Advertisement

Mangaluru: ನೀರಿನ ಸಮಸ್ಯೆ…ಚುನಾವಣ ಆಯೋಗಕ್ಕೆ ಇಲಾಖೆ ಮೊರೆ

11:25 PM Apr 22, 2023 | Team Udayavani |

ಮಂಗಳೂರು: ಈ ಬೇಸಗೆಯಲ್ಲಿ ಕಾಣಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಎಲ್ಲ ಜಿಲ್ಲೆಗಳಿಗೆ ತಲಾ 1 ಕೋಟಿ ರೂ. ನೆರವು ನೀಡುವುದಕ್ಕೆ ನೀತಿಸಂಹಿತೆಯಿಂದ ವಿನಾಯಿತಿ ನೀಡುವಂತೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಚುನಾವಣ ಆಯೋಗದ ಮೊರೆ ಹೋಗಿದೆ.

Advertisement

ಯಾವುದೇ ಹೊಸ ಕೆಲಸವನ್ನು ಚುನಾವಣ ನೀತಿಸಂಹಿತೆ ಜಾರಿಯಲ್ಲಿರುವಾಗ ನಡೆಸುವುದಕ್ಕೆ ಅನುಮತಿ ಇರುವುದಿಲ್ಲ. ಆದರೆ ಚುನಾವಣೆ ಸಂದರ್ಭ ದಲ್ಲೇ ಬೇಸಿಗೆಯ ಝಳ ಹೆಚ್ಚಿದ್ದು ನೀರಿನ ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ. ತುರ್ತು ಕೆಲಸ ಕೈಗೊಳ್ಳದೆ ಹೋದರೆ ಜನರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಚುನಾವಣ ಆಯೋಗದ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚು ಆಗುತ್ತಿರುವುದನ್ನು ಗಮನಿಸಿ ಪ್ರಾರಂಭದಲ್ಲಿ ಜಿ.ಪಂ. ಸಿಇಒ ಸರಕಾರದ ಗಮನಕ್ಕೆ ತಂದು, ನೀತಿಸಂಹಿತೆಯಿಂದ ಕುಡಿಯುವ ನೀರಿನ ವಿಚಾರಗಳಿಗೆ ವಿನಾಯಿತಿ ನೀಡುವಂತೆ ಕೋರಿದ್ದರು. ರಾಜ್ಯದ ಹಲವು ಕಡೆಯಿಂದ ಇದೇ ರೀತಿಯ ಮನವಿ ಇದ್ದ ಹಿನ್ನೆಲೆಯಲ್ಲಿ ಕುಡಿಯುವ ನೀರು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಚುನಾವಣ ಆಯೋಗದ ಗಮನಕ್ಕೆ ಇದನ್ನು ತಂದಿದ್ದಾರೆ. ಆಯೋಗ ಅನುಮತಿ ನೀಡುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಹೊಸ ಬೋರ್‌ವೆಲ್‌ ಕೊರೆಯುವಂತಿಲ್ಲ
ರಾಜ್ಯಾದ್ಯಂತ ನೀರಿನ ಸಮಸ್ಯೆ ಇರುವ ಜಿಲ್ಲೆಗಳಿಗೆ 1 ಕೋಟಿ ರೂ. ವೆಚ್ಚಕ್ಕೆ ಕ್ರಿಯಾಯೋಜನೆ ಕಳುಹಿಸುವಂತೆ ಸರಕಾರ ಸೂಚಿಸಿತ್ತು. ಈಗಾಗಲೇ ದ.ಕ. ಜಿಲ್ಲೆಯಿಂದ ಕ್ರಿಯಾಯೋಜನೆ ಹೋಗಿದೆ.

ಎಲ್ಲೆಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಗುರುತಿಸಿ ಸೂಕ್ತವೆನಿಸುವ ಕೆಲಸವನ್ನು ಇದರಲ್ಲಿ ಪಟ್ಟಿ ಮಾಡಲಾಗಿದೆ. ಬತ್ತಿದ ಬೋರ್‌ವೆಲ್‌ ಫÉಶ್‌ ಮಾಡುವುದು, ಆಳಮಾಡುವುದು, ಬಾವಿಯಿಂದ ಪಂಪ್‌ ಮಾಡಿಸುವುದು, ಖಾಸಗಿಯವರು ಬೋರ್‌ವೆಲ್‌ನಿಂದ ನೀರು ಕೊಡುವುದಾದರೆ ಅವರಿಗೆ 12 ಸಾವಿರ ರೂ. ಮಾಸಿಕ ಬಾಡಿಗೆ ಕೊಟ್ಟು ನೀರು ಪಡೆದುಕೊಳ್ಳುವುದು ಇತ್ಯಾದಿಗೆ ಅನುಮತಿ ಇದೆ. ಆದರೆ ಯಾವುದೇ ಕಾರಣಕ್ಕೂ ಹೊಸ ಬೋರ್‌ವೆಲ್‌ ಕೊರೆಯುವುದಕ್ಕೆ ಇದರಲ್ಲಿ ಅನುಮತಿ ಇಲ್ಲ. ಯಾವುದೇ ಪೂರಕ ಕ್ರಮ ಅಸಾಧ್ಯವೆಂದಾದರೆ ಕೊನೆಯ ಹಂತದಲ್ಲಿ ಟ್ಯಾಂಕರ್‌ ಮೂಲಕ ಜನವಸತಿ ಪ್ರದೇಶಗಳಿಗೆ ನೀರು ಕೊಡಬಹುದು.

Advertisement

ಈಗಾಗಲೇ ಬಾಳೆಪುಣಿ, ನರಿಂಗಾನ, ತಲಪಾಡಿಗಳಲ್ಲಿ ಹಲವು ಪ್ರದೇಶಗಳಲ್ಲಿ ನೀರು ಪೂರ್ತಿ ಬತ್ತಿ ಹೋದ ಹಿನ್ನೆಲೆಯಲ್ಲಿ ಟ್ಯಾಂಕರ್‌ನಲ್ಲಿ ಪೂರೈಕೆ ಮಾಡಲಾಗುತ್ತಿದೆ.

ನದಿ ಬತ್ತಿ ಬಹುಗ್ರಾಮ ಯೋಜನೆಗಳಿಗೂ ಸಮಸ್ಯೆ
ನೇತ್ರಾವತಿ, ಫಲ್ಗುಣಿಯಲ್ಲಿ ನೀರು ಬತ್ತಿರುವುದರಿಂದಾಗಿ ಸರಪಾಡಿ, ಸಂಗಬೆಟ್ಟು, ಮಾಣಿ ಬಹುಗ್ರಾಮ ಕುಡಿಯುವ ನೀರು ಯೋಜನೆ(ಎಂವಿಎಸ್‌)ಗಳಿಗೂ ನೀರಿಲ್ಲವಾಗಿದೆ. ನದಿಯ ಕೆಲವು ಆಳವಾದ ಹೊಂಡಗಳಲ್ಲಿ ನೀರನ್ನು ಗುರುತಿಸಲಾಗಿದ್ದು, ಪಂಪ್‌ ಮಾಡಿ ಎಂವಿಎಸ್‌ನ ಜಾಕ್‌ವೆಲ್‌ಗ‌ಳಿಗೆ ತರಲಾಗುತ್ತಿದೆ. ಅಗತ್ಯವಿದ್ದರೆ ಹತ್ತಿರದ ಇತರ ಅಣೆಕಟ್ಟುಗಳಿಂದ ನೀರು ಪಡೆಯಲಾಗುತ್ತದೆ.

ಇದನ್ನು ರೇಷನಿಂಗ್‌ ಮಾಡಿ ಕೊಂಡು ನೀರು ಗ್ರಾಮಗಳಿಗೆ ತಲಪಿಸಲಾಗುತ್ತಿದೆ.
ಇದಕ್ಕಾಗಿ ಹೆಚ್ಚುವರಿ ಪೈಪ್‌ಲೈನ್‌ ಹಾಕಲಾಗಿದೆ, ಮೋಟಾರ್‌ಪಂಪ್‌ ಬಳಸಿಕೊಂಡು, ಸರಪಾಡಿಯಲ್ಲಿನ ಹೊಂಡಗಳಿಂದ 2.5 ಎಂಎಲ್‌ಡಿ ನೀರು, ಸಂಗಬೆಟ್ಟಿನ ನದಿ ಹೊಂಡಗಳಿಂದ 1.5 ಎಂಎಲ್‌ಡಿ ನೀರು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ನರೇಂದ್ರ ಬಾಬು.

1 ಕೋಟಿ ರೂ. ವೆಚ್ಚದ ವಿವಿಧ ಕೆಲಸಗಳಿಗೆ ಕ್ರಿಯಾಯೋಜನೆ ಮಾಡಿ ಸರಕಾರಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಇಷ್ಟೇ ಅಲ್ಲದೆ 15ನೇ ಹಣಕಾಸು ಆಯೋಗದ ಹಣವನ್ನು ಬಳಸಿಕೊಂಡು ಗ್ರಾ.ಪಂ.ಗಳು ಕುಡಿಯುವ ನೀರಿನ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಅದರಲ್ಲಿ ಬೋರ್‌ವೆಲ್‌ ಹೊಸದಾಗಿ ಕೊರೆಯಲೂ ಸಾಧ್ಯವಿದೆ.
– ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next