Advertisement

Edible Oil Mission: ಕರಾವಳಿಗರ ಕೈ ಹಿಡಿದೀತೇ ಎಣ್ಣೆ ತಾಳೆ

03:24 AM Oct 17, 2024 | Team Udayavani |

ಮಂಗಳೂರು: ರಾಷ್ಟ್ರೀಯ ಖಾದ್ಯ ತೈಲ ಮಿಷನ್‌ ಅಡಿಯಲ್ಲಿ ಕರಾವಳಿಯನ್ನು ತಾಳೆ ಬೆಳೆಗೆ ಕೇಂದ್ರ ಸರಕಾರ ಗುರುತಿಸಿದ್ದು, ಪೂರಕವಾಗಿ ಹತ್ತು ಹಲವು ರೀತಿಯ ಸಹಾಯಧನ, ನೆರವನ್ನೂ ತೋಟಗಾರಿಕೆ ಇಲಾಖೆ ಮೂಲಕ ನೀಡಲಿದೆ.

Advertisement

ಹಲವು ರೀತಿಯ ರೋಗಗಳಿಂದ ಕಂಗೆಟ್ಟಿರುವ ಅಡಿಕೆ ಬೆಳೆಗಾರರಿಗೆ ಪೂರಕವಾಗಬಲ್ಲ ತಾಳೆ ಬೆಳೆಗೆ ಸದ್ಯ ಉತ್ತಮ ಭವಿಷ್ಯ ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನವೂ ಪೂರಕವಾಗಿದೆ. ಆದ್ದರಿಂದ ಕರಾವಳಿಯಲ್ಲಿ ನಿಧಾನವಾಗಿ ತಾಳೆ ಬೆಳೆಗಾರರ ಸಂಖ್ಯೆ ಏರ ತೊಡಗಿದೆ. ಆದರೂ ಅಡಿಕೆ ಬೆಳೆಗೆ ಈ ಭಾಗದ ಜನ ಹೊಂದಿಕೊಂಡಿರುವುದು ಮತ್ತು ಸದ್ಯ ಅಡಿಕೆಗೆ ಅಧಿಕ ದರ ಇರುವುದರಿಂದ ನಿರೀಕ್ಷಿತ ವೇಗ ಪಡೆದಿಲ್ಲ. ಜನರು ಪರ್ಯಾಯ ಬೆಳೆ ಬೆಳೆಯದಿದ್ದರೆ ಮುಂದೆ ಸಮತೋಲನ ತಪ್ಪಬಹುದು. ಅಲ್ಲದೆ ಪರ್ಯಾಯ ಬೆಳೆದರೆ ಈಗ ಸಿಕ್ಕುವ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಬಹುದು ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಕರಾವಳಿಯ ಸ್ಥಿತಿಗತಿ
ಕರಾವಳಿಯಲ್ಲಿ 2010ರಲ್ಲಿ ತಾಳೆ ಬೆಳೆ ಪರಿ ಚಯಿಸಲ್ಪಟ್ಟಿತು. ಆರಂಭದಲ್ಲಿ ಅಡಿಕೆಯ ಹಳದಿ ಎಲೆ ರೋಗದಿಂದ ಬೇಸತ್ತ ಸುಳ್ಯ ಸಂಪಾಜೆ ಭಾಗದ ಕೆಲವು ರೈತರು ಆಯಿಲ್‌ ಪಾಮ್‌ ಬೆಳೆಯಲು ಮುಂದಾದರು. ಹಲವರು ಯಶಸ್ವಿಯಾದರು. ಕೆಲವರಿಗೆ ಅದರ ಕೆಲವು ಅನಾನುಕೂಲಗಳು ಇಷ್ಟವಾಗದೆ ಕೃಷಿ ಮುಂದುವರಿಸದ ಪ್ರಮೇಯವೂ ಇದೆ. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ 235 ಹೆಕ್ಟೇರ್‌ ಹಾಗೂ ಉಡುಪಿಯ 216 ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆ ತಾಳೆ ವ್ಯವಸಾಯ ನಡೆಯುತ್ತಿದೆ. ಉನಯ ಜಿಲ್ಲೆಗಳಲ್ಲಿ ವಾರ್ಷಿಕ 2,500 ಟನ್‌ ಉತ್ಪಾದನೆಯಾಗುತ್ತಿದೆ.

ನಾನು 2011 12ರಲ್ಲಿ ಎಣ್ಣೆ ತಾಳೆ ಗಿಡಗಳನ್ನು ಹಾಕಿದೆ, ಮೂರು ವರ್ಷದಲ್ಲಿ ಇಳುವರಿ ಆರಂಭವಾಗಿದೆ. ಈಗ ಎರಡನೇ ವರ್ಷದಲ್ಲಿ ಬೆಳೆ ಬಂದು ಕಟಾವಿಗೆ ಸಿದ್ಧಗೊಳ್ಳುವ ಹೈಬ್ರಿಡ್‌ ತಳಿಗಳೂ ಲಭ್ಯವಿವೆ. ಅಡಿಕೆಗೆ ಹೋಲಿಸಿದರೆ ತಾಳೆಗೆ ರೋಗ ಬಹಳ ಕಡಿಮೆ, ನಿರ್ವಹಣೆ ವೆಚ್ಚ ಕಡಿಮೆ. ಹಾಗೆಂದು ದರವೂ ಕಡಿಮೆ. ಆದರೆ ಇತರೆಲ್ಲಾ ತಲೆ ನೋವು ಇದರಲ್ಲಿ ಕಡಿಮೆ; ಹಾಗಾಗಿ ತಾಳೆ ಬೆಳೆಯೇ ಉತ್ತಮ ಎನ್ನುತ್ತಾರೆ ಪ್ರಶಸ್ತಿ ವಿಜೇತ ಕೃಷಿಕ ಕಮಲಶಿಲೆಯ ಮಹೇಶ್‌ ಭಟ್‌.

ದ.ಕ. ಜಿಲ್ಲೆಯಲ್ಲಿ ಮೊದಲು 2011ರ ಸುಮಾರಿಗೆ ತಾಳೆ ಬೆಳೆಯನ್ನು ಪರಿಚಯಿಸಿದವರು ಸುಳ್ಯದ ತೊಡಿಕಾನ ವಸಂತ ಭಟ್‌. ಪ್ರಸ್ತುತ ನಿಧನಹೊಂದಿದ್ದಾರೆ. ಪತ್ನಿ ಪ್ರೇಮಾ ಯಶಸ್ವಿಯಾಗಿ ವ್ಯವಸಾಯ ಮುಂದುವರಿಸಿದ್ದಾರೆ. ನನ್ನ ಪುತ್ರ ವಿದೇಶದಲ್ಲಿರುವುದು, ಇಲ್ಲಿ ನಾನೊಬ್ಬಳೇ ಇದ್ದರೂ ನಿರಾತಂಕವಾಗಿ 22 ಎಕ್ರೆ ಜಾಗದಲ್ಲಿ ತಾಳೆ ಬೆಳೆಸಿದ್ದೇವೆ, ಯಾವುದೇ ಕಷ್ಟವಾಗುವುದಿಲ್ಲ. ಒಬ್ಬ ಕಾರ್ಮಿಕನಷ್ಟೇ ಇರುವುದು ಎನ್ನುತ್ತಾರೆ ಪ್ರೇಮಾ.

Advertisement

ಎಣ್ಣೆ ತಾಳೆ ಸಂಸ್ಕರಣ ಘಟಕ ಸ್ಥಾಪನೆ ಗುರಿ
ಸದ್ಯ ಎರಡೂ ಜಿಲ್ಲೆಯಲ್ಲಿ 2,500 ಟನ್‌ ತಾಳೆ ಸಿಗುತ್ತಿದೆ, ಇದು 5,000 ಟನ್‌ ಆದರೆ ಸಂಸ್ಕರಣ ಘಟಕ ಸ್ಥಾಪಿಸುವ ಗುರಿಯನ್ನು ಬೆಳೆಗಾರರು ಹೊಂದಿದ್ದಾರೆ. ಸದ್ಯ ದ.ಕ., ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯ ರೈತರು ಸೇರಿಕೊಂಡು ಶ್ರೀಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರ ಸಂಘ ಸ್ಥಾಪಿಸಿದ್ದಾರೆ. ದ.ಕ. ಉಡುಪಿ ಜಿಲ್ಲೆಯಲ್ಲಿ ತಾಳೆ ಬೆಳೆ ಅಭಿವೃದ್ಧಿಗೆ ಗುರುತಿಸಿರುವ 3ಎಫ್‌ ಆಯಿಲ್‌ ಪಾಮ್‌ ಸಂಸ್ಥೆಯ ಜತೆ ಈ ಸೊಸೈಟಿಯವರು ಒಪ್ಪಂದ ಮಾಡಿಕೊಂಡಿದ್ದು, ನರ್ಸರಿ ಅಭಿವೃದ್ಧಿಗೂ ಯೋಜಿಸಿದ್ದೇವೆ ಎಂದು ಸಂಘದ ನಿರ್ದೇಶಕ ಯೋಗೀಶ್‌ ಭಟ್‌.

Advertisement

Udayavani is now on Telegram. Click here to join our channel and stay updated with the latest news.

Next