Advertisement

ಯೇಸು ಕ್ರಿಸ್ತರ ಪುನರುತ್ಥಾನ ನವ ಜೀವನಕ್ಕೆ ಆಹ್ವಾನ

12:39 PM Apr 12, 2020 | Sriram |

ಮಂಗಳೂರು: ಯೇಸು ಕ್ರಿಸ್ತರ ಪುನರುತ್ಥಾನವು ನವ ಜೀವನಕ್ಕೆ ಆಹ್ವಾನ ಎಂಬುದಾಗಿ ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ಅವರು ತಮ್ಮ ಈಸ್ಟರ್‌ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

ಕೋವಿಡ್ 19 ಸೋಂಕು ತಗುಲಿದವರ ಹಾಗೂ ಮೃತಪಟ್ಟವರ ಸಂಖ್ಯೆ ಗಮನಿಸುತ್ತಿರುವ ನಾವು ಅನಿಶ್ಚತತೆಯ ಕಾರ್ಮೋಡಗಳಿಂದ ಕಂಗೆಟ್ಟಿದ್ದೇವೆ. ಹೀಗಿರುವಾಗ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣವನ್ನಪ್ಪಿದ ಹಾಗೂ ಅವರು ಮರಣವನ್ನು ಜಯಿಸಿ ಪುನಃ ಜೀವಂತರಾಗಿ ಬಂದ ಪಾಸ್ಕ (ಈಸ್ಟರ್‌) ಹಬ್ಬವನ್ನು ಆಚರಿಸುತ್ತಿದ್ದೇವೆ. ಯೇಸು ಕ್ರಿಸ್ತರು ಪವಿತ್ರಾತ್ಮರ ಶಕ್ತಿಯಿಂದ ಕನ್ಯಾ ಮರಿಯಳ ಉದರದಲ್ಲಿ ಹುಟ್ಟಿ ಬಂದರು ಎಂಬುದು ಕ್ರೈಸ್ತರ ನಂಬಿಕೆ. ತನ್ನ ಜೀವನದ ಅಂತಿಮ 3 ವರ್ಷಗಳಲ್ಲಿ ಅನೇಕ ಬೋಧನೆಗಳನ್ನು, ಪವಾಡಗಳನ್ನು ಮಾಡುತ್ತಾ ಕೊನೆಗೆ ಕ್ರೂರ ಮರಣವನ್ನು ಸ್ವೀಕರಿಸಿದರು. ಆದರೆ ದೇವರು ಅವರನ್ನು ಸಮಾಧಿಯಲ್ಲಿ ಕೊಳೆಯಲು ಬಿಡಲಿಲ್ಲ. ಸತ್ತ 3ನೇ ದಿನ ಅವರು ಜೀವಂತರಾಗಿ ಎದ್ದು ಬಂದರು. ತನ್ನ ಶಿಷ್ಯರಿಗೆ ಕಾಣಸಿಕ್ಕರು ಹಾಗೂ ತನ್ನ ಮೇಲೆ ವಿಶ್ವಾಸವಿರಿಸಿದ ಪ್ರತಿಯೊಬ್ಬರಿಗೂ ಅನಂತ ಜೀವವನ್ನು ಕೊಡುವೆನೆಂದು ವಾಗ್ಧಾನ ಮಾಡಿದರು ಎಂಬುದಾಗಿ ಬೈಬಲ್‌ ತಿಳಿಸುತ್ತದೆ.

“ಪುನರುತ್ಥಾನವೂ ಜೀವವು ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ’ ಎಂದು ಯೇಸು ಹೇಳಿದ್ದರು. ಯೇಸುವೇ ಕತ್ತಲೆ ಕವಿದ ನಮ್ಮ ಜೀವನದಲ್ಲಿ ಪ್ರವೇಶಿಸಿ ನವ ಜೀವನವನ್ನು ನಮಗೆ ಕೊಡುತ್ತಾರೆ ಎನ್ನುವುದು ನಂಬಿಕೆ. “ಮಾರ್ಗವೂ, ಸತ್ಯವೂ, ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು’ ಎಂದು ಪ್ರೀತಿಯ ಮಾರ್ಗವನ್ನು ತೋರಿಸಿದ್ದಾರೆ. ಯಾರು ಪ್ರೀತಿಯ ಹಾದಿಯಲ್ಲಿ ನಡೆಯುತ್ತಾರೋ, ಯಾರ ಅಂತಃಕರಣ ಸ್ವತ್ಛವಾಗಿದೆಯೋ ಅವರಿಗೆ ಸಾವಿನ ಭಯವಿಲ್ಲ. “ಸತ್ತರೂ ದೇವರು ಹೊಸ ಜೀವನವನ್ನು ನನಗೆ ಕೊಡುವರು’ ಎಂಬ ವಿಶ್ವಾಸದಿಂದ ಜೀವಿಸುವ ಪ್ರತಿಯೊಬ್ಬರಿಗೂ ಪಾಸ್ಕ ಹಬ್ಬದ ಸಂತೋಷವನ್ನು ಅವರು ದಯಪಾಲಿಸುತ್ತಾರೆ. ಅಂತಹ ಸಂತೋಷ ಹಾಗೂ ತೃಪ್ತಿ ನಮಗೆಲ್ಲರಿಗೂ ಲಭಿಸಲಿ ಎಂದು ಅತೀ ವಂ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next