Advertisement

ಚುನಾವಣ ಕರ್ತವ್ಯ: ಒಂದೂವರೆ ಲಕ್ಷ ಮಂದಿ ಭದ್ರತಾ ಸಿಬಂದಿ ನಿಯೋಜನೆ

10:55 PM May 08, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಈ ಬಾರಿ ಒಂದೂವರೆ ಲಕ್ಷ ಮಂದಿ ಭದ್ರತಾ ಸಿಬಂದಿಯನ್ನು ನಿಯೋಜಿಸಿದೆ.

Advertisement

ಚುನಾವಣ ಕರ್ತವ್ಯಕ್ಕಾಗಿ 304 ಡಿವೈಎಸ್ಪಿ ಗಳು, 991 ಇನ್‌ಸ್ಪೆಕ್ಟರ್‌ಗಳು, 2610 ಪಿಎಸ್‌ಐ, 5,803 ಎಎಸ್‌ಐ, 46,421 ಕಾನ್‌ಸ್ಟೆಬಲ್‌/ಹೆಡ್‌ಕಾನ್‌ಸ್ಟೆಬಲ್‌ಗ‌ಳು, 27,990 ಗೃಹ ರಕ್ಷಕಗಳ ಸಿಬಂದಿ ಸಹಿತ ಒಟ್ಟು 84,119 ಪೊಲೀಸ್‌ ಅಧಿಕಾರಿ-ಸಿಬಂದಿಯನ್ನು ನಿಯೋ ಜಿಸಲಾಗಿದೆ. ಅಲ್ಲದೆ, ಹೆಚ್ಚುವರಿ ಭದ್ರತೆ ಅಗತ್ಯ ಇರುವುದರಿಂದ ಅಧಿಕಾರಿ/ಸಿಬಂದಿ ಸರಿದೂಗಿಸುವ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಸುಮಾರು 8,500 ಪೊಲೀಸ್‌ ಅಧಿಕಾರಿ/ಸಿಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣ ಕರ್ತವ್ಯಕ್ಕೆ ಎರವಲು ಪಡೆಯಲಾಗಿದೆ. ಇದೇ ವೇಳೆ ಕೇಂದ್ರ ಭದ್ರತಾ ಪಡೆ ಸಿಬಂದಿಯೂ ಆಗಮಿಸಲಿದ್ದು, 650 ಸಿಎಪಿಎಫ್ ಕಂಪೆನಿಗಳ ಜತೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆ ಕೂಡ ಕರ್ತವ್ಯ ನಿರ್ವಹಿಸಲಿವೆ.ಒಟ್ಟಾರೆ ಮತದಾನದ ದಿನ 1.56 ಲಕ್ಷ ಅಧಿಕಾರಿ/ಸಿಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.

ಮತಗಟ್ಟಣೆಗಳ ನಿರ್ವಹಣೆ
ರಾಜ್ಯದಲ್ಲಿ 58,282 ಮತಗಟ್ಟೆಗಳಿದ್ದು, ಈ ಪೈಕಿ 11,617 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಅನುಗುಣವಾಗಿ ಸೂಕ್ಷ್ಮ ಮತಗಟ್ಟೆಗಳಿಗೆ ಪೊಲೀಸ್‌ ಸಿಬಂದಿ ಜತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪೆನಿ ಗಳ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

2,930 ಸೆಕ್ಟರ್‌ ಮೊಬೈಲ್ಸ್‌ ಕಾರ್ಯಾಚರಣೆಯಲ್ಲಿದ್ದು, ಒಂದೊಂದು ಸೆಕ್ಟರ್‌ ಮೊಬೈಲ್ಸ್‌ಗೆ 20 ಬೂತ್‌ಗಳನ್ನು ನಿಗದಿಪಡಿಸಲಾಗಿದ್ದು, ಪಿಎಸ್‌ಐ ಅಥವಾ ಎಎಸ್‌ಐ ದರ್ಜೆಯ ಅಧಿಕಾರಿ ಸಿಬಂದಿಯನ್ನು ನೇಮಿಸಿ ನಿರಂತರ ಗಸ್ತನ್ನು ಕೈಗೊಳ್ಳಲಾಗುತ್ತಿದೆ. ಸೆಕ್ಟರ್‌ಗಳ ಮೇಲ್ವಿಚಾರಣೆಗಾಗಿ 749 ಮೇಲ್ವಿಚಾರಣ ಮೊಬೈಲ್ಸ್‌ಯಿದ್ದು, ಅವುಗಳ ಉಸ್ತುವಾರಿಗಾಗಿ ಒಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಯನ್ನು ನೇಮಿಸಲಾಗಿದೆ. ಈ ಅಧಿಕಾರಿ 4 ಸೆಕ್ಟರ್‌ ಮೊಬೈಲ್ಸ್‌ನ ಮೇಲ್ವಿಚಾರಣೆ ವಹಿಸಲಿದ್ದಾರೆ. ಡಿವೈಎಸ್ಪಿ ದರ್ಜೆಯ ಅಧಿಕಾರಿ ಉಸ್ತುವಾರಿಯಲ್ಲಿ 236 ಉಪವಿಭಾಗೀಯ ಮೊಬೈಲ್ಸ್‌ ಇದ್ದು, ಸಹಜವಾಗಿ ಒಂದು ಮೊಬೈಲ್ಸ್‌ನಿಂದ ಒಂದು ವಿಧಾನಸಭಾ ಕ್ಷೇತ್ರವನ್ನು ನಿರ್ವಹಿಸಲಾಗುತ್ತದೆ.ಮತದಾನ ದಿನ ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಮತ್ತು ಚುನಾವಣ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ 700ಕ್ಕೂ ಹೆಚ್ಚು ವಿಚಕ್ಷಣ ದಳಗಳನ್ನು ನೇಮಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನೊಳಗೊಂಡಂತೆ ಅಂತಾರಾಜ್ಯ ಮತ್ತು ಅಂತರ್‌ ಜಿಲ್ಲಾ ಗಡಿಭಾಗದಲ್ಲಿ ಸುಮಾರು 700ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ ಗಳನ್ನು ತೆರೆಯಲಾಗಿದೆ.

ಜಾಮೀನು ರಹಿತ ವಾರೆಂಟ್‌
ಕಳೆದ ಆರು ತಿಂಗಳಿನಿಂದ ಜಾರಿಯಾಗದೆ ಇರುವ 5,500 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿ ಮಾಡಲಾಗಿದೆ. ಮೂರು ತಿಂಗಳಲ್ಲಿ ಒಟ್ಟು 24,959 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 30,418 ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ಸನ್ನಡತೆ ಆಧಾರದ ಮೇಲೆ 53,406 ವ್ಯಕ್ತಿಗಳನ್ನು ಬಾಂಡ್‌ ಒವರ್‌ ಮಾಡಲಾಗಿದೆ. ಭದ್ರತಾ ಪ್ರಕರಣಗಳನ್ನು ಉಲ್ಲಂ ಸಿದ 115 ಪ್ರಕರಣಗಳಲ್ಲಿ 1,57 ಕೋಟಿ ರೂ. ಮೌಲ್ಯದ ಆಸ್ತಿ ಅಥವಾ ನಗದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ವೇಳೆ ರಾಜ್ಯದ್ಯಂತ 714 ಮಂದಿಯನ್ನು ಗಡೀಪಾರು ಮಾಡಲಾಗಿದೆ. 68 ಮಂದಿ ಹವ್ಯಾಸಿ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Advertisement

ಸಿಎಪಿಎಫ್ ನಿಯೋಜನೆ
ಚುನಾವಣ ಕರ್ತವ್ಯಕ್ಕಾಗಿ 650 ಸಿಎಪಿಎಫ್ ಕಂಪೆನಿಗಳಲ್ಲಿ 101 ಸಿಆರ್‌ಪಿಎಫ್, 108 ಬಿಎಸ್‌ಎಫ್, 75 ಸಿಐಎಸ್‌ಎಫ್, 70 ಐಟಿಬಿಪಿ, 75 ಎಸ್‌ಎಸ್‌ಬಿ, 35 ಆರ್‌ಪಿಎಫ್ ಮತ್ತು 186 ಎಸ್‌ಎಪಿ ಕಂಪೆನಿಗಳಿದ್ದು, ಅವುಗಳನ್ನು ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿಸಲಾಗಿದೆ.

ಸ್ಟ್ರೈಕಿಂಗ್‌ ಪಾರ್ಟಿಗಳು
ಕಾನೂನು, ಸುವ್ಯವಸ್ಥೆ ಹಾಗೂ ಶಾಂತಿಯುತ ಮತದಾನಕ್ಕಾಗಿ 650 ಸಿಎಪಿಎಫ್ ಕಂಪೆನಿಗಳ ಜತೆಗೆ 224 ವಿಧಾನಸಭಾ ಕ್ಷೇತ್ರಗಳಿಗೆ 224 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸ ಲಾಗಿದೆ. ಹೆಚ್ಚುವರಿಯಾಗಿ ಜಿಲ್ಲಾ/ನಗರ ಸಶಸ್ತ್ರ ಪಡೆಗಳು ಸೇರಿ ಮತದಾನ ದಿನ 890 ಸ್ಟ್ರೈಕಿಂಗ್‌ ಪಾರ್ಟಿಗಳು ಚುನಾವಣ ಬಂದೋಬಸ್ತ್ ಕಾರ್ಯವನ್ನು ನಿರ್ವಹಿಸಲಿವೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಅಂತಾರಾಜ್ಯ ಗಡಿಭಾಗಗಳ ಸಮನ್ವಯ ಸಭೆ
ರಾಜ್ಯದ ಗಡಿಭಾಗದಲ್ಲಿ ಶಾಂತಿ, ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಐಜಿಪಿ, ಎಸ್ಪಿ, ಡಿಸಿ ಹಾಗೂ ಇತರ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಅಂತಾರಾಜ್ಯ ಗಡಿಭಾಗ ಜಿಲ್ಲೆಯ ಅಧಿಕಾರಿಗಳೊಂದಿಗೆ 50ಕ್ಕೂ ಹೆಚ್ಚು ಸಮನ್ವಯ ಸಭೆ ನಡೆಸಿದೆ. ಚುನಾವಣೆ ವೇಳೆ ನೆರೆ ರಾಜ್ಯಗಳಿಂದ ಅಕ್ರಮವಾಗಿ ಹಣ, ಮದ್ಯ, ಉಚಿತ ವಸ್ತುಗಳು, ರೌಡಿಗಳು ಅಥವಾ ಸಮಾಜಘಾತಕ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸಲಾಗಿದೆ. ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಹೊರ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪೊಲೀಸರು ಕೂಡ ತಮ್ಮ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next