Advertisement

ಪ್ರಬಂಧ: “ನೆರೆ’ಹಾವಳಿ

10:25 AM Mar 09, 2020 | mahesh |

ಈ ನೆರೆ ಹಾವಳಿಯಿಂದ ಸಂಕಟ, ಸಂದಿಗ್ಧ ಪರಿಸ್ಥಿತಿಗಳು ಎದುರಾದರೂ ನಾವು ನಗುನಗುತ್ತಲೇ ದಿನನಿತ್ಯವೂ ಎದುರಿಸುವುದರಿಂದ ಒಂಥರಾ ನಾವೆಲ್ಲ ಕೆಚ್ಚೆದೆಯ ಕಲಿಗಳು. ಇದು ನದಿ ಪ್ರವಾಹದ ನೆರೆಯಲ್ಲ. ಪಕ್ಕದಲ್ಲೇ ಇರುವ “ನೆರೆ’ಯ ನವಿರು ಕತೆ.

Advertisement

ನಮ್ಮ ಅಕ್ಕಪಕ್ಕದವರೇ ನಮ್ಮ ಸುಖ-ದುಃಖಕ್ಕೆ ಮೊದಲು ಆಗುತ್ತಾರೆ, ಹಾಗಾಗಿ, ಅವರನ್ನು ಯಾವುದೇ ಕಾರಣಕ್ಕೂ ಕೆಡಿಸಿಕೊಳ್ಳಬಾರದು ಎನ್ನುವುದು ನಮ್ಮಮ್ಮನ ಕುರುಡು ನಂಬಿಕೆ ಅಥವಾ ಮೂಢ ನಂಬಿಕೆ ಅನ್ನಿ. ಹಾಗಾಗಿ, ಅವರು ಏನೇ ಆಟ ಆಡಿದರೂ ಇವಳು ನೋಡಿಯೇ ಇಲ್ಲವೆಂಬಂತೆ ನಾಟಕ ಮಾಡುವುದನ್ನು ಕರತಲಾಮಲಕ ಮಾಡಿಕೊಂಡುಬಿಟ್ಟಿದ್ದಾಳೆ. ಇದರಿಂದಾಗಿ ಅವಳಿಗೆ ಉಂಟಾಗುವ ಈ ನೆರೆಮನೆಯವರ ಕಾಟವನ್ನೇ ನಾನು ನೆರೆಹಾವಳಿ ಎಂದದ್ದು.

ನಮ್ಮ ಅಕ್ಕಪಕ್ಕದ ಮನೆಯವರೆಲ್ಲ ಕೋಳಿಗಳನ್ನು ಸಾಕಿಕೊಂಡಿದ್ದರು. ಆ ಕೋಳಿಗಳನ್ನೆಲ್ಲ ಬೆಳಿಗ್ಗೆ ಆಟವಾಡಿಕೊಳ್ಳಲು ಬಿಟ್ಟುಬಿಟ್ಟರೆಂದರೆ ನೇರವಾಗಿ ಅವು ನಮ್ಮ ಮನೆಯಂಗಳಕ್ಕೇ ಓಡಿ ಬರುತ್ತಿದ್ದವು. ಕೊಕ್ಕೊ ಕೊಕ್ಕೊ ಎಂದು ಕೂಗುತ್ತ ಆಗ ಬೇಲಿಯ ಗಿಡವನ್ನು ಹಾರಿ ಹಾರಿ ಹೈಜಂಪ್‌ ಪ್ರಾಕ್ಟೀಸ್‌ ಮಾಡುತ್ತಿದ್ದವು. ಒಂದನ್ನೊಂದು ಅಟ್ಟಿಸಿಕೊಂಡು ಹೋಗುತ್ತ ಮುಟ್ಟಾಟ ಆಡುತ್ತಿದ್ದವು, ಮಣ್ಣನ್ನೆಲ್ಲ ಕಾಲಿನಿಂದ ಕೆದರಿ ಕೆದರಿ ಸಣ್ಣ ಹುಳಗಳನ್ನು ಆರಿಸಿ ತಿನ್ನುತ್ತಿದ್ದವು. ತನ್ಮಯತೆಯಿಂದ ಅಭ್ಯಾಸಕ್ಕೆ ಕುಳಿತ ನಮಗೆ ಇದೆಲ್ಲ ಕಿರಿಕಿರಿಯೆನಿಸಿ ಹೊರಬಂದು ಅವುಗಳನ್ನು ಓಡಿಸುತ್ತಿದ್ದೆವು. ನಾವು ಓಡಿಬಂದು ಹೆದರಿಸಿದ ಕೂಡಲೇ ತಮ್ಮ ಗರಿಗಳನ್ನು ಬಿಚ್ಚಿ ಪಕಪಕ ಶಬ್ದ ಮಾಡುತ್ತ ಒಂದಿಷ್ಟೆತ್ತರ ಹಾರಿ ಬೇಲಿ ದಾಟಿ ಹೊರಗೋಡುತ್ತಿದ್ದ ಕೆಟ್ಟ ಕುಕ್ಕುಟಗಳು ನಾವು ಒಳಬಂದು ಅವುಗಳ ಕಣ್ಣಿನಿಂದ ಮರೆಯಾದೊಡನೇ ಮತ್ತೆ ಬರುತ್ತಿದ್ದವು. ನಾನು ನನ್ನಕ್ಕನೂ ಮತ್ತೆ ಅವುಗಳನ್ನು ಓಡಿಸಲು ಹೊರಡುತ್ತಿದ್ದೆವು. ಹೀಗಾಗಿ, ನಮಗೆ ಇದೊಂದು ಫ‌ುಲ್‌ ಟೈಮ್‌ ಉದ್ಯೋಗವೇ ಆಗಿಹೋಗಿತ್ತು. ಆದರೂ ನಮಗಿಂತ ಜೋರಿನ ಜನರಾದ ಅವರಿಗೆ ಏನಾದರೂ ಹೇಳುವುದೂ ಸಾಧ್ಯವಿರಲಿಲ್ಲ. ಅವುಗಳು ಗೆದ್ದಲು, ಹುಳುಹುಪ್ಪಡಿ ತಿಂದು ಅಂಗಳ, ಸಂದಿಗೊಂದಿ ಚೊಕ್ಕ ಮಾಡುತ್ತಿದ್ದವೆನ್ನಿ. ಅಷ್ಟೇ ಪ್ರಮಾಣದಲ್ಲಿ ಗಲೀಜೂ ಮಾಡಿ ನಮ್ಮ ಖುಷಿಯನ್ನು ಕಿತ್ತುಕೊಳ್ಳುತ್ತಿದ್ದವು.

ಮದುವೆಯಂಥ ಸಮಾರಂಭಗಳಲ್ಲಿ, ಗಣೇಶ ಚತುರ್ಥಿಯಲ್ಲಿ ನಮ್ಮಿಡೀ ಓಣಿಯಲ್ಲಿ ಅನೇಕರು ತಮ್ಮ ಸಂತೋಷವನ್ನು ಇತರರಿಗೂ ಹಂಚುವ ಪರೋಪಕಾರಿ ಮನೋಭಾವದಿಂದ ಜೋರಾಗಿ ಹಾಡುಗಳನ್ನು ಒದರಿಸುವರು. ಮಕ್ಕಳ ಪರೀಕ್ಷೆ ಮುಂತಾದ ಶೈಕ್ಷಣಿಕ ವಿಷಯಗಳಿಗೆ ವಿನಾಕಾರಣ ಅತೀ ಮಹತ್ವ ಕೊಡುವ ನಮ್ಮಂಥವರನ್ನು ಕಂಡರೆ ಅವರಿಗೆ ಮರುಕವೂ, ಕೋಪವೂ ಉಕ್ಕುತ್ತಿತ್ತು. ಯಾರಾದರೂ, “ನಮ್ಮ ಮಕ್ಕಳು ಪರೀಕ್ಷೆಗಾಗಿ ಓದುತ್ತಿದ್ದಾರೆ, ಸ್ವಲ್ಪ ಮೆಲ್ಲಗೆ ರೆಕಾರ್ಡ್‌ ಹಾಕಿ’ ಎಂದು ಹೇಳಿದರೆ ಅವರ ಉತ್ತರವೂ ಸಿದ್ಧವಾಗಿಯೇ ಇರುತ್ತಿತ್ತು. “ನಿಮ್ಮ ಮಕ್ಕಳ ಪರೀಕ್ಷೆಗಳೇನು ವರ್ಷ ವರ್ಷವೂ ಬರುತ್ತಲೇ ಇರುತ್ತವೆ. ನಮ್ಮ ಮಕ್ಕಳ ಮದುವೆ ಜೀವನದಲ್ಲಿ ಒಂದೇ ಬಾರಿ ಆಗುವುದು’ ಎಂದು ನಮಗೇ ಜೋರು ಮಾಡುತ್ತಿದ್ದವರ ತರ್ಕವೂ ಸರಿಯಾಗಿಯೇ ಇದೆಯಲ್ಲ ಎನಿಸಿ ತೆಪ್ಪಗಿರುವುದೇ ವಾಸಿ ಎನಿಸುತ್ತಿತ್ತು.

“ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕೆ ನಾಚಿದೊಡೆಂತಯ್ಯ?’ ಎಂಬ ಅಕ್ಕನ ವಚನ ಕೇಳಿಲ್ಲವೇ. ಮದುವೆಯ ನಂತರ ನಾವಿಬ್ಬರೂ ಅಕ್ಕತಂಗಿಯರು ಬೇರೆ ಬೇರೆ ಕಡೆ ಮನೆ ಮಾಡಿದರೂ ಅಮ್ಮ ಅದೇ ಸಂತೆಯಂಥ ಸದ್ದುಗದ್ದಲದ ಓಣಿಯಲ್ಲಿಯೇ ಇರುವುದರಿಂದ ಮತ್ತು ಆ ಕಾರಣಕ್ಕಾಗಿ ನಮಗೂ ಅದರ ನಂಟು ಇದ್ದೇ ಇರುವುದರಿಂದ ನೆರೆಯವರ ಹಾವಳಿಯ ಬಗ್ಗೆ ಆಗಾಗ್ಗೆ ಬಿಸಿಯೇರಿದ ಚರ್ಚೆಗಳೂ, ಮುಸುಕಿನ ಗುದ್ದಾಟಗಳೂ, ಇನ್ನೊಮ್ಮೆ ಓಪನ್‌ ಫೈರಿಂಗ್‌ಗಳೂ ಆಗುತ್ತಲೇ ಇರುತ್ತವೆ.

Advertisement

ಹಾಗೆ ಈ ನೆರೆಹಾವಳಿ ನನ್ನನ್ನೇನೂ ಕರುಣೆ ತೋರಿ ಬಿಟ್ಟುಬಿಟ್ಟಿದೆ ಎಂದಲ್ಲ, ಆದರೆ, ಅಮ್ಮನನ್ನು ಬಾಧಿಸಿದಷ್ಟು ನನ್ನನ್ನು ಬಾಧಿಸಿಲ್ಲ ಎನ್ನುವುದೊಂದು ಸಮಾಧಾನ ನನಗೆ. ರಸ್ತೆಯ ಮೇಲೆಯೇ ಒಮ್ಮೆಲೇ ಉದ್ಭವಿಸಿಬಿಟ್ಟಂತಹ ಒತ್ತುಒತ್ತಾಗಿರುವ ಮನೆಗಳಿರುವ ಅಂಕುಡೊಂಕಿನ ಓಣಿಯಲ್ಲಿ ಇವಳೊಬ್ಬಳ ಮನೆಗೆ ಮುಂದೆ ಒಂದಿಷ್ಟು ಜಾಗವನ್ನು ಬಿಟ್ಟುಕೊಂಡಿದ್ದರೆ ಅದಿಲ್ಲದ ಇತರರಿಗೆ ಹೇಗಾಗಬೇಡ? ಮೊದಲೇ ಅವರಿಗೆ ಇವಳಿಗಿಲ್ಲದ ನೂರೆಂಟು ಕೆಲಸಗಳಿರುತ್ತವೆ, ಮತ್ತು ಅವಕ್ಕೆಲ್ಲ ಮನೆ ಮುಂದಿನ ಅಂಗಳ ಬೇಕೇಬೇಕಿರುತ್ತದೆ, ಯಾರ ಮನೆ ಅಂಗಳ ಎನ್ನುವುದು ಇಲ್ಲಿ ನಗಣ್ಯ. ಹಾಗಾಗಿ ಅವರ ಮನೆಯಲ್ಲಿ ಒಣಮೆಣಸಿನಕಾಯಿ ತಂದಕೂಡಲೇ ಬಿಸಿಲಿಗೆ ಇನ್ನಷ್ಟು ಒಣಗಿಸಲೆಂದು ನಮ್ಮ ಮನೆಯ ಅಂಗಳಕ್ಕೆ ಹಕ್ಕಿನಿಂದ ಬಂದು ಸೀರೆಯೊಂದನ್ನು ಉದ್ದಕೇ ಹರಡಿ ಅದರ ಮೇಲೆ ಕೆಂಪಗೆ ಮಿರಿಮಿರಿ ಮಿಂಚುವ ಬ್ಯಾಡಗಿ ಮೆಣಸಿನಕಾಯಿಗಳನ್ನು ಹರಡಿ ನೆನಪಿನಿಂದ ಗೇಟು ಹಾಕಿಕೊಂಡು ಹೋಗುತ್ತಾರೆ. ಬಾಯಿಮಾತಿಗೂ ಅಮ್ಮನ ಹತ್ತಿರ ಹೇಳುವುದಿಲ್ಲ. ಅವರು ಹಾಗೆ ತಮ್ಮ ಕೆಲಸ ಮಾಡುವಾಗ ತಾನು ಹೊರಗೆ ಬಂದುಬಿಟ್ಟರೆ ಅವರಿಗೆ ಮುಜುಗರವಾಗಬಹುದೆಂದು ಇವಳೂ ಹೊರಗೆ ಬರುವುದೇ ಇಲ್ಲ. ಗೊತ್ತಾಗದೇ ಬಂದರೂ ಅವರೇನೂ ಹೆದರದೇ ಧೈರ್ಯವಾಗಿಯೇ ತಮ್ಮ ಕೆಲಸ ಮುಂದುವರೆಸುತ್ತ ಇವಳೆಡೆಗೆ ನೋಡಿ ಒಂದು ನಗೆಯನ್ನು ಒಗೆಯುವ ಕೃಪೆ ತೋರುತ್ತಾರೆ.

ಒಮ್ಮೊಮ್ಮೆ ತೊಳೆದ ಅಕ್ಕಿಯನ್ನು ತಂದು ಹರಡುತ್ತಾರೆ, ಇನ್ನೊಮ್ಮೆ ಹುಣಿಸೆಹಣ್ಣು, ಹಪ್ಪಳ, ಸಂಡಿಗೆ, ಬೇಳೆಕಾಳು, ಒಂದಿಲ್ಲ ಒಂದು ಶುರುವೇ ಇರುತ್ತದೆ. ಆಗೀಗ ಇವರು ತೊಳೆದುಹಾಕುವ ಬೆಡ್‌ಶೀಟುಗಳು, ಚಾದರಗಳು, ಡೋರ್‌ ಮ್ಯಾಟುಗಳಿಗೂ ನಮ್ಮ ಮನೆಯ ಕಂಪೌಂಡ್‌ ಗೋಡೆಯೇ ಗತಿ. ಕೆಟ್ಟುಹೋಗಲು ತಯಾರಾಗುತ್ತಿರುವ ಒಣಕೊಬ್ಬರಿಯ ಬುಟ್ಟಿಯೂ ಒಮ್ಮೊಮ್ಮೆ ಕಂಪೌಂಡು ಗೋಡೆ ಏರಿ ಕುಳಿತುಬಿಟ್ಟಿರುತ್ತದೆ. ಹೀಗೆ ಇವರ ಅಡುಗೆ ಮನೆಯ ಸಕಲ ಸಾಮಾನುಗಳು ಮೈಯೊಣಗಿಸಿಕೊಳ್ಳುವುದು ನಮ್ಮ ಮನೆಯಂಗಳದಲ್ಲಿಯೇ. ವಾರಕ್ಕೊಮ್ಮೆ ನಾನು ತೌರುಮನೆಗೆ ಹೋದಾಗ ಗೇಟು ತೆಗೆಯುವುದಕ್ಕೂ ಕಣ್ಣಿಗೆ ಬೀಳುವ ಈ ಎಲ್ಲ ವಸ್ತುಗಳನ್ನು ನೋಡಿ ನನ್ನ ಮೈಯುರಿದು ಹೋಗಿ ಅವನ್ನೆಲ್ಲ ಎತ್ತಿಒಗೆಯುವ ಆಸೆಯಾದರೂ ಅಮ್ಮನ ನೆರೆಹೊರೆಯವರ ಪ್ರೀತಿ ನೆನಪಾಗಿ ಸುಮ್ಮನಿರುತ್ತೇನೆ.

ನೆರೆ ಮಹಿಮೆ ಅಪರಂಪಾರವಾದದ್ದು. ಕಾರು ಖರೀದಿಸುವ ಪಕ್ಕದ ಮನೆಯವರು, ಅದನ್ನು ಪಾರ್ಕ್‌ ಮಾಡುವುದು ಎಲ್ಲಿ ಎನ್ನುವ ಸಮಸ್ಯೆಯ ಬಗ್ಗೆ, “ಆಮೇಲೆ ನೋಡಿದರಾಯ್ತು ಬಿಡು’ ಎಂದುಕೊಳ್ಳುತ್ತಾರೆ. ಗಾಡಿ ಕೊಂಡಕೂಡಲೇ ನೇರವಾಗಿ ಅಮ್ಮನ ಮುಂದೆ ಬಂದುನಿಲ್ಲುತ್ತಾರೆ. ಗಾಡಿ ಪಾರ್ಕಿಂಗ್‌ಗೆ ನಮ್ಮದೇ ಅಂಗಳ ಎನ್ನುವುದು ನನಗಂತೂ ಅರ್ಥವಾಗಿಬಿಡುತ್ತಿತ್ತು.

ನೆರೆಯವರ ಜೊತೆ ಗಡಿ ತಕರಾರು ಎಲ್ಲ ಕಡೆಯೂ ಇದ್ದದ್ದೇ. ಗಡಿ ತಂಟೆಯ ಕಾರಣಕ್ಕೆ ಪಾಕಿಸ್ತಾನ, ಬಾಂಗ್ಲಾ ದೇಶಗಳ ಜೊತೆಗೆ ಭಾರತ ಸೆಣಸಾಡಬೇಕಾಗಿದೆ. ನಮ್ಮ ದೇಶ ಅಪಾರ ನಷ್ಟವನ್ನೂ ಅನುಭವಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ನಾವು ಬೆಳಗಾವಿಯಲ್ಲಿರುವ ಕಾರಣ ಇನ್ನೊಂದು ಗಡಿತಂಟೆಗೂ ಸಾಕ್ಷಿಯಾಗುವ ಸಂಕಟ ನಮ್ಮದು. ಹೀಗೆ ಬಲಾಡ್ಯವಾದ ರಾಜ್ಯಗಳು, ದೇಶಗಳೇ “ನೆರೆ’ ಹಾವಳಿಯಿಂದ ತತ್ತರಿಸುವಾಗ ನಮ್ಮದೇನು ಮಹಾ ಎನಿಸಿ ಸ್ವಲ್ಪ ಉಪಶಮನ ಮಾಡಿಕೊಳ್ಳುತ್ತೇನೆ.

ನೀತಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next