Advertisement

ಉಭಯ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ

12:26 AM Jul 25, 2019 | Sriram |

ಕುಂದಾಪುರ: ಉಭಯ ಜಿಲ್ಲೆಗಳ ಬಹುತೇಕ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ವರ್ಷದ ಜನವರಿಯಿಂದಲೇ ಔಷಧ ಕೊರತೆ ಇದ್ದು, ಸರಬರಾಜು ಇಲ್ಲದ್ದರಿಂದ ಖಾಸಗಿಯವರಿಂದ ಖರೀದಿಸಿ ನೀಡುವ ಸ್ಥಿತಿ ಉದ್ಭವಿಸಿದೆ.
ಆ್ಯಂಟಿಬಯೋಟಿಕ್‌ ಔಷಧಗಳು, ನಿರಂತರ ಬೇಡಿಕೆಯಿರುವ ಸಕ್ಕರೆ ಕಾಯಿಲೆ, ಬಿಪಿ ಮಾತ್ರೆ ಗಳು ಲಭ್ಯವಿಲ್ಲ. ಜ್ವರ,ಕೆಮ್ಮು, ಶೀತ, ವಿಟಮಿನ್‌,ಶಕ್ತಿ ಹೀನತೆ ತೊಲಗಿ ಸಲು ಬೇಕಾದ ಸಿರಪ್‌ಗ್ಳೂ ಸಿಗುತ್ತಿಲ್ಲ. ಮಾನಸಿಕರೋಗಕ್ಕೆ ನೀಡುವ ಮದ್ದಿಲ್ಲ. ರೇಬಿಸ್‌ ಲಸಿಕೆ, ಹಾವು ಕಡಿತಕ್ಕೆಔಷಧವೇ ದೊರೆಯುತ್ತಿಲ್ಲ. ಇವು ಗಳನ್ನು ಖಾಸಗಿಯಾಗಿ ಖರೀದಿಸಲು ದುಬಾರಿ ವೆಚ್ಚ ಭರಿಸಬೇಕು.

Advertisement

ರೇಬಿಸ್‌ ಲಸಿಕೆಯನ್ನು ಪ್ರಸ್ತುತ ತಮಿಳುನಾಡು, ಕೇರಳ, ತೆಲಂಗಾಣ ಇತ್ಯಾದಿ ರಾಜ್ಯಗಳಿಂದ ತರಿಸಲಾಗುತ್ತಿದೆ ಕ್ಷಯ, ಕುಷ್ಠ, ಮಲೇರಿಯಾ ರಾಷ್ಟ್ರೀಯ ಕಾರ್ಯಕ್ರಮಗಳ, ಮಹಿಳೆ-ಮಕ್ಕಳ ಕಾಯಿಲೆ ಔಷಧಿಗೆ ಪ್ರತ್ಯೇಕ ಅನುದಾನವಿದ್ದು ಕೊರತೆಯಿಲ್ಲ ಎನ್ನುತ್ತಾರೆ ವೈದ್ಯರು.

ಹಗರಣ
ಔಷಧ ಸರಬರಾಜು ಗುತ್ತಿಗೆ ವಹಿಸಿಕೊಂಡ ವರು ಸರಿಯಾಗಿ ಪೂರೈಸದಿರುವುದು, ವರ್ಷಾಂತ್ಯದ ಕೊನೆಯ 2 ತಿಂಗಳಲ್ಲಿ ಒಮ್ಮೆಲೇ ವರ್ಷದ ಬೇಡಿಕೆ ತಂದು ಹಾಕಿ ಬಿಲ್‌ ಮಾಡುವುದು, ಅವಧಿ ಸಮೀಪಿ ಸುತ್ತಿರುವ ಔಷಧ ಕಳುಹಿಸುವುದು, ಸರಬರಾಜಿಗೆ ಲಂಚದ ಬೇಡಿಕೆಯೂ ನಡೆಯುತ್ತದೆ. ಟೆಂಡರ್‌ ವಹಿಸಿಕೊಂಡ ಸಂಸ್ಥೆ ಹಾಗೂ ಸರಕಾರದ ನಡುವೆ ಹಗರಣದ ವಾಸನೆ ಕಾರಣ ಪ್ರಸ್ತುತ ಸರಕಾರಿ ಔಷಧ ತಯಾರಕ ಸಂಸ್ಥೆಯೇ ಪೂರೈಸುತ್ತಿದೆ.

ರಾಷ್ಟ್ರೀಯ ನಿಧಿ
ಔಷಧ ವಿಳಂಬ ಹಿನ್ನೆಲೆಯಲ್ಲಿ ಪ್ರತಿ ಪಿಎಚ್‌ಸಿಗೆ 50 ಸಾವಿರ ರೂ.ಗಳಂತೆ ರಾಷ್ಟ್ರೀಯ ಉಚಿತ ಔಷಧ ಸರಬರಾಜು (ಎನ್‌ಎಫ್ಡಿಎಸ್‌) ಅನುದಾನ ನೀಡಲಾಗುತ್ತಿದೆ. ಈ ಅನುದಾನದಲ್ಲಿ ಜನೌಷಧಕ್ಕೆ ಆದ್ಯತೆ ನೀಡಬೇಕು. ಅನುದಾನ ಸಾಲದಿದ್ದರೆ ಆರೋಗ್ಯ ರಕ್ಷಾ ನಿಧಿ ಬಳಸಬಹುದು. ರೇಬಿಸ್‌ ಲಸಿಕೆಗೆ 250 ರೂ. ಇದೆ. ಹತ್ತಿಪ್ಪತ್ತು ಮಂದಿ ನಾಯಿ ಕಡಿತಕ್ಕೊಳಗಾದಾಗ ಪಿಎಚ್‌ಸಿಗಳಲ್ಲಿ ಅನುದಾನದ ಕೊರತೆಯಾಗುತ್ತಿದೆ.

ನೂರಾರು ರೋಗಿಗಳು
ರಾಜ್ಯದಲ್ಲಿ 2,206 ಪಿಎಚ್‌ಸಿಗಳಿವೆ. ಕುಂದಾಪುರದಂಥ ಪ್ರದೇಶದಲ್ಲಿ ಒಂದು ಆಸ್ಪತ್ರೆಗೆ ಪ್ರತಿದಿನ ಸರಾಸರಿ 60ರಿಂದ 200ರ ವರೆಗೆ ರೋಗಿಗಳು ಬರುತ್ತಾರೆ. ಪ್ರಾ.ಆ. ಕೇಂದ್ರಗಳಲ್ಲಿ ದಿನಕ್ಕೆ 10 ಶುಗರ್‌ ಮತ್ತು ಐದರಷ್ಟು ಬಿಪಿ ಕಾಯಿಲೆಯವರು ಬರುತ್ತಾರೆ. ಇವರಿಗೆ ದಿನಕ್ಕೆ ತಲಾ ಎರಡರಂತೆ ಮಾತ್ರೆಗಳು ಬೇಕಾಗುತ್ತವೆ. ತಾಲೂಕು ಆಸ್ಪತ್ರೆಗಳಲ್ಲಿ 400 ಕ್ಕಿಂತ ಅಧಿಕ. ಆದರೆ ಇವರಿಗೆ ಔಷಧ ನೀಡುವುದೇ ಆಸ್ಪತ್ರೆಗಳಿಗೆ ಸವಾಲಾಗಿದೆ.

Advertisement

ಮಂಗಳೂರಿನ ವೆನ್ಲಾಕ್ ಗೆ ವಾರ್ಷಿಕ 3.4 ಕೋ.ರೂ., ಲೇಡಿಗೋಷನ್‌ಗೆ1 ಕೋ.ರೂ. ಮತ್ತು ಜಿಲ್ಲೆಗೆ 14 ಕೋ.ರೂ., ಉಡುಪಿ ಜಿಲ್ಲಾಸ್ಪತ್ರೆಗೆ 2.5 ಕೋ.ರೂ. ಹಾಗೂ ಜಿಲ್ಲೆಗೆ 8 ಕೋ.ರೂ.ಗಳ ಔಷಧವನ್ನು ಸರಕಾರಿ ಔಷಧಾಗಾರದಿಂದ ಪೂರೈಸಲಾಗುತ್ತಿದೆ. ಕುಂದಾಪುರ ತಾಲೂಕಿನಲ್ಲಿ ಸರಕಾರಿ ಆಸ್ಪತ್ರೆಯ ಬೇಡಿಕೆ, ಬಳಕೆ ಹೆಚ್ಚು.

ಸಮಸ್ಯೆಯಿಲ್ಲ
ಕೆಲವು ಔಷಧಗಳು ಖಾಸಗಿ, ಸರಕಾರಿ ಯಾರಲ್ಲೂ ಲಭ್ಯವಿಲ್ಲ.. ಔಷಧ ಸರಬರಾಜಾಗದಿದ್ದರೆ ಖರೀದಿಗೆ ಪಿಎಚ್‌ಸಿಗೆ 50 ಸಾವಿರ ರೂ., ಸಮುದಾಯ ಆರೋಗ್ಯ ಕೇಂದ್ರಕ್ಕೆ 3 ಲಕ್ಷ ರೂ. ಎನ್‌ಎಫ್ಡಿಎಸ್‌ ನಿಧಿ ನೀಡಲಾಗಿದೆ. ರೇಬಿಸ್‌, ಹಾವು ಕಡಿತದ ಔಷಧ ಸಂಗ್ರಹಿಸಿ ಇಡಲಾಗಿದೆ.
– ಡಾ| ಎಂ.ಜಿ. ರಾಮ,
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಔಷಧ ಕೊರತೆಯಾದರೆ ಎನ್‌ಎಚ್‌ಎಂ ಹಾಗೂ ಎನ್‌ಎಫ್ಡಿಎಸ್‌ ನಿಧಿಯಲ್ಲಿ ಸ್ಥಳೀಯವಾಗಿ ಖರೀದಿಸಿ ನೀಡಲು ಸೂಚಿಸಲಾಗಿದೆ.
– ಡಾ| ರಾಮಕೃಷ್ಣ ರಾವ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲಾ ಕೇಂದ್ರಗಳ ಔಷಧಾಗಾರದಿಂದ ಪ್ರಾ.ಆ. ಕೇಂದ್ರಗಳಿಗೆ ಔಷಧ ಸರಬರಾಜಾಗುತ್ತದೆ. ಉಡುಪಿ ಜಿಲ್ಲೆ ಪ್ರತ್ಯೇಕವಾಗಿ 22 ವರ್ಷಗಳಾದರೂ ಔಷಧಾಗಾರ ಸ್ಥಾಪನೆಯಾಗಲೇ ಇಲ್ಲ. ಅವಿಭಜಿತ ಜಿಲ್ಲೆಗೆ ಮಂಗಳೂರಿನ ವೆನ್ಲಾಕ್ ಸಮೀಪದ ಉಗ್ರಾಣದಿಂದ ಬರುತ್ತದೆ. 2016ರಿಂದ ಆನ್‌ಲೈನ್‌ ಬೇಡಿಕೆ ಸಲ್ಲಿಕೆ ಕ್ರಮ ಚಾಲ್ತಿಯಲ್ಲಿದೆ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next