Advertisement

ಡಾ|ಟಿ.ಎಂ.ಎ. ಪೈ ದತ್ತಿ ನಿಧಿ ಯೋಜನೆಯಿಂದ ನೆರವಿನ “ಹಸ್ತ’

03:45 AM Mar 12, 2017 | |

ಕೈಗಳ ಜನ್ಮಜಾತ ತೊಂದರೆಗೆ ಚಿಕಿತ್ಸೆ: ಮಕ್ಕಳ ಆರೋಗ್ಯಕ್ಕೆ 
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹ್ಯಾಂಡ್‌ ಎಂಡ್‌ ಮೈಕ್ರೋಸರ್ಜರಿ ಘಟಕವು 2016ರ ಆಗಸ್ಟ್‌ ತಿಂಗಳಲ್ಲಿ 0-15 ವರ್ಷದ ಮಕ್ಕಳ ಕೈಗಳ ವೈಕಲ್ಯಕ್ಕೆ ಸಂಬಂಧಿಸಿದ ಕಾರಣವನ್ನು ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಿ, ಆ ಮೂಲಕ ಆ ಮಕ್ಕಳು ತನ್ನ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುವ ಒಂದು ಸಾಮಾಜಿಕ ಸೇವಾ ಯೋಜನೆಯನ್ನು ರೂಪಿಸಿತು. ಈ ಉದ್ದೇಶಕ್ಕಾಗಿ ಮಣಿಪಾಲ ವಿಶ್ವವಿದ್ಯಾನಿಲಯವು ಟಿಎಂಎ ಪೈ ದತ್ತಿ ನಿಧಿಯನ್ನು ಮಂಜೂರು ಮಾಡಿರುತ್ತದೆ. ಜಿಲ್ಲಾಡಳಿತ ಮತ್ತು ಜಿ. ಶಂಕರ್‌ ಟ್ರಸ್ಟ್‌ ನ ಸಹಯೋಗವೂ ಸಹ ಈ ಯೋಜನೆಗಿದೆ.
    
ಉಡುಪಿ ಜಿಲ್ಲೆಯಲ್ಲಿ, ಸಾಮುದಾಯಿಕ ನೆಲೆಯಲ್ಲಿ ಕೈಗಳ ಜನ್ಮಜಾತ ವೈಕಲ್ಯಗಳಿಗೆ ಸಂಬಂಧಿಸಿದ ಚಿಕಿತ್ಸಾ ಯೋಜನೆ ಎಂಬುದು, ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಣಿಪಾಲ ಇದರ ಆಥೋìಪೆಡಿಕ್ಸ್‌ ವಿಭಾಗವು, ಟಿಎಂಎ ಪೈ ದತ್ತಿ ನಿಧಿಯ ಸಹಯೋಗದೊಂದಿಗೆ 2016ರ ಆಗಸ್ಟ್‌ ತಿಂಗಳಲ್ಲಿ  ರೂಪಿಸಿದ ಒಂದು ಕ್ರಿಯಾ ಯೋಜನೆ. 

Advertisement

ಕೈಯ ಜನ್ಮಜಾತ ತೊಂದರೆಗಳು (ಅಸಹಜತೆ) ಅಂದರೆ ಮಗುವು ಹುಟ್ಟುತ್ತಲೆ ಬಂದಿರುವ ಕೈಯ ವೈಕಲ್ಯಗಳು. ಈ ವೈಕಲ್ಯಗಳಿಂದಾಗಿ ಆ ಮಗು ಮತ್ತು ಅದನ್ನು ನೋಡಿಕೊಳ್ಳುವವರ ಜೀವನ ಗುಣಮಟ್ಟದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಉಂಟಾಗಬಹುದು. ಕಳೆದ ಮೂರು ದಶಕಗಳಿಂದಲೂ ಈ ವೈಕಲ್ಯಗಳ ಸೂಕ್ತ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ, ಆಥೋìಪೆಡಿಕ್ಸ್‌ ವಿಭಾಗದ, ಹ್ಯಾಂಡ್‌ ಎಂಡ್‌ ಮೈಕ್ರೋಸರ್ಜರಿ ಘಟಕವು ಒಂದು ತಜ್ಞ ಚಿಕಿತ್ಸಾ ಕೇಂದ್ರವಾಗಿರುತ್ತದೆ. ಈ ವಿಭಾಗವು ಕೈಗಳ ಜನ್ಮಜಾತ ತೊಂದರೆಯ ಶಸ್ತ್ರಚಿಕಿತ್ಸೆ ಹೆಸರುವಾಸಿಯಗಿದ್ದು, ಕಳೆದ ದಶಕದಲ್ಲಿ ಈ ವಿಭಾಗದಲ್ಲಿ ಜನ್ಮಜಾತ ವೈಕಲ್ಯಗಳ ಸುಮಾರು 500 ಪ್ರಕರಣಗಳು ಶಸ್ತಚಿಕಿತ್ಸೆಗೊಳಗಾಗಿ ಯಶಸ್ವಿ ಎನಿಸಿವೆ. ನಮ್ಮ ದೇಶದಲ್ಲಿ ಹ್ಯಾಂಡ್‌ ಸರ್ಜನ್‌ಗಳ ಸಂಖ್ಯೆಯೂ ವಿರಳ. ಅಷ್ಟೇ ಅಲ್ಲ, ಭಾರತದಲ್ಲಿ ಇಂತಹ ತೊಂದರೆಗಳಿಗೆ ಚಿಕಿತ್ಸೆ ನೀಡುವ ಘಟಕಗಳು ಇರುವುದು ಕೆಲವಾರು ಮಾತ್ರ. ಪ್ರಾದೇಶಿಕ ಅಥವಾ ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಈ ರೀತಿಯ ವೈಕಲ್ಯತೆಯ ವ್ಯಾಪಕತೆ, ಸಾಮುದಾಯಿಕ ಅಧ್ಯಯನ ಅಥವಾ ಈ ವೈಕಲ್ಯದ ಬಗೆಗಿನ ಒಂದು ಕ್ರಮವಾದ ದಾಖಲೆ ಪಟ್ಟಿ ಅಥವಾ ಮಾಹಿತಿ ಸಂಗ್ರಹ, ವಿವರಗಳು ಇರುವುದಿಲ್ಲ. 

ಈ ರೀತಿಯ ತೊಂದರೆ ಇರುವ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುವ ನುರಿತ ತಜ್ಞರು ಮತ್ತು ಭಾರತೀಯ ಅನುಭವದ ಆಧಾರದ ಮೇಲೆ ಜಾಗತಿಕ ವೈಜ್ಞಾನಿಕ ಬರವಣಿಗೆಯನ್ನು ಒದಗಿಸುವ ವೈದ್ಯರುಗಳೂ ಸಹ ನಮ್ಮ ದೇಶದಲ್ಲಿ ಬಹಳ ಕಡಿಮೆ ಎನ್ನುವುದು ವಿಷಾದಕರ ವಿಚಾರ. 

ಭ್ರೂಣವು ಗರ್ಭಾಶಯದಲ್ಲಿ ಬೆಳೆಯುತ್ತಿರುವಾಗ ಕೈಗಳ ಬೆಳವಣಿಗೆಯು ಸಹಜವಾಗಿ ಆಗದೆ ಕೈಗಳು ಅಸಹಜವಾಗಿ ಬೆಳವಣಿಗೆಯಾಗುವ ಪರಿಣಾಮವೆ ಕೈಗಳ ಜನ್ಮಜಾತ ವೈಕಲ್ಯಕ್ಕೆ ಕಾರಣ ಎಂದು ಹೇಳಬಹುದು. 
  
ಕೈಗಳ ಈ ವೈಕಲ್ಯ ಸ್ಥಿತಿಯು ಮಗುವಿನ ಜೀವಕ್ಕೆ ಅಪಾಯಕಾರಿ ಅಲ್ಲದಿದ್ದರೂ ಸಹ ಮಗುವಿನ ದೈನಂದಿನ ಜೀವನದಲ್ಲಿ ಕೈಗಳ ನ್ಯೂನತೆಯು ಅಡ್ಡಿ ಉಂಟು ಮಾಡುವುದಂತೂ ಖಂಡಿತ. ತನ್ನ ಕೈಗಳ ವೈಕಲ್ಯದ ಕಾರಣದಿಂದ ಒಂದು ಮಗುವಿನಲ್ಲಿ ಖನ್ನತೆ ಕಾಣಿಸಿಕೊಳ್ಳಬಹುದು ಮಾತ್ರವಲ್ಲ ಅದು ಒಂದು ಸಾಮಾಜಿಕ ಕಳಂಕವಾಗಿ ಮಗುವನ್ನು ಬಾಧಿಸಬಹುದು. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬರೆಯಲು, ಓದಲು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಕಷ್ಟವಾಗಬಹುದು. ಕೆಲವು ಬಾರಿ ಹೆತ್ತವರೂ ಸಹ, ಇದೊಂದು ಜೀವಕ್ಕೆ ಅಪಾಯಕಾರಿಯಾದ ಪರಿಸ್ಥಿತಿ ಅಲ್ಲವಲ್ಲ ಎಂದುಕೊಂಡು ಅಲಕ್ಷ್ಯ ಮಾಡಬಹುದು. ಇದರಿಂದ ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಆಗಬಹುದು ಮಾತ್ರವಲ್ಲ ಮಗುವಿನಲ್ಲಿ ಬಹಳಷ್ಟು ಒತ್ತಡವನ್ನು ಉಂಟು ಮಾಡಬಹುದು.
  
ಇಂತಹ ಒಂದು ಪರಿಸ್ಥಿತಿಯಲ್ಲಿ, ಕೈಗಳ ಜನ್ಮಜಾತ ವೈಕಲ್ಯಗಳಿಗೆ ಸಂಬಂಧಿಸಿದ ದಾಖಲಿಕೆ, ವೈದ್ಯಕೀಯ ಮಾಹಿತಿಯ ಅರಿವು, ತರಬೇತಿ, ಹೊಸ ಸಂಶೋಧನೆ ಮತ್ತು ಸಾಮುದಾಯಿಕ ಸೇವಾ ನೆಲೆಯ ಉದ್ದೇಶದಿಂದ ಭಾರತದಲ್ಲಿ ಕೌಶಲ್ಯ ಕೇಂದ್ರದ ರಚನೆಯನ್ನು ಉದ್ದೇಶಿಸಲಾಯಿತು. ಶಾಲೆಗೆ ಹೋಗುವ ಎಲ್ಲಾ ಮಕ್ಕಳು ಮತ್ತು ಅಂಗನವಾಡಿಯ ಮಕ್ಕಳನ್ನು ಸೇರಿಸಿಕೊಳ್ಳುವುದು ಈ ಯೋಜನೆಯ ಉದ್ದೇಶ. ಕೈಗಳಿಗೆ ಸಂಬಂಧಿಸಿದ 19 ವೈಕಲ್ಯ ಸ್ಥಿತಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರವನ್ನು ಒದಗಿಸುವುದು ನಮ್ಮ ಗುರಿ. 
 
ನಮ್ಮ ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಿಶೇಷ ಬೆಂಬಲವನ್ನು ವ್ಯಕ್ತಪಡಿಸಿದ್ದು, ಸಮೀಕ್ಷೆಯಲ್ಲಿ ಈ ಇಲಾಖೆಯೂ ಸಹ ನಮ್ಮ ಜೊತೆಗೆ ಕೈ-ಜೋಡಿಸುತ್ತದೆ. ಜಿಲ್ಲಾವಾರು ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ನಮಗೆ ಸಹಯೋಗವನ್ನು ನೀಡುತ್ತವೆ. ಇಂತಹ ಮಕ್ಕಳನ್ನು ಪತ್ತೆ ಮಾಡಲು ಕಾರ್ಯಕರ್ತರು ಶಾಲೆ ಮತ್ತು ಮನೆ-ಮನೆ ಸಮೀಕ್ಷೆಯನ್ನು ನಡೆಸಲಿದ್ದಾರೆ. ವೈಕಲ್ಯವಿರುವ ಮಕ್ಕಳ ಹೆತ್ತವರಿಗೆ ಸಲಹೆ-ಸಮಾಲೋಚನೆ ಮತ್ತು ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುವುದು. ಟಿಎಂಎ ಪೈ ದತ್ತಿನಿಧಿ ಮತ್ತು ಪ್ರಾಯೋಜಕತ್ವದಲ್ಲಿ ಕೈಗಳ ವೈಕಲ್ಯ ಇರುವ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗುವುದು.   

ಈ ಯೋಜನೆಯ ಅಡಿಯಲ್ಲಿ ಇಡೀ ಜಿಲ್ಲೆಯ ಒಟ್ಟು 1,200 ಶಾಲೆಗಳು ಭಾಗಿಗಳಾಗುತ್ತಿವೆ. ಇಷ್ಟು ಮಾತ್ರವಲ್ಲದೆ, ಇಂತಹ ವೈಕಲ್ಯಗಳನ್ನು ಹೇಗೆ ಪತ್ತೆ ಮಾಡುವುದು ಎಂಬ ಬಗ್ಗೆ  ಜಿಲ್ಲೆಯ ಸುಮಾರು 1,300 ಅಂಗನವಾಡಿ ಶಿಕ್ಷಕರಿಗೆ ಶಿಕ್ಷಣ ನೀಡಲಾಗುವುದು. ಈ ಉದ್ದೇಶಕ್ಕಾಗಿ ಕೈಗಳ ಜನ್ಮಜಾತ ನ್ಯೂನತೆಗಳ ಬೆಳಗ್ಗೆ ಮಾಹಿತಿ ನೀಡುವ ಕಿರು-ಪುಸ್ತಕವನ್ನು ವಿತರಿಸುವ ಉದ್ದೇಶವನ್ನು ನಾವು ಹೊಂದಿದ್ದು. ಇಂತಹ 2,000 ಪ್ರತಿಗಳನ್ನು ಮುದ್ರಿಸಲಾಗಿದ್ದು, ಈ ಯೋಜನೆಯ ಬಗ್ಗೆ ಶಾಲಾ ಶಿಕ್ಷಕರು ಮತ್ತು ಮಕ್ಕಳಲ್ಲಿ ಅರಿವು ಮತ್ತು ಜಾಗೃತಿಯನ್ನು ಮೂಡಿಸಲು ಅದರ ಪ್ರತಿಗಳನ್ನು ಉಡುಪಿ ಜಿಲ್ಲೆಯ, ಸರ್ವ ಶಿಕ್ಷಣ ಅಭಿಯಾನದ, ಯೋಜನಾ ನಿರ್ದೇಶಕರಿಗೆ ನೀಡಲಾಗಿದೆ. ಪ್ರತಿಯೊಂದು ಕೈಪಿಡಿಯಲ್ಲಿ ಕೈಗಳ ಬೇರೆ ಬೇರೆ ವೈಕಲ್ಯಗಳ ಚಿತ್ರಗಳಿದ್ದು, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ವೈಕಲ್ಯ ಸ್ಥಿತಿಗಳ ಬಗ್ಗೆ ಕಿರು ವಿವರಗಳೂ ಇರುತ್ತವೆ. ಇದರಲ್ಲಿರುವ ವಿವರಗಳು ಬಹಳ ಸರಳ ಭಾಷೆಯಲ್ಲಿದ್ದು, ಸಾಮಾನ್ಯ ಜನರೂ ಸಹ ಈ ವೈಕಲ್ಯ ಪರಿಸ್ಥಿತಿಗಳ ಬಗ್ಗೆ ಅರ್ಥಮಾಡಿಕೊಳ್ಳಬಹುದಾಗಿದೆ. 

Advertisement

ಒಂದು ಬಾರಿ ಈ ಕಿರು-ಪುಸ್ತಕಗಳು ವಿತರಣೆಯಾದರೆ, ಶಿಕ್ಷಕರು ಮತ್ತು ಶಾಲೆಯಲ್ಲಿನ ಮಕ್ಕಳನ್ನು ತಾವೇ ಸ್ವತಃ ಗುರುತಿಸುತ್ತಾರೆ ಮತ್ತು ಹೀಗೆ ಸಂದೇಹದ ಮೇರೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ನಮ್ಮ ತಾಲೂಕು ಕೇಂದ್ರಗಳಿಗೆ ಚೆಕ್‌-ಅಪ್‌ಗಾಗಿ ಕಳುಹಿಸುತ್ತಾರೆ. ಹೀಗೆ ಮಾಡುವುದರಿಂದ ಜನ್ಮಜಾತ ವೈಕಲ್ಯಗಳಿರುವ ಎಲ್ಲಾ ಪ್ರಕರಣಗಳು ನಮ್ಮ ಗಮನಕ್ಕೆ ಬಂದಂತಾಗುತ್ತದೆ. ಕೈಗಳ ಜನ್ಮಜಾತ ವೈಕಲ್ಯಗಳಿಗೆ ಸಂಬಂಧಿಸಿದ ತಪಾಸಣಾ ಸಮೀಕ್ಷೆಯು 2017 ಜನವರಿಯಿಂದ ಆರಂಭವಾಗಿರುತ್ತದೆ. ಸಮೀಕ್ಷೆಯಲ್ಲಿ ಶಾಲಾ ಶಿಕ್ಷಕರಿಗೆ, ಅಂಗನವಾಡಿ ಶಿಕ್ಷಕರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಅಂತಹ ಮಕ್ಕಳನ್ನು ಪತ್ತೆಮಾಡಲು ಮಾಹಿತಿ ಸಾಧನಗಳಾದ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಕರಪತ್ರಗಳು ಜೊತೆಗೆ ಬೇರೆ ಬೇರೆ ರೀತಿಯ ವೈಕಲ್ಯಗಳ ಚಿತ್ರಗಳು ಮತ್ತು ಒಂದು ಆಂಡ್ರಾಯ್ಡ ಮೊಬೈಲ್‌ ಆ್ಯಪ್‌ “”ಹಸ್ತ” ವನ್ನು ಒಳಗೊಂಡಿರುತ್ತದೆ. 

ಹೀಗೆ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳ ಮಟ್ಟದಲ್ಲಿ ಗುರುತಿಸಲಾದ ಮಕ್ಕಳನ್ನು ನಮ್ಮ ತಂಡವು ಬ್ಲಾಕ್‌ ಮಟ್ಟದಲ್ಲಿ ಮತ್ತೆ ಪರಿಶೀಲನೆ ಮಾಡುತ್ತದೆ. ಅಗತ್ಯ ಬಿದ್ದರೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಕೇಳಿಕೊಳ್ಳಲಾಗುವುದು. ಮೊದಲನೆಯ ಹಂತದಲ್ಲಿ ಆರೋಗ್ಯ ತಪಾಸಣೆಯು ಸಂಪೂರ್ಣ ಉಚಿತವಾಗಿರುತ್ತದೆ ಮತ್ತು Rಆಖಓ ಸ್ಕೀಮ್‌ ಮತ್ತು ದತ್ತಿ ನಿಧಿಯ ಮುಖೇನ ವಿಶೇಷ ರಿಯಾಯಿತಿ ದರದ ಚಿಕಿತ್ಸೆಯನ್ನು ಪಡೆಯಬಹುದು.  ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳನ್ನು ಮತ್ತು ಅಂಗನವಾಡಿ ಕೇಂದ್ರಗಳನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಹೀಗೆ ಮಾಡುವುದರಿಂದ ಸಮುದಾಯದಲ್ಲಿ ಯಾರಿಗೆಲ್ಲಾ ಕೈಯ ಜನ್ಮಜಾತ ವೈಕಲ್ಯ ಇದೆ ಎಂಬ ಸಂಪೂರ್ಣ ವಿವರಗಳು ನಮಗೆ ಲಭ್ಯವಾಗುತ್ತವೆ. ಇದರ ಜೊತೆಗೆ “ಹಸ್ತ’ ಆ್ಯಪ್‌ ಮೂಲಕ ಕೈಯ ಯಾವುದೇ ರೀತಿಯ ವೈಕಲ್ಯ ಇದ್ದರೂ ಸಹ ರೋಗಿಯು ಆನ್‌ಲೈನ್‌ ಮೂಲಕ ನೋಂದಣಿ ಮಾಡಬಹುದಾದ ಸೌಲಭ್ಯ ಇದೆ.   ಪ್ರಸ್ತುತ ಜಿಲ್ಲೆಯಾದ್ಯಂತ ಸುಮಾರು 59,485 ಮಕ್ಕಳು ಪಟ್ಟಿಯಲ್ಲಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಮೇಲಿನ ಯೋಜನೆಯ ಆರಂಭದಿಂದಲೂ ಸಕ್ರಿಯ ಸಹಕಾರವನ್ನು ನೀಡುತ್ತಿದ್ದಾರೆ. “ಹಸ್ತ’ ಯೋಜನೆಯ ಸಂಪರ್ಕ ಮಾಹಿತಿ: ಡಾ| ಅನಿಲ್‌ ಕೆ. ಭಟ್‌, ಪ್ರೊಫೆಸರ್‌  ಎಂಡ್‌ ಹೆಡ್‌, ಆಥೋìಪೆಡಿಕ್ಸ್‌ ವಿಭಾಗ, ಹ್ಯಾಂಡ್‌ ಎಂಡ್‌ ಮೈಕ್ರೋಸರ್ಜರಿ ಯುನಿಟ್‌, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ. 

ದೂರವಾಣಿ: 8073846610 (SMSಗೆ ಮಾತ್ರ). ಹೆಲ್ಪ್ ಡೆಸ್ಕ್: 0820- 2922132, 2922231 (ಬೆಳಗ್ಗೆ 9 ರಿಂದ ಸಾಯಂಕಾಲ 5). Email: hasthamanipal@gmail.com ಮೊಬೈಲ್‌ ಆ್ಯಪ್‌: HASTHA ಇದನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. 

– ಡಾ| ಅನಿಲ್‌ ಕೆ. ಭಟ್‌, 
ಪ್ರೊಫೆಸರ್‌ ಮತ್ತು  ಮುಖ್ಯಸ್ಥರು
ಆಥೋìಪೆಡಿಕ್ಸ್‌  ವಿಭಾಗ
ಕೆ.ಎಂ.ಸಿ. ಮಣಿಪಾಲ. 

Advertisement

Udayavani is now on Telegram. Click here to join our channel and stay updated with the latest news.

Next