Advertisement

ರಾಜಕಾರಣಿಗಳ ಅತ್ಯಾಪ್ತ ದ್ವಾರಕಾನಾಥ್

03:57 PM Aug 04, 2017 | |

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಜತೆಗೆ, ಐಟಿ ಅಧಿಕಾರಿಗಳ ದಾಳಿಗೆ ಒಳಗಾಗಿರುವ ಜ್ಯೋತಿಷಿ ದ್ವಾರಕಾನಾಥ್‌ ಯಾರು ಎಂಬುದು ಇದೀಗ ಬಹುಚರ್ಚಿತ ವಿಷಯವಾಗಿದೆ. ಸಾಮಾನ್ಯವಾಗಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆಸುವ ವೇಳೆ ಅವರ ಸಂಬಂಧಿಕರು, ಆಪ್ತರು, ಕಚೇರಿಗಳ ಮೇಲೆ ಕಣ್ಣಿಡುವುದು ವಾಡಿಕೆ. ಆದರೆ ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಕೇಳಿ
ಬಂದ ಮತ್ತೂಂದು ಪ್ರಮುಖ ಹೆಸರು ಜ್ಯೋತಿಷಿ ದ್ವಾರಕಾನಾಥ್‌. ಹೀಗಾಗಿ ಇವರಿಬ್ಬರಿಗೂ ಏನು ಸಂಬಂಧ? ಇವರು ಅಷ್ಟೊಂದು ಪ್ರಭಾವಿಯೇ ಎಂಬ ಪ್ರಶ್ನೆಗಳು ಜನರಲ್ಲಿ ಮೂಡಿವೆ. ಹೌದು, ದ್ವಾರಕಾನಾಥ್‌ ಅವರು, ರಾಜ್ಯದ ರಾಜಕೀಯ ನಾಯಕರು, ಉದ್ಯಮಿಗಳು, ಬಾಲಿವುಡ್‌ ಸಿನಿಮಾ ನಟ-ನಟಿಯರ ಪಾಲಿಗೆ ಗುರೂಜಿ, ಜತೆಗೆ ಆರ್‌.ಟಿ.ನಗರದ “ಪವರ್‌ಫ‌ುಲ್‌’ ಎಂದೇ ಖ್ಯಾತಿ
ಪಡೆದವರು. ಜ್ಯೋತಿಷಿ ದ್ವಾರಕಾನಾಥ್‌ಗೂ ಡಿ.ಕೆ.ಶಿವಕುಮಾರ್‌ ಅವರಿಗೂ ದಶಕಗಳ ನಂಟು. ಎಸ್‌ಜೆಆರ್‌ಸಿ ಕಾಲೇಜಿನಲ್ಲಿ
ಶಿವಕುಮಾರ್‌ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ದ್ವಾರಕಾನಾಥ್‌ ಪರಿಚಯವಾಗಿತ್ತು. ಮೊದಲ ಬಾರಿಗೆ ಶಾಸಕರಾದ ಶಿವಕುಮಾರ್‌ ಅವರನ್ನು ದೆಹಲಿ ಪ್ರಭಾವ ಬಳಸಿ ಬಂಗಾರಪ್ಪ ಸಂಪುಟದಲ್ಲಿ ಬಂದೀಖಾನೆ ಸಚಿವರನ್ನಾಗಿ ನೇಮಿಸುವಲ್ಲೂ ಇವರು ಮಹತ್ವದ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಶಿವಕುಮಾರ್‌ ಜತೆ ವ್ಯವಹಾರಿಕ ನಂಟು ಇತ್ತು ಎನ್ನಲಾಗಿದೆ.

Advertisement

ಸಿಬಿಐ ಬಲೆಗೆ: ಈ ಹಿಂದೆ ರಾಜೀವ್‌ಗಾಂಧಿ ಆರೋಗ್ಯ ವಿವಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ದ್ವಾರಕಾನಾಥ್‌ ತಮ್ಮ ಮಗಳಿಗೆ ಪಿಜಿ ಸೀಟ ಕೊಡಿಸಿದ್ದು ದೊಡ್ಡ ವಿವಾದವಾಗಿ ಸಿಬಿಐ ತನಿಖೆಯೂ ನಡೆದಿತ್ತು. ರಾಜಕಾರಣಿಗಳು ಹಾಗೂ ದ್ವಾರಕಾನಾಥ್‌ ನಡುವಿನ ನಂಟು ಇತ್ತೀಚೆಗಿನದಲ್ಲ.ಇವರ ಮನೆಯಲ್ಲೇ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಿಧನರಾಗಿದ್ದರು. ಈ ಸಾವು ಸಹಜ ಸಾವಲ್ಲ, ಸಂಶಯಾಸ್ಪದ ಸಾವು. ಇದರ ಬಗ್ಗೆ ತನಿಖೆಯಾಗಬೇಕೆಂದು ಅರಸು ಕುಟುಂಬಸ್ಥರು ಆಗ್ರಹಿಸಿದ್ದರು. ಈ ಮೂಲಕ ಮೊದಲ ಬಾರಿಗೆ ದ್ವಾರಕಾನಾಥ್‌ ವಿವಾದದಲ್ಲಿ ಸಿಲುಕಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ ಕುಮಾರ್‌ ಶಿಂಧೆ, ಸೋನಿಯಾ ರಾಜಕೀಯ ಕಾರ್ಯದರ್ಶಿ ಪ್ರಸ್ತುತ ಗುಜರಾತ್‌ನಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಹ್ಮದ್‌ ಪಟೇಲ,ಮಾಜಿ ವಿದೇಶಾಂಗ ಸಚಿವ ನಟವರ್‌ ಸಿಂಗ್‌, ಪಂಜಾಬ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶ್‌ಮುಖ್‌, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಧರಂಸಿಂಗ್‌, ಎಸ್‌.ಎಂ ಕೃಷ್ಣ ಅವರಿಗೂ ಆಪ್ತರು ಎಂದು ಹೇಳಲಾಗಿದೆ.

 ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳಲ್ಲೂ ದ್ವಾರಕಾನಾಥ್‌ಗೆ ಸ್ನೇಹಿತರಿದ್ದು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಅವರ ನಿವಾಸಕ್ಕೆ ಹೋಗಿ ಭವಿಷ್ಯ ಕೇಳುತ್ತಾರೆ.

ತಂದೆಯೂ ಜ್ಯೋತಿಷಿ
ದ್ವಾರಕಾನಾಥ್‌ ಅವರ ತಂದೆ ಹೆಸರಾಂತ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕುಟುಂಬ ವಾಸವಿತ್ತು. ದ್ವಾರಕಾನಾಥ್‌ ಬೆಂಗಳೂರಿನ ಆರ್‌. ಟಿ. ನಗರದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ
ಅವರಿಗೆ ಓರ್ವ ಪುತ್ರಿ, ಓರ್ವ ಪುತ್ರ ನಿದ್ದು ಇವರಿಬ್ಬರೂ ವೈದ್ಯರನ್ನೇ ಮದುವೆಯಾಗಿದ್ದಾರೆ. ತುರ್ತು ಪರಿಸ್ಥಿತಿ ಬಳಿಕ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ಗೆಲುವಿನ ಭವಿಷ್ಯವನ್ನು ನಿಖರವಾಗಿ ನುಡಿದಿದ್ದ ಕಾರಣ ದ್ವಾರಕಾನಾಥ್‌ ಕಾಂಗ್ರೆಸ್‌ ನಾಯಕರಿಗೆ ಹೆಚ್ಚು ಹತ್ತಿರವಾಗಿದ್ದರು. 2014ರ ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ಅಂತಾರಾಷ್ಟ್ರೀಯ ಮಟ್ಟದ ಆಂಗ್ಲ ಪತ್ರಿಕೆ ದಿ ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಭವಿಷ್ಯ
ನುಡಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next