Advertisement

ಬೆಳೆರೋಗ ಪತ್ತೆ, ಔಷಧ ಸಿಂಪಡಣೆಗೆ ಡ್ರೋಣ್‌ 

11:31 AM Nov 17, 2017 | |

ಬೆಂಗಳೂರು: ಕೃಷಿ ಬೆಳೆಗಳ ಆರೋಗ್ಯ ಮಾಹಿತಿಗೂ ಈಗ ದ್ರೋಣ್‌ ಬಂದಿದೆ. ಅಷ್ಟೇ ಅಲ್ಲ, ರೋಗಕ್ಕೆ ತುತ್ತಾಗುತ್ತಿರುವ ಬೆಳೆಗಳಿಗೆ ಅದೇ ದ್ರೋಣ್‌ ಔಷಧ ಸಿಂಪಡಿಸಿ ಬರುತ್ತದೆ! ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡ ನಾಲ್ಕು ದಿನಗಳ “ಕೃಷಿ ಮೇಳ’ದಲ್ಲಿ ಇಂತಹದ್ದೊಂದು ತಂತ್ರಜ್ಞಾನ ಪ್ರದರ್ಶನಕ್ಕಿಡಲಾಗಿದೆ.

Advertisement

ಸದರ್ನ್ ಎಲೆಕ್ಟ್ರಾನಿಕ್ಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಈ ದ್ರೋಣ್‌ನಲ್ಲಿ ಎನ್‌ಐಆರ್‌ (ನೀಯರ್‌ ಇನಾರೆಡ್‌) ಕ್ಯಾಮೆರಾ ಅಳವಡಿಸಲಾಗಿದೆ. ಅದರ ಸಹಾಯದಿಂದ ಆರೋಗ್ಯವಂತ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬೆಳೆಗಳನ್ನು ವಿಶ್ಲೇಷಣೆ ಮಾಡಿ, ರೈತರ ಮೊಬೈಲ್‌ಗೆ ಕಳುಹಿಸುತ್ತದೆ. ನಂತರ ರೋಗಕ್ಕೆ ತುತ್ತಾಗಬಹುದಾದ ಆ ಬೆಳೆಗಳಿಗೆ ಮಾತ್ರ ಸೂಕ್ತ ಔಷಧ ಸಿಂಪರಣೆ ಮಾಡುತ್ತದೆ.

ಸಾಮಾನ್ಯವಾಗಿ ರೈತರು ಒಂದು ಭಾಗದ ಬೆಳೆಗೆ ಕೀಟಬಾಧೆ ಕಂಡುಬಂದರೆ, ಇಡೀ ಜಮೀನಿನ ಬೆಳೆಗೆ ಔಷಧ ಸಿಂಪಡಿಸುತ್ತಾರೆ. ಆದರೆ ಈ ದ್ರೋಣ್‌ ರೋಗವಿರುವ ಭಾಗಕ್ಕೆ ಮಾತ್ರ ಔಷಧ ಸಿಂಪಡಿಸುತ್ತದೆ. ಇದರಿಂದ ಶೇ. 80ರಿಂದ 90ರಷ್ಟು ಅನಗತ್ಯ ಕೀಟನಾಶಕ ಸಿಂಪರಣೆ ತಪ್ಪಲಿದ್ದು, ಶ್ರಮ ಮತ್ತು ವೆಚ್ಚ ತಗ್ಗಲಿದೆ. ಇಳುವರಿ ಕೂಡ ಹೆಚ್ಚಲಿದೆ. ಅಷ್ಟೇ ಅಲ್ಲ, ಬೆಳೆಗಳ ಕಣ್ಗಾವಲಿಗೂ ಇದು ಅನುಕೂಲ ಎಂದು ಸದರ್ನ್ ಎಲೆಕ್ಟ್ರಾನಿಕ್ಸ್‌ (ಬೆಂಗಳೂರು) ಪ್ರೈ.ಲಿ.,ನ ಉದ್ಯೋಗಿ ಮಲ್ಲಿಕಾರ್ಜುನ್‌ ತಿಳಿಸಿದರು.

ನಿಮಿಷದಲ್ಲಿ ಒಂದು ಎಕರೆಯ ಚಿತ್ರಣ: ಕೇವಲ ಒಂದು ನಿಮಿಷದಲ್ಲಿ ಒಂದು ಎಕರೆ ಜಮೀನಿನ ಚಿತ್ರಣವನ್ನು ದ್ರೋಣ್‌ ಸೆರೆಹಿಡಿಯುತ್ತದೆ. ಎಲ್ಲ ಪ್ರಕಾರದ ಬೆಳೆಗಳಿಗೂ ಇದನ್ನು ಬಳಸಬಹುದು. ಈಗಾಗಲೇ ತುಮಕೂರು, ನೆಲಮಂಗಲ ಸೇರಿದಂತೆ ಹಲವೆಡೆ ಈ ತಂತ್ರಜ್ಞಾನದ ಪ್ರಯೋಗ ನಡೆದಿದ್ದು, ಈ ಭಾಗದ ಕೃಷಿಕರು ದ್ರೋಣ್‌ ಬಳಸಿ ಬಾಳೆ, ಭತ್ತ ಮತ್ತಿತರ ಬೆಳೆಗಳ ವಿಶ್ಲೇಷಣೆ ಮತ್ತು ಔಷಧ ಸಿಂಪರಣೆ ಮಾಡುತ್ತಿದ್ದಾರೆ. ಆದರೆ, ಇನ್ನೂ ಪ್ರಾಯೋಗಿಕ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಪಿ.ಕೆ. ಮುರಳೀಧರನ್‌ ಹೇಳುತ್ತಾರೆ.

ಮುಂದುವರಿದ ತಂತ್ರಜ್ಞಾನ; ತಜ್ಞ: ಈಗಾಗಲೇ ಈ ದೂರ ನಿಯಂತ್ರಣ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಪ್ರಸ್ತುತ ಈ ತಂತ್ರಜ್ಞಾನವು ಬೆಳೆಗಳ ಪ್ರತಿ ಹಂತಗಳನ್ನು ಕಾಲ ಕಾಲಕ್ಕೆ  ಕ್ಯಾಮೆರಾಗಳ ಮೂಲಕ ಸೆರೆಹಿಡಿದು ಮಾಹಿತಿ ಒದಗಿಸುತ್ತಿದೆ. ಭೂಮಿಯ ಫೋಟೋಗಳನ್ನೂ ಕ್ಲಿಕ್ಕಿಸುತ್ತದೆ.

Advertisement

ಹೊಲದಲ್ಲಿ ಕಳ್ಳತನಗಳು ನಡೆದರೆ, ಬೆಳೆಗಳಿಗೆ ಯಾವುದಾದರೂ ಪ್ರಾಣಿ ದಾಳಿ ನಡೆಸಿದ್ದರೆ, ಅದೆಲ್ಲದರ ಮಾಹಿತಿಗಳನ್ನು ಫೋಟೋಸಹಿತ ನೀಡುತ್ತದೆ. ಇದರ ಮುಂದುವರಿದ ತಂತ್ರಜ್ಞಾನವಾಗಿ ಈಗ ಔಷಧ ಸಿಂಪರಣೆಯನ್ನೂ ಮಾಡುವ ತಂತ್ರಜ್ಞಾನ ಪರಿಚಯಿಸಲಾಗಿದೆ ಎಂದು ತಜ್ಞರೊಬ್ಬರು ತಿಳಿಸಿದರು.

ರೋಗವಿದ್ದರೆ ರೆಡ್‌ ಸಿಗ್ನಲ್‌!: ದ್ರೋಣ್‌ನಲ್ಲಿ ಎನ್‌ಡಿವಿಐ ಇಂಡೆಕ್ಸ್‌ ಇರುತ್ತದೆ. ಅದಕ್ಕೆ ಹಸಿರು, ಕೆಂಪು, ನೀಲಿ ಸೇರಿದಂತೆ ಕೆಲವು ಸಂಕೇತಗಳನ್ನು ನೀಡಲಾಗಿರುತ್ತದೆ. ಆ ಸಂಕೇತಗಳು ಬೆಳೆಗಳ ಸ್ಥಿತಿಗತಿಯನ್ನು ಸೂಚಿಸುತ್ತವೆ. ಅಂದರೆ, ಹಸಿರು ಸಂಕೇತ ಆರೋಗ್ಯಯುತ ಬೆಳೆ, ನೀಲಿ ಸಂಕೇತ ರೋಗಕ್ಕೆ ತುತ್ತಾಗಬಹುದಾದ ಬೆಳೆ ಎಂದು ಸೂಚಿಸುತ್ತದೆ.

ವಿವಿಧ ಸಾಮರ್ಥ್ಯದ ದ್ರೋಣ್‌ಗಳು ಲಭ್ಯವಿದ್ದು, 1ರಿಂದ 10 ಲೀಟರ್‌ನಷ್ಟು ಔಷಧವನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿವೆ. 100ರಿಂದ 500 ಮೀ. ಎತ್ತರದಲ್ಲಿ ನಿರಂತರವಾಗಿ 45 ನಿಮಿಷ ಇವು ಹಾರಾಟ ನಡೆಸಬಲ್ಲವು. ಈ ದ್ರೋಣ್‌ಗಳ ಬೆಲೆ 2 ಲಕ್ಷ ರೂ.ನಿಂದ ಆರಂಭವಾಗುತ್ತದೆ. ರೈತರು ಬಾಡಿಗೆ ರೂಪದಲ್ಲಿ ಇದರ ಉಪಯೋಗ ಪಡೆಯಬಹುದು ಎಂದು ಮುರಳೀಧರನ್‌ ಸ್ಪಷ್ಟಪಡಿಸಿದರು.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next