Advertisement

ಚುನಾವಣೆ ದುಬಾರಿಯಾಗುತ್ತಿದೆ: ತನ್ವೀರ್‌ ಸೇಠ್

11:54 AM Jan 14, 2017 | Team Udayavani |

ಬೆಂಗಳೂರು: ಏನೇ ತಪ್ಪು ಮಾಡಿದರೂ ಬೆಂಬಲಿಸುತ್ತೇವೆ ಎಂಬ ಪ್ರವೃತ್ತಿ ಆಳುವ ಪಕ್ಷ ಅಥವಾ ವಿರೋಧ ಪಕ್ಷಗಳಿಂದ ಹೋಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ 2016-17ನೇ ಸಾಲಿನ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಯುವ ಸಂಸತ್‌ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸದನಗಳಲ್ಲಿ ಜನರ ಭಾವನೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಕುರಿತು ಚರ್ಚೆಗಳು ನಡೆಯಬೇಕು. ಅವಕಾಶ ನೀಡಿದ ಜನತೆಗೆ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಜನಪ್ರತಿನಿಧಿಗಳದ್ದಾಗಬೇಕು. ಈಗಿನ ವಿದ್ಯಾರ್ಥಿಗಳು ಭವಿಷ್ಯದ ಆಸ್ತಿಯಾಗಿದ್ದು, ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ದೇಶಾಭಿವೃದ್ಧಿಗೆ ಪೂರಕವಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು. 

ಇತ್ತೀಚಿನ ದಿನಗಳಲ್ಲಿ ಚುನಾವಣೆ ದುಬಾರಿ ಯಾಗುತ್ತಿದೆ. ಚುನಾವಣೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣದ ಅಗತ್ಯವಿದೆ. ಭ್ರಷ್ಟ ವ್ಯವಸ್ಥೆಗೆ ಬದಲಾವಣೆ ತರುವ ನಿಟ್ಟಿನಲ್ಲಿ ಶಾಸನಗಳು ಬಲಿಷ್ಠವಾಗಬೇಕಿದೆ. ಕಾನೂನು ಇಲಾಖೆ, ಚುನಾಯಿತ ಪ್ರತಿನಿಧಿಗಳು ವಿಧೇಯಕ ಮಾಡುವ ಮುನ್ನ ಚರ್ಚೆ ಮಾಡಿ ಕಾರ್ಯಗತಗೊಳಿಸಬೇಕು. ನೋವು ಅರ್ಥವಾದರೆ ಮಾತ್ರ ಪರಿಹಾರ ನೀಡಲು ಸಾಧ್ಯ.

ಸೇವೆಯಿಂದ ನಾಯಕತ್ವ ಬೆಳೆಯುತ್ತದೆ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಸಂವಿಧಾನದ ಅರಿವು, ಪೋಷಕರು ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಸಾಧನೆಗೆ ಮುಂದಾಗುವಂತೆ ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ತು ಸಭಾಪತಿ ಡಿ.ಹೆಚ್‌. ಶಂಕರಮೂರ್ತಿ ಮಾತನಾಡಿ, ವಿಶ್ವಕ್ಕೆ ಅದ್ಭುತ ವಿಚಾರಗಳನ್ನು ನೀಡಿದ ದೇಶ ನಮ್ಮದು. ವೇದಗಳಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಉಲ್ಲೇಖವಿದೆ.

Advertisement

ಮಾಧ್ಯಮಗಳಲ್ಲಿ ಹೆಚ್ಚಾಗಿ ಋಣಾತ್ಮಕ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಸದನಲ್ಲಿ ನಡೆಯುವ ಒಳ್ಳೆಯ ವಿಚಾರಗಳಿಗೆ ಸಿಗದ ಪ್ರಾಮುಖ್ಯತೆ ಸಚಿವ, ಶಾಸಕರಿಗೆ ಧಿಕ್ಕಾರ ಕೂಗಿದಾಗ ಸಿಗುತ್ತದೆ. ಯುವ ಸಂಸತ್‌ನಂತಹ ಚರ್ಚೆಗಳು ನಡೆದಾಗ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. 
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಯುವ ಸಂಸತ್‌ ಅಣಕು ಪ್ರದರ್ಶನ ನಡೆಯಿತು. ನಂತರ ಯುವ ಸಂಸತ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ಪರ್ಧೆ ವಿಜೇತರು
ವಿದ್ಯಾ ಆರ್‌. ಹಂಚಿನಮನಿ- ಹಾನಗಲ್‌ (ಪ್ರಥಮ), ಬಿ.ಸಿ. ಮಣಿಕಂಠ- ಮೂಡಿಗೆರೆ (ದ್ವಿತೀಯ), ವೆಂಕಟೇಶ್‌ಪ್ರಸಾದ್‌ ಹೆಗಡೆ- ಮೂಡಬಿದ್ರೆ (ತೃತೀಯ), ಎಂ.ಆರ್‌. ತ್ರಿಶೂಲ್‌- ಮೈಸೂರು (ನಾಲ್ಕನೇ ಸ್ಥಾನ) ಪಡೆದಿದ್ದು ನಂತರದ ಸ್ಥಾನದಲ್ಲಿ ಕೆ.ಬಿ.ಪಲ್ಲವಿ- ನಂಜನಗೂಡು, ಎಂ.ಇ. ಸಚಿನ್‌- ಹಾಸನ, ಪಿ.ಆರ್‌. ಪ್ರಾರ್ಥನಾ, ಋತ್ವಿಕ್‌ ಗಣೇಶ್‌- ಬೆಂಗಳೂರು, ದಿವ್ಯಾ ಬಣಕಲ್‌- ಚಿತ್ರದುರ್ಗ, ಎಚ್‌.ಆರ್‌.ಹರ್ಷಿತ್‌- ಹಾಸನ ಇದ್ದಾರೆ. 

3600 ಕೋಟಿ ವೆಚ್ಚದ ಶಿವಾಜಿ ಪ್ರತಿಮೆ ಯಾವ ನ್ಯಾಯ?
ಬೆಂಗಳೂರು:
ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಆದರೆ ಸರ್ಕಾರ ಅರಬ್ಬಿ ಸಮುದ್ರದಲ್ಲಿ 3600 ಕೋಟಿ ವೆಚ್ಚದಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸುತ್ತಿದೆ. ಇದು ಯಾವ ನ್ಯಾಯ ಎಂದು ವಿರೋಧ ಪಕ್ಷದ ಸದಸ್ಯರೊಬ್ಬರ ಪ್ರಶ್ನೆಗೆ ಆಡಳಿತ ಪಕ್ಷದ ಸಚಿವರು ಉತ್ತರಿಸಲು ಪೇಚಾಡಿದರು…!

ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದ ಸಚಿವರ ಬೆಂಬಲಕ್ಕೆ ಆಡಳಿತ ಪಕ್ಷದ ಇತರ ಸದಸ್ಯರಾರು ಬರಲಿಲ್ಲ. ಇದರಿಂದ ವಿರೋಧಿ ಮಿತ್ರರು ಮತ್ತೂಮ್ಮೆ ಪ್ರಶ್ನೆ ಕೇಳಬೇಕು ಎಂದು ಸಚಿವರು ಮನವಿ ಮಾಡಿಕೊಂಡ ಘಟನೆ ಸಂಸತ್‌ ಸದನದಲ್ಲಿ ಶುಕ್ರವಾರ ನಡೆಯಿತು. 

ಇದು ಶುಕ್ರವಾರ ಕಬ್ಬನ್‌ಪಾರ್ಕ್‌ನಲ್ಲಿರುವ ಸಚಿವಾಲಯ ಕ್ಲಬ್‌ನಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಯುವ ಸಂಸತ್‌ ಕಲಾಪದ ಅಣಕು ಪ್ರದರ್ಶನದಲ್ಲಿ ನಡೆದ ಸಂಗತಿ ಇದು. 

ನೋಟು ರದ್ದತಿಯಿಂದ ಸಾಮಾನ್ಯ ಜನರ ಮೇಲೆ ಆಗಿರುವ ಪರಿಣಾಮ, ನಗರದು ರಹಿತ ವ್ಯವಹಾರದ ಬಗ್ಗೆಯೇ ವಿರೋಧ ಪಕ್ಷದ ಅನೇಕ ಸದಸ್ಯರು ಪ್ರಶ್ನೆ ಕೇಳಿದರು. ಶಿಕ್ಷಣ ವ್ಯಾಪಾರೀಕರಣ, ಚುನಾವಣೆ ಗೆದ್ದರೂ ಸ್ವಿಸ್‌ ಬ್ಯಾಂಕ್‌ನಿಂದ ಕಪ್ಪುಹಣ ತರುವಲ್ಲಿ ವಿಫ‌ಲತೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮುಂತಾದ ವಿಚಾರಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರಶ್ನೆಗಳ ಸುರಿಮಳೆಗರೆದರು. ಇದಕ್ಕೆ ತಕ್ಕ ಉತ್ತರ ನೀಡುವಲ್ಲಿ ತಡಕಾಡುತ್ತಿದ್ದ ಆಡಳಿತ ಪಕ್ಷದ ಸಚಿವರು, ಸದಸ್ಯರ ಪೇಚಾಟ ಅಸಲಿ ಸಂಸತ್‌ ಕಲಾಪವನ್ನು ನೆನಪಿಸುತ್ತಿತ್ತು. 

ಆಡಳಿತ ಪಕ್ಷ ಮಂಡಿಸಿದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ತಿದ್ದುಪಡಿ ವಿಧೇಯಕಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಇದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಸಚಿವ ತನ್ವೀರ್‌ ಸೇಠ್, ಸಭಾಪತಿ ಶಂಕರಮೂರ್ತಿ ಅವರ ಮೆಚ್ಚುಗೆಗೂ ಪಾತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next