Advertisement

ಮಲ್ಪೆ ಬಂದರಿನಲ್ಲಿ ಹೂಳು: ಡ್ರಜ್ಜಿಂಗ್‌ ಬೇಡಿಕೆಗೆ ಇನ್ನೂ ಸಿಗಲಿಲ್ಲ ಮನ್ನಣೆ

12:39 PM May 26, 2022 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೃಹತ್‌ ಪ್ರಮಾಣದಲ್ಲಿ ಹೂಳು ತುಂಬಿ ಕೊಂಡಿದ್ದು ನೀರಿನ ಇಳಿತದ ಸಂದರ್ಭದಲ್ಲಿ ಮೀನು ಗಾರಿಕೆ ಬೋಟ್‌ಗಳ ಲಂಗರು ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿದೆ.

Advertisement

ಸಮರ್ಪಕವಾದ ಡ್ರಜ್ಜಿಂಗ್‌ ಕೆಲಸ ನಡೆಯ ದಿರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಬೋಟ್‌ ಮಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿ ಸಂಪೂರ್ಣ ಡ್ರಜ್ಜಿಂಗ್‌ ಕಾಮಗಾರಿ ಆಗಬೇಕು ಎಂಬ ಬೇಡಿಕೆ ಇನ್ನೂ ಕೈಗೂಡಿಲ್ಲ. ವರ್ಷ ವರ್ಷ ಡ್ರಜ್ಜಿಂಗ್‌ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ ಎಂಬುದು ಮೀನುಗಾರರ ಅಭಿಪ್ರಾಯ.

ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ

ಈ ಹಿಂದೆ ಹೂಳೆತ್ತಿದ್ದ ಸಂಸ್ಥೆಯೊಂದು ಅರ್ಧಂಬರ್ಧ ಕೆಲಸ ಮಾಡಿ ಹಣ ಪಡೆದು ಹೋಗಿದೆ ಎಂದು ಮೀನುಗಾರರು ಆರೋಪಿಸುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಬೋಟ್‌ನಿಂದ ಮೀನುಗಳನ್ನು ಇಳಿಸುವ ಕಾರ್ಯ ನಡೆಯುತ್ತಿದೆ. ಬೋಟ್‌ನಿಂದ ಬೋಟ್‌ಗೆ ನಡೆದುಕೊಂಡು ಹೋಗುವ ಸಮಯ ದಲ್ಲಿ ಆಯ ತಪ್ಪಿ ನೀರಿಗೆ ಬಿದ್ದರೆ ಜೀವಕ್ಕೆ ಮಾತ್ರ ಇಲ್ಲಿ ಯಾವುದೇ ಗ್ಯಾರಂಟಿ ಇಲ್ಲ. ಸುಮಾರು ಆಳದವರೆಗೆ ಕೆಸರು ತುಂಬಿಕೊಂಡಿರುವುದರಿಂದ ಬಿದ್ದ ವ್ಯಕ್ತಿ ಮೇಲೆ ಬರದೆ ನೇರ ಅಡಿಭಾಗವನ್ನು ಸೇರುತ್ತಾನೆ. ಇಂತಹ ಆನೇಕ ಪ್ರಕರಣಗಳು ಮಲ್ಪೆ ಬಂದರಿನಲ್ಲಿ ನಡೆಯುತ್ತಲೇ ಇದೆ. ಇದರಲ್ಲಿ ಹೊರರಾಜ್ಯದ ಮೀನುಗಾರರ ಸಂಖ್ಯೆಯೇ ಹೆಚ್ಚು. ಬೋಟ್‌ನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದವರ ಬಗ್ಗೆ ಬೋಟು ಮಾಲಕರಿಗಾಗಲಿ, ಮನೆ ಮಂದಿಗಾಗಲಿ ಮಾಹಿತಿ ಇಲ್ಲದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್‌ ಠಾಣೆಗೂ ಮಾಹಿತಿ ನೀಡದೆ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.

ತತ್‌ಕ್ಷಣ ಇಲ್ಲಿ ಹೂಳೆತ್ತುವ ಕೆಲಸ ಆಗಬೇಕಾಗಿದೆ ಎನ್ನುತ್ತಾರೆ ಇಲ್ಲಿ ಜನ ನೀರಿಗೆ ಬಿದ್ದರೆ ಮೊದಲ ಕರೆ ಸ್ವೀಕರಿಸುವ ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು.

Advertisement

ಮಲ್ಪೆಯಲ್ಲಿರುವ ಬೋಟ್‌ಗಳು

ಮಲ್ಪೆ ಬಂದರಿನಲ್ಲಿ ಸುಮಾರು 1,200ರಷ್ಟು ಡೀಪ್‌ಸೀ ಟ್ರಾಲ್‌ಬೋಟ್‌ಗಳು, 100 ಪಸೀìನ್‌, 500ರಷ್ಟು ತ್ರಿಸೆವೆಂಟಿ ಟ್ರಾಲ್‌ಬೋಟ್‌, 200 ಸಣ್ಣ ಟ್ರಾಲ್‌ಬೋಟ್‌ ಸೇರಿದಂತೆ ಸಾವಿರಾರು ಯಾಂತ್ರಿಕೃತ ಬೋಟ್‌ಗಳು, ನಾಡದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ.

ಎಲ್ಲೆಲ್ಲಿ ಹೂಳು ತುಂಬಿವೆ?

1 ಮತ್ತು 2 ಹಾಗೂ 3ನೇ ಹಂತದ ಜೆಟ್ಟಿಯಲ್ಲಿ ಕೆಸರು ತುಂಬಿಕೊಂಡಿದೆ. ನೀರು ಇಳಿತದ ಸಂದರ್ಭದಲ್ಲಿ ಬೋಟನ್ನು ಒಳ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಬಾಪುತೋಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು, 1 ಮತ್ತು 2ನೇ ಜೆಟ್ಟಿಯಲ್ಲಿ ಮೀನು ಖಾಲಿ ಮಾಡಿ 3ನೇ ಜೆಟ್ಟಿಗೆ ಬೋಟುಗಳು ತೆರಳಲು ಸಾಧ್ಯವಾಗುತ್ತಿಲ್ಲ. ದಾರಿಯಲ್ಲಿ ಅಗಾಧ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು ಬೋಟುಗಳ ಚಲನಕ್ಕೆ ಸಮಸ್ಯೆಯಾಗಿ ಬೋಟ್‌ ಹಾನಿಯಾಗುವ ಸಾಧ್ಯತೆ ಇದೆ. ನೀರಿನ ಇಳಿತದ ಸಂದರ್ಭದಲ್ಲಿ ಅಳಿವೆ ಬಾಗಿಲಿನಲ್ಲೂ ಸಮಸ್ಯೆ ಎದುರಾಗುತ್ತದೆ ಎನ್ನಲಾಗಿದೆ. ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿದ್ದರಿಂದ ಒಂದೆಡೆ ಬೋಟಿನ ಅಡಿಭಾಗಕ್ಕೆ ಹಾನಿಯಾದರೆ, ಅಡಿಭಾಗದ ಕೆಸರಿನಿಂದ ಕೂಡಿದ ನೀರು ಎಂಜಿನ್‌ನಲ್ಲಿ ಅಳವಡಿಸಿದ ಲಕ್ಷಾಂತರ ರೂಪಾಯಿ ವೆಚ್ಚದ ವಾಟರ್‌ ಕೂಲರ್‌ ಸೇರಿಕೊಂಡು ಹಾನಿಗೊಳಗಾಗುತ್ತವೆ ಎನ್ನುತ್ತಾರೆ ಮೀನುಗಾರ ಸಂಘದ ಕಾರ್ಯದರ್ಶಿ ರತ್ನಾಕರ ಸಾಲ್ಯಾನ್‌.

ಇಲ್ಲಿ ಡ್ರಜ್ಜಿಂಗ್‌ ಯಂತ್ರ ಅಗತ್ಯ

ಕೇರಳ ರಾಜ್ಯದ ಪ್ರತೀ ಬಂದರಿನಲ್ಲಿ ಡ್ರಜ್ಜಿಂಗ್‌ ಯಂತ್ರದ ವ್ಯವಸ್ಥೆ ಇರುವುದರಿಂದ ಅಲ್ಲಿನ ಬಂದರಿನಲ್ಲಿ ಹೂಳಿನ ಸಮಸ್ಯೆ ಎದುರಾಗುತ್ತಿಲ್ಲ. ನಮ್ಮ ರಾಜ್ಯದ ಪ್ರಮುಖ ಬಂದರಿನಲ್ಲೂ ಡ್ರಜ್ಜಿಂಗ್‌ ಯಂತ್ರದ ವ್ಯವಸ್ಥೆಗೊಳಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

ಸಮಸ್ಯೆ ಬಗೆಹರಿಸಿ

ಹೂಳಿನ ಸಮಸ್ಯೆ ರಾಜ್ಯದ ಎಲ್ಲ ಬಂದರುಗಳಲ್ಲಿ ಇದೆ. ಹಲವು ಬಾರಿ ಸರಕಾರಕ್ಕೆ ಹೂಳೆತ್ತಲು ಮನವಿಯನ್ನು ಮಾಡಲಾಗಿದೆ. ಇದೀಗ ಡ್ರಜ್ಜಿಂಗ್‌ಗೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದೆ. ಸೆಪ್ಟಂಬರ್‌ನಲ್ಲಿ ಕಾಮಗಾರಿಯನ್ನು ನಡೆಸುತ್ತಾರೆಂಬ ವಿಶ್ವಾಸ ಇದೆ. ಸರಕಾರ ಅದಷ್ಟು ಶೀಘ್ರದಲ್ಲಿ ಮೀನುಗಾರರ ಸಮಸ್ಯೆಯನ್ನು ಬಗೆ ಹರಿಸಬೇಕಾಗಿದೆ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಅಂದಾಜು ಪಟ್ಟಿ ಸಲ್ಲಿಕೆ

ಶಾಸಕರ ಪ್ರಯತ್ನದಿಂದ 3 ಕೋ. ರೂ. ಅಂದಾಜು ಪಟ್ಟಿಯಲ್ಲಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಅನುದಾನವೂ ಬಿಡುಗಡೆಯಾಗಬಹುದು. ಈಗಿರುವ 3 ಬೇಸಿನ್‌ ಮತ್ತು ಚನೆಲ್‌ನ ಡ್ರಜ್ಜಿಂಗ್‌ ನಡೆಸಲಾಗುವುದು. ಟೆಂಡರ್‌ ಪ್ರಕ್ರಿಯೆ ನಡೆಸಿ ಮಳೆಗಾಲ ಮುಗಿದ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುವುದು. -ಉದಯ ಕುಮಾರ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌, ಬಂದರು ಇಲಾಖೆ

 ಶೀಘ್ರದಲ್ಲೇ ಕಾಮಗಾರಿ

ಬಂದರಿನ ಡ್ರಜ್ಜಿಂಗ್‌ ಸಮಸ್ಯೆಯ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. – ಅಂಗಾರ ಎಸ್‌., ಮೀನುಗಾರಿಕ ಸಚಿವರು

ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next