Advertisement

ಭರತನಾಟ್ಯವನ್ನೇ  ಉಸಿರಾಗಿಸಿಕೊಂಡ ಡಾ|ಮೇಘನಾ

03:52 PM Dec 12, 2020 | Adarsha |

ವೃತ್ತಿಯಲ್ಲಿ ವೈದ್ಯೆ, ಭರತನಾಟ್ಯದಲ್ಲಿ  ಸಾಧನೆಯ ತುಡಿತ ಜತೆಗೆ ನಿರಂತರ ಕಲಿಕೆಯ ಹಂಬಲ… ಮೂಲತಃ ಬೆಂಗಳೂರಿನ ಹೆಬ್ಟಾಳದ ಡಾ| ಮೇಘನಾ ವಸಿಷ್ಠ ಪ್ರಸ್ತುತ ಐರ್ಲೆಂಡ್‌ನ‌ ಡಬ್ಲಿನ್‌ನಲ್ಲಿ ತಮ್ಮ ವೃತ್ತಿಯೊಂದಿಗೆ ಭಾರತೀಯ ಸಂಸ್ಕೃತಿಯ ಭಾಗವಾದ ಭರತನಾಟ್ಯ ಕಲೆಯನ್ನು ಎಲ್ಲರಿಗೂ ಹಂಚುತ್ತಿದ್ದಾರೆ.

Advertisement

ಅಜಂತ ಕಲ್ಚರಲ್‌ ಆ್ಯಂಡ್‌ ಎಜುಕೇಶನಲ್‌ ಸೊಸೈಟಿಯಲ್ಲಿ ಡಾ| ಲಕ್ಷ್ಮೀ ಮೂರ್ತಿ ಅವರಿಂದ 5ನೇ ವಯಸ್ಸಿಗೆ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿದ ಮೇಘನಾ 2008ರಲ್ಲಿ ರಂಗ ಪ್ರವೇಶ ಮಾಡಿದರು. ಬಳಿಕ ಹೆಸರಾಂತ ನರ್ತಕಿ ಶ್ರುತಿ ಗೋಪಾಲ್‌ ಅವರಿಂದ ಏಕವ್ಯಕ್ತಿ ಕೌಶಲ ತರಬೇತಿ ಪಡೆದ ಇವರು ಸುಮಾರು 20 ವರ್ಷ ವಿದ್ಯಾರ್ಥಿಯಾಗಿ ಭರತನಾಟ್ಯವನ್ನು ಅಭ್ಯಾಸ ಮಾಡಿದರು. ಕರ್ನಾಟಕ ರಾಜ್ಯ ಸರಕಾರ ನಡೆಸಿದ ಭರತನಾಟ್ಯ ಪ್ರಮಾಣೀಕರ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು, 2016ರವರೆಗೆ ಕರ್ನಾಟಕ ನೃತ್ಯ ಪರೀûಾ ಮಂಡಳಿ ಸಮಿತಿ ಸದಸ್ಯರಾಗಿದ್ದರು.

ಭಾರತ, ಐರ್ಲೆಂಡ್‌ನ‌ ವಿವಿಧೆಡೆ ಈವರೆಗೆ 500 ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಮೇಘನಾ ಅವರು ಭರತನಾಟ್ಯ, ಯೋಗ ಮತ್ತು ಆಯುರ್ವೇದದ ಕಲಿಕೆಯನ್ನು ಒಟ್ಟುಗೂಡಿಸಿ ಡಬ್ಲಿನ್‌ನಲ್ಲಿ ನೂಪುರ ನಾದ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ವಯಸ್ಕರು ಮತ್ತು ಮಕ್ಕಳಿಗೆ ಭರತನಾಟ್ಯ ತರಬೇತಿಯೊಂದಿಗೆ ಸಂಸ್ಕೃತ ಶ್ಲೋಕ, ಶಾಸ್ತ್ರೀಯ ಸಂಗೀತ, ಕನ್ನಡ, ಸಂಸ್ಕೃತ, ತೆಲುಗು, ತಮಿಳು ಭಾಷೆಯ ಹಾಡುಗಳು, ರಾಮಾಯಣ, ಮಹಾಭಾರತ, ಶಿವಪುರಾಣ, ಭಾಗವತದ ಕಥೆಗಳನ್ನು ಹೇಳಿಕೊಡಲಾಗುತ್ತದೆ. ಇವುಗಳನ್ನು ಭರತನಾಟ್ಯದಲ್ಲೂ ಬಳಸಲಾಗುತ್ತಿದೆ. ಇದರಿಂದ ಐರ್ಲೆಂಡ್‌ನ‌ ಮಕ್ಕಳೂ ಭಾರತೀಯ ಸಂಸ್ಕೃತಿ, ಮೌಲ್ಯ, ಭಾಷೆ, ಸಂಗೀತ, ನೃತ್ಯವನ್ನು ಕಲಿಯುವಂತಾಯಿತು ಎಂದು ಅವರ ಪೋಷಕರು ಮೆಚ್ಚುಗೆ ವ್ಯಕ್ತಪಡಿಸುವಾಗ ಖುಷಿಯಾಗುತ್ತದೆ. ಜತೆಗೆ ಐರ್ಲೆಂಡ್‌ನ‌ ಪ್ರೇಕ್ಷಕರಿಗೂ ಭರತನಾಟ್ಯದ ಮೂಲಕ ಭಾರತೀಯ ಪುರಾಣಗಳನ್ನು ತಿಳಿಯುವ ಅವಕಾಶ ದೊರೆಯುತ್ತಿದೆ ಎನ್ನುತ್ತಾರೆ ಮೇಘನಾ ವಶಿಷ್ಠ.

ಕೊರೊನಾದಿಂದಾಗಿ ಲಾಕ್‌ಡೌನ್‌ ಆದ ಬಳಿಕ ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಿರುವ ಮೇಘನಾ ಅವರಿಗೆ ಐರ್ಲೆಂಡ್‌, ಯುಕೆ, ಭಾರತ ಮಾತ್ರವಲ್ಲ ಯುರೋಪಿನ ವಿವಿಧ ಭಾಗದ ವಯಸ್ಕರು, ಮಕ್ಕಳು ಸೇರಿ ಒಟ್ಟು 35 ವಿದ್ಯಾರ್ಥಿಗಳಿದ್ದಾರೆ. ದೃಷ್ಟಿ ದೋಷ ಮತ್ತು ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವವರಿಗೂ ಭರತನಾಟ್ಯ ಕಲಿಸಿದ ಕೀರ್ತಿ ಇವರದ್ದಾಗಿದೆ.

Advertisement

ಪ್ರಶಸ್ತಿ ಹಲವು

ವಿಕಲಚೇನರಿಗೆ ಸಾಮಾಜಿಕ ಸೇವೆ ಮತ್ತು ಬೋಧನೆಗಾಗಿ ಬೆಂಗಳೂರು ರೋಟರಿ ಇನ್ನರ್‌ವೀಲ್‌ ಕ್ಲಬ್‌ನಿಂದ ಕಲಾಶಾ ಪ್ರಶಸ್ತಿ- 2006, ನಾಟ್ಯ ಕುಸುಮಾಂಜಲಿ ನೃತ್ಯ ಪತ್ರಿಕೆಯಿಂದ ಕೀರ್ತಿ ಶ್ರೀ ಪ್ರಶಸ್ತಿ, ಬೆಂಗಳೂರಿನ ಅಜಂತ ಕಲ್ಚರಲ್‌ ಆ್ಯಂಡ್‌ ಎಜುಕೇಶನಲ್‌ ಸೊಸೈಟಿಯಿಂದ ಬೋಧನಾ ಕೌಶಲಕ್ಕಾಗಿ ಉಡೊYàಶಾಕಿ ಗುರು ನಮನ, ಬೆಂಗಳೂರು ಪುರಭವನದಲ್ಲಿ ನಡೆದ ನಾಟಕ ಪ್ರದರ್ಶನದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ, 17ನೇ ವರ್ಷದೊಳಗೆ ಯುವ ಭಾರತ ಪುಸ್ತಕ ನಿಧಿ, ನೃತ್ಯ, ಯೋಗ, ಮಾರ್ಷಲ್‌ ಆರ್ಟ್ಸ್, ಸಂಗೀತಾಭ್ಯಾಸಕ್ಕಾಗಿ ಕರ್ನಾಟಕ ಯೂತ್‌ ಎಕ್ಸಲೆನ್ಸ್‌ ಪ್ರಶಸ್ತಿಯೊಂದಿಗೆ ಐರ್ಲೆಂಡ್‌ನ‌ ವಿವಿಧೆಡೆ ಗುರುವಂದನೆ, ಸಮ್ಮಾನಕ್ಕೂ ಪಾತ್ರರಾಗಿದ್ದಾರೆ.

ತಮ್ಮ ಸಾಧನೆಯ ಹಿಂದೆ ತಂದೆ ವಾಯುಪಡೆ ಮಾಜಿ ಬ್ರಿಗೆಡ್‌ ಯೋಗನರಸಿಂಹ ರಾವ್‌ ಮತ್ತು ನಿವೃತ್ತ ಶಿಕ್ಷಕಿ ಪಾರ್ವತಿ ಅವರ  ಶ್ರಮವಿದೆ. ಜತೆಗೆ ಹವ್ಯಾಸಿ ಮೃದಂಗ ವಾದಕರಾದ ಪತಿ ಗಗನ ಸದೃಶ್‌ ವಶಿಷ್ಠ ಅವರ ಪ್ರೇರಣೆಯಿದೆ. ಜತೆಗೆ ಕಲಿಕೆ ನಿರಂತರ ವಾಗಿರಬೇಕು. ಸಮಯ ಸಿಕ್ಕಾಗ ಏನಾದರೂ ಕಲಿಯುತ್ತಾ ಇರುತ್ತೇನೆ. ಮುಂದೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡುವ ಇಚ್ಚೆ ಇದೆ ಎನ್ನುತ್ತಾರೆ ಡಾ| ಮೇಘನಾ ವಸಿಷ್ಠ.

ಭರತನಾಟ್ಯದಲ್ಲಿ  ಮೈಲುಗಲ್ಲು

– ಐರ್ಲೆಂಡ್‌ ಭಾರತೀಯ ರಾಯಭಾರ ಕಚೇರಿಯಲ್ಲಿ ಆಯುರ್ವೇದ ದಿನ ಮತ್ತು ಧನ್ವಂತರಿ ಜಯಂತಿಯಂದು ಧನಂತರಿ ವಂದನಾ ಪಠಣ

– ಐರ್ಲೆಂಡ್‌ನ‌ ಹಲವು ವೇದಿಕೆಗಳಲ್ಲಿ ಶ್ರೀ ಕೃಷ್ಣ ಲೀಲೆ ನೃತ್ಯ, ನಾಟಕ ಪ್ರದರ್ಶನ ಇದು ಅಲ್ಲಿನ ರಾಷ್ಟ್ರೀಯ ಟೆಲಿವಿಷನ್‌ ನೆಟ್‌ವರ್ಕ್‌ ಆರ್‌ಟಿಐಯಲ್ಲೂ ಪ್ರಸಾರ.

– ಐರ್ಲೆಂಡ್‌ನ‌ ಇಂಡಿಯನ್‌ ಕೌನ್ಸಿಲ್‌, ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್‌, ಶೇಕ್‌ಫೆಸ್ಟ್‌ ತುಲ್ಲಮೋರ್‌, ಚಾರ್ಲೆವಿಲ್ಲೆ ಕ್ಯಾಸಲ್‌, ಡಬ್ಲಿನ್‌ ಸಿಟಿ ಹಾಲ್‌ನಲ್ಲಿ ನೃತ್ಯಾಭಿನಯಕ್ಕೆ ಅಪಾರ ಮೆಚ್ಚುಗೆ

– ಡಬ್ಲಿನ್‌ ಸಿಟಿ ಹಾಲ್‌ನಲ್ಲಿ ಪ್ರದರ್ಶಿಸಿದ ವಿಷ್ಣುವಿನ ಕುರಿತಾದ ನೃತ್ಯ ಪ್ರದರ್ಶನ ಆರ್‌ಟಿಇನಲ್ಲಿ ಪ್ರಸಾರ.

– ಫ್ರೆಂಚ್‌ನ ಖ್ಯಾತ ಛಾಯಾಚಿತ್ರಗ್ರಾಹಕ ಅನ್ನಿಸೋಫಿ ರಚಿಸಿದ ನೃತ್ಯದ ಕುರಿತಾದ ಪ್ರಾಜೆಕ್ಟ್ಗೆ ಭಾರತೀಯ ಶೈಲಿಯ ನೃತ್ಯ ಪ್ರದರ್ಶನ.

– ಭರತನಾಟ್ಯ ಮತ್ತು ಐರಿಶ್‌ ಟ್ಯಾಪ್‌ ನೃತ್ಯದ ವಿಶೇಷ ಸಂಯೋಜನೆ.

– ಶಾಸ್ತ್ರೀಯ ನೃತ್ಯಕ್ಕಾಗಿ ದಕ್ಷಿಣ ಭಾರತದ ಚಲನಚಿತ್ರದಲ್ಲಿ ಪ್ರದರ್ಶನ.

– ಕೇರಳ ಗುರುವಾಯೂರಿನಲ್ಲಿ  ಶ್ರೀಕೃಷ್ಣನ ಬಾಲಲೀಲೆಗಳ ನೃತ್ಯಾಭಿನಯ.

– ಮೈಸೂರು ಜಗನ್ಮೋಹನ ಅರಮನೆಯಲ್ಲಿ ಗಣೇಶ ಮಹಿಮೆ ಚಿತ್ರಿಸುವ ನೃತ್ಯ ನಾಟಕದ ಪ್ರಸ್ತುತಿ.

– ವೆಲ್ಲೂರು ಲಕ್ಷ್ಮೀ ದೇವಸ್ಥಾನದಲ್ಲಿ ಲಕ್ಷ್ಮೀ ದೇವಿಯ ಕಥೆ, ವೈಭವದ ಕುರಿತು ಪ್ರದರ್ಶನ.

– ರಾಜಸ್ಥಾನದ ಮೌಂಟ್‌ ಅಬುವಿನಲ್ಲಿ ವಿಶೇಷ ನೃತ್ಯ ಮತ್ತು ಯೋಗ ಸಮ್ಮಿಲನ ಪ್ರದರ್ಶನ ತರಂಗಂ ಅಂದರೆ ತಲೆ ಮೇಲೆ ನೀರು ತುಂಬಿದ ಮಡಕೆ, ಅದರ ಮೇಲೆ ದೀಪವಿಟ್ಟು ನೃತ್ಯ ಪ್ರದರ್ಶನ.

– ಕರ್ನಾಟಕದ ಈಟಿವಿ ಕನ್ನಡ ರಾಜ್ಯ ಟೆಲಿವಿಷನ್‌ ಚಾನೆಲ್‌ನ ನೃತ್ಯ ನಾಟಕದಲ್ಲಿ ಪಾರ್ವತಿ ದೇವಿಯ ಪಾತ್ರ ನಿರ್ವಹಣೆ.

– ದೂರದರ್ಶನದಲ್ಲಿ ಸಮಕಾಲೀನ ಮತ್ತು ಶಾಸ್ತ್ರೀಯ ಸಮ್ಮಿಲನ ನೃತ್ಯ ಪ್ರದರ್ಶನ.

– ಬೆಂಗಳೂರಿನ ಇಸ್ಕಾನ್‌ನಲ್ಲಿ  ಕೃಷ್ಣ, ರಾಧೆ, ಗೋಪಿಯರ ಕುರಿತಾಗಿ ನೃತ್ಯ ಪ್ರದರ್ಶನ.

– ಮಹಿಳೆಯರು ಮತ್ತು ಮಕ್ಕಳಿಗಾಗಿ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಕೃಷ್ಣ, ಯಶೋಧೆ ಪ್ರೀತಿಯ ಕುರಿತಾಗಿ ನಾಟಕ ಪ್ರದರ್ಶನ.

ವೈದ್ಯೆಯಾಗಿ ಡಾ| ಮೇಘಾನ ಸಾಧನೆ

ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಬಿಎಎಂಎಸ್‌ ಪದವಿ ಪಡೆದಿರುವ ಅವರು, ಅಧ್ಯಯನದಲ್ಲಿ ಪ್ರತಿ ವರ್ಷ ಶೈಕ್ಷಣಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೆಡಿಸಿನ್‌ ಕೋರ್ಸ್‌ ಪದವಿಯ ಅಂತಿಮ ವರ್ಷದಲ್ಲಿ ಮೊದಲ ರ್‍ಯಾಂಕ್‌ ಪಡೆದಿದ್ದು, ಜೀವಿಕಾ ಪ್ರಶಸ್ತಿ- 2016, ಮೆಡಿಸಿನ್‌ ಕೋರ್ಸ್‌ ಪದವಿಯಲ್ಲಿ ಅತ್ಯುತ್ತಮ ಶ್ರೇಣಿಗಾಗಿ ಪ್ರತಿಭಾ ಪುರಸ್ಕಾರ- 2017 ಗಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಐರ್ಲೆಂಡ್‌ನ‌ಲ್ಲಿ ಸಾಂಪ್ರದಾಯಿಕ ಆಯುರ್ವೇದ ಔಷಧದ ಕುರಿತು ಅಭ್ಯಾಸ ನಡೆಸುತ್ತಿರುವ ಇವರು, ಐರ್ಲೆಂಡ್‌ನ‌ ತುಲ್ಲಮೋರ್‌ನಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ.

ಸಾಮಾನ್ಯ ಕಾಯಿಲೆ, ಕ್ಯಾನ್ಸರ್‌ ಬಾರದಂತೆ ಜೀವನ ರೂಪಿಸಿಕೊಳ್ಳುವುದು ಮತ್ತು ಮಾನಸಿಕ ಆರೋಗ್ಯ ಸವಾಲುಗಳ ಕುರಿತು ಸಲಹೆ ನೀಡುವ ಇವರು, ಪಂಚಕರ್ಮ ಚಿಕಿತ್ಸೆ, ರೆಸ್ಕೂéರ್‌ ಕ್ಲಿನಿಕ್‌ನಲ್ಲಿ ಔಷಧ ತಯಾರಿಯಲ್ಲೂ ತೊಡಗಿಸಿಕೊಂಡಿದ್ದಾರೆ.

ಐರ್ಲೆಂಡ್‌ನ‌ ಪ್ರಸಿದ್ಧ ವಿಶ್ವವಿದ್ಯಾನಿಲಯ ಟ್ರಿನಿಟಿ ಕಾಲೇಜ್‌ ಡಬ್ಲಿನ್‌ನಲ್ಲಿ  ಕ್ಯಾನ್ಸರ್‌ ರಿಸರ್ಚ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಘನಾ ಕ್ಯಾನ್ಸರ್‌ ರೋಗಿಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನೂ ಸಂಯೋಜಿಸಿದ್ದಾರೆ.

ಆಯುರ್ವೇದ ಚಿಕಿತ್ಸೆಗೆ ಐರ್ಲೆಂಡ್‌ನ‌ ಜನರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಹೆಚ್ಚಿನ ರೋಗಿಗಳು ಇವರ ಜೀವನ ಕ್ರಮ, ದಿನಚರಿಯನ್ನು ಪಾಲಿಸುವುದರ ಜತೆಗೆ ಭಾರತೀಯ ಶೈಲಿಯ ಆಹಾರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next