Advertisement

ಡ್ಯೂಟಿಯೇ ನಮಗೆ “ಪಾರ್ಟಿ’

10:02 AM Dec 29, 2019 | Lakshmi GovindaRaj |

ಡಿ.31ರ ರಾತ್ರಿಯ ಅಂಚಿನಲ್ಲಿ ಎಲ್ಲರೂ ಹೊಸ ವರುಷದ ಮೂಡ್‌ನ‌ಲ್ಲಿರುತ್ತಾರೆ. ಪಾರ್ಟಿ, ಮ್ಯೂಸಿಕ್‌ನ ಕಿಕ್‌, ಶುಭಾಶಯಗಳ ವಿನಿಮಯ, ವಿಡಿಯೊ ಕಾಲ್‌ಗ‌ಳಗಳು… ಸಂಭ್ರಮದ ಅಷ್ಟೂ ಮುಖಗಳ ದರ್ಶನ ಅಂದು ರಾಜಧಾನಿಯಲ್ಲಾಗುತ್ತದೆ. ಆದರೆ, ನಮ್ಮೆಲ್ಲರ ಪಾರ್ಟಿ, “ನ್ಯೂ ಇಯರ್‌’ ಆಚರಣೆಗಳ ಹಿಂದೆ ಕೆಲವು ವ್ಯಕ್ತಿಗಳ ಪುಟ್ಟ ಪುಟ್ಟ ಕಾಣ್ಕೆಗಳಿರುತ್ತವೆ. ಅವರಿಗೆ ಡ್ಯೂಟಿಯಲ್ಲಿಯೇ ಹೊಸ ವರ್ಷ ಕಳೆಯುತ್ತದೆ…

Advertisement

ಡಿಸೆಂಬರ್‌ 31, ಗಡಿಯಾರದ ಮುಳ್ಳು ಮಧ್ಯರಾತ್ರಿ 12ಕ್ಕೆ ಮುಟ್ಟಿತೆಂದರೆ, ಬೆಂಗಳೂರಿನಲ್ಲಿ ಬಾನಿಗೂ ರಂಗು, ಭುವಿಗೂ ರಂಗು. ಪಟಾಕಿಗಳ ಸದ್ದು, ಕಲರ್‌ಫ‌ುಲ್‌ ಲೈಟಿಂಗ್ಸ್‌ನಲ್ಲಿ ಮಿಂದೇಳುವ ಬೀದಿಗಳು, ಪಾರ್ಟಿಯ ಗುಂಗಿನಲ್ಲಿ ತೇಲುವ ಜನರು, ಅಬ್ಬರದ ಡಿಜೆ ಮ್ಯೂಸಿಕ್‌ಗಳು… ಆ ಹೊತ್ತಿಗಾಗಲೇ ಪ್ರತಿಯೊಬ್ಬರ ಮೊಬೈಲೂನಲ್ಲೂ ಠಣ್‌ ಠಣ್‌ ಎನ್ನುವ ಮೆಸೇಜುಗಳು. ಮುಖದಲ್ಲಿ ಸ್ಟೈಲಿ, ನಾನಾ ವೈಯ್ನಾರದ ಸೆಲ್ಫಿ, ವಿಡಿಯೋ ಕಾಲ್‌ಗ‌ಳು… ಸಂಭ್ರಮದ ಅಷ್ಟೂ ಮುಖಗಳ ದರ್ಶನ ಅವತ್ತು ರಾಜಧಾನಿಯಲ್ಲಾಗುತ್ತದೆ.

ಹಳೇ ವರುಷ ಉರುಳಿ, ಹೊಸ ವರುಷ ಬರಮಾಡಿಕೊಳ್ಳುವ ನಮ್ಮ ಖುಷಿಗೆ ಅದೆಷ್ಟೋ ರೆಕ್ಕೆಗಳು. ಆದರೆ, ಇದೇ ರಾಜಧಾನಿಯಲ್ಲಿ ಒಂದಿಷ್ಟು ಮಂದಿಗೆ ಹೊಸ ವರ್ಷ ಇಂಥ ಸಂಭ್ರಮಗಳ ದರ್ಶನವನ್ನೇ ಮಾಡಿಸುವುದಿಲ್ಲ. ಅವರು ಕಟ್ಟಿರುವ ವಾಚ್‌ಗಳಲ್ಲಿ, ಅದಾಗಲೇ 12 ಗಂಟೆಯಾದರೂ, ಪಾರ್ಟಿಗೆ ಧಾವಿಸುವಷ್ಟು ಅವರಿಗೆ ಟೈಮೂ ಇರುವುದಿಲ್ಲ. ತಾವು ಮಾಡುವ ಕರ್ತವ್ಯದಲ್ಲೇ ಹೊಸ ವರ್ಷದ ಸುಖ ಕಾಣುತ್ತಾರೆ, ಅವರೆಲ್ಲ. ಅಷ್ಟೇ ಅಲ್ಲ, ನಮ್ಮೆಲ್ಲರ ಪಾರ್ಟಿ, ನಮ್ಮೆಲ್ಲರ “ನ್ಯೂ ಇಯರ್‌’ ಸಂತೋಷದ ಹಿಂದೆ ಈ ವ್ಯಕ್ತಿಗಳ ಪುಟ್ಟ ಪುಟ್ಟ ಕಾಣ್ಕೆಗಳಿರುತ್ತವೆ.

ಟಾಕೀಸಿನಲ್ಲಿ ಲೇಟ್‌ನೆçಟ್‌ ಶೋ ಇರುತ್ತೆ. ಸಿನಿಮಾ ನೋಡುತ್ತಲೇ, ಹೊಸವರ್ಷವನ್ನು ಬರಮಾಡಿಕೊಳ್ಳುವ ಕ್ರೇಜ್‌ ಅನೇಕರಿಗೆ. ಶೋ ಮುಗಿದ ಮೇಲೆ, ಬೈಕನ್ನೋ- ಕಾರನ್ನೋ ಏರಿ, ಅಲ್ಲಿಂದ ಹೊರಡುತ್ತಾರೆ. ಅಷ್ಟೂ ಹೊತ್ತು ಅವರ ವಾಹನಗಳನ್ನು ಕಾದು, ಗೇಟ್‌ ಮುಚ್ಚುತ್ತಾನಲ್ಲ, ಆ ಗೇಟ್‌ ಕೀಪರ್‌, ಆತ ಯಾವತ್ತೂ ಹೊಸ ವರ್ಷ ಆಚರಿಸಿಯೇ ಇರುವುದಿಲ್ಲ. ಎಂ.ಜಿ. ರಸ್ತೆಯಲ್ಲಿ ಪಾರ್ಟಿ ಮುಗಿಸಿ, ವಾಪಸಾಗುವಾಗ ಮೆಟ್ರೋ ಹತ್ತುತ್ತೇವಲ್ಲ, ಅದರ ಚಾಲಕನೂ ಹೊಸ ವರ್ಷದ ಗುಂಗಿನಲ್ಲಿರುವುದಿಲ್ಲ. ಪಾರ್ಟಿಯಲ್ಲಿ ಕುಳಿತಾಗ, ಟೇಬಲ್‌ಗೆ ಬಯಸಿದ್ದನ್ನು ತಂದುಕೊಡುವ ಸರ್ವರ್‌ಗಳೂ, ಟೇಬಲ್‌ ಕ್ಲೀನ್‌ ಮಾಡುವ ಹುಡುಗರಿಗೂ ಹೊಸ ವರ್ಷ, ಅವರೊಳಗೆ ಎಂದೋ ಮುಳುಗಿಹೋದ ಟೈಟಾನಿಕ್ಕು.

ಮತ್ತೆ ಈಗ ಹೊಸ ವರ್ಷ, ಎದುರು ಬರುತ್ತಿದೆ. ಹಾಗೆ ಕರ್ತವ್ಯದಲ್ಲೇ ತನ್ಮಯರಾಗಿ, ಈ ಸಂಭ್ರಮವನ್ನು ಸ್ವಾಗತಿಸುವವರ ಪರಿಚಯ ಇಲ್ಲಿದೆ…

Advertisement

ಎಂ.ಜಿ. ರಸ್ತೆಯಲ್ಲಿ ಶಾಂತಿ ಕಾಪಾಡುತ್ತಾ…
ಕಳೆದ ಹದಿಮೂರು ವರ್ಷಗಳಿಂದ, ಡಿ.31ರ ಮಧ್ಯರಾತ್ರಿ 12ಕ್ಕೆ ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ನಾನು ಹಾಜರಿರುತ್ತೇನೆ. ಪಾರ್ಟಿ ಮಾಡ್ತಾ ಅಲ್ಲ; ಡ್ಯೂಟಿ ಮಾಡುತ್ತಾ! ಹೊಸವರ್ಷದ ದಿನ ರಾಜಧಾನಿಯ ಸಂಭ್ರಮ, ಸಡಗರ, ಅಬ್ಬರ ಎಲ್ಲ ನಿಮಗೆ ಗೊತ್ತೇ ಇದೆ. ಅವತ್ತಿನ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ನಮ್ಮ ಕೆಲಸ. ಒಬ್ಬ ಪೊಲೀಸ್‌ ಆಗಿ, ಸಾಮಾನ್ಯ ಜನರು ಶಾಂತಿಯುತವಾಗಿ, ಯಾರಿಗೂ ತೊಂದರೆಯಾಗದಂತೆ ಹೊಸ ವರ್ಷ ಆಚರಿಸಿದರೆ, ಸುರಕ್ಷಿತವಾಗಿ ಮನೆಗೆ ವಾಪಸಾದರೆ ಅದೇ ನನಗೆ ದೊಡ್ಡ ಸೆಲೆಬ್ರೇಷನ್‌. ಕಾಲೇಜು ದಿನಗಳಲ್ಲಿ, ನಾನೂ ಗೆಳೆಯರ ಜೊತೆ ಸೇರಿ ಭರ್ಜರಿಯಾಗಿ ಹೊಸ ವರ್ಷ ಆಚರಿಸುತ್ತಿದ್ದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೆಲವೊಮ್ಮೆ, ಜನರ ಖುಷಿ-ಸಂಭ್ರಮಕ್ಕೆ ನಾವು ಅಡ್ಡಿ ಮಾಡ್ತಿದ್ದೇವಾ ಅಂತ ಅನ್ನಿಸಿದರೂ, ಕರ್ತವ್ಯದ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಸಂಭ್ರಮದ ಸಮಯದಲ್ಲಿ ಯಾರಿಗೂ ಅಡಚಣೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.
-ರವಿಕುಮಾರ್‌ ತುಮಕೂರು, ಪೊಲೀಸ್‌ ಪೇದೆ, ಇಂದಿರಾನಗರ ಠಾಣೆ

ಮಧ್ಯ ರಸ್ತೇಲಿ, ಸ್ಟೀರಿಂಗ್‌ ಜೊತೆಯಲ್ಲಿ…
ನಮ್ಮ ಬಸ್‌ ದಿನಾ ಸಂಜೆ 6.30ಕ್ಕೆ ಮುಧೋಳದಿಂದ ಹೊರಟರೆ, ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪುತ್ತದೆ. ಹೊಸವರ್ಷದ ದಿನವೂ ಇದಕ್ಕೆ ಹೊರತೇನಲ್ಲ. ಹಾಗಾಗಿ ನಮ್ಮ ಹೊಸ ವರ್ಷ ಶುರುವಾಗುವುದು ಬಸ್‌ನಲ್ಲಿಯೇ. ದಾರಿಯುದ್ದಕ್ಕೂ ಅಲ್ಲಲ್ಲಿ ಜನರು ಪಾರ್ಟಿ ಮಾಡುತ್ತಿರುವುದು, ರಸ್ತೆ ಮೇಲೆ “ಹ್ಯಾಪಿ ನ್ಯೂ ಇಯರ್‌’ ಅಂತ ಬರೆದಿರುವುದು ಕಾಣುತ್ತದೆ. ಕೆಲವೊಮ್ಮೆ, ಪ್ರಯಾಣಿಕರಲ್ಲಿ ಕೆಲವರು ಸ್ವೀಟ್ಸ್‌ ತಂದಿರುತ್ತಾರೆ. ಅವರು 12 ಗಂಟೆ ಕಳೆಯುತ್ತಿದ್ದಂತೆ ನಮಗೆಲ್ಲಾ ಸಿಹಿ ನೀಡಿ, ಶುಭಾಶಯ ಕೋರುತ್ತಾರೆ. ಮರುದಿನ ಬೆಳಗ್ಗೆ, ನಾವು ಐದಾರು ಬಸ್‌ನ ಚಾಲಕ-ನಿರ್ವಾಹಕರು ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತೇವೆ. ಪಾರ್ಟಿ ಅಂದ್ರೆ, ಜೋಳದ ರೊಟ್ಟಿ- ಚಟ್ನಿ- ಮೊಸರು, ಅಷ್ಟೇ! ಎಲ್ಲರೂ ಒಟ್ಟಿಗೇ ಕುಳಿತು, ನಾವು ತಂದಿರುವುದನ್ನು ಹಂಚಿ ತಿನ್ನುತ್ತೇವೆ. 13-14 ವರ್ಷಗಳಿಂದ ಹೀಗೇ ನಡೆದುಕೊಂಡು ಬಂದಿದೆ.
-ಉಮೇಶ್‌ ಲಕ್ಷ್ಮಣ ಜಾಧವ್‌ ಇಂಡಿ, ಕೆಎಸ್‌ಆರ್‌ಟಿಸಿ ಬಸ್‌ ಚಾಲಕ

ರಾತ್ರಿಯಿಡೀ ಡ್ಯೂಟಿಯ ಜಾಗರಣೆ
ದುಡ್ಡು ಕೊಡುವ ಯಂತ್ರದ ಮುಂದೆ ರಾತ್ರಿಯಿಡೀ ಕಾಯುವ ಕೆಲಸ ನನ್ನದು. ನಾನೇ ಈ ಕುರ್ಚಿಯಿಂದ ಎದ್ದು, ಪಾರ್ಟಿಗೆ ಹೋದರೆ, ನನ್ನ ಕರ್ತವ್ಯಕ್ಕೆ ಮೋಸ ಮಾಡಿದ ಹಾಗಾಗುತ್ತೆ. ಕೋರಮಂಗಲದ ಫೋರಂ ಸಮೀಪವೇ ಇರುವುದರಿಂದ, ಇಲ್ಲಿ ರಾತ್ರಿಪೂರಾ ಜನ ಓಡಾಡುತ್ತಿರುತ್ತಾರೆ. ಹೊಸ ವರ್ಷದ ಆ ರಾತ್ರಿ ಜನ ಎಟಿಎಂ ಮುಂದೆ ಸಾಲುಗಟ್ಟಿರುತ್ತಾರೆ. ಅವರಂತೆ ನಾನೂ ಪಾರ್ಟಿ ಮಾಡ್ಬೇಕು ಅಂತ ಆಸೆ ಆಗುತ್ತೆ. ಆದರೆ, ಸಾಧ್ಯವಾಗುವುದಿಲ್ಲ. ಬಹುಶಃ ನಾನು ಹೊಸ ವರ್ಷ ಆಚರಿಸದೆ, ಹತ್ತಾರು ವರ್ಷಗಳೇ ಆದವೇನೋ. ನಾನು ಹುಟ್ಟಿದ್ದು ಮಧ್ಯಪ್ರದೇಶದ ಜಬಲುರದಲ್ಲಿ. ಬಾಲ್ಯದಲ್ಲಿ ಪ್ರತಿವರ್ಷ ಡಿ.31ರಂದು ಮಧ್ಯರಾತ್ರಿ 12 ಗಂಟೆ ಆಗುವುದನ್ನೇ ಕಾಯುತ್ತಿದ್ದೆವು. ಯಾರೋ ಶ್ರೀಮಂತರ ಮನೇಲಿ ಪಟಾಕಿ ಹೊಡೆಯೋರು. ಅದನ್ನು ನಾವು ನೋಡೋದು. ದುಡ್ಡಿಲ್ಲದ ಆ ದಿನಗಳಲ್ಲಿ, ಸಣ್ಣಪುಟ್ಟ ಸ್ವೀಟು ಹಂಚಿಕೊಂಡು ಸಂಭ್ರಮಿಸುತ್ತಿದ್ದೆವು. ಈಗ ಅವೆಲ್ಲವೂ ನೆನಪಾಗುತ್ತಿದೆ. ನಮ್ಮೂರಿನ ಚಿತ್ರಗಳು ಕಣ್ಣಮುಂದೆ ಹಾದುಹೋಗುತ್ತವೆ.
– ಮನ್‌ದೀಪ್‌ ಸಿಂಗ್‌, ಎಟಿಎಂ ಕಾವಲುಗಾರ

Advertisement

Udayavani is now on Telegram. Click here to join our channel and stay updated with the latest news.

Next