Advertisement

ಬದಲಾದ ಜೀವನಶೈಲಿ ಮನಸ್ಸು ಹದಗೆಡದಿರಲಿ

02:41 AM May 02, 2020 | Hari Prasad |

ದಿನ ಚರ್ಯೆಯಲ್ಲಿ ಎದುರಾಗಿರುವ ಹಠಾತ್‌ ಬದಲಾವಣೆ, ಭವಿಷ್ಯದ ಬಗ್ಗೆ ಆತಂಕ, ಒಂಟಿತನದಿಂದಾಗಿ ನಮ್ಮ ದೈಹಿಕ-ಮಾನಸಿಕ ಸ್ವಾಸ್ಥ್ಯದ ಮೇಲೆ ವ್ಯಾಪಕ ಪರಿಣಾಮ ಉಂಟಾಗುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

Advertisement

ದೇಶವು ಲಾಕ್ಡೌನ್‌ನಲ್ಲಿರುವ ಈ ದಿನಗಳಲ್ಲಿ ದೇಶವಾಸಿಗಳಲ್ಲಿ ನಕಾರಾತ್ಮಕ ಪರಿಣಾಮವು ಗೋಚರಿಸಲಾರಂಭಿಸಿದೆ. ಹಿರಿಯರೆಂದಷ್ಟೇ ಅಲ್ಲ, ಅವರಿಗಿಂತ ಅಧಿಕವಾಗಿ ಮಕ್ಕಳು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.

ಅವರೂ ದಿನವಿಡೀ ಮನೆಯಲ್ಲೇ ಇರುವಂತಾಗಿದೆ. ಶಾಲೆಗಳು ಬಂದ್‌ ಆಗಿವೆ, ಹೊರಗೆ ಆಟವಾಡಲು-ಗೆಳೆಯರನ್ನು ಭೇಟಿಯಾಗಲು ಅನುಮತಿಯಿಲ್ಲ.

ಈ ಕಾರಣಕ್ಕಾಗಿಯೇ ಮಕ್ಕಳು ಮನರಂಜನೆಗಾಗಿ ದಿನವಿಡೀ ಟಿ.ವಿ., ಇಂಟರ್ನೆಟ್‌, ಮೊಬೈಲ್‌ ಗೇಮ್‌ಗಳಿಗೆ ಜೋತುಬಿದ್ದಿದ್ದಾರೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ನ್ಯೂಸ್‌ ಚಾನೆಲ್‌ಗಳನ್ನು ನೋಡುತ್ತಿರುವುದರಿಂದಾಗಿ, ನಕಾರಾತ್ಮಕ ಸುದ್ದಿಗಳ ಋಣಾತ್ಮಕ ಪರಿಣಾಮವು ಮಕ್ಕಳ ಮೇಲೂ ಬೀಳಲಾರಂಭಿಸಿದೆ.

ಈ ಮುನ್ನವೇ ಮಕ್ಕಳ ಸ್ವಭಾವದ ಮೇಲೆ ಟೆಲಿವಿಷನ್‌ ಹಾಗೂ ಇಂಟರ್ನೆಟ್‌ನಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಬರಲಾಗಿತ್ತು. ಈಗ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

Advertisement

ಮನರಂಜನೆಯ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳಲ್ಲಿ ಕಿರಿಕಿರಿ, ಸಿಟ್ಟು, ಆತಂಕ, ಅನಿದ್ರೆಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇನ್ನು ಇವೇ ಲಕ್ಷಣಗಳೂ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲೂ ಕಾಣಿಸಲಾರಂಭಿಸಿದೆ.

ಆದಾಗ್ಯೂ ಅನೇಕ ಶಾಲೆಗಳು ಆನ್ಲೈನ್‌ ತರಗತಿಗಳನ್ನು ಆರಂಭಿಸಿವೆ. ಇದರಿಂದ ಮಕ್ಕಳ ಧ್ಯಾನ ವಿದ್ಯಾಭ್ಯಾಸದ ಕಡೆಗಾದರೂ ಸ್ವಲ್ಪ ಹೋಗುತ್ತಿದೆ. ಆದರೆ, ಈ ಸೌಲಭ್ಯ ಎಲ್ಲಾ ಮಕ್ಕಳಿಗೂ ಇಲ್ಲ. ಇದ್ದ ಮಕ್ಕಳಿಗೂ ಕೂಡ ಮನೆಯಲ್ಲಿ ತರಗತಿಯ ವಾತಾವರಣ ಸಿಗುವುದಿಲ್ಲ. ಇನ್ನು ಬೆಳಗ್ಗೆ ಎದ್ದು ಶಾಲೆಗೆ ಹೋಗುವ, ತಮ್ಮ ಗೆಳೆಯರ ಜತೆಗೆ ಆಟವಾಡುವ ಅವಕಾಶ ಇಲ್ಲವಾಗಿದೆ.

ಈಗ ಹಠಾತ್ತನೇ ನವ ಜೀವನಶೈಲಿಯು ಅವರಲ್ಲಿ ಸೃಷ್ಟಿಸಿರುವ ಈ ಅಭಾವವು ಅವರ ಮನಸ್ಸು ಮತ್ತು ಶರೀರದ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ. ತಡರಾತ್ರಿಯವರೆಗೆ ಮೊಬೈಲ್‌ ನೋಡುತ್ತಾ ಕೂಡುವುದರಿಂದಾಗಿ ಅವರ ನಿದ್ರಾ ಚಕ್ರದಲ್ಲಿ ಬೃಹತ್‌ ಬದಲಾವಣೆ ಆಗುತ್ತಿದ್ದು, ಇದು ಖಂಡಿತ ಒಳ್ಳೆಯದಲ್ಲ.

ಇದು ಮಕ್ಕಳಿಗಷ್ಟೇ ಅನ್ವಯವಾಗುವ ಮಾತಲ್ಲ. ಈಗ ಹಿರಿಯರೂ ಕೂಡ ಹಠಾತ್ತನೆ ಎದುರಾಗಿರುವ ಈ ಬದಲಾವಣೆಯಿಂದಾಗಿ ತತ್ತರಿಸಿದ್ದಾರೆ. ಸಹಜವಾಗಿಯೇ ಅವರಲ್ಲಿ ಭವಿಷ್ಯದ ಆತಂಕವೂ ಬಹಳ ಇರುತ್ತದೆ.

ಆದರೆ ಆತಂಕಪಡುತ್ತಾ ಕುಳಿತುಕೊಳ್ಳುವುದರಿಂದ, ನಿದ್ದೆಗೆಡುವುದರಿಂದ, ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಪೆಟ್ಟುಬೀಳುತ್ತಾ ಹೋಗುತ್ತದಷ್ಟೇ ಹೊರತು, ಪರಿಹಾರವಂತೂ ಸಿಗುವುದಿಲ್ಲ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ.

ಹೀಗಾಗಿ, ಮನೆಯಲ್ಲಿ ಪ್ರತಿಯೊಬ್ಬರೂ ಯೋಗ-ಧ್ಯಾನದಂಥ ಮನೋ – ದೈಹಿಕ ಶಕ್ತಿ ವೃದ್ಧಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು. ಫೋನ್‌ನ ಬಳಕೆಯನ್ನು ಆದಷ್ಟು ತಗ್ಗಿಸುವುದು ಹಾಗೂ ಒಂದು ದಿನಚರ್ಯೆಯನ್ನು ಕಟ್ಟುನಿಟ್ಟಾಗಿ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿ ಬದುಕುವುದು ಬಹಳ ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next