Advertisement

ಡಾ|ಶಾಂತಾರಾಮ್‌ ಪ್ರಶಸ್ತಿಗೆ ಕೋಟ ಸುರೇಶ ಬಂಗೇರ

06:18 PM Oct 31, 2019 | Team Udayavani |

ಕುಂದಾಪುರದ ಭಂಡಾರ್‌ ಕಾರ್ಸ್‌ ಕಾಲೇಜಿನಲ್ಲಿ ಪ್ರತಿ ವರ್ಷ ನ.1ರಂದು ರಾಜ್ಯೋತ್ಸವ ತಾಳಮದ್ದಳೆಯಂದು ಯಕ್ಷಗಾನದ ಉದಯೋನ್ಮುಖ ಕಲಾವಿದರಿಗೆ ನೀಡುವ ಡಾ| ಶಾಂತಾರಾಮ್‌ ಪ್ರಶಸ್ತಿಗೆ ಈ ಬಾರಿ ಕೋಟ ಸುರೇಶ ಬಂಗೇರ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶ್ರುತಿಬದ್ಧ ಮಾತುಗಾರಿಕೆ, ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ ಮತ್ತು ಕಿರು ಹೆಜ್ಜೆ ಇವರು ಮೂವರನ್ನು ಒಮ್ಮೆಗೆ ನೋಡಬೇಕಾದರೆ ಸುರೇಶ ಬಂಗೇರರ ವೇಷಗಾರಿಕೆಯ ಸೊಗಸನ್ನು ನೋಡಬೇಕು.ಕನಕಾಂಗಿ ಕಲ್ಯಾಣ,ಜಾಂಬವತಿ ಕಲ್ಯಾಣ,ಕೃಷ್ಣಾರ್ಜುನ-ಸುಭದ್ರ ಕಲ್ಯಾಣ ಸಹಿತ ಯಾವುದೇ ಪ್ರಸಂಗದ ಕ್ರಷ್ಣನಿರಲಿ ಅಲ್ಲಿ ಮಂಜುನಾಯ್ಕರ ನಿರಾತಂಕ ನಿರರ್ಗಳವಾದ ಶ್ರುತಿಬದ್ಧ ಮಾತುಗಾರಿಕೆ,ಕರ್ಣಾರ್ಜುನದ ಅರ್ಜುನ,ವೀರಮಣಿ ಕಾಳಗದ ಪುಷ್ಕಳ,ತಾಮ್ರದ್ವಜ ಮುಂತಾದ ವೇಷಗಳಲ್ಲಿ ಹೆರಿಯನಾಯ್ಕರ ರಂಗ ನಿರ್ವಹಣೆ,ಹೆಜ್ಜೆಗಾರಿಕೆ,ಅತಿಕಾಯನಂಥ ಪಾತ್ರಗಳಲ್ಲಿ ವೀರಭದ್ರ ನಾಯ್ಕರ ಮಟಾ³ಡಿ ಶೈಲಿಯನ್ನು ಗುರುತಿಸಬಹುದು.

ನಡುತಿಟ್ಟಿನಲ್ಲಿ ಇಂದು ಬಹು ಪ್ರಸಿದ್ಧಿಯ ಸುಧನ್ವ ಪಾತ್ರದಾರಿ ಇವರೊಬ್ಬರೇ. ಉತ್ತರ ಕನ್ನಡದ ಭಾವಾಭಿನಯಕ್ಕೆ ದಕ್ಷಿಣ ಕನ್ನಡದ ವೀರಾಭಿನಯ ಸೇರಿಸಿ ಅವರು ಚಿತ್ರಿಸಿದ ಸುದನ್ವ ಯುವ ಕಲಾವಿದರಿಗೆ ಮಾರ್ಗದಶಿ.

ಸುರೇಶರ ವೇಷಗಳಲ್ಲಿ ಗುರುತಿಸ ಬೇಕಾದದ್ದು ಮಾತುಗಾರಿಕೆಯ ಮೋಡಿ ಮತ್ತು ವೇಷಗಾರಿಕೆಯ ಸೊಗಸು. ಎಲ್ಲಿಯೂ ಯಕ್ಷಗಾನದ ಆವರಣ ಭಂಗಮಾಡದೆ ಪಾತ್ರಗಳ ಔಚಿತ್ಯ ಕೆಡಿಸದೆ, ಅನಗತ್ಯ ಸವಾಲು ಹಾಕದೆ ಹಿರಿಯರು ಹಾಕಿಕೊಟ್ಟ ಚೌಕಟ್ಟಿನೊಳಗೆ ಕಡೆದು ನಿಲ್ಲಿಸಿದ ಬಿಂಬದ ಹಾಗೆ ಅವರ ಪಾತ್ರ ಚಿತ್ರಣ.

ಬಡಗುತಿಟ್ಟಿನ ಪುರುಷವೇಷಗಳ ಸಾಂಪ್ರದಾಯಿಕ ಸೊಗಸು ಮೈದುಂಬಿಕೊಂಡ ಸುರೇಶರ ಪರಿಶುದ್ದ ನೃತ್ಯಾಭಿನಯ,ಆಕರ್ಷಕ ಆಳಂಗ,ನಿರರ್ಗಳ ಮಾತುಗಾರಿಕೆ,ಸೊಗಸಾದ ವೇಷಗಾರಿಕೆಯಿಂದ ಇತರರಿಗಿಂತ ಭಿನ್ನವಾಗಿ ಗುರುತಿಸಬಹುದಾಗಿದೆ.

Advertisement

ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿ ಅನಂತರ 17 ವರ್ಷ ಸೌಕೂರು,ಸಾಲಿಗ್ರಾಮ,ಪೆರ್ಡೂರು ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರಿ ಮೇಳದ ಪುರುಷವೇಷದಾರಿ ಜೊತೆಗೆ ಮೇಳದ ಪ್ರಬಂದಕರಾಗಿ ಸೇವೆ ಸಲ್ಲಿಸುತಿದ್ದಾರೆ.ಹೊಸ ಪ್ರಸಂಗಕ್ಕೂ ನ್ಯಾಯ ಒದಗಿಸಿದ ಅವರಿಗೆ ಬಹು ಪ್ರಸಿದ್ದಿ ತಂದ ಪಾತ್ರ ನಾಗಶ್ರೀಯ ಪ್ರಸಂಗದಲ್ಲಿ ಶಿರಿಯಾರ ಮಂಜು ನಾಯ್ಕರು ಮಾಡುತಿದ್ದ ಶುಬ್ರಾಂಗನ ಪಾತ್ರ. ಸತಿ ಶೀಮಂತಿನಿಯ ಚಂದ್ರಾಂಗದ,ಚೆಲುವೆ ಚಿತ್ರಾವತಿಯ ಹೇಮಾಂಗದ,ಬಾನು ತೇಜಸ್ವಿ ಮುಂತಾದ ಪಾತ್ರಗಳು ಅಷ್ಟೇ ಪ್ರಸಿದ್ಧ.

– ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next