Advertisement

Rajya Sabha; 3 ರಾಜ್ಯಗಳ 15 ಸ್ಥಾನಗಳಿಗೆ ಇಂದು ಚುನಾವಣೆ

11:49 PM Feb 26, 2024 | Team Udayavani |

ಹೊಸದಿಲ್ಲಿ: ರಾಜ್ಯಸಭೆಯ 56 ಸ್ಥಾನಗಳ ಪೈಕಿ 41 ನಾಯಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಮಂಗಳವಾರ ಉಳಿದ 15 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.

Advertisement

ಈ 15 ಸ್ಥಾನಗಳು ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ್ದಾಗಿವೆ. ಉತ್ತರಪ್ರದೇಶದಲ್ಲಿ 10 ಸ್ಥಾನಗಳಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್‌ಪಿ ತನ್ನ 3 ಅಭ್ಯರ್ಥಿಗಳನ್ನು (ಜಯಾ ಬಚ್ಚನ್‌, ರಾಮ್‌ಜಿಲಾಲ್‌ ಸುಮನ್‌, ಅಲೋಕ್‌ ರಂಜನ್‌) ಮರುನಾಮ ನಿರ್ದೇಶನ ಮಾಡಿದೆ. ಇನ್ನು, ಬಿಜೆಪಿ 7ರ ಬದಲಾಗಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ವೇಳೆ ಬಿಜೆಪಿಯು 8ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುತ್ತಿದ್ದರೆ, ಉ.ಪ್ರದೇಶದ ಎಲ್ಲ 10 ರಾಜ್ಯಸಭಾ ಸ್ಥಾನಗಳ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ, ಪ್ರತೀ ಅಭ್ಯರ್ಥಿಯು ಸುಮಾರು 37 ಪ್ರಥಮ ಆದ್ಯತೆಯ ಮತಗಳನ್ನು ಗಳಿಸಬೇಕಾಗುತ್ತದೆ.

ಇನ್ನು, ಹಿಮಾಚಲ ಪ್ರದೇಶದಲ್ಲಿ ಇರುವ ಒಂದೇ ಒಂದು ರಾಜ್ಯಸಭಾ ಸೀಟಿಗೆ ಬಿಜೆಪಿಯು ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ವಿರುದ್ಧ ಹರ್ಷ್‌ ಮಹಾಜನ್‌ರನ್ನು ಕಣಕ್ಕಿಳಿಸಿದೆ. ತನ್ನ ಅಭ್ಯರ್ಥಿಯ ಗೆಲುವಿಗೆ ಸಾಕಷ್ಟು ಮತಗಳು ಇಲ್ಲದಿದ್ದರೂ ಬಿಜೆಪಿ ಈ ಸಾಹಸಕ್ಕೆ ಕೈಹಾಕಿದೆ. ಹಿಮಾಚಲದಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ 40 ಶಾಸಕರನ್ನು ಹೊಂದಿದೆ. ಇದೇ ವೇಳೆ, ಕರ್ನಾಟಕದ 4 ಸ್ಥಾನಗಳಿಗೂ ಮಂಗಳವಾರ ಚುನಾವಣೆ
ನಡೆಯಲಿದೆ.

ಅವಿರೋಧ ಆಯ್ಕೆ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಶೋಕ್‌ ಚವಾಣ್‌, ಕೇಂದ್ರ ಸಚಿವರಾದ ಅಶ್ವಿ‌ನಿ ವೈಷ್ಣವ್‌, ಎಲ್‌. ಮುರುಗನ್‌ ಸೇರಿದಂತೆ ಒಟ್ಟು 41 ನಾಯಕರು ಅವಿರೋಧವಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಈ ಪೈಕಿ ಬಿಜೆಪಿಯ 20 ಮಂದಿಯಿದ್ದರೆ, ಕಾಂಗ್ರೆಸ್‌ನ 6, ಟಿಎಂಸಿಯ 4, ವೈಎಸ್‌ಆರ್‌ ಕಾಂಗ್ರೆಸ್‌ನ 3, ಆರ್‌ಜೆಡಿ, ಬಿಜೆಡಿಯ ತಲಾ ಇಬ್ಬರು, ಎನ್‌ಸಿಪಿ, ಶಿವಸೇನೆ, ಬಿಆರ್‌ಎಸ್‌ ಮತ್ತು ಜೆಡಿಯು ಪಕ್ಷದ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next