ಮಡಂತ್ಯಾರು: ಇಲ್ಲಿನ ಮಾಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದ ಡಿಸಿ ಮನ್ನಾ ಭೂಮಿಗೆ ಕಳೆದ ಭಾನುವಾರ ದಲಿತ ಸಂಘಟನೆಗಳು ಬೇಲಿ ಹಾಕಿದ್ದು, ಇಂದು ಗುರುವಾರ ಬೇಲಿ ತೆರವು ಮಾಡಲು ಮುಂದಾದಾಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
1966 ರಲ್ಲಿ ದಾಖಲೆ ಆಗಿದ್ದ ಭೂಮಿ ಶಾಲೆಯ ಕ್ರೀಡಾಂಗಣವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಡಿಎಸ್ಎಸ್ ಮಾಹಿತಿ ಹಕ್ಕು ಅರ್ಜಿಯಡಿ ಭೂಮಿ ದಲಿತರಿಗೆ ಸೇರಿದ್ದು ಬಿಟ್ಟು ಕೊಡಬೇಕೆಂದು ಬೇಲಿ ಹಾಕಿತ್ತು.
ಇಂದು ಶಾಲೆಗೆ ಸಂಬಂಧಪಟ್ಟವರು , ಗ್ರಾಮಸ್ಥರು ಸೇರಿ ಜೆಸಿಬಿ ಯಂತ್ರ ತರಿಸಿ ಬೇಲಿ ತೆರವು ಮಾಡುಲು ಮುಂದಾದಾಗ ಡಿಎಸ್ಎಸ್ ಪ್ರತಿಭಟನೆ ನಡೆಸಿ ತಡೆಯೊಡ್ಡಿದೆ. ಸ್ಥಳದಲ್ಲಿ ತೀವ್ರ ವಾಗ್ವಾದ ನಡೆದಿದೆ.
ಈ ಬಗ್ಗೆ ಶಾಲೆಯ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ , ತಹಸೀಲ್ದಾರ್, ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಡಿಎಸ್ಎಸ್ ಸಂಘಟನೆಯ ಕಾರ್ಯಕರ್ತರು , ಮುಖಂಡರು ಸ್ಥಳದಲ್ಲಿ ಜಮಾವಣೆಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೆಎಸ್ಆರ್ಪಿ ತುಕಡಿಯನ್ನು ಕರೆಸಿಕೊಳ್ಳಲಾಗಿರುವ ಬಗ್ಗೆ ವರದಿಯಾಗಿದೆ.
ಫೋಟೋ: ಪ್ರಮೋದ್