Advertisement

ನರ್ತಕಿ ಮುಂದೆ ಡಾ.ರಾಜ್‌ ಕಟೌಟ್‌

10:41 AM Jan 22, 2018 | |

ಸಾಮಾನ್ಯವಾಗಿ ಗಾಂಧಿನಗರದಲ್ಲಿ ಥಿಯೇಟರ್‌ ಮುಂದೆ ಕಟೌಟ್‌ ನಿಲ್ಲಿಸೋದು ಸಿನಿಮಾ ಬಿಡುಗಡೆಯ ಮುನ್ನ ದಿನ, ಅಂದರೆ ಗುರುವಾರ ರಾತ್ರಿ. ಆದರೆ, ಈ ಬಾರಿ ನರ್ತಕಿ ಚಿತ್ರಮಂದಿರದ ಮುಂದೆ ಇದೇ ಬುಧವಾರ (ಜ.24) ಬೃಹತ್‌ ಕಟೌಟ್‌ ಒಂದು ತಲೆ ಎತ್ತಲಿದೆ. ಕೇವಲ ತಲೆ ಎತ್ತುವುದಷ್ಟೇ ಅಲ್ಲ, ಅಭಿಮಾನಿಗಳು ಮೆರವಣಿಗೆ ಮೂಲಕ ಬಂದು ಬೃಹತ್‌ ಹಾರ ಹಾಗೂ ಹಾಲಿನಾಭಿಷೇಕ ಕೂಡಾ ಮಾಡಲಿದ್ದಾರೆ.

Advertisement

ಅಷ್ಟಕ್ಕೂ ಯಾರ ಕಟೌಟ್‌ ಎಂದರೆ ಅದು ಡಾ.ರಾಜಕುಮಾರ್‌ ಅವರ ಕಟೌಟ್‌. ಹೌದು, ನರ್ತಕಿ ಚಿತ್ರಮಂದಿರದ ಮುಂದೆ ಬುಧವಾರ ಬೆಳಗ್ಗೆ ರಾಜಕುಮಾರ್‌ ಅವರ 80 ಅಡಿ ಕಟೌಟ್‌ ತಲೆ ಎತ್ತಲಿದೆ. ರಾಜ್‌ಕುಮಾರ್‌ ಅವರ ಯಾವ ಚಿತ್ರವಾದರೂ ಮರುಬಿಡುಗಡೆಯಾಗುತ್ತಿದೆಯಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ಕಟೌಟ್‌ ತಲೆ ಎತ್ತಲು ಕಾರಣ “ಕನಕ’ ಚಿತ್ರ.

ಆರ್‌.ಚಂದ್ರು ನಿರ್ದೇಶನ, ನಿರ್ಮಾಣದ “ಕನಕ’ ಚಿತ್ರ ಜನವರಿ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್‌ ನಾಯಕ. ಅವರಿಲ್ಲಿ ರಾಜ್‌ಕುಮಾರ್‌ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಡಾ.ರಾಜ್‌ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ನಾಯಕನ ಪಾತ್ರ ಅವರದು. ಅದೇ ಕಾರಣದಿಂದ ಈಗ ಡಾ.ರಾಜ್‌ಕುಮಾರ್‌ ಅವರ ಬೃಹತ್‌ ಕಟೌಟ್‌ ಅನ್ನು “ಕನಕ’ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗುತ್ತದೆ.

“ಅಣ್ಣಾವ್ರ ಆದರ್ಶಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಇಡೀ ಸಿನಿಮಾದ ಥೀಮ್‌ ಕೂಡಾ ಅದೇ. ಆ ಕಾರಣದಿಂದ ಅಣ್ಣಾವ್ರ ಕಟೌಟ್‌ ಅನ್ನು ಬುಧವಾರ ಅದ್ಧೂರಿಯಾಗಿ ನಿಲ್ಲಿಸುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಚಂದ್ರು. ಅಣ್ಣಾವ್ರ ಕಟೌಟ್‌ ಜೊತೆ ವಿಜಯ್‌ ಕಟೌಟ್‌ ಕೂಡಾ ತಲೆ ಎತ್ತಲಿದೆ. ಅಂದಹಾಗೆ ಚಿತ್ರ 350 ರಿಂದ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next