Advertisement

ನಿಮ್ಮನ್ನು ತಿನ್ನುವುದೇ ನಿಮ್ಮನ್ನು ಕೊಲ್ಲುತ್ತದೆ:ಡಾ|ಬಿ.ಎಂ.ಹೆಗ್ಡೆ

02:08 PM Feb 25, 2017 | Harsha Rao |

ಉಡುಪಿ: “ನೀವು ತಿಂದದ್ದು ನಿಮ್ಮನ್ನು ಕೊಲ್ಲುವುದಿಲ್ಲ. ನಿಮ್ಮನ್ನು ತಿನ್ನುವುದೇ ನಿಮ್ಮನ್ನು ಕೊಲ್ಲುತ್ತದೆ’ – ಇದು ಹೆಸರಾಂತ ವೈದ್ಯ ಡಾ| ಬಿ.ಎಂ. ಹೆಗ್ಡೆ ಅವರ ಹೇಳಿಕೆ. 

Advertisement

ಕುತ್ಪಾಡಿ ಆಯುರ್ವೇದ ಕಾಲೇಜಿನಲ್ಲಿ ಸ್ವಸ್ಥವೃತ್ತ ವಿಭಾಗದ ಸ್ನಾತಕೋತ್ತರ ವಿಭಾಗ ಶುಕ್ರವಾರ ಆಯೋಜಿಸಿದ ಆಯುರ್ವೇದ ಪಥ್ಯ-ಪೌಷ್ಟಿಕತೆ ಕುರಿತ “ಆಹಾರ ಮಂಥನ 2017′ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಹುಟ್ಟುವ ದ್ವೇಷ, ಕ್ರೋಧವೇ ಮೊದಲಾದ ಕೆಟ್ಟ ಚಿಂತನೆಗಳು ನಮ್ಮನ್ನು ಕೊಲ್ಲುತ್ತವೆ ಎಂದರು.

ಔಷಧದಿಂದಲೇ ಹೆಚ್ಚು ಸಾವು
ಪ್ರಪಂಚದಲ್ಲಿ ಅತಿ ಹೆಚ್ಚು ಸಾವು ಉಂಟಾಗುತ್ತಿರುವುದು ಔಷಧಿಗಳ ಅಡ್ಡಪರಿಣಾಮದಿಂದ. ಒಂದು ಔಷಧಿ ಅಡ್ಡಪರಿಣಾಮ ಗೊತ್ತಿರುತ್ತದೆ. ಒಂದಕ್ಕಿಂತ ಹೆಚ್ಚು ಔಷಧಿಗಳ ಅಡ್ಡಪರಿಣಾಮವನ್ನು ಅಧ್ಯಯನ ನಡೆಸಲು ಸಾಧ್ಯವಾಗಿಲ್ಲ. ಆದರೆ ಇದಾವುದನ್ನೂ ಮಾಧ್ಯಮಗಳು ಬೆಳಕುಚೆಲ್ಲುತ್ತಿಲ್ಲ. ಇದಕ್ಕೆ ಔಷಧಿ ಕಂಪೆನಿಗಳ ಲಾಬಿಯೇ ಕಾರಣ. ಸಮಗ್ರ ಚಿಕಿತ್ಸೆಯಾದ ಆಯುರ್ವೇದದಲ್ಲಿ ಮನಸ್ಸಿಗೆ ಚಿಕಿತ್ಸೆ ಕೊಡುವ “ಮೈಂಡೋಸ್ಕೋಪಿ’ ಕುರಿತು ಇನ್ನಷ್ಟು ಸಂಶೋಧನೆಗಳಾಗಬೇಕು ಎಂದರು. 

ಅಮೆರಿಕದಲ್ಲಿ ವೈದ್ಯಕೀಯ ಕೋರ್ಸ್‌ ಓದಿದ ಬಳಿಕ ಒಪಿಎಚ್‌ ಕೋರ್ಸ್‌ ನಲ್ಲಿ ಇತರ ವೈದ್ಯಕೀಯ ಪದ್ಧತಿಗಳ ಅಧ್ಯಯನ ನಡೆಯುತ್ತದೆ. ಆದರೆ ಇದರಲ್ಲಿ ಆಯುರ್ವೇದ ಸೇರಿಲ್ಲ. ಭಾರತ ಸರಕಾರ ಇದುವರೆಗೂ ಮಾನ್ಯತೆ ನೀಡದೇ ಇರುವುದು ಇದಕ್ಕೆ ಕಾರಣ. ಈಗ ಅದರ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಡಾ| ಹೆಗ್ಡೆ ಹೇಳಿದರು. 

ಆರೋಗ್ಯವೆಂದರೇನು?
ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ. ಲವಲವಿಕೆ ಇಲ್ಲದಿದ್ದರೆ ಅನಾರೋಗ್ಯ. ಅನುಭವವನ್ನು ಅವಲೋಕನ ನಡೆಸಿ ಸಂಶೋಧಕರಾಗಬೇಕು ಎಂದು ಅವರು ಹೇಳಿದರು. 

Advertisement

ಪ್ರಾಂಶುಪಾಲ ಡಾ| ಶ್ರೀಕಾಂತ ಯು. ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಘಟನ ಕಾರ್ಯದರ್ಶಿ ಡಾ| ಬಿ.ಆರ್‌. ದೊಡ್ಡಮನಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ| ರವೀಂದ್ರ ಅಂಗಡಿ, ಡಾ| ಅಮಲಾ ಕಾರ್ಯಕ್ರಮ ನಿರ್ವಹಿಸಿ ಡಾ| ವಿಜಯ ಬಿ. ನೆಗಲೂರ್‌ ವಂದಿಸಿದರು. 

ಮಧುಮೇಹವೂ ಕೃತಕ ಹಾಲೂ…
ಪ್ರಕೃತಿಯಲ್ಲಿ ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಹಾಲು ಕುಡಿಯುವುದಿಲ್ಲ. ಆದರೆ ಮನುಷ್ಯ ಮಾತ್ರ ದನದ ಹಾಲು ಕುಡಿಯುತ್ತಾನೆ. ಈಗೀಗ ದನಗಳಿಗೆ ಚುಚ್ಚುಮದ್ದು, ರಾಸಾಯನಿಕ ಆಹಾರಗಳನ್ನು ಕೊಟ್ಟ ಪರಿಣಾಮ ಅದರ ಹಾಲು ಕುಡಿದು ಮನುಷ್ಯನಿಗೆ ಅನಾರೋಗ್ಯ ಕಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ “ಬಿ’ ಮಧುಮೇಹ ಜಾಸ್ತಿಯಾಗಲು ಇದು ಕಾರಣ. ಹಾಲು ಕುಡಿಯುವುದಾದರೆ ದೇಸೀ ದನದ ಹಾಲು ಕುಡಿಯಿರಿ. ಹಾಲಿಗಿಂತಲೂ ತುಪ್ಪ ಶ್ರೇಷ್ಠ. ಆದರೆ ಪಶ್ಚಿಮದವರು ಇದರಿಂದ ಕೊಲೆಸ್ಟ್ರಾಲ್‌ ಹೆಚ್ಚುತ್ತದೆ ಎನ್ನುತ್ತಾರೆ. ಶೇ. 90 ಕೊಲೆಸ್ಟ್ರಾಲ್‌ ಉತ್ಪಾದನೆಯಾಗುವುದು ಲಿವರ್‌ನಲ್ಲಿ. “ನಿಮ್ಮ ಮನಸ್ಸು ನಿಮ್ಮದಲ್ಲ, ನೀವೇ ಮನಸ್ಸು’, “ಮಕ್ಕಳು ನಿಮ್ಮದಲ್ಲ, ನಿಮ್ಮ ಮೂಲಕ ಮಕ್ಕಳು’ ಎಂದು ಹೇಳುವ ಕ್ವಾಂಟಂ ಫಿಸಿಕ್ಸ್‌ ಸಿದ್ಧಾಂತ ಮನಸ್ಸಿಗೆ ಕೊಡಬೇಕಾದ ಮಹತ್ವಕ್ಕೆ ಪೂರಕವಾಗುತ್ತದೆ ಎಂದು ಡಾ| ಬಿ.ಎಂ.ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next