Advertisement

ಹೂಳು ತೆರವಿಗೆ ರಾಜ್ಯದಲ್ಲಿಲ್ಲ ಡ್ರೆಜ್ಜಿಂಗ್‌ ಯಂತ್ರ

10:29 AM Feb 26, 2020 | sudhir |

ಕುಂದಾಪುರ: ಸರಿಸುಮಾರು 320 ಕಿ.ಮೀ. ಕರಾವಳಿ ತೀರ, 21,891 ಮೀನುಗಾರಿಕೆ ದೋಣಿಗಳು, ಎಂಟು ಮೀನು ಗಾರಿಕೆ ಬಂದರು ಮತ್ತು 26 ಮೀನು ಗಾರಿಕೆ ಇಳಿದಾಣಗಳನ್ನು ಹೊಂದಿರುವ ಕರ್ನಾಟಕದಲ್ಲಿ ಒಂದೂ ಡ್ರೆಜಿಂಗ್‌ ಯಂತ್ರವಿಲ್ಲ ಎಂಬುದು ವಿಚಿತ್ರವಾದರೂ ನಿಜ. ಬಂದರು ಮತ್ತು ಮೀನುಗಾರಿಕೆ ಇಲಾಖೆಯು ಈವರೆಗೆ ಯಂತ್ರ ಖರೀದಿಗೆ ಮುಂದಾಗಿಯೇ ಇಲ್ಲ!

Advertisement

ಮೀನುಗಾರಿಕೆ ಬಂದರುಗಳಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಅದನ್ನು ಮೇಲೆತ್ತಬೇಕು. ಆದರೆ ಇದನ್ನು ಮುಂಬಯಿ, ಕೇರಳದ ಖಾಸಗಿಯವರಿಗೆ ಟೆಂಡರ್‌ಗೆ ಕೊಡಬೇಕಾದ ಸ್ಥಿತಿ ನಮ್ಮದು. ಉಡುಪಿ, ದಕ್ಷಿಣ ಕನ್ನಡ ಮತ್ತು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಲ್ಪೆ, ಮಂಗಳೂರು, ಕಾರವಾರ ಮೀನುಗಾರಿಕೆಯ ಬೃಹತ್‌ ನೆಲೆಗಳು. ಇಲ್ಲೆಲ್ಲ ಸಮರ್ಪಕ ಡ್ರೆಜ್ಜಿಂಗ್‌ ನಡೆಯದೇ ಹಲವು ವರ್ಷಗಳು ಕಳೆದಿವೆ.

ಅಲ್ಪ ಸ್ವಲ್ಪ ತೆರವು
ಇಲಾಖೆ ಪ್ರತಿ ವರ್ಷ ನೆಪ ಮಾತ್ರಕ್ಕೆ ಖಾಸಗಿಯವರ ಮೂಲಕ ಅಲ್ಪಸ್ವಲ್ಪ ಹೂಳೆತ್ತುತ್ತದೆ. ಅದು ಸರಿಯಾಗಿ ಆಗದ ಕಾರಣ ಹೂಳು ತೆರವಾದ ಬಂದರು ಒಂದೂ ಇಲ್ಲ. ಸಾಮಾನ್ಯವಾಗಿ ಬೋಟಿನ ಕೆಳಭಾಗವು ನೀರಿನ ಮಟ್ಟಕ್ಕಿಂತ 3 ಮೀ.ನಷ್ಟು ಕೆಳಗಿರುತ್ತದೆ. ಅದಕ್ಕಿಂತಲೂ ಎರಡೂವರೆ ಮೀ.ನಷ್ಟು ಆಳವಾಗಿ ಹೂಳೆತ್ತಿದರೆ ಮಾತ್ರ ಸುಗಮ ಸಂಚಾರ ಸಾಧ್ಯ ಎನ್ನುತ್ತಾರೆ ಮೀನುಗಾರರು.

ಕೋಡಿ- ಗಂಗೊಳ್ಳಿಯಲ್ಲಿ ದಿಬ್ಬ
ಕೋಡಿ- ಗಂಗೊಳ್ಳಿಯಲ್ಲಿ ಬ್ರೇಕ್‌ವಾಟರ್‌ಗಳಿಂದಾಗಿ ಇವರೆಡರ ಮಧ್ಯದ ಅಳಿವೆಯಲ್ಲಿ ಹೂಳು ತುಂಬಿ ಮರಳು ದಿಬ್ಬಗಳಾಗಿವೆ. ಇದನ್ನು ತೆರವುಗೊಳಿಸಲಾಗುವುದು ಎಂದು ಸಚಿವರು, ಶಾಸಕರು, ಅಧಿಕಾರಿಗಳು ನೀಡಿದ ಭರವಸೆಯೂ ಹಳೆಯದಾಗಿದೆ.

ಕೇರಳ ಮಾತ್ರ
ಕರ್ನಾಟಕದಲ್ಲೆಲ್ಲೂ ಸರಕಾರಿ ಅಥವಾ ಖಾಸಗಿ ಡ್ರೆಜ್ಜಿಂಗ್‌ ಯಂತ್ರ ಇಲ್ಲ. ಕೇರಳದ ಸರಕಾರ ಸ್ವಂತ ಯಂತ್ರ ಹೊಂದಿದೆ. ಮಹಾ ರಾಷ್ಟ್ರ, ಗೋವಾ ಮತ್ತಿತರ ಕಡೆ ಖಾಸಗಿಯವರು ಹೂಳೆತ್ತುವುದನ್ನು ನಿರ್ವಹಿಸುತ್ತಿದ್ದಾರೆ.

Advertisement

ಮೀನುಗಾರಿಕೆಗೆ ಅಡ್ಡಿ
ಬಂದರು ಪ್ರದೇಶಗಳಲ್ಲಿ ಹೂಳು ತುಂಬಿರುವುದರಿಂದ ಇಳಿತದ ಸಂದರ್ಭದಲ್ಲಿ ಬೋಟುಗಳ ಸಂಚಾರ ಮತ್ತು ಲಂಗರಿಗೆ ತೊಂದರೆಯಾಗುತ್ತಿದೆ. ಬೋಟ್‌, ದೋಣಿಗಳ ತಳಕ್ಕೆ ಹೂಳು ತಾಗಿ ಹಾನಿಯಾಗುತ್ತದೆ. ಮತ್ಸéಕ್ಷಾಮ, ಪ್ರತಿಕೂಲ ಹವಾಮಾನ ಮಾತ್ರ ವಲ್ಲದೆ ಹೂಳು ಕೂಡ ಮೀನುಗಾರಿಕೆಗೆ ತೊಡಕಾಗಿದೆ. ಹೂಳು ಬೋಟ್‌ ಅವಘಡಗಳಿಗೂ ಕಾರಣವಾಗಿದ್ದು, ಹಲವೆಡೆ ಇಂತಹ ಘಟನೆ ಗಳು ಈಗಾಗಲೇ ಸಂಭವಿಸಿವೆ.

ಕೋಡಿ – ಗಂಗೊಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಮೀನುಗಾರಿಕೆ ಬಂದರುಗಳಲ್ಲಿ ಹೂಳೆತ್ತುವ ಸಂಬಂಧ ಸರ್ವೇ ನಡೆಸಲಾಗಿದೆ. ಅದರ ಆಧಾರದ ಮೇಲೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು.
– ಗಣೇಶ್‌ ಕೆ., ಉಪ ನಿರ್ದೇಶಕರು, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ

ಡ್ರೆಜ್ಜಿಂಗ್‌ ಯಂತ್ರ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇರಳದಲ್ಲಿ ಯಂತ್ರವಿದ್ದು, ಅಲ್ಲಿನ ಇಲಾಖೆಗೆ ಅದರ ನಿರ್ವಹಣೆ ಸಮಸ್ಯೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದರ ಸಾಧಕ- ಬಾಧಕಗಳನ್ನು ಪರಿಶೀಲಿಸಲಾಗುವುದು. ಹೊರಗುತ್ತಿಗೆ ಆಧಾರದಲ್ಲಿ ಡ್ರೆಜ್ಜಿಂಗ್‌ ಯಂತ್ರ ಬಳಸುವ ಸಂಬಂಧ ಪ್ರಯತ್ನಿಸಲಾಗುವುದು. ಹೂಳು ತೆರವಿಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಬಂದರು ಮತ್ತು ಮೀನುಗಾರಿಕೆ ಸಚಿವರು

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next