Advertisement

ಇಕ್ವೆಡಾರ್‌ನ ಆರೋಗ್ಯ ಸ್ಥಿತಿ ಗಂಭೀರ : ಚಿಕಿತ್ಸೆ ಇಲ್ಲ , ಶವ ಎತ್ತಲೂ ಬರಲ್ಲ!

03:37 PM May 29, 2020 | mahesh |

ಇಕ್ವೆಡಾರ್‌ನ ಗ್ವಯಾಕ್ವಿಲ್‌ನಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪುತ್ರ ಸಾಪ್ತಾಹಿಕ ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಕರೆದು ತಂದಾಗ, ನೆಗಡಿ ಇದೆ ಎನ್ನುವ ಕಾರಣಕ್ಕೆ ಆಸ್ಪತ್ರೆ ಸಿಬಂದಿ ಅವರನ್ನು ಸೇರಿಸಿಕೊಳ್ಳಲು ನಿರಾಕರಿಸಿದರು. ಇದು ಕೋವಿಡ್‌ ಲಕ್ಷಣ ಇರಬೇಕೆಂದು ಅವರ ಶಂಕೆ. ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲ. ಬೇರೆ ಎರಡು ಸರಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯೋಣವೆಂದರೂ ವಾಹನಕ್ಕೆ ಕೊಡಲೂ ಹಣ ಸಾಲದು. ಅನಿವಾರ್ಯವಾಗಿ, ಮಹಿಳೆಯನ್ನು ಮನೆಗೆ ವಾಪಸ್‌ ಕರೆದೊಯ್ದರು. ಮಹಿಳೆ ದಿನದಿನಕ್ಕೆ ಕೃಶರಾಗಿ, ಒಂದು ವಾರದ ಬಳಿಕ ಮೃತಪಟ್ಟರು.

Advertisement

ತುರ್ತು ಸ್ಥಿತಿಯ ಸಂಖ್ಯೆಗಳಿಗೆ ಈ ಮಹಿಳೆಯ ಪುತ್ರಿ ಕರೆ ಮಾಡಿದರೂ ಶವ ತೆಗೆಯಲು ಯಾರೂ ಬರಲಿಲ್ಲ. ನಾಲ್ಕು ದಿನಗಳ ಕಾಲ ಶವ ಮನೆಯಲ್ಲೇ ಇರಬೇಕಾಯಿತು. ಈ ಮಹಿಳೆಯ ಪುತ್ರಿ ನಗರವನ್ನೆಲ್ಲ ಸುತ್ತಾಡಿ ಶವಪೆಟ್ಟಿಗೆಗಾಗಿ ಹುಡುಕಾಡಿದರು. ಶ್ಮಶಾನದಲ್ಲಿ ಹೂಳಲು ಕೊಡಬೇಕಾದಷ್ಟು ಹಣ ತನ್ನಲ್ಲಿದೆಯೇ ಎಂಬ ಚಿಂತೆಯಲ್ಲಿದ್ದರು. ಕೊನೆಗೆ ಚರ್ಚ್‌ನವರ ಸಹಾಯ ಕೇಳಿದಾಗ, ಅವರು ಉಚಿತವಾಗಿ ಶವಪೆಟ್ಟಿಗೆಯ ವ್ಯವಸ್ಥೆ ಮಾಡಿದರು. ಶ್ಮಶಾನದಲ್ಲಿ ಜಾಗಕ್ಕೂ ಹಣದ ವ್ಯವಸ್ಥೆ ಮಾಡಿಕೊಟ್ಟರು. ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಯಾರಾದರೂ ಚಿಕಿತ್ಸೆಗೆ ಸಹಾಯ ಮಾಡಿದ್ದರೆ ಆಕೆ ಬದುಕುತ್ತಿದ್ದಳೆಂದು ಪುತ್ರಿ ಕಣ್ಣೀರು ಮಿಡಿದಳು.

ಲ್ಯಾಟಿನ್‌ ಅಮೆರಿಕದಲ್ಲಿ ಗ್ವಯಾಕ್ವಿಲ್‌ ನಗರ ಕೋವಿಡ್‌-19ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಕಳೆದ ತಿಂಗಳು ಬೀದಿಯಲ್ಲಿ ಮಲಗಿಸಿದ್ದ ಹಾಗೂ ಪಾರ್ಕ್‌ನ ಬೆಂಚುಗಳ ಮೇಲೆ ಇರಿಸಿದ್ದ ಹೆಣಗಳ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡಿ, ಆರೋಗ್ಯ ಸ್ಥಿತಿ ಎಷ್ಟು ಹದಗೆಟ್ಟಿದೆ, ಶವಾಗಾರಗಳು ಎಷ್ಟು ಭರ್ತಿಯಾಗಿವೆ ಎಂಬುದನ್ನು ಸಾರಿ ಹೇಳಿದ್ದವು.

ಈಕ್ವೆಡಾರ್‌ನಲ್ಲಿ ಈವರೆಗೆ 37,355 ಮಂದಿ ಸೋಂಕು ಪೀಡಿತರಾಗಿದ್ದು, 3,203 ಜನರು ಪ್ರಾಣಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆ ತುಂಬ ಜಾಸ್ತಿ ಇದೆ ಎಂದು ಹಲವರು ಅಭಿಪ್ರಾಯಿಸುತ್ತಿದ್ದಾರೆ. ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳಲ್ಲೇ ಇಲ್ಲಿ 10 ಸಾವಿರಕ್ಕೂ ಅಧಿಕ ಜನ ತೀರಿಕೊಂಡಿದ್ದಾರೆ ಎನ್ನಲಾಗಿದೆ.

ಕಾರ್ಮಿಕ ಹಾಗೂ ನೌಕರ ಕುಟುಂಬಗಳು ಸಾಕಷ್ಟು ಹೊಡೆತ ತಿಂದಿವೆ. ಬಹುತೇಕರಿಗೆ ಈಗ ಕೆಲಸವಿಲ್ಲ. ಸರಕಾರಿ ಆಸ್ಪತ್ರೆಗಳಲ್ಲೂ ಇವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಔಷಧ ಹಾಗೂ ಶ್ಮಶಾನಕ್ಕಾಗಿ ಖರ್ಚು ಮಾಡಲು ಹಣವೂ ಇಲ್ಲ. ಬಡವರಾಗಿ ಹುಟ್ಟಲೇಬಾರದು ಎಂದು ಅವರೆಲ್ಲ ಈಗ ಪ್ರಾರ್ಥಿಸುತ್ತಿದ್ದಾರೆ. ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಶವ ವಿಲೇವಾರಿಗೆ ಅಧಿಕಾರಿಗಳು 2ರಿಂದ 7 ದಿನಗಳ ಕಾಲ ತೆಗೆದುಕೊಳ್ಳುತ್ತಿದ್ದರು. ಶವಗಳು ಕೊಳೆತು ನಾರುತ್ತಿದ್ದವು. ಸೋಂಕಿನ ಅಪಾಯದಿಂದ ತಪ್ಪಿಸಿಕೊಳ್ಳಲು ಮನೆಮಂದಿ ಈ ಶವಗಳನ್ನು ಬೀದಿಗಳಲ್ಲಿ, ಪಾರ್ಕಿನ ಬೆಂಚುಗಳಲ್ಲಿ ಇರಿಸಿದ್ದರು. ಅವರೆಲ್ಲರೂ ಬಡವರಾಗಿದ್ದರು ಎಂದು ಮಾನವ ಹಕ್ಕುಗಳ ರಕ್ಷಣ ಸಮಿತಿಯ ನಿರ್ದೇಶಕ ಬಿಲ್ಲಿ ನವರೆಟಿ ವಿವರಿಸಿದ್ದಾರೆ. ಅವರಿಗೆ ಕುಡಿಯುವ ನೀರೂ ಇಲ್ಲ. ಮಾಂಟೆ ಸಿನಾಯ್‌, ಬಾಸ್ಟಿಯನ್‌ ಪಾಪ್ಯುಲರ್‌, ಸಬರ್ಬಿಯೋ ಮತ್ತು ಟ್ರಿನಿಟಾರಿಯಾ ಪ್ರದೇಶಗಳು ಜನದಟ್ಟಣೆಯಿಂದ ಕೂಡಿವೆ. ರೋಗ ಹರಡಲು ಇಷ್ಟು ಸಾಲದೇ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next