Advertisement

ಮಾರ್ಕೆಟ್ ಮಳಿಗೆ ಹರಾಜಿಗೆ ಗ್ರಹಣ

11:31 AM Aug 28, 2019 | Team Udayavani |

ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಜೆ.ಪಿ. ಮಾರುಕಟ್ಟೆ ಮಳಿಗೆ ಹಂಚಿಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ನಗರಸಭೆ ಮೂರು ಬಾರಿ ಮಳಿಗೆಗಾಗಿ ಹರಾಜು ಕರೆದು ರದ್ದು ಮಾಡಲಾಗಿದೆ. ದರ ಹೆಚ್ಚಳದಲ್ಲಿನ ವ್ಯತ್ಯಾಸವೇ ಇದಕ್ಕೆಲ್ಲ ಕಾರಣ ಎಂದೆನ್ನಲಾಗುತ್ತಿದೆ. ವರ್ಷ ಗತಿಸಿದರೂ ಮಳಿಗೆಗೆ ಉದ್ಘಾಟನೆ ಭಾಗ್ಯವೇ ಕಂಡಿಲ್ಲ.

Advertisement

ನಗರದ ಹೃದಯ ಭಾಗದಲ್ಲಿರುವ ಜೆ.ಪಿ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ತರಕಾರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮೊದಲಿದ್ದ ಹಳೆಯ ಮಳಿಗೆ ತೆರವು ಮಾಡಿ ಕಳೆದ ಮೂರು ವರ್ಷದ ಹಿಂದಷ್ಟೇ ಹೊಸ ಮಳಿಗೆಗೆ ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಮಳಿಗೆ ನಿರ್ಮಾಣವಾದರೆ ಆಧುನಿಕ ಮಾರುಕಟ್ಟೆ ಸೌಲಭ್ಯ ದೊರೆಯುತ್ತದೆ ಎನ್ನುವ ವಾಗ್ಧಾನ ಮಾಡಿದ್ದರು. ಆದರೆ ಮಳಿಗೆ ನಿರ್ಮಾಣವಾಗಿ ಬರೊಬ್ಬರಿ ಒಂದು ವರ್ಷ ಗತಿಸಿದೆ. ಆದರೆ ವ್ಯಾಪಾರಸ್ಥರಿಗೆ ಪರಿಪೂರ್ಣವಾಗಿ ಹರಾಜು ಮಾಡಲಾಗಿಲ್ಲ.

ಮಳಿಗೆಯ ಕೆಳ ಭಾಗದಲ್ಲಿ ಕಟ್ಟೆಗಳಿಗೆ ಪೈಪೋಟಿ ಹೆಚ್ಚಿದೆ. ಎಲ್ಲರೂ ಕೆಳಗಡೆ ಮಳಿಗೆ ಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಮೇಲಿನ ಮಳಿಗೆಯಲ್ಲಿ ವ್ಯಾಪಾರ ನಡೆಯಲ್ಲ. ಜನತೆ ಮೇಲ್ಭಾಗದಲ್ಲಿ ಬರುವುದಿಲ್ಲ. ಇದರಿಂದ ನಮಗೆ ವ್ಯಾಪಾರ ವಹಿವಾಟು ನಡೆಯಲ್ಲ ಎನ್ನುವುದು ವ್ಯಾಪಾರಸ್ಥರ ವೇದನೆ.

ಇನ್ನೂ ನಗರಸಭೆ ಲೋಕೋಪಯೋಗಿ ಇಲಾಖೆಯು ನಿಗದಿ ಮಾಡುವ ಮಳಿಗೆಗಳ ದರ ಪಟ್ಟಿ ಅನುಸಾರ ಮಳಿಗೆಗಳ ದರ ನಿಗದಿ ಮಾಡಿ ಈ ಹಿಂದೆ ಹರಾಜು ಕರೆಯಲಾಗಿತ್ತು. ಆದರೆ ಮುಂಗಡ ಹಣ ಹಾಗೂ ಬಾಡಿಗೆ ಹಣದ ಹೊರೆಯಾಗಿದೆ ಎನ್ನುವ ದೂರು ವ್ಯಾಪಾರಸ್ಥರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಮೂರು ಬಾರಿ ಹರಾಜು ಕರೆದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಅಲ್ಲಲ್ಲಿ ವ್ಯಾಪಾರ: ನಗರಸಭೆಯು ಈ ಹಿಂದೆ ಮಳಿಗೆ ಹರಾಜು ಪ್ರಯತ್ನ ಮಾಡಿದೆ. ಆದರೆ ಇಲ್ಲಿ ಕೆಲವು ಹಿತಾಸಕ್ತಿಗಳ ಆಟದಿಂದ ಎಲ್ಲವೂ ಮಂದಗತಿಯಲ್ಲಿ ನಡೆದಿದೆ. ಹಾಗಾಗಿ ವ್ಯಾಪಾರಸ್ಥರಿಗೆ ಮಳಿಗೆ ಸಿಗದ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗದಲ್ಲಿ ರಸ್ತೆ ಪಕ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇದು ಪ್ರಯಾಣಿಕರಿಗೂ ಕಿರಿಕಿರಿ ತಂದೊಡ್ಡಿದೆ.

Advertisement

ವಿಳಂಬ: ಈಗಿರುವ ಮಳಿಗೆಯ ಮೇಲ್ಭಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡುವ ಕುರಿತು ಈ ಮೊದಲು ಶಿವರಾಜ ತಂಗಡಗಿ ಅವರು ವಾಗ್ಧಾನ ಮಾಡಿದ್ದರು. ಆದರೆ ಮೊದಲು ಮೇಲ್ಭಾಗದ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಿ ನಂತರ ಕೆಳ ಮಳಿಗೆಗಳ ಬಾಡಿಗೆ ಹರಾಜು ಕರೆಯಿರಿ ಎಂಬ ತಕರಾರು ಮಾಡಿದ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತವಾಯಿತು. ನೂತನ ಮಾರುಕಟ್ಟೆಯಲ್ಲಿ 26 ಕಟ್ಟೆಗಳು ಹಾಗೂ 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ವ್ಯಾಪಾರಸ್ಥರು ಎಲ್ಲೆಂದರಲ್ಲಿ ವ್ಯಾಪಾರ ಮಾಡಿ ಕೊಳೆತ ಹಣ್ಣು, ತರಕಾರಿ ಬಿಸಾಡುತ್ತಿರುವುದರಿಂದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ನಗರಸಭೆ ಎಷ್ಟೇ ಸ್ವಚ್ಛ ಮಾಡಿದರೂ ದುರ್ನಾತ ಕಡಿಮೆಯಾಗಲ್ಲ. ರಸ್ತೆ ಬದಿಯಲ್ಲಿ, ಚರಂಡಿ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ನಗರಸಭೆ ಕೂಡಲೇ ಮಳಿಗೆ ಹಂಚಿಕೆ ಮಾಡಿದರೆ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಇಲ್ಲವಾದರೆ ನಗರಸಭೆಗೆ ಬರಬೇಕಾದ ಆದಾಯ ಬರುವುದಿಲ್ಲ. ಈಗಾಗಲೇ ಒಂದು ವರ್ಷದಿಂದ ಆದಾಯವೂ ಬಂದಿಲ್ಲ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next