಹಿಸುವ ಮೂಲಕ ಮತದಾರರನ್ನು ಓಲೈಕೆ ಮಾಡುವ ಕಸರತ್ತು ನಡೆಯುತ್ತಿದೆ.

Advertisement

ಈ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ಮಾತ್ರ ಇರುತ್ತದೆ. ಒಕ್ಕೂಟವು ಎರಡೂ ಜಿಲ್ಲೆಯ 11 ತಾಲೂಕುಗಳಲ್ಲಿ 2063 ಸಾವಿರ ಹಾಲು ಉತ್ಪಾ ದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸು ತ್ತಿದ್ದು, 2,78,886 ಲಕ್ಷ ರೈತರು ಹೈನೋದ್ಯಮದಲ್ಲಿ ತೊಡಗಿಸಿಕೊಂಡು ನಿತ್ಯವೂ ಸರಾಸರಿ 10 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿದ್ದಾರೆ.

ಒಕ್ಕೂಟದ 13 ನಿರ್ದೇಶಕರ ಸ್ಥಾನದ ಪೈಕಿ 4 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಯಾಗಿದ್ದು, 9 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ಹಾಗೂ ಕೋಲಾರ ಜಿಲ್ಲೆಯಲ್ಲಿ 5 ಮಂದಿ ಕಣದಲ್ಲಿದ್ದಾರೆ. ಒಟ್ಟು 21 ಜನ ಸ್ಪರ್ಧಾ ಕಣದಲ್ಲಿದ್ದು ಚುನಾವಣೆ ಎದುರಿಸುತ್ತಿ ದ್ದಾರೆ. ಮತ ಓಲೈಕೆಗೆ ಬಂಪರ್‌ ಅಫರ್‌ ನೀಡುತ್ತಿ ದ್ದಾರೆ.

ಕೋಟಿಗಟ್ಟಲೇ ಹಣ: ಕೋಚಿಮುಲ್ ನಿರ್ದೇಶಕ ಮಂಡಳಿಗೆ ಆಯ್ಕೆ ಮಾಡುವ ಚುನಾವಣೆಯಲ್ಲಿ ಮತದಾರರ ಪ್ರತಿನಿಧಿಗಳಿಗೆ ಕೋಟಿಗಟ್ಟಲೇ ಹಣವನ್ನು ಅಭ್ಯರ್ಥಿಗಳಾಗಿರುವರು ಹಂಚುತ್ತಿ ದ್ದಾರೆ. ಒಂದು ಅಂದಾಜಿನ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯು ಕನಿಷ್ಠ ಒಬ್ಬ ಮತದಾರರಿಗೆ ಒಂದು ಲಕ್ಷದಿಂದ ಮೂರು ಲಕ್ಷ ರೂವರೆವಿಗೂ ಹಣ ಹಂಚಿಕೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಹೀಗೆ ಹಣವನ್ನು ಖರ್ಚು ಮಾಡಿ ಚುನಾವಣೆ ಗೆದ್ದ ನಿರ್ದೇಶಕರು ಕೋಚಿಮುಲ್ ಅಭಿವೃದ್ಧಿಗೆ ಎಷ್ಟು ಮಾತ್ರ ಗಮನಹರಿಸುತ್ತಾರೆ. ತಾವು ಚುನಾವಣೆ ಯಲ್ಲಿ ಹೂಡಿದ್ದ ಬಂಡವಾಳವನ್ನು ಪುನಃ ವಾಪಸ್‌ ಪಡೆಯಲು ಏನೆಲ್ಲಾ ಕಸರತ್ತು ಮಾಡಬಹುದು ಎನ್ನುವುದು ಹಾಲು ಉತ್ಪಾದಕರ ಅನುಮಾನ ಕ್ಕೆ ಎಡೆ ಮಾಡಿಕೊಟ್ಟಿದೆ.

ದುಂದು ವೆಚ್ಚ: ಕೋಚಿಮುಲ್ ಚುನಾವಣೆಯಲ್ಲಿ ಹೂಡಿರುವ ಬಂಡವಾಳವನ್ನು ವಾಪಸ್‌ ಪಡೆ ಯುವ ಸಲುವಾಗಿಯೇ ಅನಗತ್ಯ ನೇಮಕಾತಿ ಪ್ರಕ್ರಿಯೆ ನಡೆಸುವುದು, ನೇಮಕಗೊಂಡವರಿಂದ ಲಕ್ಷಾಂತರ ರೂ. ಅನ್ನು ವಸೂಲು ಮಾಡುವುದು. ಅಗತ್ಯವಿಲ್ಲದಿದ್ದರೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಯಂತ್ರೋಪಕರಣಗಳನ್ನು ಖರೀದಿಸು ವುದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳದೆ ಧೂಳು ತಿನ್ನಲು ಬಿಡುವುದು, ಆಡಳಿತಾತ್ಮಕವಾಗಿ ಅಧಿಕಾರಿ ನಿರ್ದೇಶಕರು ಪೈಪೋಟಿ ಮೇಲೆ ದುಂದುವೆಚ್ಚ ಮಾಡುತ್ತಾ, ಉತ್ಪಾದನೆಯಾಗುವಷ್ಟು ಹಾಲಿಗೆ ಮಾರುಕಟ್ಟೆ ಹುಡುಕುವಲ್ಲಿ ವಿಫ‌ಲವಾಗಿರು ವುದು. ಇವೆಲ್ಲದರಿಂದ ಕೋಚಿಮುಲ್ ಒಕ್ಕೂಟ ವನ್ನು ಬಿಳಿಯಾನೆಯಾಗಿಸುವಲ್ಲಿ ಈವರೆಗೂ ಆಡಳಿತ ನಡೆಸಿದವರು ಯಶಸ್ವಿಯಾಗಿದ್ದಾರೆ.

ಹಿಂದೆಲ್ಲಾ ರೈತರಿಂದ ಖರೀದಿಸುವ ಹಾಲಿನ ದರಕ್ಕೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರಕ್ಕೂ ಪ್ರತಿ ಲೀಟರ್‌ಗೆ ಕೇವಲ 1.25 ಪೈಸೆ ಮಾತ್ರವೇ ವ್ಯತ್ಯಾಸವಿರುತ್ತಿತ್ತು. ಆಗ ಕೋಚಿಮುಲ್ ಆಡಳಿತ ಪ್ರಾಮಾಣಿಕವಾಗಿ ಪಾರದರ್ಶಕವಾಗಿಯೇ ನಡೆಯುತ್ತಿತ್ತು. ಹಾಲು ಉತ್ಪಾದಕರು ನೆಮ್ಮದಿ ಯಾಗಿದ್ದರು. ಆದರೆ, ಈಗ ರೈತರಿಗೆ ನೀಡುವ ದರಕ್ಕೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರಕ್ಕೂ ನಡುವೆ 14 ರೂ. ವ್ಯತ್ಯಾಸವಿದ್ದರೂ ಕೋಚಿ ಮುಲ್ ನಷ್ಟದ ಭೀತಿಯಲ್ಲಿರುವುದಕ್ಕೆ ಕೋಚಿ ಮುಲ್ ಚುನಾವಣೆಯಲ್ಲಿನಡೆಯುತ್ತಿರುವ ಅಕ್ರಮಗಳೇ ಕಾರಣವಾಗಿದೆ.

ಆತಂಕ: ಚುನಾವಣೆಯಲ್ಲಿ ಕೋಟ್ಯಂತರ ರೂ. ಅನ್ನು ವೆಚ್ಚ ಮಾಡುತ್ತಿರುವ ನಿರ್ದೇಶಕರು ಅದನ್ನು ತಮ್ಮ ಆಡಳಿತಾವಧಿಯಲ್ಲಿ ಬಡ್ಡಿ ಸಮೇತ ವಾಪಸ್‌ ಪಡೆಯುವ ಧಾವಂತದಲ್ಲಿ ಕೋಚಿಮುಲ್ ಆಡಳಿತವನ್ನು ದಾರಿ ತಪ್ಪಿಸುತ್ತಿದ್ದಾರೆ. ಕೆ.ಎಂ.ಎಫ್ನಿಂದ ಬರುವ ಅಧಿಕಾರಿಗಳು ಇವರ ಕುಣಿತಕ್ಕೆ ತಾಳ ಹಾಕುತ್ತಿರುವುದರಿಂದಲೇ ಸಹಕಾರ ತತ್ವದ ಹೈನೋದ್ಯಮ ಆತಂಕವನ್ನು ಎದುರಿಸುವಂತಾಗಿದೆ.

ಸಹಕಾರದಲ್ಲಿ ರಾಜಕೀಯ: ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸಹಕಾರ ಸಪ್ತಾಹ ಆಚರಣೆ ಸಂದರ್ಭದಲ್ಲಿ ಸಹಕಾರ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಗಂಟೆಗಟ್ಟಲೇ ಭಾಷಣ ಮಾಡುವ ಗ್ರಾಮ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸಹಕಾರಿಗಳು ಪ್ರತಿ ಚುನಾವಣೆಯನ್ನು ಭ್ರಷ್ಟಾಚಾರವಾಗಿಸಲು ಶಕ್ತಿ ಮೀರಿ ಶ್ರಮಿಸುತ್ತಿರುವುದನ್ನು ಸಾರ್ವಜನಿಕರು ಗಮನಿಸುತ್ತಲೇ ಇದ್ದಾರೆ.

ಜಿಲ್ಲೆಯಲ್ಲಿ ಇಂದಿಗೂ ಸಹಕಾರ ರಂಗದಲ್ಲಿ ಎಲ್ಲಾ ವರ್ಗದ ಜನರಿಗೆ ಸಮಾನವಾದ ಅವಕಾಶಗಳು ದೊರತಿಲ್ಲ. ಇಂತ ಕೆಲವೇ ಮಂದಿ ನಡುವಿನ ಪೈಪೋಟಿಗೆ ಇಡೀ ರಾಜಕೀಯ ಧುರೀಣರು ಬೆಂಬಲವಾಗಿ ನಿಂತು ಸಹಕಾರ ರಂಗವನ್ನು ಕೈಲಾದ ಮಟ್ಟಿಗೆ ಕಲುಷಿತಗೊಳಿಸುತ್ತಿರುವುದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಸಹಕಾರ ಹೈನುಗಾರಿಕೆ ಒಕ್ಕೂಟಕ್ಕೆ ಭವಿಷ್ಯ ಉಂಟೆ ಎನ್ನುವ ಅನುಮಾನ ಮೂಡಿಸುತ್ತದೆ.

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next