Advertisement

ಜನರಿಂದ ಜನರಿಗಾಗಿ ಡಾ.ರಾಜಕುಮಾರ್‌ ಜಾನಪದ ಹಬ್ಬ

04:12 PM Apr 15, 2017 | |

“ದುಡಿಮೆಯ ನಂಬಿ ಬದುಕು, ಅದರಲೇ ದೇವರ ಹುಡುಕು, ಬಾಳಲಿ ಬರುವುದು ಬೆಳಕು…’ 
ಮಣ್ಣು ಮೆತ್ತಿಕೊಂಡ ಕೈಗಳಲಿ ನೇಗಿಲು ಹಿಡಿದ ರಾಜೀವನ ಪಾತ್ರದಲ್ಲಿ ಡಾ. ರಾಜ್‌ ಹಾಡುವ ಈ ಸಾಲುಗಳು “ಬಂಗಾರದ ಮನುಷ್ಯ’ ಚಿತ್ರದ್ದು. ಮಣ್ಣನ್ನು ಬಂಗಾರ ಎನ್ನುತ್ತಾರೆ ತಿಳಿದವರು. ಹಲವು ಸಿನಿಮಾಗಳಲ್ಲಿ ಮಣ್ಣಲಿ ಉತ್ತು, ಬಿತ್ತು ಬೆಳೆ ತೆಗೆವ ಶ್ರಮಿಕನ ಪಾತ್ರದಲ್ಲಿ ಕಾಣಿಸಿಕೊಂಡ ಡಾ. ರಾಜ್‌ ನಿಜಜೀವನದಲ್ಲಿಯೂ ನೆಲ, ಜಲ ಭಾಷೆಯ ಕುರಿತು ಪೂಜ್ಯ ಭಾವನೆಯನ್ನು ಹೊಂದಿದ್ದರು. ಮಣ್ಣಿನ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಆಚರಿಸುವ ಸದುದ್ದೇಶದಿಂದಲೇ ಏಪ್ರಿಲ್‌ 16, ಭಾನುವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ “ಡಾ. ರಾಜಕುಮಾರ್‌ ಜಾನಪದ ಹಬ್ಬ’ ಏರ್ಪಾಡಾಗಿದೆ.

Advertisement

ರಾಜ್‌ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ನೋಡುವುದು ಸಹಜ, ಆದರೆ ಅವರನ್ನೊಬ್ಬ ಜನಪದ ವ್ಯಕ್ತಿಯಾಗಿ ನೋಡುವ ವಿನೂತನ ದೃಷ್ಟಿಕೋನ ಈ ಕಾರ್ಯಕ್ರಮದ ವಿಶೇಷತೆ. “ಡಾ. ರಾಜಕುಮಾರ್‌ ಸಮಗ್ರ ಚರಿತ್ರೆ’ ಎಂಬ ಎರಡು ಸಂಪುಟಗಳನ್ನು ರಚಿಸಿದ ದೊಡ್ಡಹುಲ್ಲೂರು ರುಕ್ಕೋಜಿಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮದ ಪರಿಕಲ್ಪನೆ ಕೂಡಾ ಅವರದೇ. ಕಳೆದ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಅವರು ಡಾ. ರಾಜಕುಮಾರ್‌ ಕುರಿತ ರಾಷ್ಟ್ರೀಯ ಉತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಿದ್ದರು. ಅದೇ ಸಮಯದಲ್ಲಿ ಅವರಿಗೆ ಈ ಕಾರ್ಯಕ್ರಮದ ಪರಿಕಲ್ಪನೆ ಹೊಳೆದಿದ್ದು.  

ಡಾ. ರಾಜ್‌, ಕರ್ನಾಟಕಕ್ಕೆ ಸಾಂಸೃತಿಕವಾಗಿ ನೀಡಿರುವ ಕೊಡುಗೆ, ಅವರ ಭಾಷಾಜ್ಞಾನ ಮತ್ತು ಉಚ್ಚಾರಣಾ ಶುದ್ಧತೆ ಮುಂತಾದುದರ ಕುರಿತು ಏನೇ ವಿಚಾರಗಳಿದ್ದರೂ ಗ್ರಾಮೀಣ ಪ್ರದೇಶಗಳ ಜನರು ಅವರನ್ನು ಇಷ್ಟಪಟ್ಟಿದ್ದು ಅವೆಲ್ಲಕ್ಕೂ ಮೀರಿದ್ದ ಅಂಶಗಳಿಂದಾಗಿ. ಅವರು ಸಿನಿಮಾ ಮೂಲಕ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಜನರಿಗೆ ಹತ್ತಿರವಾಗಿದ್ದು ತಾವು ಪ್ರತಿಪಾದಿಸುತ್ತಾ ಬಂದ ಮೌಲ್ಯಗಳಿಂದ. ಹಳ್ಳಿಯಾದರೇನು ಶಿವಾ… ದಿಲ್ಲಿಯಾದರೇನು ಶಿವಾ… ಎನ್ನುವ ಮೂಲಕ ಹಳ್ಳಿಗನ ಕೀಳರಿಮೆಯನ್ನು ತೊಡೆದುಹಾಕಲೆತ್ನಿಸಿದ ಅವರು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಗಲೂ ಗಾಜನೂರಿನ ಕೃಷಿಯ ನಂಟನ್ನು ಬಿಟ್ಟಿರಲಿಲ್ಲ. ಇವೆಲ್ಲವನ್ನೂ ಒಟ್ಟು ಮಾಡಿ, ನೆಲದ ಕುರಿತು ರಾಜ್‌ಅವರಿಗಿದ್ದ ಕಾಳಜಿಯನ್ನು ಜನರಿಗೆ ತಲುಪಿಸುವ ಸಲುವಾಗಿಯೇ ಈ ಕಾರ್ಯಕ್ರಮ ಎನ್ನುತ್ತಾರೆ ರುಕ್ಕೋಜಿ. 

ಬೆಳಗ್ಗೆ 9ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ರಾಜಕುಮಾರ್‌ ಕುಟುಂಬದ  ಸಮಸ್ತರೂ ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ಅವರೆಲ್ಲರೂ ಸೇರಿ ರಾಶಿ ಪೂಜೆ ನೆರವೇರಿಸಿಕೊಡುತ್ತಾರೆ. ನಮಗೆ ತಿಳಿದಿರುವ ಹಾಗೆ ಸುಗ್ಗಿಯ ಸಮಯದಲ್ಲಿ ರಾಶಿ ಪೂಜೆ ಮಾಡುತ್ತಾರೆ. ಧಾನ್ಯಗಳ ರಾಶಿಯನ್ನು ಒಟ್ಟು ಸೇರಿಸಿ ಅದರ ತುದಿಯಲ್ಲಿ ಪಿಳ್ಳಾರಿ ಇಟ್ಟು ಪೂಜೆ ಮಾಡುವುದು ಶಾಸ್ತ್ರ. ಇಲ್ಲಿ ಅದೇ ಶಾಸ್ತ್ರವನ್ನು ಸ್ವಲ್ಪ ಬದಲಾವಣೆಯೊಂದಿಗೆ, ರಾಜ್‌ ಅವರಿಗೆ ಕೃಷಿ ಮೇಲಿದ್ದ ಪ್ರೀತಿಯ ಸಂಕೇತವಾಗಿ ಮಾಡುತ್ತಿದ್ದೇವೆ. ಇದನ್ನು ರಾಶಿ ಪೂಜೆ ಎನ್ನುವುದಕ್ಕಿಂತ ಪ್ರಕೃತಿ ಪೂಜೆ ಎನ್ನುವುದು ಹೆಚ್ಚು ಸೂಕ್ತ ಎನ್ನುವುದು ಸಂಘಟಕರ ಅಭಿಪ್ರಾಯ. ರಾಜಕುಮಾರ್‌, ಅವರಿಗೆ ಕೃಷಿ ಮೇಲಿದ್ದ ಶ್ರದ್ದೆಯ ಕುರಿತು ರಾಘವೇಂದ್ರ ರಾಜ್‌ಕುಮಾರ್‌ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಅಗ್ರಹಾರ ಕೃಷ್ಣಮೂರ್ತಿ ಮತ್ತಿತರ ಜನಪದ ವಿದ್ವಾಂಸರು ರಾಜ್‌ಕುಮಾರ್‌ ಜನಪದ ಸಾಂಸ್ಕೃತಿಕ ನಾಯಕನಾಗಿ ಸಲ್ಲಿಸಿದ ಕಾಣಿಕೆಯ ಕುರಿತು ಚಿಂತನೆಗಳನ್ನು ಮಂಡಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನೇಗಿಲಯೋಗಿ ಡಾ. ರಾಜ್‌ಕುಮಾರ್‌ ಎಂಬ ವಿಷಯದ ಕುರಿತ ವಿಚಾರಧಾರೆಯನ್ನು ಪ್ರೊ. ಚಂದ್ರಶೇಖರ ಪಾಟೀಲ, ಕೆ. ಎಸ್‌ ಪುಟ್ಟಣ್ಣಯ್ಯ ಮತ್ತು ರಾಜಕಾರಣಿ ವೈ.ಎಸ್‌. ವಿ. ದತ್ತ ಅವರು ತಮ್ಮ ಅನುಭವಗಳಿಂದ ಪ್ರಸ್ತುತಪಡಿಸಲಿದ್ದಾರೆ. ಸಂಜೆ 4.30ಕ್ಕೆ ರಾಜ್‌ ಕುರಿತ ಗ್ರಂಥ ರಚನೆಗೆ ಅನೇಕ ರೀತಿಯಿಂದ ಸಹಾಯವಿತ್ತ ಸಹೃದಯಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತದೆ. ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಮನು ಬಳಿಗಾರ್‌, ಸಂಗೀತ ನಿರ್ದೇಶಕ ಹಂಸಲೇಖ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ದೇಸಿ ಸಂಗೀತ ಶಾಲೆ ನಡೆಸುತ್ತಿರುವ ಹಂಸಲೇಖ ಅವರಿಗೆ ರುಕ್ಕೋಜಿಯವರು ಈ ಕಾರ್ಯಕ್ರಮದ ಕುರಿತು ಹೇಳಿದಾಗ ತುಂಬಾ ಸಂತಸಗೊಂಡು “ಅಯ್ಯೋ, ಈ ಥರದ ಕಾರ್ಯಕ್ರಮ ಅಗತ್ಯವಾಗಿ ಆಗಬೇಕಿತ್ತು’ ಎಂದು ಬೆನ್ನು ತಟ್ಟಿದರಂತೆ. 

Advertisement

ಇಂಥ ಮಹತ್ತರ ಕಾರ್ಯಕ್ರಮವೊಂದು ನಡೆಯುತ್ತಿದೆ ಎಂದು ತಿಳಿದ ತಕ್ಷಣ “ಆವತ್ತು ಅಲ್ಲಿಗೆ ಬರುವ ರಾಜ್‌ ಅಬಿಮಾನಿಗಳಿಗೆ ನಂದೇ ಊಟ!’ ಎಂದು ಖಡಾಖಂಡಿತವಾಗಿ ಹೇಳಿದವರು ಕುಂಬಳಗೂಡು ನರಸಿಂಹಮೂರ್ತಿಯವರು. ಕಾರ್ಯಕ್ರಮದ ಸಂಚಾಲಕರಲ್ಲೊಬ್ಬರಾಗಿರುವ ಅವರು, ರಾಜ್‌ ಅವರ ಅಭಿಮಾನಿ. ತಮ್ಮೂರಿನಲ್ಲಿ ರಾಜಕುಮಾರ್‌ ಹೆಸರಿನ ಉದ್ಯಾನವನ ಮತ್ತು ಗ್ರಂಥಾಲಯ ಕಟ್ಟಿಸಿದವರಿವರು. ಇದೀಗ ಡಾ. ರಾಜಕುಮಾರ್‌ ಜಾನಪದ ಹಬ್ಬಕ್ಕೆಂದೇ ಗ್ರಾಮೀಣ ಶೈಲಿಯ ಅಡುಗೆಯನ್ನು ಮಾಡಿಸುತ್ತಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಈ ಕಾರ್ಯಕ್ರಮ ರಾಜಕುಮಾರ್‌ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬದೂಟವೇ!

ಡಾ. ರಾಜ್‌ ಅವರು ಉಳಿಸಿ ಹೋಗಿರುವ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಈ ಪ್ರಯತ್ನದಲ್ಲಿ ಕನ್ನಡಿಗರೆಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸುತ್ತಾರೆಂಬ ವಿಶ್ವಾಸ ಸಂಘಟಕರದು.

ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಏಪ್ರಿಲ 16, ಬೆಳಗ್ಗೆ 9ರಿಂದ ಸಂಜೆ 6.30

-ರಾಶಿ ಪೂಜೆ: ರಾಜಕುಮಾರ್‌ ಸಮಸ್ತ ಪರಿವಾರದವರಿಂದ
-ಜನಪದ ಸಾಂಸ್ಕೃತಿಕ ನಾಯಕನಾಗಿ ಡಾ. ರಾಜಕುಮಾರ್‌: ಚಿಂತನೆ 
-ನೇಗಿಲ ಯೋಗಿ ಡಾ. ರಾಜಕುಮಾರ್‌: ಉಪನ್ಯಾಸ
-ಸಹೃಯಿಗಳಿಗೆ ಗೌರವಾರ್ಪಣೆ

ಶಿಡ್ಲಘಟ್ಟ ಮತ್ತು ಜಂಗಮಕೋಟೆಯಿಂದ ಡೊಳ್ಳು ಕುಣಿತ, ವೀರಗಾಸೆ,
ಮಂಡ್ಯ ಕಲಾತಂಡದವರಿಂದ ನಗಾರಿ

ಊಟಕ್ಕೆ…
ರಾಗಿ ಮುದ್ದೆ
ಅನ್ನ
ಕಾಳು ಸಾರು
ಹುರುಳಿ ಹಪ್ಪಳ
ಹೆಸರುಬೇಳೆ ಪಾಯಸ
ಮಜ್ಜಿಗೆ

Advertisement

Udayavani is now on Telegram. Click here to join our channel and stay updated with the latest news.

Next