Advertisement

ಪೌರಾಣಿಕ ಹಬ್ಬವಾದ ಎಡನೀರು ಮೇಳದ ಸಪ್ತಾಹ 

12:30 AM Jan 25, 2019 | Team Udayavani |

ರಾಜಾಂಗಣದಲ್ಲಿ ನಡೆದ ಎಡನೀರು ಮೇಳದ ಯಕ್ಷಗಾನ ಸಪ್ತಾಹ ಅನೇಕ ಕಾರಣಗಳಿಂದ ಗಮನ ಸೆಳೆಯಿತು. ಮೇಳದ ಚಾಲನಾಶಕ್ತಿ, ಪ್ರೇರಣಾ ಶಕ್ತಿ, ಸ್ಫೂರ್ತಿ ಎಡನೀರು ಶ್ರೀಗಳಿಗೆ ಪರ್ಯಾಯ ಹಾಗೂ ಪೇಜಾವರ ಮಠಾಧೀಶರು ಮಾಡಿದ ಸಮ್ಮಾನ ಇದಕ್ಕೊಂದು ಗರಿಯಾಯಿತು. ಪ್ರತಿದಿನ ಒಂದಲ್ಲ ಒಂದು ಮಠದ ಶ್ರೀಗಳು ಯಕ್ಷಗಾನ ವೀಕ್ಷಣೆಗೆ ಸಾಕ್ಷಿಯಾಗುತ್ತಿದ್ದುದು ಕೂಡಾ ಕಲಾವಿದರಿಗೆ ಚೈತನ್ಯ ತುಂಬಿತ್ತು. 

Advertisement

ಎಡನೀರು ಮಠದ ವತಿಯಿಂದ ನಡೆಸಲ್ಪಡುತ್ತಿರುವ ಮೇಳದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ. ರಸರಾಗ ಚಕ್ರವರ್ತಿ ಎಂದೇ ನೆಗಳೆ¤ ಪಡೆದ ದಿನೇಶ ಅಮ್ಮಣ್ಣಾಯರು ಪ್ರತಿದಿನ ಮಾಧುರ್ಯಭರಿತ ಭಾಗವತಿಕೆ ಮೂಲಕ ಹೊಸ ಹೊಸ ಆಖ್ಯಾನಗಳ ಪ್ರದರ್ಶನಗಳು ಕಳೆಗಟ್ಟಲು ಕಾರಣರಾಗುತ್ತಿದ್ದರೆ ಅವರಿಗೆ ಸಾಥಿಯಾಗಿ ಹಿಮ್ಮೇಳದಲ್ಲಿ ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಾಗೂ ಲವ ಕುಮಾರ್‌ ಐಲ. ಜತೆಗೆ ಸಹಭಾಗವತರಾಗಿ ಪುತ್ತೂರು ರಮೇಶ ಭಟ್ಟರ ಸಾಂಪ್ರದಾಯಿಕ ಹಾಡುಗಳು. ಗಟ್ಟಿ ಹಿಮ್ಮೇಳ. ದೇಲಂತಮಜಲು ಅವರಂತಹ ಅನುಭವಿಗಳು ಅಮ್ಮಣ್ಣಾಯರ ಸಾಂಗತ್ಯದಲ್ಲಿ ಪ್ರಸಂಗವನ್ನು ಉಠಾವುಗೊಳಿಸಲು ಸಿದ್ಧರಾಗಿಸುವ ಪಕ್ವಭರಿತ ಕಲಾವಿದ. ಇವರ ಜತೆಗೆ ಲವ ಕುಮಾರ್‌ ಐಲ ಅವರ ಮದ್ದನದ ವಾದನ ಸುಖ ನಿಜವಾಗಿ ಒಟ್ಟು ಯಕ್ಷಗಾನದಲ್ಲಿ ಮೇಲ್ಮೆಯಾಗಿದೆ. ಮೃದಂಗ ಹಾಗೂ ತಬಲಾದ ನುಡಿಸಾಣಿಕೆಗಳನ್ನು ಬಲ್ಲ ಲವ ಕುಮಾರ್‌ ಅವರು ಮದ್ದಳೆಯನ್ನು ಸುಲಲಿತವಾಗಿ ನುಡಿಸುವ ಮೂಲಕ ವಾದನಸೌಖ್ಯವನ್ನು ಕೊಡುವ ಕಲಾವಿದರು ಎನ್ನುವುದು ಪ್ರತಿದಿನ ಆಖ್ಯಾನದಲ್ಲಿ ಸಾಬೀತು ಮಾಡುತ್ತಿದ್ದರು. ಅಮ್ಮಣ್ಣಾಯರ ಹಾಡಿಗೆ ಸಂವಾದಿಯಾಗಿದ್ದ ಅವರ ನುಡಿತ, ಗುಮ್ಕಿಗಳು ಒಟ್ಟು ದೃಶ್ಯಕ್ಕೊಂದು ಝೇಂಕಾರ ಕೊಡುತ್ತಿತ್ತು. ಹಾಡುಗಳನ್ನು ನಿಮಿಷಗಟ್ಟಲೆ ಉಲ್ಲಂ ಸದೇ ಚಿತ್ರಾಂಗದೆ ದೂತಿಯ ಸಂವಾದದ ಅಹುದೆ ಎನ್ನಯ ರಮಣದಂತಹ ಹಾಡು ಕೂಡಾ ಏಳು ನಿಮಿಷದಲ್ಲಿ ಮುಗಿಸುವ ಮೂಲಕ ಅಮ್ಮಣ್ಣಾಯರು ಯಕ್ಷಗಾನ ಪರಂಪರೆಯ ಪ್ರದರ್ಶನದಲ್ಲಿ ಇದಮಿತ್ಥಂ ಸಾಧ್ಯವಿದೆ ಎಂದು ಪ್ರದರ್ಶನ ಕೊಟ್ಟಿದ್ದರು. 

ಚಿತ್ರಾಂಗದೆಯಾಗಿ ಬಾಲಕೃಷ್ಣ ಸೀತಾಂಗೋಳಿ ಅವರ ಅಭಿನಯ, ಅಭಿಮನ್ಯುವಾಗಿ ಶಶಿಧರ ಕುಲಾಲ್‌ ಚೆನ್ನಾದ ನಿರ್ವಹಣೆ. ಅಮ್ಮಣ್ಣಾಯರ ಹಾಡುಗಳನ್ನೇ ಬೇಡುವ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಭಾಗವತರು ರಚಿಸಿದ ಮಾನಿಷಾದ ಪ್ರಸಂಗವಂತೂ ಮಂತ್ರಮುಗ್ಧರನ್ನಾಗಿಸಿತ್ತು. ಬೊಟ್ಟಿಕೆರೆ ಭಾಗವತರೇ ಬರೆದ ಮಾತಂಗ ಕನ್ಯೆಯರು ಎಂಬ ಪ್ರಸಂಗದ ಪ್ರದರ್ಶನವೂ ನಡೆಯಿತು. ದೇವೇಂದ್ರನ ಒಡ್ಡೋಲಗದಲ್ಲಿ ನಾಟ್ಯ ಮಾಡಿದ ಅಪ್ಸರೆಯರಿಗೆ ಭರತ ಮುನಿ ಶಾಪ ಕೊಟ್ಟು ಸತ್ಯ ಹರಿಶ್ಚಂದ್ರನಲ್ಲಿ ನೃತ್ಯ ಮಾಡಿ ಬೆಳೊYಡೆ ಕೇಳುವ ವಿಶ್ವಾಮಿತ್ರ ಪ್ರೇರಿತ ಕನ್ಯೆಯರ ಕಥೆ, ಶಬರಿಯ ತಂದೆ ತಾಯಿಯ ಕಥೆ, ರಾಮದರ್ಶನ, ಜಟಾಯು ಮೋಕ್ಷ ಇತ್ಯಾದಿಗಳನ್ನು ಇದು ಒಳಗೊಂಡಿದೆ. ವಿಶ್ವಾಮಿತ್ರನಾಗಿ ಇಂದಿಗೂ ಚಿರಯುವಕರನ್ನೂ ನಾಚಿಸುವಂತೆ ಪಾತ್ರ ಮಾಡಬಲ್ಲ ಶ್ರೀಧರ ಭಂಡಾರಿ ಅವರು ಅಭಿನಯಿಸಿದ್ದರು. ದಿವಾಣ ಶಿವಶಂಕರ ಭಟ್ಟರ ರಾಮ, ಮರಕಡ ಲಕ್ಷ್ಮಣ ಅವರ ಸತ್ಯ ಹರಿಶ್ಚಂದ್ರ, ಶಂಭಯ್ಯ ಕಂಜರ್ಪಣೆ ಅವರ ಮತಂಗ ಮುನಿ ಒಟ್ಟು ಪ್ರಸಂಗದ ಘನಸ್ತಿಕೆ ಮೆರೆಸಿತು. ಎಲ್ಲ ಪ್ರಸಂಗಗಳಲ್ಲೂ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರ ಪುರಾಣ ಚೌಕಟ್ಟು ಮೀರದ ಸಭ್ಯ ಹಾಸ್ಯ ಮನ ಸೆಳೆಯುವ ಜತೆಗೆ ಬೌದ್ಧಿಕ ಮಟ್ಟವನ್ನೂ ಎತ್ತರಿಸಿತ್ತು. ಹಾಸ್ಯವೆಂದರೆ ಕಳಪೆಯಲ್ಲ , ಗಿಮಿಕ್‌ ಇಲ್ಲ ಎಂದು ಅವರು ಅಭಿನಯ ಹಾಗೂ ಅರ್ಥಗಾರಿಕೆ ಮೂಲಕವೇ ತೋರಿಸಿಕೊಟ್ಟಿದ್ದರು. ಪಾರಿಜಾತ ನರಕಾಸುರ ಪ್ರಸಂಗದಲ್ಲಿ ನರಕಾಸುರ ಪಾತ್ರ ಮಾಡಿದ ಮಾಧವ ಪಾಟಾಳಿ ನೀರ್ಚಾಲು, ಶ್ರೀಕೃಷ್ಣ ಪಾತ್ರಧಾರಿ ಅಮ್ಮುಂಜೆ ಮೋಹನ ಅವರು ಅಭಿನಯ ಚಾತುರ್ಯ ಪ್ರದರ್ಶಿಸಿದರು. 

ಪಾರಿಜಾತ ನರಕಾಸುರ, ಬಬ್ರುವಾಹನ ವೀರವರ್ಮ, ಮಾತಂಗಕನ್ಯಾ, ಮಾನಿಷಾದ, ನಳಿನಾಕ್ಷ ನಂದಿನಿ, ರಾಧೇಯ, ದಕ್ಷಾಧ್ವರ ಗಿರಿಜಾ ಕಲ್ಯಾಣ ಆಖ್ಯಾನಗಳ ಪ್ರದರ್ಶನ ನಡೆಯಿತು. ಒಟ್ಟಂದದಲ್ಲಿ ಹಿಮ್ಮೇಳ ಮುಮ್ಮೇಳ ಹೊಂದಾಣಿಕೆಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿತ್ತು.

ಲಕ್ಷ್ಮೀ ಮಚ್ಚಿನ 

Advertisement
Advertisement

Udayavani is now on Telegram. Click here to join our channel and stay updated with the latest news.

Next