Advertisement

ಬರದ ನಾಡಿನ 38 ಗ್ರಾಮದಲ್ಲಿ ಹರಿಯಲಿದೆ ನೀರು

06:19 PM Apr 25, 2022 | Nagendra Trasi |

ತಾಳಿಕೋಟೆ: ಬರದನಾಡೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ಭಾಗದ ರೈತರ ಆಶಾದಾಯಕವಾಗಿದ್ದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ
ಮೊದಲನೇ ಹಂತದ ಕಾಮಗಾರಿ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರ ಪ್ರಯತ್ನದ ಫಲವಾಗಿ ಚಾಲನೆಗೆ ಹಸಿರು ನಿಶಾನೆ ಸಿಕ್ಕಿದೆ. ಈ ಯೋಜನೆಯ ಸಾಕಾರದಿಂದ ಸುಮಾರು 38 ಗ್ರಾಮಗಳು ಬರಗಾಲದಿಂದ ಮುಕ್ತಿ ಪಡೆಯಲಿವೆ.

Advertisement

ಸುಮಾರು 796 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಈ ಬೃಹತ್‌ ಯೋಜನೆಯು ಗುಜರಾತ ಮಾದರಿಯನ್ನು ಅನುಸರಿಸಲಾಗಿದೆ. ನಾರಾಯಣಪುರ ಡ್ಯಾಂ ಹಿನ್ನೀರಿನಿಂದ ನೇರವಾಗಿ ಲಿಪ್ಟ್ ಇರಿಗೇಶನ್‌ ಮೂಲಕ ನೀರು ಹರಿಸುವಂತಹ ಯೋಜನೆ ಇದಾಗಿದೆ. ಈ ನೀರಾವರಿ ಯೋಜನೆಯಿಂದ 20,243 ಹೆಕ್ಟೇರ್‌ (50,021 ಎಕರೆ) ಪ್ರದೇಶವು ನೀರಾವರಿಗೆ ಒಳಪಡಲಿದೆ.

ಈ ಯೋಜನೆಗೆ ಸಂಬಂಧಿಸಿ ಮೊದಲನೆ ಹಂತದಲ್ಲಿ 523 ಕೋಟಿ ರೂ.ಯಲ್ಲಿ 46 ಕಿ.ಮೀ.ವರೆಗೆ ರೈಸಿಂಗ್‌ ಮೇನ್‌ ಎರಡು ಡಿಲೇವರಿ ಚೇಂಬರ್‌ಗಳನ್ನು ನಾರಾಯಣಪುರದಿಂದ ನಿರ್ಮಿಸಲಾಗಿದೆ. ಒಂದು ಬಂಡೆಪ್ಪನಹಳ್ಳಿ ಸಾಲವಾಡಗಿ ಇನ್ನೊಂದು ಶಳ್ಳಗಿ ಗ್ರಾಮದ ಹತ್ತಿರ ನಿರ್ಮಿಸಲಾಗಿದೆ. ಇದಕ್ಕೆ ಸಂಬಂಧಿಸಿ 220 ಕೆವಿ ಲೋಡ್‌ ಸ್ಟೇಷನ್‌ ಕೂಡಾ ಆಗಿ ಕಾಮಗಾರಿ ಸಂಪೂರ್ಣಗೊಂಡಿದೆ.

ಸದ್ಯ 466 ಕಿ.ಮೀ. ಪೈಪ್‌ಲೈನ್‌ ಕಾರ್ಯಕ್ಕೆ ಭೂಮಿಪೂಜೆ ನಡೆಯಲಿದೆ. ಇದಕ್ಕೆ ಅಳವಡಿಸಲಾಗುತ್ತಿರುವ ಪೈಪ್‌ ಗಳು ಎಂ.ಎಸ್‌. ಮತ್ತು ಎಚ್‌.ಡಿ.ಪಿ. ಪೈಪ್‌ ಗಳನ್ನು ಒಳಗೊಂಡಿವೆ. ಮೊದಲು ಮಾಡಿದ ಕಾಮಗಾರಿಯಲ್ಲಿ 2.36 ಅಂದರೆ 8 ಅಡಿಯ ಚೇಂಬರ್‌ಗಳಾಗಿವೆ. ಸದ್ಯ 7 ಅಡಿಯ ಪೈಪ್‌ಗ್ಳು ಅಳವಡಿಸಲಾಗುತ್ತಿದ್ದು ಈ ಕಾಮಗಾರಿ ಪೂರ್ಣಗೊಳ್ಳುವುದರಿಂದ 50026 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ಈ ಕಾಮಗಾರಿಗೆ ಸಂಬಂಧಿಸಿ ಒಟ್ಟು 1068 ಬ್ಲಾಕ್‌ಗಳು ನಿರ್ಮಾಣ ವಾಗುತ್ತಿದ್ದು 25 ಎಕರೆಯಿಂದ 75 ಎಕರೆವರೆಗೆ ಒಂದೊಂದು ಬ್ಲಾಕ್‌ ಅಳವಡಿಸಲಾಗುತ್ತಿದೆ. ಪ್ರತಿ ಬ್ಲಾಕ್‌ ಗಳು 1 ಅಡಿಯ ಸಣ್ಣ ಪೈಪ್‌ಗ್ಳನ್ನು ಅಳವಡಿಸಿ ಎಫ್‌ ಐಸಿ ಮೂಲಕ ಜಮೀನುಗಳಿಗೆ ನೀರು ಹರಿಸುವಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದಾಗಿದೆ. ಈ ಯೋಜನೆಯಿಂದ ಈ ಭಾಗದ ಸುಮಾರು 10 ಸಾವಿರ ರೈತರಿಗೆ ಅನುಕೂಲವಾಗಲಿದೆ.

ಸ್ಕಾಡಾ ಸ್ವಯಂಚಾಲಿತ ತಂತ್ರಜ್ಞಾನ ಈ ಯೋಜನೆಯಡಿ ಅಳವಡಿಸಲಾಗಿದ್ದು ನೀರಾವರಿಗೆ ಒಳಪಡುವ 20,243 ಹೆಕ್ಟೇರ್‌ ಕ್ಷೇತ್ರವನ್ನು 5ರಿಂದ 30 ಹೆಕ್ಟೇರ್‌ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದ್ದು, ನೀರನ್ನು ವಿತರಣಾ ಜಾಲದ ಪೈಪ್‌ ಲೈನ್‌ ಮುಖಾಂತರ ಸ್ಕಾಡಾ ನಿಯಂತ್ರಣದೊಂದಿಗೆ ಪ್ರತಿ ಬ್ಲಾಕ್‌ಗೆ ಒದಗಿಸಲು ವಿನ್ಯಾಸಗೊಳಿಸಲಾಗಿರುತ್ತದೆ.

Advertisement

ಈ ಯೋಜನೆಗೆ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅವಶ್ಯಕ ಪರಿಸರ ತಿರುವಳಿಗೆ ಈಗಾಗಲೇ ಅನುಮೋದನೆ ಪಡೆಯಲಾಗಿದೆ. ಯೋಜನೆಯ ಎರಡನೇ ಭಾಗದಲ್ಲಿ ಸ್ಕಾಡಾ ವಾಲ್‌, ಪೈಪ್‌ಲೈನ್‌, ಎಲೆಕ್ಟ್ರೋ ಮೆಕ್ಯಾನಿಕಲ್‌ ಕಾಮಗಾರಿ, ಸ್ಕಾಡಾ ಅಟೋಮೇಷನ್‌ ಇತ್ಯಾದಿ ಕಾಮಗಾರಿ ಒಳಗೊಂಡಂತೆ ಟರ್ನ್ಕೀ ಆಧಾರದ ಮೇಲೆ ಬೆಂಗಳೂರಿನ ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಅವರಿಗೆ 796.11 ಕೋಟಿ ರೂ.ಗೆ ಗುತ್ತಿಗೆ ವಹಿಸಿಕೊಡಲಾಗಿದೆ.

ಡೆಲಿವೆರಿ ಚೇಂಬರ್‌-1ರಿಂದ 1.269 ಕ್ಯೂಮೆಕ್ಸ್‌ ನೀರಿನ ಸಾಮರ್ಥ್ಯದೊಂದಿಗೆ ಸುಮಾರು 2564.71 ಹೆಕ್ಟೇರ್‌ ಪ್ರದೇಶಕ್ಕೆ ಮತ್ತು ಡೆಲಿವೆರಿ ಚೇಂಬರ್‌-2ರಿಂದ 5.421 ಕ್ಯೂಮೆಕ್ಸ್‌ ಸಾಮರ್ಥ್ಯದೊಂದಿಗೆ ಸುಮಾರು 17678.29 ಹೆಕ್ಟೇರ್‌ ಪ್ರದೇಶಕ್ಕೆ ಪೈಪ್‌ಲೈನ್‌ ಮುಖಾಂತರ ನೀರಾವರಿಗೊಳ್ಳಲಿದೆ. ಒಟ್ಟು 466 ಕಿ.ಮೀ. ಪೈಪ್‌ಲೈನ್‌ ಉದ್ದದ ಕಾಮಗಾರಿಯಾಗಿದ್ದು ಅದರಲ್ಲಿ ಸುಮಾರು 136 ಕಿ.ಮೀ. ಎಂ.ಎಸ್‌.ಪೈಪ್‌ ಮತ್ತು ಸುಮಾರು 315 ಕಿ.ಮೀ.ಎಚ್‌.ಡಿ.ಪಿ.ಇ ಪೈಪ್‌ ಅಳವಡಿಸಲಾಗುತ್ತಿದ್ದು ಗರಿಷ್ಟ 2200 ಮಿ.ಮೀ. ವ್ಯಾಸ ಮತ್ತು ಕನಿಷ್ಠ 63 ಮಿ.ಮೀ. ವ್ಯಾಸವನ್ನು ಹೊಂದಿದೆ.

ಸಿಎಂ ಸ್ವಾಗತಕ್ಕೆ ಭರದ ಸಿದ್ಧ ತೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಾಗತಕ್ಕೆ ಸುಮಾರು 420×225 ಪೆಂಡಾಲ್‌ ಸಿದ್ಧ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಇದರ ಜೊತೆಗೆ ಈ ಭಾಗದಿಂದ ಸುಮಾರು 5 ಸಾವಿರ ಜನ ತಾಯಂದಿರರು ಭಾಗವಹಿಸಲಿದ್ದಾರೆಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿಗಳ ಆಗಮನಕ್ಕೆ ಮತ್ತು ತೆರಳಲು ಕೊಡಗಾನೂರ ಗ್ರಾಮ ಮತ್ತು ತಾಳಿಕೋಟೆಯ ಎಸ್‌.ಕೆ.ಪಿ.ಯು. ಕಾಲೇಜ್‌ನ ಆವರಣದಲ್ಲಿ ಎರಡು ಕಡೆಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸಲಾಗಿದೆ. ಮೊದಲು ಕೊಡಗಾನೂರ ಗ್ರಾಮದಲ್ಲಿ ನೀರಾವರಿ ಕಾಮಗಾರಿಗೆ ಚಾಲನೆ ನಂತರ ಝಡ್‌ ಪ್ಲಸ್‌ ಭದ್ರತೆಯಲ್ಲಿ ವಾಹನದಲ್ಲಿ ತಾಳಿಕೋಟೆಯ ಕೆ.ಎಚ್‌.ಬಿ.ಕಾಲೋನಿಯಲ್ಲಿ ನಿರ್ಮಾಣಗೊಂಡಿರುವ ಹೇಮರಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ನೇರವಾಗಿ ಎಸ್‌.ಕೆ. ಕಾಲೇಜ್‌ ಮೈದಾನದಿಂದ ಹೆಲಿಕಾಪ್ಟರ್‌ ಮೂಲಕ ರಾಯಚೂರಗೆ ತೆರಳಲಿದ್ದಾರೆ.

*ಜಿ.ಟಿ.ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next