Advertisement

ಆತಂಕ ಬೇಡ; ಸ್ವಚ್ಛತೆಯ ಕಡೆಗಿರಲಿ ಗಮನ

02:00 AM Feb 01, 2020 | mahesh |

ಮಂಗಳೂರು: ಕೊರೊನಾ ವೈರಸ್‌ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ವದಂತಿಗಳನ್ನು ನಂಬಬಾರದು. ಸ್ವತ್ಛತೆಯ ಕಡೆಗೆ ಗಮನ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಪ್ರಕರಣ ಕಂಡುಬಂದಿಲ್ಲ. ಆತಂಕ ಬೇಡ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಗುರುವಾರದ ಮಾಹಿತಿಯಂತೆ ವಿಶ್ವದಲ್ಲಿ 7,818 ಕೊರೊನಾ ವೈರಸ್‌ ಬಾಧಿತರು ಪತ್ತೆಯಾಗಿ ದ್ದಾರೆ. ಈ ಪೈಕಿ ಚೀನದಲ್ಲಿ 7,736 ಪ್ರಕರಣ ದಾಖಲಾಗಿವೆ. ಭಾರತದಲ್ಲಿ ಕೇರಳದ ವೈದ್ಯ ವಿದ್ಯಾರ್ಥಿನಿ ಯಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಇದರ ಸಮಸ್ಯೆ ಇಲ್ಲವಾದರೂ ಮುಂಜಾಗ್ರತೆ ಅಗತ್ಯ. ಪ್ರಾಣಿಯಿಂದ ಪ್ರಾಣಿಗೆ, ಮನುಷ್ಯನಿಂದ ಮನುಷ್ಯನಿಗೆ ಹರಡುವ ರೋಗ ಇದು ಎಂಬುದಾಗಿ ಮಾಹಿತಿ ಇರುವು ದರಿಂದ ಪ್ರಾಣಿಗಳಿಂದ ಆದಷ್ಟು ದೂರವಿರಬೇಕು ಎಂದರು.

ವೆನಲಾಕ್ನಲ್ಲಿ 10 ಹಾಸಿಗೆಯ ವಾರ್ಡ್‌
ವೆನಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆ ಗಳ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ವಿಮಾನ- ರೈಲ್ವೇ ನಿಲ್ದಾಣ, ಬಂದರು ಗಳಲ್ಲಿ ಜಾಗೃತಿ ನಡೆಯುತ್ತಿದೆ. ಖಾಸಗಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳ ತಂಡ ರಚನೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ 5 ಬೆಡ್‌ಗಳನ್ನು ಇದಕ್ಕಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಸರ್ವ ಸಿದ್ಧತೆ ನಡೆದಿದೆ ಎಂದವರು ತಿಳಿಸಿದರು.

ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಆರೋಗ್ಯ ಇಲಾಖೆಯ ವೈದ್ಯರು, ಬಂದರು, ವಿಮಾನನಿಲ್ದಾಣ, ರೈಲ್ವೇ ವೈದ್ಯರು, ಮೆಡಿಕಲ್‌ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುನ್ನೆಚ್ಚರಿಕೆ ವಹಿಸಿ
ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಮತ್ತು ಭೇದಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣ. ಸಣ್ಣ ಮಕ್ಕಳಿಗೆ, ಹಿರಿಯರಿಗೆ, ಕ್ಯಾನ್ಸರ್‌, ಎಚ್‌ಐವಿ, ಅಸ್ತಮಾ ರೋಗಿಗಳಿಗೆ ಈ ಸೋಂಕು ಅಪಾಯಕಾರಿ. ಸೋಕು ಪೀಡಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್‌ ಹರಡುತ್ತದೆ. ವೈಯಕ್ತಿಕ ಸ್ವತ್ಛತೆ ಇಲ್ಲದೆ ಮೂಗು, ಬಾಯಿ ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಜಿಲ್ಲಾ ಸರ್ವೇಕ್ಷಣಾ ಘಟಕ ಅಥವಾ ಹೆಲ್ಪ್ಲೈನ್‌ ಸಂಖ್ಯೆ 104ವನ್ನು ಸಂಪರ್ಕಿಸಬಹುದು ಎಂದು ಡಾ| ರಾಮಕೃಷ್ಣ ರಾವ್‌ ವಿವರಿಸಿದರು.

Advertisement

ಕೊರೊನಾ ಸೋಂಕಿನ ಲಕ್ಷಣಗಳು ಗೋಚರವಾದರೆ ವ್ಯಕ್ತಿಯ ಗಂಟಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿ ತೆಗೆದು ಪುಣೆಯ ಪರೀಕ್ಷಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ರೋಗ ಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಪ್ರತ್ಯೇಕ ಔಷಧವಿಲ್ಲ. ಆದರೆ ಬೇರೆ ಲಕ್ಷಣಗಳಿಗೆ ಮದ್ದು ನೀಡುವ ಕೆಲಸ ಮಾಡಲಾಗುತ್ತದೆ ಎಂದರು.

ಎಚ್ಚರವಿರಲಿ: ಉಡುಪಿ ಡಿಸಿ
ಉಡುಪಿ: ಕೊರೊನಾ ವೈರಸ್‌ ಬಗ್ಗೆ ಸಾರ್ವಜನಿಕರು ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಆದರೆ ರೋಗದ ಲಕ್ಷಣಗಳನ್ನು ತಿಳಿದುಕೊಂಡು ಎಚ್ಚರದಿಂದಿರಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆಯ ಕೇರಳದಲ್ಲಿ ಈಪ್ರಕರಣ ಪತ್ತೆಯಾಗಿರುವುದರಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಭಯಪಡುವ ಆವಶ್ಯಕತೆಯಿಲ್ಲ. ಆದರೆ ಈ ವೈರಸ್‌ನ ಲಕ್ಷಣಗಳ ಕುರಿತು ಅರಿವು ಹೊಂದಿರುವುದು ಅವಶ್ಯಕ ಎಂದರು.

ಕೊರೊನಾ ಸೋಂಕಿನ ಲಕ್ಷಣಗಳು ಮತ್ತು ಅದು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವ್ಯಾಪಕ ಅರಿವು ಮೂಡಿಸಲು ಪೋಸ್ಟರ್‌ಗಳನ್ನು ಮುದ್ರಿಸಿ ವಿತರಿಸಬೇಕು. ಗ್ರಾ.ಪಂ. ಮತ್ತು ಪ್ರಾ. ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಬೇಕು. ವಿದೇಶದಿಂದ ಜಿಲ್ಲೆಯ ಸಾರ್ವಜನಿಕರು ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ರೋಗ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಕೊರೊನಾ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ತುರ್ತು ಕಾರ್ಯಪಡೆ ರಚಿಸುವಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಸೂಚನೆ ಬಂದಿದ್ದು, ಕ್ರಮ ಕೈಗೊಳ್ಳಲಾಗಿದೆ. ಮಣಿಪಾಲದ ಆಸ್ಪತ್ರೆಯ ವೈದ್ಯರು ಸೇರಿದಂತೆ ವಿವಿಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ, ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಧಿಕಾರಿ ಡಾ| ಪ್ರಶಾಂತ್‌ ಭಟ್‌, ಡಾ| ಆರ್‌.ಸಿ.ಹೆಚ್‌. ಅಧಿಕಾರಿ, ಡಾ| ಎಂ.ಜಿ. ರಾಮ, ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಡಿಡಿಪಿಐ ಶೇಷಶಯನ ಕಾರಿಂಜ, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next