Advertisement

ನೂತನಬಿಷಪ್‌ ಆಗಿ ರೆ|ಡಾ|ಪೀಟರ್‌ ಪಾವ್ಲ್ ಸಲ್ಡಾನ್ಹಾಅಧಿಕಾರಸ್ವೀಕಾರ

09:59 AM Sep 16, 2018 | |

ಮಹಾನಗರ: ಕ್ರೈಸ್ತ ಪರಿಭಾಷೆಯಲ್ಲಿ ಪೂರ್ವದ ರೋಮ್‌ ಎಂದು ಸಂಬೋಧಿಸಲಾಗುವ ಮಂಗಳೂರಿನಲ್ಲಿ ಶನಿವಾರ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗಿನ ಹೊತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಕೆಥೋಲಿಕ್‌ ಕ್ರೈಸ್ತರು ಪ್ರಧಾನ ದೇವಾಲಯ ರೊಜಾರಿಯೊ ಕೆಥೆಡ್ರಲ್‌ ನತ್ತ ಮುಖ ಮಾಡಿದ್ದರು. ಇದಕ್ಕೆ ಕಾರಣ ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ 22 ವರ್ಷಗಳ ಬಳಿಕ ಶನಿವಾರ ನಡೆದ ಧರ್ಮಾಧ್ಯಕ್ಷರ ದೀಕ್ಷಾ ವಿಧಿ ಸಮಾರಂಭ.

Advertisement

ದೇಶ ವಿದೇಶಗಳ 25ಕ್ಕೂ ಮಿಕ್ಕಿ ಧರ್ಮಾಧ್ಯಕ್ಷರು, 500ಕ್ಕೂ ಮಿಕ್ಕಿ ಧರ್ಮ ಗುರುಗಳು ಮತ್ತು ಧರ್ಮ ಭಗಿನಿಯರು ಹಾಗೂ 10,000ಕ್ಕೂ ಅಧಿಕ ಕ್ರೈಸ್ತ ಜನರ ಸಮಕ್ಷಮ ಧರ್ಮಗುರು ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಮಂಗಳೂರು ಧರ್ಮ ಪ್ರಾಂತದ 14ನೇ ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.

ಮಂಗಳೂರಿನ ನಿರ್ಗಮನ ಬಿಷಪ್‌ ಹಾಗೂ ಆಡಳಿತಾಧಿಕಾರಿ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಅವರು ಬೆಂಗಳೂರಿನ ಆರ್ಚ್‌ ಬಿಷಪ್‌ ರೆ| ಡಾ| ಪೀಟರ್‌ ಮಚಾದೊ ಮತ್ತು ಉಡುಪಿಯ ಬಿಷಪ್‌ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರ ಜತೆಗೂಡಿ ನೂತನ ಬಿಷಪರನ್ನು ಅಭಿಷೇಕಿಸಿ ವಿಧಿ ಬದ್ಧವಾಗಿ ನಿಯೋಜಿಸಿದರು.

ಬೆಳಗ್ಗೆ 9 ಗಂಟೆಗೆ ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ಅವರು ರೊಜಾರಿಯೊ ಕೆಥೆಡ್ರಲ್‌ ಆವರಣಕ್ಕೆ ಆಗಮಿಸಿದಾಗ ಕೆಥೆಡ್ರಲ್‌ನ ರೆಕ್ಟರ್‌, ಕಾರ್ಯಕ್ರಮದ ಮುಖ್ಯ ಸಂಯೋಜಕ ವಂ| ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಸಹ ಸಂಯೋಜಕರಾದ ಎಂ.ಪಿ. ನೊರೋನ್ಹಾ, ಸುಶೀಲ್‌ ನೊರೋನ್ಹಾ, ಲುವಿ ಜೆ. ಪಿಂಟೋ, ಮಾರ್ಸೆಲ್‌ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು. ಬಳಿಕ 9.30ಕ್ಕೆ ಆರಂಭವಾದ ದೀಕ್ಷಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದು ಬಲಿಪೂಜೆಯೊಂದಿಗೆ 11.30ರ ವೇಳೆಗೆ ಮುಕ್ತಾಯಗೊಂಡವು. 

750 ಸ್ವಯಂ ಸೇವಕರು
ಕಾರ್ಯಕ್ರಮದ ಯಶಸ್ವಿಯಾಗಿ 750 ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು. ಪೊಲೀಸ್‌ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಸಹಕರಿಸಿದರು.

Advertisement

ಸಾರ್ವಜನಿಕ ಅಭಿನಂದನೆ
ಧಾರ್ಮಿಕ ವಿಧಿ ವಿಧಾನಗಳ ಬಳಿಕ ಸಾರ್ವಜನಿಕ ಅಭಿನಂದನ ಸಮಾರಂಭ ಜರಗಿತು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಬಿ.ಎಂ. ಫಾರೂಕ್‌, ಮೇಯರ್‌ ಕೆ. ಭಾಸ್ಕರ್‌, ಉಪ ಮೇಯರ್‌ ಕೆ. ಮಹ ಮದ್‌, ಸ್ಥಳೀಯ ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌ ಮತ್ತು ಇತರ ಕಾರ್ಪೊ ರೇಟರ್‌ಗಳು, ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಬಿ.ಎ. ಮೊಯಿದಿನ್‌ ಬಾವಾ, ರಮಾನಾಥ ರೈ, ಅಭಯಚಂದ್ರ ಜೈನ್‌, ಎನ್‌. ಯೋಗೀಶ್‌ ಭಟ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಮಂಗಳೂರಿನ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಮುಡಾ ಅಧ್ಯಕ್ಷ ಕೆ. ಸುರೇಶ್‌ ಬಲ್ಲಾಳ್‌ ಮೊದಲಾದವರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ, ಅಭಿನಂದನ ಕಾರ್ಯಕ್ರಮದಲ್ಲಿ ಸೈಂಟ್‌ ಜೋಸೆಫ್‌ ಸೆಮಿನರಿಯ ರೆಕ್ಟರ್‌ ವಂ| ಜೋಸೆಫ್‌ ಮಾರ್ಟಿಸ್‌ ಸ್ವಾಗತಿಸಿದರು. ವಂ| ವಾಲ್ಟರ್‌ ಡಿ’ಮೆಲ್ಲೊ ವಂದಿಸಿದರು. ವಂ| ಮ್ಯಾಕ್ಸಿಂ ಡಿ’ಸೋಜಾ, ವಂ| ವಿಲಿಯಂ ಕುಲಾಸೊ ಮತ್ತು ವಂ| ಜಾನ್‌ ಡಿ’ಸಿಲ್ವ ನಿರ್ವಹಿಸಿದರು.

ಭಾಗವಹಿಸಿದ್ದ ಧರ್ಮಾಧ್ಯಕ್ಷರು
ನೂತನ ಬಿಷಪ್‌ ಸಹಿತ ದೇಶ ವಿದೇಶಗಳ 26 ಮಂದಿ ಧರ್ಮಾಧ್ಯಕ್ಷರು ಮತ್ತು 7 ಮಂದಿ ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದರು. ಆರ್ಚ್‌ ಬಿಷಪರು: ರೆ| ಡಾ| ಪೀಟರ್‌ ಮಚಾದೊ (ಬೆಂಗಳೂರು), ಫಿಲಿಪ್‌ ನೆರಿ ಫೆರಾವೊ (ಗೋವಾ ಮತ್ತು ದಾಮನ್‌) ಥೋಮಸ್‌ ಡಿ’ಸೋಜಾ (ಕೋಲ್ಕತ್ತಾ). ಬಿಷಪರು: ಮೊ| ಜ್ಹಾವಿಯರ್‌ ಡಿ. ಫೆರ್ನಾಂಡಿಸ್‌ (ದಿಲ್ಲಿ- ಪೋಪ್‌ ಪ್ರತಿನಿಧಿಯ ಕೌನ್ಸೆಲರ್‌), ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ (ಮಂಗಳೂರು), ರೆ| ಡಾ| ಅಲೆಕ್ಸ್‌ ವಡಂಕುಂತಲಾ (ಕಣ್ಣೂರು), ರೆ| ಡಾ| ವರ್ಗೀಸ್‌ ಚಕ್ಕಲಕಲ್‌ (ಕೋಝಿಕೋಡ್‌), ರೆ| ವಂ| ರೋಬರ್ಟ್‌ ಮಿರಾಂದಾ (ಕಲಬುರಗಿ), ರೆ| ಡಾ| ಆ್ಯಂಟನಿ ಕರಿಯಿಲ್‌ (ಮಂಡ್ಯ), ರೆ| ಡಾ| ಡೆರಿಕ್‌ ಫೆರ್ನಾಂಡಿಸ್‌ (ಕಾರವಾರ), ರೆ| ಡಾ| ಜೋಸೆಫ್‌ ಅರುಮಚದತ್‌ (ಭದ್ರಾವತಿ), ರೆ| ಡಾ| ಎಫ್ರೀಮ್‌ ನರಿಕುಲಂ (ಚಾಂದ), ರೆ| ಡಾ| ಫ್ರಾನ್ಸಿಸ್‌ ಸೆರಾವೊ (ಶಿವಮೊಗ್ಗ), ರೆ| ಡಾ| ಒಸ್ವಾಲ್ಡ್‌ ಲೆವಿಸ್‌ (ಜೈಪುರ), ರೆ| ಡಾ| ಬರ್ನಾರ್ಡ್‌ ಮೊರಾಸ್‌ (ಬೆಂಗಳೂರು), ರೆ| ಡಾ| ಜೆರಾಲ್ಡ್‌ ಅಲ್ಮೇಡಾ (ಜಬಲ್ಪುರ್‌), ರೆ| ಡಾ| ರೊಗಾಟ್‌ ಕಿಮಾರಿಯೊ (ಸಾಮೆ, ತಾಜಾನಿಯಾ), ರೆ| ಡಾ| ಸಿಪ್ರಿಯನ್‌ ಮೋನಿಸ್‌ (ಅಸಂಸೋಲ್‌), ರೆ| ಡಾ| ಇಗ್ನೇಶಿಯಸ್‌ ಡಿ’ಸೋಜಾ (ಬರೇಲಿ), ರೆ| ಡಾ| ಲಾರೆನ್ಸ್‌ ಮುಕುಝಿ (ಬೆಳ್ತಂಗಡಿ), ರೆ| ಡಾ| ಪಿಯುಸ್‌ ತೋಮಸ್‌ ಡಿ’ಸೋಜಾ (ಅಜ್ಮೀರ್‌), ರೆ| ಡಾ| ಜೋಸೆಫ್‌ ಮಾರ್‌ ಮಕಾರಿಯೋ (ಪುತ್ತೂರು), ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ (ಉಡುಪಿ), ರೆ| ಡಾ| ಆ್ಯಂಟನಿ ಸ್ವಾಮಿ (ಚಿಕ್ಕಮಗಳೂರು), ರೆ| ಡಾ| ಹೆನ್ರಿ ಡಿ’ಸೋಜಾ (ಬಳ್ಳಾರಿ).

ವಿದೇಶಿ ಪ್ರತಿನಿಧಿಗಳು
ರೋಮ್‌ನ ಉರ್ಬಾನಿಯಾನಾ ವಿಶ್ವ ವಿದ್ಯಾನಿಲಯದಿಂದ ವಂ| ಜೋಬಿ ಕ್ಸೇವಿಯರ್‌, ವಂ| ಜೋ ಸೆಬಾಸ್ಟಿಯನ್‌, ವಂ| ವರ್ಗೀಸ್‌ ಮಲಿಕೆಲ್‌, ಪ್ರೊ| ಬೆನೆಡಿಕ್ಟ್ ಕನಲಪಲ್ಲಿ, ಪ್ರೊ| ಲುಲಿಯಾನೊ ಜಿಯೋಸೆಪ್‌, ತಾಂಜಾನಿಯಾದ ಮೋಶಿಯ ಪ್ರಾದೇಶಿಕ ವಲಸೆ ಅಧಿಕಾರಿ ಎಲಿಜಬೆತ್‌ ವಿಲಿಯಮ್ಸ್‌, ಇಟೆಲಿಯ ಎಲೀನಾ ಕೆಸಾಡಿ.

ಪ್ರಕೃತಿ ಸಂರಕ್ಷಣೆಯ ಕಾಳಜಿ
ಧರ್ಮ ಪ್ರಾಂತವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮಣ್ಣಿನ ಕುಂಡದಲ್ಲಿ ತೆಂಗಿನ ಗಿಡಗಳನ್ನು ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ನೂತನ ಧರ್ಮಾಧ್ಯಕ್ಷರ ಲಾಂಛನ, ಧ್ಯೇಯ ವಾಕ್ಯ 
ನೂತನ ಧರ್ಮಾಧ್ಯಕ್ಷ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ತಮ್ಮದೇ ಆದ ಲಾಂಛನ ಮತ್ತು ಧ್ಯೇಯ ವಾಕ್ಯವನ್ನು ಆರಿಸಿಕೊಂಡಿದ್ದಾರೆ. ‘ದೇವರ ಮಹಿಮಾಭರಿತ ಕೃಪೆಯ ಸ್ತುತಿಯನ್ನು ಮಾಡಲು’ ಎನ್ನುವುದು ಅವರ ಧ್ಯೇಯ ವಾಕ್ಯ. ಬೈಬಲ್‌ನಲ್ಲಿರುವ ಈ ಉಕ್ತಿಯನ್ನು ಆಯ್ದುಕೊಂಡು ತಮ್ಮ ಧ್ಯೇಯವಾಕ್ಯವನ್ನಾಗಿ ಸ್ವೀಕರಿಸಿದ್ದಾರೆ. ದೇವರು ನಮಗೆ ದಯ ಪಾಲಿಸಿದ ಅಪರಿಮಿತ ಕೃಪಾವರಗಳ ಮಹಿಮೆಗೆ ಸದಾ ಕಾಲ ಸ್ತುತಿ ಅರ್ಪಿಸುತ್ತಿರಬೇಕು ಎನ್ನುವುದು ಇದರರ್ಥ. ತಮ್ಮ ಲಾಂಛನದಲ್ಲಿ ಈ ಧ್ಯೇಯ ವಾಕ್ಯವನ್ನು ಬರೆಯಲಾಗಿದೆ. ಲಾಂಛನದ ಮೇಲ್ಗಡೆ ಪವಿತ್ರ ಗ್ರಂಥ ಬೈಬಲ್‌ ಇದೆ. ಇದು ದೇವರ ವಾಕ್ಯದ ಸಂಕೇತ. ಅದರ ಕೆಳಗಡೆ ಯೇಸು ಕ್ರಿಸ್ತರ ಪವಿತ್ರ ಹೃದಯ ಮತ್ತು ಮೇರಿ ಮಾತೆಯ ನಿಷ್ಕಳಂಕ ಹೃದಯದ ಚಿತ್ರ ಇದೆ. ಇದು ದೇವರ ಕರುಣಾಮಯಿ ಮುಖವನ್ನು ಸಾಂಕೇತಿಸುತ್ತದೆ. ಅದರ ಕೆಳಗಡೆ ಇರುವ ಪವಿತ್ರ ಕುಟುಂಬದ ಚಿತ್ರವು ಎಲ್ಲ ಕುಟುಂಬಗಳ ಪಾಲನೆಯ ಸಂಕೇತವಾಗಿದೆ. ಹರಿಯುವ ನೀರಿನ ಬದಿಯಲ್ಲಿ ಇರುವ ಹಚ್ಚ ಹಸುರಿನ ಮರವು ಎಲ್ಲರಿಗೂ ಆಶ್ರಯ ಒದಗಿಸುವುದರ ಸಂಕೇತ. ಲಾಂಛನವನ್ನು ಕಲಾವಿದ ಆಂಜೆಲೋರ್‌ನ ಪ್ರೀತಂ ಫೆರ್ನಾಂಡಿಸ್‌ ಈ ಲಾಂಛನವನ್ನು ರಚಿಸಿ ಕೊಟ್ಟಿದ್ದಾರೆ.

ಸಮ್ಮಾನ 
ಅಭಿನಂದನ ಸಮಾರಂಭದಲ್ಲಿ ನೂತನ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ, ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಮತ್ತು ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಆರ್ಚ್‌ ಬಿಷಪ್‌ ರೆ| ಡಾ| ಪೀಟರ್‌ ಮಚಾದೊ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಪತ್ರವನ್ನು ಕ್ರಮವಾಗಿ ಅರ್ಸುಲೈನ್‌ ಫ್ರಾನ್ಸಿಸ್ಕನ್‌ ಧರ್ಮ ಭಗಿನಿಯರ ಸಂಸ್ಥೆಯ ಸುಪೀರಿಯರ್‌ ಸಿ| ಸುಶೀಲಾ, ಧರ್ಮ ಪ್ರಾಂತನ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಮತ್ತು ಸಂತ ಅಲೋಶಿಯಸ್‌ ಕಾಲೇಜಿನ ರೆಕ್ಟರ್‌ ಫಾ| ಡೈನೇಶಿಯಸ್‌ ವಾಸ್‌ ಅವರು ವಾಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next