Advertisement

Eid Milad: ರ್‍ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

12:57 AM Sep 16, 2024 | Team Udayavani |

ಬಂಟ್ವಾಳ: ಮಿಲಾದ್‌ ರ್‍ಯಾಲಿಗೆ ಸಂಬಂಧಿಸಿದ ಹೇಳಿಕೆ, ಪ್ರತಿ ಹೇಳಿಕೆ, ಸವಾಲಿನ ಸಂದೇಶಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರ್‍ಯಾಲಿ-ಪ್ರತಿ ರ್‍ಯಾಲಿ ನಡೆಸುವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್‌  ಮೆಸೇಜ್‌ ಮತ್ತು ಚಾಟ್‌ಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉನ್ನತ ಪೊಲೀಸ್‌ ಅಧಿಕಾರಿಗಳು ಬಿ.ಸಿ.ರೋಡ್‌ಗೆ ಆಗಮಿಸಿದ್ದಾರೆ. ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುವ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಶರೀಫ್ ಹಾಗೂ ಪುರಸಭಾ ಸದಸ್ಯ ಹಸೈನಾರ್‌ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಾಲಿನ ಸಂದೇಶ ವೈರಲ್‌
ಈದ್‌ ಮಿಲಾದ್‌ ರ್‍ಯಾಲಿಯ ಮೇಲೆ ದಾಳಿ ಮಾಡಿದರೆ ಏನಾಗಬಹುದು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಅವರು ಸವಾಲು ಹಾಕಿರುವ ವಾಯ್ಸ್‌ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಸೆ. 16ರಂದು ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯುವ ಮಿಲಾದ್‌ ರ್‍ಯಾಲಿ ಸಂದರ್ಭ ಬಂದು ನಿಲ್ಲುವಂತೆ ಸವಾಲು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದು ವೈರಲ್‌ ಆಗಿದ್ದು, ಈ ಬಗ್ಗೆ ಹಿಂದೂ ನಾಯಕರು, ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಕೋಮು ಸೌಹಾರ್ದ ಹಾಳುಗೆಡುವುವ ಉದ್ದೇಶ ದಿಂದಲೇ ಈ ರೀತಿಯ ಸವಾಲಿನ ಆಡಿಯೋ ಸಂದೇಶ ಹಾಕಲಾಗಿದೆ ಎಂದು ಹಿಂದೂ ಸಂಘಟನೆಗಳು ದೂರಿವೆ.

ಕೋಮು ಪ್ರಚೋದನೆ ಹೇಳಿಕೆ: ಕಾನೂನು ಕ್ರಮಕ್ಕೆ ಶಾಸಕರ ಆಗ್ರಹ
ಹಿಂದೂ ಸಂಘಟನೆ ಮುಂದಾಳು ಶರಣ್‌ ಪಂಪ್‌ವೆಲ್‌ ಅವರ ಹೆಸರು ಉಲ್ಲೇಖಿಸಿ ಕೋಮು ಗಲಭೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಾಯ್ಸ್‌ ಮೆಸೇಜ್‌ ಹರಿಯ ಬಿಟ್ಟ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷರನ್ನು ಶೀಘ್ರ ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ರಾಜೇಶ್‌ ನಾಯ್ಕ್‌  ಉಳಿಪ್ಪಾಡಿಗುತ್ತು ಅವರು ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರನ್ನು ಆಗ್ರಹಿಸಿದ್ದಾರೆ.
ಮಾಜಿ ಪುರಸಭಾ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಓರ್ವ ರೌಡಿಶೀಟರ್‌ ಆಗಿದ್ದು, ಈಗ ಮತ್ತೆ ಬಿ.ಸಿ.ರೋಡಿನಲ್ಲಿ ಶಾಂತಿ ಕದಡುವ ರೀತಿ ಹೇಳಿಕೆ ನೀಡಿದ್ದಾನೆ ಎಂದವರು ಆರೋಪಿಸಿದ್ದಾರೆ.

ಈದ್‌ ಮಿಲಾದ್‌ ಮೆರವಣಿಗೆ ರದ್ದು ಮಾಡಿ: ಡಾ| ಭರತ್‌ ಶೆಟ್ಟಿ
ಕಾವೂರು: ಈದ್‌ ಮಿಲಾದ್‌ ಸಂದರ್ಭ ಈ ಬಾರಿ ಅಶಾಂತಿಯನ್ನು ಸೃಷ್ಟಿಸಲು ಮತಾಂಧರಿಂದ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದ್ದು, ಈದ್‌ ಮೆರವಣಿಗೆ ರದ್ದು ಮಾಡಿ ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಅಹಿತಕರ ಘಟನೆ ನಡೆಯುವಂತಾಗಲು ಕೆಲವರು ಸನ್ನಿವೇಶ ಸೃಷ್ಟಿಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಈದ್‌ ಮಿಲಾದ್‌ ಮೆರವಣಿಗೆ ರದ್ದು ಮಾಡಿ ತತ್‌ಕ್ಷಣ ಆದೇಶ ಹೊರಡಿಸಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next