Advertisement

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

12:46 AM Mar 23, 2021 | Team Udayavani |

ಅರವಕುರುಚಿ ಊರು ಮೊನ್ನೆವರೆಗೂ ಪ್ರಸಿದ್ಧವಾದದ್ದು ನುಗ್ಗೇಕಾಯಿಗಳ ಮೂಲಕ. ತಮಿಳುನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನುಗ್ಗೇಕಾಯಿ ಬೆಳೆಯುವ ಊರುಗಳಲ್ಲಿ ಇದು ಪ್ರಮುಖವಾದುದು.

Advertisement

ಅರವಕುರುಚಿ ಪ್ರದೇಶ ಒಳಗೊಂಡಂತೆ ಸುತ್ತಮುತ್ತಲಿನ ಸುಮಾರು 40 ಸಾವಿರ ಎಕ್ರೆ ಪ್ರದೇಶದಲ್ಲಿ ನುಗ್ಗೇಕಾಯಿ ಬೆಳೆಯಲಾಗುತ್ತದೆ. ಆದರೆ ಈಗ ಚರ್ಚೆಗೆ ಬಂದಿರುವುದು ಮಾಜಿ ಪೊಲೀಸ್‌ ಅಧಿಕಾರಿ ಕೆ. ಅಣ್ಣಾಮಲೈ ಅವರ ಸ್ಪರ್ಧೆಯಿಂದ. ಬಿಜೆಪಿ ಅಭ್ಯರ್ಥಿಯಾಗಿ ಕುಪ್ಪುಸ್ವಾಮಿ ಅಣ್ಣಾಮಲೈ ಉಮೇದುವಾರಿಕೆ ಘೋಷಿಸಿದ್ದಾರೆ. ಮಿತ್ರ ಪಕ್ಷ ಎಐಎಎಡಿಎಂಕೆ ಬಿಟ್ಟು ಕೊಟ್ಟ ಕ್ಷೇತ್ರವಿದು. ಡಿ.ಎಂ.ಕೆ ಯಿಂದ ಆರ್‌ ಇಳಂಗೋ ಪ್ರತಿಸ್ಫರ್ಧಿ. ತಮಿಳುನಾಡಿನ ಕರೂರು ಲೋಕಸಭಾ ಕ್ಷೇತ್ರದ ಒಂದು ವಿಧಾನಸಭಾ ಕ್ಷೇತ್ರ. ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರಿಗೆ ಗೆಲ್ಲುವ ಹಂಬಲ. ಈ ಕ್ಷೇತ್ರದ ಇತಿಹಾಸ ಕೆದಕಿದರೆ, 1980 ರ ನಂತರ ಇದು ಪ್ರಾದೇಶಿಕ ಪಕ್ಷಗಳ ಕೋಟೆ. ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನೊಳಗೊಂಡ ಮೈತ್ರಿಕೂಟ ಪ್ರಯೋಗ ನಡೆದರೂ ಇದುವರೆಗೆ ಎರಡೂ ಪ್ರಧಾನ ಪ್ರಾದೇಶಿಕ ಪಕ್ಷಗಳು (ಎಐಎಡಿಎಂಕೆ ಹಾಗೂ ಡಿಎಂಕೆ) ಕ್ಷೇತ್ರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡಿದ್ದವು. ಶೇ. 65 ಕ್ಕೂ ಹೆಚ್ಚು ಜನಸಂಖ್ಯೆ ಗ್ರಾಮೀಣ ಪ್ರದೇಶದವರಾದರೆ, ಉಳಿದದ್ದು ನಗರ ಪ್ರದೇಶದವರು. ಈ ಕ್ಷೇತ್ರದಲ್ಲಿ ಉದ್ಯಮ, ಕೈಗಾರಿಕೆಗಳು ಕಡಿಮೆ. ಜನರೆಲ್ಲಾ ಪ್ರಾದೇಶಿಕ ಪಕ್ಷಗಳತ್ತ ಒಲವು ಹೊಂದಿದವರು. ಆ ದೃಷ್ಟಿಯಲ್ಲಿ ಮೊದಲ ಬಾರಿಗೆ (1980ರ ಬಳಿಕ) ರಾಷ್ಟೀಯ ಪಕ್ಷ ಸ್ಪರ್ಧಿಸಿದೆ. ಪ್ರಾದೇಶಿಕ ಪಕ್ಷದತ್ತ ಚಿತ್ತ ಹರಿಸಿರುವ ಮತದಾರರನ್ನು ರಾಷ್ಟ್ರೀಯ ಪಕ್ಷದತ್ತ ಸೆಳೆಯುವುದು ಮೊದಲನೇ ಸವಾಲು.

ಈ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಂತೆ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕರೂರು ಲೋಕಸಭಾ ಕ್ಷೇತ್ರವೀಗ ಇರುವುದು ಸದ್ಯಕ್ಕೆ ಕಾಂಗ್ರೆಸ್‌ ಕೈಯಲ್ಲಿ. ಆರೂ ವಿಧಾನಸಭಾ ಕ್ಷೇತ್ರಗಳು ಎಐಎಡಿಎಂಕೆ ಕೈಯಲ್ಲಿತ್ತು. ಆದರೆ, 2019 ರ ಉಪ ಚುನಾವಣೆಯಲ್ಲಿ ಡಿಎಂಕೆ ಸೆಂಥಿಲ್‌ ಬಾಲಾಜಿ ಅರುವಕುರುಚಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಹಾಗೆ ನೋಡುವುದಾದರೆ, 2011 ಹಾಗೂ 2016 ರಲ್ಲಿ ಎಐಎಡಿಎಂಕೆ ಇಲ್ಲಿಂದ ಗೆದ್ದಿತ್ತು. ಈಗ ಡಿಎಂಕೆಯಲ್ಲಿರುವ ಸೆಂಥಿಲ್‌ ಬಾಲಾಜಿ ಸಹ ಎಐಎಡಿಎಂಕೆ ಪಕ್ಷದವರೇ. 2016ರಲ್ಲೂ ಎಐಎಡಿಎಂಕೆಯಿಂದಲೇ ಗೆದ್ದಿದ್ದರು. ಮಾಜಿ ಸಿಎಂ ದಿ| ಜಯಲಲಿತಾರ ಆಪ್ತ ಸಚಿವರಲ್ಲಿ ಇವರೂ ಒಬ್ಬರಾಗಿದ್ದವರು. ಸಾರಿಗೆ ಖಾತೆಯನ್ನೂ ನಿರ್ವಹಿಸಿದ್ದರು. ಜಯಲಲಿತಾ ನಿಧನರಾದ ಬಳಿಕ ಸರಕಾರ ಉಳಿಸುವಲ್ಲಿ ಬಹಳ ಶ್ರಮವಹಿಸಿದ್ದ ಸೆಂಥಿಲ್‌ ಬಾಲಾಜಿ, ಬಳಿಕ ಗುರುತಿಸಿಕೊಂಡಿದ್ದು ಟಿ.ಟಿ.ವಿ. ದಿನಕರನ್‌ ಬಣದಲ್ಲಿ .

2017ರಲ್ಲಿ ಈಗಿನ ಸಿಎಂ ಇ. ಪಳನಿಸ್ವಾಮಿಯನ್ನು ಬದಲಾಯಿಸುವಂತೆ ಆಗ್ರಹಿಸಿ ಸೆಂಥಿಲ್‌ ಬಾಲಾಜಿ ಸಹಿತ 18 ಮಂದಿ ಎಐಎಡಿಎಂಕೆ ಶಾಸಕರು (ಟಿ.ಟಿ.ವಿ. ದಿನಕರನ್‌ ಬಣ) ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆಗ ಸ್ಪೀಕರ್‌ ಅವರೆಲ್ಲರನ್ನೂ ಅನ ರ್ಹಗೊಳಿಸಿದ್ದರು. ಆ ಸಂದರ್ಭ ಸೆಂಥಿಲ್‌ ಬಾಲಾಜಿ ಸದಸ್ಯತ್ವ ಕಳೆದುಕೊಂಡಿದ್ದರು. ಬಳಿಕ ಡಿಎಂಕೆ ಸೇರಿ ಅರುವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಣ್ಣಾಮಲೈಗೆ ಒಂದು ಅನು ಕೂಲವೆಂದರೆ, ಈ ಬಾರಿ ಇದೇ ಸೆಂಥಿಲ್‌ ಬಾಲಾಜಿ ಕರೂರು ವಿಧಾನಸಭೆ ಕ್ಷೇತ್ರದ ಡಿಎಂಕೆ ಅಭ್ಯರ್ಥಿ.

ಲೋಕಸಭಾ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಕಾಂಗ್ರೆಸ್‌ ಮತ್ತು ಡಿಎಂಕೆಯ ಯಪಿಎ ಮೈತ್ರಿಕೂಟ ತನ್ನ ಪ್ರಭಾವ ಬಳಸಿದರೆ ಡಿಎಂಕೆ ಅಭ್ಯರ್ಥಿ ಆರ್‌. ಇಳಂಗೋವಿಗೆ ಅನುಕೂಲವಾದೀತು. ಜತೆಗೆ ಇಳಂಗೋ ಸ್ಥಳೀಯ ಅಭ್ಯರ್ಥಿ. ಕೆ. ಅಣ್ಣಾಮಲೈ ಅವರದ್ದು ಕರೂರು. ಇಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎಂಬ ಲೆಕ್ಕಾಚಾರ ಆರಂಭವಾಗದು ಎಂಬುದು ಬಿಜೆಪಿ ಲೆಕ್ಕಾಚಾರ.

Advertisement

ಇನ್ನೊಂದು ನೆಲೆಯಲ್ಲಿ ಕಾಣುವುದಾದರೆ, ಐದೂ ವಿಧಾನಸಭಾ ಕ್ಷೇತ್ರಗಳು ಎಐಎಡಿಎಂಕೆ ಕೈಯಲ್ಲಿವೆ. ಆದರೆ ಆಡಳಿತ ವಿರೋಧಿ ಅಲೆ ಪ್ರಬಲಗೊಂಡರೆ ಬಿಜೆಪಿಗೆ ತುಸು ಕಷ್ಟ. ಒಟ್ಟು 2. 15 ಲಕ್ಷ ದಷ್ಟು ಮತದಾ ರರನ್ನು ಹೊಂದಿರುವ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ತುಸು ಹೆಚ್ಚು. ಸುಮಾರು 35 ಸಾವಿರ ಮುಸ್ಲಿಂ ಸಮುದಾಯದ ಮತಗಳ ಮೇಲೆಯೇ ಎಲ್ಲರ ಕಣ್ಣು.
ಇಷ್ಟೆಲ್ಲದರ ಮಧ್ಯೆ ಕೆ. ಅಣ್ಣಾಮಲೈ ಸೆಣಸುತ್ತಿದ್ದಾರೆ. ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತಿತರರು ಅಣ್ಣಾಮಲೈ ಪರ ಪ್ರಚಾರ ನಿರತರಾಗಿದ್ದಾರೆ. ಸವಾಲು ಗಳೇ ಅವಕಾಶವನ್ನು ಸೃಷ್ಟಿಸುತ್ತವೆ ಎಂಬ ಮಾತು ಇಲ್ಲಿ ಅನ್ವಯವಾಗುವುದೋ ಕಾದು ನೋಡಬೇಕು.

– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next