Advertisement

ಜೋಡಿ ರಸ್ತೆ ಕಾಮಗಾರಿ ವಿಳಂಬದಿಂದ ಸಂಚಾರಕ್ಕೆ ಅಡಚಣೆ

03:15 PM Jan 18, 2018 | |

ಗುಂಡ್ಲುಪೇಟೆ: ಪಟ್ಟಣದ ಅಬ್ದುಲ್‌ ನಜೀರ್‌ ಸಾಬ್‌ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕುಂಟುತ್ತ ಸಾಗಿದ್ದು, ವಾಹನ ಸವಾರರು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.

Advertisement

ನಾಲ್ಕುವರ್ಷಗಳ ಹಿಂದೆ ನಿರ್ಮಿಸಿದ್ದ ಅಭಿವೃದ್ಧಿ ಪಡಿಸಿದ್ದ ಈ ಜೋಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೆ 4 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ವೀರಯೋಧ ಶಿವಾನಂದ ವೃತ್ತದವರೆಗೆ ಅಭಿವೃದ್ಧಿ ಪಡಿಸುತ್ತಿದೆ. 2 ತಿಂಗಳ ಹಿಂದೆಯೇ ಕಾಮಗಾರಿಗೆ ಸಚಿವೆ ಡಾ.ಗೀತಾ ಭೂಮಿಪೂಜೆ ನೆರವೇರಿಸಿದ್ದರು. ಆಗ ಹಳೆ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ ಕಾಮಗಾರಿ ಶೀಘ್ರ ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಮಾಡಿ ಎಂದು ಸಚಿವ ಹೇಳಿದ್ದರೂ ಯಾವುದೇ ಕೆಲಸವಾಗಿಲ್ಲ, ಕಾಮಗಾರಿಯೂ ನಿಗದಿತ ವೇಗದಲ್ಲಿ ನಡೆಯುತ್ತಿಲ್ಲ.

ಚರಂಡಿ ಕಾಮಗಾರಿ ನೆನಗುದಿಗೆ: ಪ್ರಾರಂಭದಲ್ಲಿ ರಸ್ತೆ ಒಂದು ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿತ್ತು. ಆದರೆ, ರಸ್ತೆಗೆ ಹೊಂದಿಕೊಂಡಿದ್ದ ಕೆಲವು ಕಟ್ಟಡ ತೆರವುಗೊಳಿಸುತ್ತಿರುವ ಕಾರಣ ಕಾಮಗಾರಿ ನೆನಗುದಿಗೆ ಬಿದ್ದಿದೆ. ಹೀಗಾಗಿ ಪಟ್ಟಣದಲ್ಲಿನ ಕೊಳಚೆ ನೀರು ಅಲ್ಲಲ್ಲಿ ಮಡುಗಟ್ಟಿ ನಿಂತು ಇಲ್ಲಿನ ನಿವಾಸಿಗಳಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೆ, ಚರಂಡಿ ನೀರು ಹರಿಯಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಿಲ್ಲದ ಕಾರಣ ರಸ್ತೆಯುದ್ದಕ್ಕೂ ಕೊಳಚೆ ನೀರು ಹರಿಯುತ್ತಿದ್ದು, ವಾಹನಗಳು ಈ ನೀರಿನಲ್ಲೇ ಸಾಗುತ್ತಿವೆ. ಕೆಲಮೊಮ್ಮೆ ಕೊಳಚೆ ನೀರು ಪಾದಚಾರಿಗಳ ಮೇಲೆ ಸಿಡಿದು ಕಿರಿಕಿರಿ ಅನುಭವಿಸುವಂತಾಗಿದೆ. 

ಈ ರಸ್ತೆಯಲ್ಲಿ ಪ್ರಮುಖ ಅಂಗಡಿ ಮುಂಗಟ್ಟುಗಳಿದ್ದು, ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿದೆ. ತಾಲೂಕಿನ ಹಳ್ಳಿಯ ಜನರು
ಕೃಷಿ ಪರಿಕರಗಳು, ದಿನಸಿ ಪದಾರ್ಥ ಮುಂತಾದ ವಸ್ತುಗಳನ್ನು ಖರೀದಿಸಲು ಬರುತ್ತಾರೆ. ಅವರಿಗೆ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೆ ಪರದಾಡುವಂತಾಗಿದೆ.

ಚರಂಡಿ ದಾಟಲು ಪರದಾಟ: ರಸ್ತೆಗೆ ರಸ್ತೆಯಿಂದ ಎತ್ತರಕ್ಕೆ ಚರಂಡಿ ನಿರ್ಮಾಣ ಮಾಡುತ್ತಿದ್ದು, ವೃದ್ಧರು, ಮಹಿಳೆಯರು
ದಾಟಲು ಪರದಾಡುವಂತಾಗಿದೆ. ರಸ್ತೆ ಬದಿಯಲ್ಲಿ ನಿರುಪಯುಕ್ತ ಪದಾರ್ಥಗಳನ್ನು ಹಾಕಲಾಗಿದೆ. ಚರಂಡಿಗೆ ಸ್ಲಾéಬ್‌ ಹಾಕದ ಕಾರಣ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳಿಗೆ ತೆರಳಲು ಹಾಗೂ ಸಾಮಾನು ಸರಂಜಾಮು ಸಾಗಿಸಲು ಸಾಧ್ಯವಾಗದೆ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯುಂಟಾಗಿದೆ. 

Advertisement

ವ್ಯಾಪಾರಿಗಳು ತಮ್ಮ ಮಳಿಗೆಗಳ ಮುಂದೆ ರಸ್ತೆಯಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿಕೊಳ್ಳು ತ್ತಿರುವುದು ಸಂಚಾರಕ್ಕೆ ತೀವ್ರ ಅಡಚಣೆ ಯುಂಟಾಗಿದೆ. ಕೆಲವೊಮ್ಮೆ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗುತ್ತದೆ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಯಿಂದಾಗುತ್ತಿರುವ ತೊಂದರೆಯನ್ನು ನಿವಾರಿಸಿ ಶೀಘ್ರ ರಸ್ತೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪಟ್ಟಣದ ನಿವಾಸಿ ಎನ್‌. ಮಂಜುನಾಥ್‌ ಆಗ್ರಹಿಸಿದ್ದಾರೆ. 

ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ಕೊಡುವಂತೆ ಪುರಸಭೆಗೆ ಮನವಿ ಮಾಡಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
●ಕಾಂತರಾಜು, ರಾ.ಹೆ ನಿಗಮದ ಎಂಜಿನಿಯರ್‌.

Advertisement

Udayavani is now on Telegram. Click here to join our channel and stay updated with the latest news.

Next