Advertisement

ಮಂಡ್ಯ ತಾಲೂಕಿನಲ್ಲೂ ಕುಡಿವ ನೀರಿಗೆ ಸಮಸ್ಯೆ

12:36 PM Jul 07, 2019 | Team Udayavani |

ಮಂಡ್ಯ: ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಿರ್ವಹಣೆ ಕೊರತೆ, ಹಣವಿದ್ದರೂ ಅಂಗನವಾಡಿ ಕಟ್ಟಡಗಳ ನಿರ್ಮಾಣವಾಗಿಲ್ಲ. ಉತ್ತರ ವಲಯದಲ್ಲಿ ಶಿಕ್ಷಕರ ಕೊರತೆ. ಬೆಳೆ ಬೆಳೆಯುವಲ್ಲಿ ರೇಷ್ಮೆ ಬೆಳೆಗಾರರಲ್ಲಿ ಅರಿವಿನ ಕೊರತೆ.

Advertisement

ಶನಿವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಪ್ರಮುಖವಾಗಿ ಚರ್ಚೆಗೆ ಬಂದ ವಿಷಯಗಳು.

ಮಂಡ್ಯ ತಾಲೂಕಿನ ತೂಬಿನಕೆರೆ, ನೊದೆಕೊಪ್ಪಲು, ಬಿದರಕಟ್ಟೆ, ಊರಮಾರಕಸಲಗೆರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಅಭಿಯಂತರ ಸತೀಶ್‌ ಹೇಳಿದರು.

2018-19ನೇ ಸಾಲಿನಲ್ಲಿ ಮಂಜೂರಾಗಿರುವ 38 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 8 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1 ಘಟಕ ಆರಂಭವಾಗಬೇಕಿದೆ. ಹಲವು ಘಟಕಗಳು ಪ್ರಗತಿಯಲ್ಲಿದ್ದು, ಕೆಲ ಘಟಕಗಳ ಸ್ಥಾಪನೆಗೆ ಜಾಗದ ಸಮಸ್ಯೆ ಎದುರಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿ, ಹುಚ್ಚೇಗೌಡನ ಕೊಪ್ಪಲು ಗ್ರಾಮದಲ್ಲಿ ಎರಡು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿಲ್ಲ. ಹೀಗಾದರೆ ಹೇಗೆ. ಕೂಡಲೇ ಅದನ್ನು ದುರಸ್ತಿಪಡಿಸಿ ನೀರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ತಾಪಂ ಇಒ ನಾಗರಾಜು ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪಿಸಿದ ಬಳಿಕ ಗಾಜಿನ ಮೇಲೆ ಅದನ್ನು ನಿರ್ವಹಣೆ ಮಾಡುವವರ ಹೆಸರು, ಫೋನ್‌ ನಂಬರ್‌ ಹಾಗೂ ನಿರ್ವಹಣೆಯ ದಿನಾಂ ಎಲ್ಲಿಂದ ಎಲ್ಲಿಯವರೆಗೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಘಟಕದ ಆಸುಪಾಸಿನಲ್ಲಿ ಎರಡೆರಡು ಗಿಡ ನೆಟ್ಟು ಬೆಳೆಸುವುದು, ಸೋರಿಕೆ ನೀರು ಪೋಲಾಗದಂತೆ ನೀರು ಕೊಯ್ಲು ತೊಟ್ಟಿಗಳನ್ನು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಹಣವಿದ್ದರೂ ಕಟ್ಟಡ ನಿರ್ಮಿಸಿಲ್ಲ: ತಾಲೂಕಿನಲ್ಲಿ ಹತ್ತು ಅಂಗನವಾಡಿಗಳ ನಿರ್ಮಾಣಕ್ಕೆ 9 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಆದರೆ, ಕಟ್ಟಡ ನಿರ್ಮಾಣ ಮಾತ್ರ ಆರಂಭವಾಗಿಲ್ಲ. ಹೆಗ್ಗಡಹಳ್ಳಿ, ಚಂದಗಾಲು, ಹುಲಿವಾನ, ಚಿಕ್ಕಬಳ್ಳಿ, ಆನಸೋಸಲು, ಮಾಡ್ಲಾ, ಕಾರಸವಾಡಿ, ಯಲಿಯೂರು, ಯತ್ತಂಬಾಡಿ ಹಾಗೂ ಹಲಗೂರಿನಲ್ಲಿ ನಿರ್ಮಾಣವಾಗಬೇಕಿರುವ ಅಂಗನ ವಾಡಿ ಕಟ್ಟಡಗಳನ್ನು ಡಿಸೆಂಬರ್‌ ಒಳಗೆ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೇಷ್ಮೆ ಬೆಳೆಗಾರರಲ್ಲಿ ಅರಿವಿನ ಕೊರತೆ: ತಾಲೂಕಿನಲ್ಲಿ ರೇಷ್ಮೆ ಬೆಳೆಗಾರರಿಗೆ ಅರಿವಿನ ಕೊರತೆ ಹೆಚ್ಚಿದೆ. ಅವರನ್ನು ಕೋಲಾರ ಜಿಲ್ಲೆಗೆ ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬಂದರೂ ಬೆಳೆ ಬೆಳೆಯುವ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡಿಲ್ಲ. ಹನಿ ಮತ್ತು ತುಂತುರು ನೀರಾವರಿಯಲ್ಲಿ ಸಾವಯವ ಗೊಬ್ಬರ ಬಳಸಿಕೊಂಡು ಬೆಳೆ ಬೆಳೆಯುವಂತೆ ತಿಳಿವಳಿಕೆ ಹೇಳಿದರೂ ಅದನ್ನು ಅನುಸರಿಸುತ್ತಿಲ್ಲ ಎಂದು ರೇಷ್ಮೆ ಅಧಿಕಾರಿ ಸಿದ್ದರಾಜು ಹೇಳಿದರು.

ತಾಪಂ ಇಒ ನಾಗರಾಜು ಮಾತನಾಡಿ, ಹೊಸದಾಗಿ ರೇಷ್ಮೆ ಕೃಷಿಯಲ್ಲಿ ತೊಡಗುವ ಯುವಕರಿಗೆ ನೀವು ಆಧುನಿಕ ವಿಧಾನವನ್ನು ಪರಿಚಯಿಸಿ ಪ್ರೋತ್ಸಾಹ ನೀಡಬೇಕು. ಹೊಸ ವಿಧಾನವನ್ನು ರೈತರು ಅಳವಡಿಸಿಕೊಳ್ಳುವುದಕ್ಕೆ ಸ್ವಲ್ಪ ನಿಧಾನವಾಗಬಹುದು. ಅಷ್ಟಕ್ಕೇ ನಾವು ನಿರಾಶರಾಗದೆ ಅವರನ್ನು ಸದಾಕಾಲ ಹುರಿದುಂಬಿಸುತ್ತಿರುವಂತೆ ತಿಳಿಸಿದರು.

ಕೊಟ್ಟಿಗೆ ಗೊಬ್ಬರ, ಹಸುಗಳ ಗಂಜಲ ಸಂಗ್ರಹಿಸಿ ರೇಷ್ಮೆ ಬೆಳೆಗಳಿಗೆ ಒದಗಿಸಿದಲ್ಲಿ ಬೆಳೆಯೂ ಉತ್ತಮವಾಗಿ ಬರುತ್ತದೆ. ರೋಗ-ಕೀಟಗಳ ಬಾಧೆಯೂ ಇರುವುದಿಲ್ಲ. ನೀರನ್ನು ಮಿತವಾಗಿ ಬಳಸಿ ಬೆಳೆ ಬೆಳೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಕೋಲಾರದ ರೈತರು ಕೊಟ್ಟಿಗೆಯಿಂದ ಗಂಜಲ ಸಂಗ್ರಹಿಸಿಕೊಂಡು ಹೋಗಿ ಬೆಳೆಗಳಿಗೆ ಹಾಕುತ್ತಿದ್ದಾರೆ. ಸಾವಯವ ಗೊಬ್ಬರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರೂ ನಮ್ಮವರು ಅನುಸರಿಸುತ್ತಿಲ್ಲ. ಈಗ ರೇಷ್ಮೆ ಬೆಲೆ ಕೂಡ ಕಡಿಮೆ ಇರುವುದರಿಂದ ರೇಷ್ಮೆ ಬೆಳೆಯತ್ತ ಹೆಚ್ಚು ಜನರು ಒಲವು ತೋರುತ್ತಿಲ್ಲ. ಆದರೂ ನಾವು ರೈತರಿಗೆ ಪೂರಕವಾದ ತರಬೇತಿ ನೀಡುತ್ತಾ ಅವರನ್ನು ಪ್ರೋತ್ಸಾಹಿಸುತ್ತಿರುವುದಾಗಿ ಹೇಳಿದರು.

ಕೊಟ್ಟಿಗೆ ನಿರ್ಮಾಣಕ್ಕೆ ಪಟ್ಟಿ ರವಾನೆ: ಮಂಡ್ಯ ತಾಲೂಕಿನಲ್ಲಿ ನಾಲ್ಕು ತಿಂಗಳಿಗಾಗುವಷ್ಟು ಮೇವು ಸಂಗ್ರಹವಾಗಿದೆ. ಮೇವು ಬೀಜದ 1750 ಪೊಟ್ಟಣಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಭತ್ತ ಕಟಾವಿಗೆ ಬಂದಿರುವುದರಿಂದ ಮೇವಿಗೆ ಅಭಾವ ಕಂಡು ಬರುತ್ತಿಲ್ಲ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌ ತಿಳಿಸಿದರು.

ಜಾನುವಾರುಗಳ ಕೊಟ್ಟಿಗೆ ನಿರ್ಮಾಣಕ್ಕೆ ಗ್ರಾಪಂವಾರು ಫ‌ಲಾನುಭವಿಗಳ ಪಟ್ಟಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ಜಿಪಂ ಸಿಇಒ ಸೂಚಿಸಿದ್ದರ ಮೇರೆಗೆ 8 ಪಂಚಾಯಿತಿಗಳಿಂದ 321 ಫ‌ಲಾನುಭವಿಗಳ ಪಟ್ಟಿ ಕಳುಹಿಸಲಾಗಿದೆ. ಬೇಲೂರು-27, ಕೊತ್ತತ್ತಿ-33, ತಗ್ಗಹಳ್ಳಿ-18, ತೂಬಿನಕೆರೆ-33, ಕೆರಗೋಡು-82, ಬಿ.ಹೊಸೂರು-56, ಸಾತನೂರು-58, ಹೆಚ್‌ಮಲ್ಲೀಗೆರೆ 12 ಮಂದಿಯನ್ನು ಗುರುತಿಸಿ ಪಟ್ಟಿ ರವಾನಿಸಲಾಗಿದೆ ಎಂದರು.

ಸಭೆಯಲ್ಲಿ ತಾಪಂ ಇಒ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಕೇಶವಮೂರ್ತಿ ಇತರರಿದ್ದರು.

ಉತ್ತರ ವಲಯದಲ್ಲಿ ಶಿಕ್ಷಕರ ಕೊರತೆ:

ಶಿಕ್ಷಣ ಇಲಾಖೆಯ ಉತ್ತರ ವಲಯದಲ್ಲಿ 93 ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 7 ಪ್ರೌಢಶಾಲಾ ಶಿಕ್ಷಕರ ಕೊರತೆ ಇದೆ. ಈ ಸಾಲಿನ ದಾಖಲಾತಿ ಪೂರ್ಣಗೊಂಡಿದ್ದು, ಶಿಕ್ಷಕರ ನೇಮಕಕ್ಕೆ ಆದೇಶವಾಗಬೇಕಿದೆ. ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಸಂಪೂರ್ಣವಾಗಿ ವಿತರಿಸಿದ್ದು, ಸಮವಸ್ತ್ರ, ಬೈಸಿಕಲ್, ಸಾಕ್ಸ್‌ ಮತ್ತು ಶೂಗಳು ಬಿಡುಗಡೆಯಾಗಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ವಿವರಣೆ ನೀಡಿದರು. ದಕ್ಷಿಣ ವಲಯದಲ್ಲಿ ಶೇ.96ರಷ್ಟು ಪಠ್ಯಪುಸ್ತಕ ವಿತರಣೆಯಾಗಿದೆ. ನಮ್ಮ ವಲಯದಲ್ಲಿ ಮುಚ್ಚಿದ್ದ ಹೊನಗಾನಹಳ್ಳಿ ಮತ್ತು ಸುಂಡಹಳ್ಳಿ ಶಾಲೆಗಳು ಮತ್ತೆ ತೆರೆದಿವೆ. ಹೊನಗಾನಹಳ್ಳಿ ಶಾಲೆಗೆ 18 ಹಾಗೂ ಸುಂಡಹಳ್ಳಿ ಶಾಲೆಗೆ 12 ಮಕ್ಕಳು ದಾಖಲಾಗಿವೆ. ಪಠ್ಯ ಪುಸ್ತಕಗಳನ್ನು ಈಗ ಆನ್‌ಲೈನ್‌ನಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಷ್ಟೇ ಬುಕ್ಕಿಂಗ್‌ ಮಾಡಬೇಕು. ಅಷ್ಟು ಪುಸ್ತಕಗಳು ಮಾತ್ರ ನಮಗೆ ಸಿಗಲಿವೆ. ಅದಕ್ಕಿಂತ ಹೆಚ್ಚಾಗಿ ಒಂದು ಪುಸ್ತಕವೂ ನಮಗೆ ದೊರಕುವುದಿಲ್ಲ. ವಿಳಂಬವಾಗಿ ದಾಖಲಾಗಿರುವ ಮಕ್ಕಳಿಗೆ ಪಠ್ಯಪುಸ್ತಕ ದೊರಕಿಲ್ಲ. ಆ ಮಕ್ಕಳಿಗೆ ಶೀಘ್ರವೇ ಪಠ್ಯಪುಸ್ತಕ ದೊರಕಿಸಿಕೊಡುವುದಾಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next