ಸವಣೂರು: ಡಾ| ವಿ.ಕೃ.ಗೋಕಾಕ ಅವರ ಬದುಕು ಮತ್ತು ಬರಹ ಸಾರ್ವಕಾಲಿಕವಾಗಿ ಎಲ್ಲರಿಗೂ ಅನುಕರಣೀಯವಾಗಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಅವರ ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆ ಮಾಡುವಂತಹ ವಿಷಯವಾಗಿದೆ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಡಾ| ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪದಾಧಿಕಾರಿಗಳು ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ| ವಿ.ಕೃ.ಗೋಕಾಕ ಅವರ 112ನೇ ಜನ್ಮದಿನಾಚರಣೆಯ ಸರಳ ಸಮಾರಂಭವನ್ನು ಡಾ| ಗೋಕಾಕ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಪಾರ ಭಾಷಾಭಿಮಾನಿಯಾಗಿದ್ದ ಗೋಕಾಕ ಅವರು ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಡಿದ ಮಹನೀಯರಲ್ಲಿ ಮೊದಲಿಗರಾಗಿದ್ದರು. ಕನ್ನಡ ಭಾಷೆಗೆ 5 ನೇ ಜ್ಞಾನಪೀಠ ಪ್ರಶಸ್ತಿ ದೊರಕಿಸಿದ ಕೀರ್ತಿ ತಂದುಕೊಟ್ಟ ಡಾ| ಗೋಕಾಕರ ಜನ್ಮಸ್ಥಳ ಧನ್ಯ ಎಂದು ಹೇಳಿದರು. ಡಾ| ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ| ಗೋಕಾಕ ಅವರ ಹೆಸರಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವಾಗಿದ್ದು, ಬರಹ ಹಾಗೂ ಜೀವನ ಸಾಕ್ಷÂಚಿತ್ರ ಕುರಿತು ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಚಿವ ಬಸವರಾಜ ಬೊಮ್ಮಾಯಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಪ್ರಭು ಅರಗೋಳ, ಕರವೇ ತಾಲೂಕು ಅಧ್ಯಕ್ಷ ಪರಶುರಾಮ ಈಳಗೇರ, ಸಿ.ವಿ.ಗುತ್ತಲ, ಎಸ್.ವಿ. ಬಳಗಾರ, ವಿ.ಎಸ್. ಸಣ್ಣಶಿವಣ್ಣನವರ ಇತರರು ಪಾಲ್ಗೊಂಡಿದ್ದರು. ಕಸಾಪ ಪದಾಧಿಕಾರಿಗಳಾದ ಸಿ.ಎನ್.ಪಾಟೀಲ, ಡಿ.ಎಫ್. ಬಿಂದಲಗಿ ಕಾರ್ಯಕ್ರಮ ನಿರ್ವಹಿಸಿದರು.