Advertisement

ಶಿಕ್ಷಕರಿಗೇ ಮೊದಲು ನೈತಿಕ ಶಿಕ್ಷಣ ನೀಡಿ; ನಾಡಿನ ವಿವಿಧ ಧರ್ಮ ಗುರುಗಳ ಸಲಹೆ

10:23 PM Jan 09, 2023 | Shreeram Nayak |

ಬೆಂಗಳೂರು: ನೈತಿಕ ಶಿಕ್ಷಣ ನೀಡುವ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ, ಅದು ಬೋಧನೆಯಿಂದ ಅಲ್ಲ; ಆಚರಣೆಯಿಂದ ಬರುವಂತಹದ್ದಾಗಿದೆ. ಮಕ್ಕಳು ಅತಿ ಹೆಚ್ಚು ಸಮಯ ಕಳೆಯುವುದು ಶಾಲಾ ಶಿಕ್ಷಕರೊಂದಿಗೆ. ಹಾಗಾಗಿ, ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸುವ ಮುನ್ನ ಅದನ್ನು ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಬೇಕು.
– ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶಾಲಾ ಹಂತದಲ್ಲಿ “ನೈತಿಕ ಶಿಕ್ಷಣ’ದ ಬಗ್ಗೆ ವಿವಿಧ ಧರ್ಮ ಗುರುಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳನ್ನು ನಡೆಸುವವರ ಒಕ್ಕೊರಲ ಅಭಿಪ್ರಾಯ ಇದು.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಮ್ಮಿಕೊಂಡಿದ್ದ ದುಂಡುಮೇಜಿನ ಸಮಾಲೋಚನಾ ಸಭೆಯಲ್ಲಿ 20ಕ್ಕೂ ಅಧಿಕ ಧರ್ಮ ಗುರುಗಳು, ಶಿಕ್ಷಣ ತಜ್ಞರು, ಶಾಸಕರು, ಸಚಿವರು, ಮಾಜಿ ಶಾಸಕರು ಭಾಗವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, “ಮೌಲ್ಯಾಧಾರಿತ ಶಿಕ್ಷಣವನ್ನು ಆದಷ್ಟು ಬೇಗ ತರಬೇಕಾಗಿದೆ. ಧರ್ಮಗುರುಗಳು, ಶಿಕ್ಷಣ ತಜ್ಞರ ಎಲ್ಲ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು. ಸಾಧ್ಯವಾದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೈತಿಕ ಶಿಕ್ಷಣ ಅಳವಡಿಸುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಅನುಷ್ಠಾನ ಸಮಿತಿಯನ್ನೂ ರಚಿಸಲಾಗುತ್ತಿದೆ’ ಎಂದು ತಿಳಿಸಿದರು.

ಗಣ್ಯರು ಹೇಳಿದ್ದೇನು?
ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸುತ್ತೂರು
ನೈತಿಕತೆಯು ಹೇಳುವುದರಿಂದ ಆಚರಣೆಗೆ ಬರುವಂತಹದ್ದಲ್ಲ; ವ್ಯಕ್ತಿಯ ಆಚರಣೆಯಿಂದ ಬರುವಂತಹದ್ದಾಗಿದೆ. ಈ ಹಿಂದೆ ಕತೆಗಳನ್ನು ಹೇಳುವ ಮೂಲಕ ನೈತಿಕತೆ ಬೋಧಿಸಲಾಗುತ್ತಿತ್ತು. ಆದರೆ, ಇಂದು ಮೊಬೈಲ್‌ಗ‌ಳೇ ಜಗತ್ತಾಗಿದೆ. ಶಿಕ್ಷಕರು, ಪೋಷಕರಲ್ಲಿ ಮೊಚಲು ಬದಲಾವಣೆಗಳು ಬರಬೇಕಿದೆ.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ
ನೈತಿಕ ಶಿಕ್ಷಣ ನೀಡಬೇಕು ಎನ್ನುವುದರಲ್ಲಿ ಯಾವುದೇ ತಕರಾರು ಅಥವಾ ವಿರೋಧಗಳಿಲ್ಲ. ಮಕ್ಕಳಿಗೆ ಔದ್ಯೋಗಿಕ, ವ್ಯವಹಾರಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಅತ್ಯಗತ್ಯ. ಈಗ ಮೊದಲೆರಡು ತಕ್ಕಮಟ್ಟಿಗೆ ಸಿಗುತ್ತಿವೆ. ಆದರೆ, ಕೊನೆಯದ್ದು ಶೂನ್ಯ. ಈ ನಿಟ್ಟಿನಲ್ಲಿ ನೈತಿಕ ಶಿಕ್ಷಣ ಅವಶ್ಯಕ. ನೇರವಾಗಿ ಮಕ್ಕಳಿಗೆ ಕೊಡುವುದಲ್ಲ; ಮೊದಲು ಶಿಕ್ಷಕರಿಗೆ ನೀಡಬೇಕಿದೆ. ನಂತರ ಮಕ್ಕಳಿಗೆ ತಾನಾಗಿಯೇ ಅದು ವರ್ಗಾವಣೆ ಆಗುತ್ತದೆ.

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠ
ನಾವು ಮಕ್ಕಳಿಗೆ ಜವಾಬ್ದಾರಿಗಳನ್ನು ನೀಡಿಲ್ಲ. ಬರೀ ರ್‍ಯಾಂಕ್‌ ಗಳಿಸುವ ಯಂತ್ರಗಳನ್ನಾಗಿ ಮಾಡಿಬಿಟ್ಟಿದ್ದೇವೆ. ತನ್ನ ಬಗ್ಗೆ ತನಗಿರುವ ಜವಾಬ್ದಾರಿಯನ್ನು ಮಗುವಿಗೆ ಮನದಟ್ಟು ಮಾಡುವ ಕೆಲಸ ಮೊದಲು ಆಗಬೇಕು. ನಾಟಕಗಳ ಮೂಲಕ ನೈತಿಕ ಶಿಕ್ಷಣ ನೀಡಬೇಕು. ಇದರಿಂದ ಮಕ್ಕಳೇ ಪಾತ್ರಧಾರಿಗಳಾಗಿ ಆಹ್ವಾಹಿಸಿಕೊಳ್ಳುತ್ತಾರೆ. ಶಿಕ್ಷಕರು ಮತ್ತು ಪೋಷಕರಿಗೂ ನೈತಿಕ ಶಿಕ್ಷಣದ ಬೋಧನೆ ಆಗಬೇಕು.

Advertisement

ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಶತಮಾನಗಳಿಂದ ಬಂದ ನಮ್ಮ ನಾಡಿಗೆ ಒಂದು ವಿಶಿಷ್ಟ ಗುಣವಿದೆ. ಅದಕ್ಕೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕು. ಮನುಷ್ಯನಲ್ಲಿ ಪ್ರಜ್ಞೆ ಅರಳದ ವಿದ್ಯೆ ಇದ್ದರೆ ಏನು ಪ್ರಯೋಜನ? ಶಿಕ್ಷಕರಿಗೇ ಒಂದು ದೂರದೃಷ್ಟಿ ಇಲ್ಲದೆ ಹೋದರೆ ಏನು ಉಪಯೋಗ? ನೈತಿಕತೆ ಶಿಕ್ಷಕರಿಂದ ಮಕ್ಕಳಿಗೆ ವರ್ಗಾವಣೆ ಆಗಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆ ರೂಪಿಸಬೇಕು.

ಮಧುಸೂದನ್‌ ಸಾಯಿ, ಸತ್ಯಸಾಯಿ ಗ್ರಾಮ
ಮಕ್ಕಳಿಗೆ ಶಿಕ್ಷಕರು ಆದರ್ಶವಾಗಿರುತ್ತಾರೆ. ಅವರ ವರ್ತನೆಗಳು ಸಹಜವಾಗಿಯೇ ಪ್ರಭಾವ ಬೀರುತ್ತವೆ. ಅದೇ ರೀತಿ ಪೋಷಕರ ಪಾತ್ರವೂ ಈ ದಿಸೆಯಲ್ಲಿ ಪ್ರಮುಖವಾಗಿದೆ. ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಮೂವರ ಪಾಲ್ಗೊಳ್ಳುವಿಕೆಯಿಂದ ನೈತಿಕ ಶಿಕ್ಷಣದ ಅಳವಡಿಕೆ ಸಾಧ್ಯವಾಗಲಿದೆ.

ಶ್ರೀ ರವಿಶಂಕರ ಗುರೂಜಿ, ಆರ್ಟ್‌ ಆಫ್ ಲಿವಿಂಗ್‌
ಹಿರೋಯಿಸಂ ಎಂದರೆ ಉಗ್ರಸ್ವರೂಪ- ಹಿಂಸೆಯಾಗಿದೆ. ಆದರೆ, ನಿಜವಾದ ಹಿರೋಯಿಸಂ ಇರುವುದು ಶಾಂತಿ-ಸರಳತೆಯಲ್ಲಿ. ಇದನ್ನು ಮರುಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ದೊಡ್ಡದು. ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವ ಶಿಕ್ಷಕರಲ್ಲಿ ಅಂತಹ ವ್ಯಕ್ತಿತ್ವ ಇದೆಯೇ? ಈ ಸಂಬಂಧದ ತರಬೇತಿ ನೀಡಬೇಕು. ಸಂತೋಷದ ವಾತಾವರಣದಲ್ಲಿ ಮಕ್ಕಳು ಬೆಳೆಯುವಂತಾಗಬೇಕು.

ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠ
ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು ಮತ್ತು ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡಬೇಕು.ಆಹಾರಕ್ಕೂ ಮತ್ತು ಮನಸ್ಸಿಗೂ ವೈಜ್ಞಾನಿಕ ಸಂಬಂಧವಿದೆ. ಇದನ್ನು ಉಪನಿಷತ್ತುಗಳಲ್ಲಿ ಕೂಡ ಹೇಳಲಾಗಿದೆ. ಹಾಗಾಗಿ, ಮಕ್ಕಳಿಗೆ ನೀಡುವ ಕೆಲವು ಆಹಾರಗಳಿಂದ ಕೋಪ, ಆವೇಶ, ಉದ್ವೇಗಗಳನ್ನು ಬೆಳೆಯುತ್ತವೆ. ಹಾಗಾಗಿ, ಸಾತ್ವಿಕ ಸ್ವಭಾವಕ್ಕೆ ಸಾತ್ವಿಕ ಆಹಾರ ನೀಡಬೇಕು.

ಅಬ್ದುಲ್‌ ರಹೀಂ, ಗ್ಲೋಬಲ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷ
ನೈತಿಕತೆ ಎನ್ನುವುದು ಪುಸ್ತಕದಲ್ಲಿ ತರುವಂತಹದ್ದಲ್ಲ. ಅದು ಅಕಾಡೆಮಿಕ್‌ ಆಗಿರಬಾರದು. ವಿವಿಧ ಚಟುವಟಿಕೆಗಳ ಮೂಲಕ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಕೆ ಆಗುವಂತೆ ಮಾಡಬೇಕು. ಅಂದಹಾಗೆ ಅದು ಜಾಗತಿಕವಾಗಿ ಎಲ್ಲವನ್ನೂ ಒಳಗೊಳ್ಳುವಂತಿರಬೇಕು. ಇದಕ್ಕೆ ಅಂಕಗಳನ್ನೂ ನಿಗದಿಪಡಿಸಬೇಕು. ಮಕ್ಕಳು ಎಲ್ಲರೊಂದಿಗೆ ಬೆಳೆಯುವ ವಾತಾವರಣ ಇರಬೇಕು.

ರೆವರೆಂಡ್‌ ಡಾ.ಪೀಟರ್‌, ಮ್ಯಾಚಾಡೋ ಆರ್ಚ್‌ ಬಿಷಪ್‌
ಧರ್ಮಾತೀತವಾಗಿ ಮಕ್ಕಳಿಗೆ ಶಿಕ್ಷಣವನ್ನು ಕಲಿಸಬೇಕು. ಸಹಬಾಳ್ವೆ, ಅಹಿಂಸೆ, ಭಾತೃತ್ವದ ಬಗ್ಗೆ ಪಠ್ಯಕ್ರಮಗಳು ಇರಲಿ. ಶಿಕ್ಷಕರಿಗೆ ನೈತಿಕ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕಿರುವುದರಿಂದ ಬಿಇಡಿ ಕೋರ್ಸ್‌ಗಳಲ್ಲೇ ಇದನ್ನು ಅಳವಡಿಸಲಿ. ಜಾಗತಿಕ ಮತ್ತು ಸ್ಥಳೀಯ ಎರಡನ್ನೂ ಒಳಗೊಂಡ “ಗ್ಲೋಕಲ್‌ ಮೌಲ್ಯ’ಗಳನ್ನು ಪಠ್ಯದಲ್ಲಿ ಅಳವಡಿಸಬೇಕು.

ಸಭೆಯಲ್ಲಿ ಉಪಸ್ಥಿತರಿದ್ದವರು
ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್‌, ಎಂ.ಆರ್‌.ದೊರೆಸ್ವಾಮಿ, ಗುರುರಾಜ ಕರಜಗಿ, ಎಂ.ಕೆ.ಶ್ರೀಧರ್‌, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ, ಈಶ್ವರಾನಂದಪುರಿ ಸ್ವಾಮೀಜಿ, ಮೌಲಾನಾ ಅಬ್ದುಲ್‌ ರಶೀದ್‌, ತೇಜಸ್ವಿನಿ ಅನಂತಕುಮಾರ್‌, ನಾಗನೂರಿನ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ, ಭಾಲ್ಕಿ ಸಂಸ್ಥಾನ ಮಠದ ಗುರುಬಸವ ಪಟ್ಟದೇವರು, ಅಮೃತಾನಂದಮಯಿ ಮಠದ ಅಮೃತಗೀತಾನಂದಪುರಿ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ವೀರಶೈವ ವಿದ್ಯಾವರ್ಧಕ ಸಂಘದ ಗುರುಸಿದ್ಧ ಸ್ವಾಮೀಜಿ, ಹೊಸನಗರದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಜಿ, ಚಿನ್ಮಯ ಮಿಷನ್‌ನ ಶಾಂತಿ ಕೃಷ್ಣಮೂರ್ತಿ, ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯ, ರಾಮಚಂದ್ರಪುರದ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿ ಮತ್ತಿತರರು.

 

Advertisement

Udayavani is now on Telegram. Click here to join our channel and stay updated with the latest news.

Next